K.Shivaram: ನಟ, ನಿವೃತ್ತ ಐಎಎಸ್ ಅಧಿಕಾರಿ ಕೆ. ಶಿವರಾಮ್ ವಿಧಿವಶ
ಬೆಂಗಳೂರು, ಫೆಬ್ರವರಿ 29: ನಟ, ರಾಜಕಾರಣಿ, ನಿವೃತ್ತ ಐಎಎಸ್ ಅಧಿಕಾರಿ ಕೆ. ಶಿವರಾಮ್ ವಿಧಿವಶರಾಗಿದ್ದಾರೆ. ಕಾರ್ಡಿಯಕ್ ಅರೆಸ್ಟ್ ಹಾಗೂ ಇತರ ಆರೋಗ್ಯ ಸಮಸ್ಯೆಯಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅವರು, ಇಂದು ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.
ಕಳೆದ 20 ದಿನಗಳಿಂದ ಶಿವರಾಮ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ದಿನದಿಂದ ದಿನಕ್ಕೆ ಅವರ ಆರೋಗ್ಯದ ಸ್ಥಿತಿ ಚಿಂತಾಜನಕವಾಗಿತ್ತು. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಶಿವರಾಮ್ ಅವರಿಗೆ ಡಾ.ಶೇಖರ್ ಪಾಟೀಲ್ ಅವರ ನೇತೃತ್ವದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಕೆ ಶಿವರಾಮ್ ನಟನಾಗಿ ಅಷ್ಟೇ ಅಲ್ಲದೇ ಉತ್ತಮ ರಾಜಕಾರಣಿಯಾಗಿಯೂ ಜನಪ್ರಿಯತೆ ಪಡೆದಿದ್ದರು.

ನಟನೆ, ರಾಜಕೀಯ ಮಾತ್ರವಲ್ಲದೇ ಕೆ.ಶಿವರಾಮ್ ಐಎಎಸ್ ಅಧಿಕಾರಿಯಾಗಿದ್ದರು. ಕನ್ನಡದಲ್ಲೇ ಐಎಎಸ್ ಪರೀಕ್ಷೆ ಬರೆದು ಉತ್ತೀರ್ಣರಾದ ಕೀರ್ತಿ ಇವರಿಗೆ ಸಲ್ಲಿತ್ತು. ಬಳಿಕ ಕೆ.ಶಿವರಾಮ್ ಅವರಿಗೆ ಸಿನಿಮಾ ಕ್ಷೇತ್ರದ ಬಗ್ಗೆ ಆಸಕ್ತಿ ಮೂಡಿದ್ದು, ಬಳಿಕ ಸರ್ಕಾರಿ ಸೇವೆಗೆ ವಿದಾಯ ಹೇಳಿ ಸಿನಿಮಾದತ್ತ ಹೆಜ್ಜೆ ಇಟ್ಟರು.
ಕೆ.ಶಿವರಾಮ್ 'ಬಾನಲ್ಲೆ ಮಧುಚಂದ್ರಕ್ಕೆ', 'ವಸಂತಕಾವ್ಯ' ಚಿತ್ರದಲ್ಲಿ ನಾಯಕನಾಗಿ ನಟನೆ ಮಾಡಿದ್ದರು. ಬಳಿಕ ರಾಜಕೀಯದತ್ತ ಹೆಜ್ಜೆಯಿಟ್ಟು ಬಿಜೆಪಿ ಪಕ್ಷ ಸೇರ್ಪಡೆಗೊಂಡಿದ್ದರು.
ನನ್ನ ಆತ್ಮೀಯ, ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತ, ದೇಶದಲ್ಲಿ ಮೊದಲ ಬಾರಿಗೆ ಐ.ಎ.ಎಸ್ ಪರೀಕ್ಷೆಯನ್ನು ಕನ್ನಡದಲ್ಲಿ ಬರೆದು ತೇರ್ಗಡೆ ಹೊಂದಿದ ವಿಶ್ರಾಂತ IAS ಅಧಿಕಾರಿ, ಚಲನಚಿತ್ರ ನಟ @KSHIVARAMUBJP ಇಂದು ನಮ್ಮನ್ನೆಲ್ಲ ಅಗಲಿದ್ದಾರೆ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾವೆಲ್ಲರೂ ಪ್ರಾರ್ಥಿಸೋಣ.
— C T Ravi 🇮🇳 ಸಿ ಟಿ ರವಿ (@CTRavi_BJP) February 29, 2024
ಅವರ ಕುಟುಂಬಕ್ಕೆ, ಅಪಾರ ಅಭಿಮಾನಿ… pic.twitter.com/17xIeJ3eLz
ಕೆ. ಶಿವರಾಮ್ ನಿಧನಕ್ಕೆ ಬಿ.ಎಸ್ ಯಡಿಯೂರಪ್ಪ ಸಂತಾಪ
ನಟ, ನಿವೃತ್ತ ಐಎಎಸ್ ಅಧಿಕಾರಿ ಕೆ. ಶಿವರಾಮ್ ಅವರ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ. ಹೆಸರಾಂತ ಕಲಾವಿದ, ಪಕ್ಷದ ಮುಖಂಡ, ಕನ್ನಡದಲ್ಲಿ ಐಎಎಸ್ ಪರೀಕ್ಷೆ ಬರೆದು ಯಶಸ್ವಿಯಾಗಿದ್ದ ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಮ್ ಹೃದಯಾಘಾತದಿಂದ ನಿಧನರಾದ ಸುದ್ದಿ ಅತೀವ ಆಘಾತ ತಂದಿದೆ. ಅವರು ಅಸ್ವಸ್ಥರಾದ ವಿಷಯ ತಿಳಿದು ಇಂದು ಬೆಳಗ್ಗೆ ಆಸ್ಪತ್ರೆಗೆ ತೆರಳಿ ಅವರನ್ನು ನೋಡಿ, ಶೀಘ್ರದಲ್ಲಿ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದೆ. ಆದರೆ ವಿಧಿ ಅವರನ್ನು ಬೇಗ ಕರೆದುಕೊಂಡಿದೆ. ಅವರ ಆತ್ಮಕ್ಕೆ ಚಿರಶಾಂತಿ ಕೋರುತ್ತಾ, ಅವರ ಕುಟುಂಬದವರಲ್ಲಿ ಹಾಗೂ ಅಭಿಮಾನಿಗಳಲ್ಲಿ ನನ್ನ ಸಂತಾಪಗಳನ್ನು ಸಲ್ಲಿಸುತ್ತೇನೆ ಎಂದಿದ್ದಾರೆ.
ಕೆ.ಶಿವರಾಮ್ ಬಾಲ್ಯ, ಶಿಕ್ಷಣ ಮತ್ತು ಸಾಧನೆ
ಶಿವರಾಮ್ ಅವರು ರಾಮನಗರದ ಜಿಲ್ಲೆಯ ಉರಗಲ್ಲಿಯಲ್ಲಿ 1953ರಲ್ಲಿ ಏಪ್ರಿಲ್ 6ರಂದು ಜನಿಸಿದರು. ರಾಮನಗರದಲ್ಲೇ ಪ್ರಾಥಮಿಕ ಶಿಕ್ಷಣ ಮುಗಿಸಿದ ಶಿವರಾಮ್ ಬೆಂಗಳೂರಿನ ಮಲ್ಲೇಶ್ವಂನ ಸರ್ಕಾರಿ ಶಾಲೆಯಲ್ಲಿ ಪ್ರೌಢ ಶಿಕ್ಷಣ ಮುಗಿಸಿದರು.1972ರಲ್ಲಿ ಪ್ರೌಢಶಾಲಾ ಶಿಕ್ಷಣದ ಜೊತೆಗೆ ಇಂಗ್ಲಿಷ್ ಮತ್ತು ಕನ್ನಡ ಟೈಪಿಂಗ್ ಜೊತೆಗೆ ಶೀಫ್ರಲಿಪಿ ಕೋರ್ಟ್ ಪೂರ್ಣಗೊಳಿಸಿ ಸರ್ಕಾರಿ ಉದ್ಯೋಗಕ್ಕೆ ಸೇರಿದರು. 1973ರಲ್ಲಿ ಅಪರಾಧ ತನಿಖಾ ಇಲಾಖೆ ಸೇರಿದರು.
ಬಳಿಕ ವಿಪುರಂನ ಇವ್ನಿಂಗ್ ಕಾಲೇಜ್ ಆಫ್ ಆರ್ಟ್ಸ್ ಮತ್ತು ಕಾಮರ್ಸ್ನಿಂದ ಬ್ಯಾಚುಲರ್ಸ್ ಆಫ್ ಆರ್ಟ್ನಲ್ಲಿ ಪದವಿ ಪಡೆದರು.1982ರಲ್ಲಿ ಮೈಸೂರು ವಿಶ್ವ ವಿದ್ಯಾನಿಲಯದಿಂದ ಮಾಸ್ಟರ್ ಆಫ್ ಆರ್ಟ್ ಪದವಿ ಪಡೆದು, 1985ರಲ್ಲಿ ಕೆಎಎಸ್ ಪರೀಕ್ಷೆಯಲ್ಲಿ ಪಾಸ್ ಆಗಿ ಉಪಪೊಲೀಸ್ ಅಧೀಕ್ಷರಾದರು. 1986ರಲ್ಲಿ ಕರ್ನಾಟಕ ಆಡಳಿತ ಸೇವಾ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಬರುವ ಮೂಲಕ ಸಾಧನೆಗೈದರು.












Click it and Unblock the Notifications