Ranya Rao: ಚಿನ್ನ ಕಳ್ಳಸಾಗಣೆ ಪ್ರಕರಣ: ನಟಿ ರನ್ಯಾ ರಾವ್ ಬಂಧನ ಎತ್ತಿ ಹಿಡಿದ ಸುಪ್ರೀಂಕೋರ್ಟ್
ಭಾರಿ ಪ್ರಮಾಣದ ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ಕನ್ನಡ ಚಿತ್ರನಟಿ ರನ್ಯಾ ರಾವ್ ಅವರಿಗೆ ಸುಪ್ರೀಂ ಕೋರ್ಟ್ನಲ್ಲಿ ಭಾರಿ ಹಿನ್ನಡೆಯಾಗಿದೆ. ಕೇಂದ್ರ ಆರ್ಥಿಕ ಗುಪ್ತಚರ ಬ್ಯೂರೋ ಹೊರಡಿಸಿದ್ದ ಅವರ ಬಂಧನದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಈ ಮೂಲಕ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶವನ್ನು ಕೋರ್ಟ್ ಎತ್ತಿ ಹಿಡಿದಿದೆ.
ನ್ಯಾಯಮೂರ್ತಿಗಳಾದ ಎಂ.ಎಂ.ಸುಂದ್ರೇಶ್ ಮತ್ತು ಎನ್.ಕೋಟೀಶ್ವರ್ ಸಿಂಗ್ ಅವರನ್ನೊಳಗೊಂಡ ಪೀಠವು ಈ ತೀರ್ಪು ನೀಡಿದೆ. ರನ್ಯಾ ರಾವ್ ಅವರ ತಾಯಿ ಮತ್ತು ಮತ್ತೊಬ್ಬ ಆರೋಪಿ ಸಾಹಿಲ್ ಸರ್ಕಾರಿಯಾ ಜೈನ್ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಬಂಧನದ ಆದೇಶವು ಸಂವಿಧಾನದ ವಿಧಿ 22(3)(ಬಿ) ಅಡಿಯಲ್ಲಿ ಯಾವುದೇ ಉಲ್ಲಂಘನೆ ಮಾಡಿಲ್ಲ. ಅಧಿಕಾರಿಗಳು ಅಗತ್ಯವಿರುವ ಎಲ್ಲ ದಾಖಲೆಗಳನ್ನು ಸರಿಯಾದ ಸಮಯದಲ್ಲಿ ಒದಗಿಸಿದ್ದಾರೆ ಮತ್ತು ಬಂಧನಕ್ಕೆ ಬೇಕಾದ ಪೂರಕ ಪುರಾವೆಗಳು ಲಭ್ಯವಿವೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ತಾಂತ್ರಿಕ ಕಾರಣಗಳ ವಾದ ತಿರಸ್ಕೃತ
ಆರೋಪಿಗಳು ತಮ್ಮ ಬಂಧನದ ಆದೇಶವನ್ನು ಮುಖ್ಯವಾಗಿ ತಾಂತ್ರಿಕ ಮತ್ತು ಪ್ರಕ್ರಿಯೆಗಳ ಆಧಾರದ ಮೇಲೆ ಪ್ರಶ್ನಿಸಿದ್ದರು. ತಮಗೆ ಕಾನೂನು ನೆರವು ಪಡೆಯಲು ಅವಕಾಶ ನೀಡಿಲ್ಲ ಎಂಬ ಇವರ ವಾದವನ್ನು ನ್ಯಾಯಾಲಯ ಒಪ್ಪಲಿಲ್ಲ. ಸಂವಿಧಾನದ ವಿಧಿ 22(3)(ಬಿ) ಮತ್ತು ಕಾಫಿಪೋಸಾ ಕಾಯ್ದೆಯ ಸೆಕ್ಷನ್ 8(ಇ) ಅನ್ವಯ, ತಡೆಕಾಪು ಬಂಧನಕ್ಕೊಳಗಾದ ವ್ಯಕ್ತಿಯು ಕಾನೂನು ನೆರವನ್ನು ತನ್ನ ಹಕ್ಕು ಎಂದು ಪ್ರತಿಪಾದಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಪೀಠವು ಸ್ಪಷ್ಟಪಡಿಸಿದೆ.
ತನಿಖಾಧಿಕಾರಿಯು ದಾಖಲೆಗಳನ್ನು ಮಂಡಿಸುವಾಗ ಅಥವಾ ಸಲಹಾ ಮಂಡಳಿಗೆ ನೆರವು ನೀಡುವಾಗ, ಬಂಧಿತ ವ್ಯಕ್ತಿಯು ತನಗೆ ಕಾನೂನು ನೆರವು ಬೇಕೆಂದು ಸಾಮಾನ್ಯ ರೀತಿಯಲ್ಲಿ ಕೇಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಒಂದು ವೇಳೆ ಈ ರೀತಿ ಅವಕಾಶ ನೀಡಿದರೆ ಕಾಯ್ದೆಯ ಮೂಲ ಉದ್ದೇಶವೇ ವ್ಯರ್ಥವಾಗುತ್ತದೆ ಎಂದು ಪೀಠವು ವಿವರಿಸಿದೆ. ಇನ್ನು ಅಧಿಕಾರಿಗಳು ತಮಗೆ ಪ್ರಕರಣಕ್ಕೆ ಸಂಬಂಧಿಸಿದ 'ಪೆನ್ ಡ್ರೈವ್' ಒದಗಿಸಿಲ್ಲ ಎಂಬ ಆರೋಪಿಗಳ ವಾದವನ್ನೂ ನ್ಯಾಯಾಲಯ ತಳ್ಳಿಹಾಕಿದೆ. ಕಸ್ಟಮ್ಸ್ ಅಧಿಕಾರಿಗಳು ನಿಯಮದಂತೆ ಎಲ್ಲ ಅಗತ್ಯ ದಾಖಲೆಗಳನ್ನು ಒದಗಿಸುವ ಮೂಲಕ ಕಾನೂನನ್ನು ಪಾಲಿಸಿದ್ದಾರೆ ಎಂದು ಪೀಠ ಹೇಳಿದೆ.
ಏನಿದು ಪ್ರಕರಣ?
ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದುಬೈನಿಂದ ಸುಮಾರು 14.2 ಕೆಜಿ ಚಿನ್ನವನ್ನು ಅಕ್ರಮವಾಗಿ ಸಾಗಿಸುತ್ತಿದ್ದಾಗ ರನ್ಯಾ ರಾವ್ ಸಿಕ್ಕಿಬಿದ್ದಿದ್ದರು. ತನಿಖೆಯ ವೇಳೆ ಅವರು ಸಂಘಟಿತ ಜಾಲದ ಮೂಲಕ ಚಿನ್ನದ ಕಳ್ಳಸಾಗಣೆ ಮಾಡುತ್ತಿರುವುದು ಬೆಳಕಿಗೆ ಬಂದಿತ್ತು. ಇದರಿಂದಾಗಿ ಅವರ ವಿರುದ್ಧ ಕಳ್ಳಸಾಗಣೆ ಚಟುವಟಿಕೆಗಳ ತಡೆ ಕಾಯ್ದೆ (COFEPOSA) ಅಡಿಯಲ್ಲಿ ಬಂಧನ ಆದೇಶ ಹೊರಡಿಸಲಾಗಿತ್ತು. ಇದನ್ನು ಕರ್ನಾಟಕ ಹೈಕೋರ್ಟ್ 2025ರ ಡಿಸೆಂಬರ್ನಲ್ಲಿ ಎತ್ತಿ ಹಿಡಿದಿತ್ತು. ಈಗ ಸುಪ್ರೀಂ ಕೋರ್ಟ್ ಕೂಡ ಅದೇ ತೀರ್ಪನ್ನು ಖಾಯಂ ಮಾಡಿದ್ದರಿಂದ ರನ್ಯಾ ರಾವ್ ಮತ್ತು ಅವರ ಸಹಚರರ ಬಂಧನ ಮುಂದುವರಿಯಲಿದೆ. ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರನ್ಯಾ ರಾವ್ ಮತ್ತು ಸಾಹಿಲ್ ಜೈನ್ಗೆ ಸುಪ್ರೀಂ ಕೋರ್ಟ್ನಲ್ಲಿ ತೀವ್ರ ಹಿನ್ನಡೆಯಾಗಿದೆ.













Click it and Unblock the Notifications