ದರ್ಶನ್ ನಟನೆಯ 'ರಾಜ ವೀರಮದಕರಿ ನಾಯಕ' ಸಿನಿಮಾ ಮತ್ತೆ ಸೆಟ್ಟೇರುತ್ತಾ? ಇಲ್ಲಿದೆ ಉತ್ತರ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಐತಿಹಾಸಿಕ ಸಿನಿಮಾ "ಗಂಡುಗಲಿ ಮದಕರಿ ನಾಯಕ" ಸೆಟ್ಟೇರಿತ್ತಾದರೂ ಥಿಯೇಟರ್ಗಳಿಗೆ ಬರಲೇ ಇಲ್ಲ. ಒಂದು ಕಾಲದಲ್ಲಿ ದರ್ಶನ್ ಈ ಸಿನಿಮಾ ಮಾಡುತ್ತಿದ್ದಾರೆ ಎಂದು ಇಡೀ ಕರ್ನಾಟಕದ ಕಾತರದಿಂದ ಕಾಯುತ್ತಿತ್ತು. ಅಷ್ಟರಮಟ್ಟಿಗೆ ನಿರೀಕ್ಷೆ ಹುಟ್ಟಿಸಿದ್ದ ಈ ಸಿನಿಮಾ ಇಂದಿಗೂ ತೆರೆ ಕಾಣಲಿಲ್ಲ. ಒಳ್ಳೆಯ ಬ್ಯಾನರ್, ಹಂಸಲೇಖ ಅವರ ಸಂಗೀತ, ನಿರ್ಮಾಪಕರಾಗಿ ರಾಕ್ಲೈನ್ ವೆಂಕಟೇಶ್ ಅವರಿದ್ದರೂ ಈ ಸಿನಿಮಾ ಪ್ರೇಕ್ಷಕರ ಮುಂದೆ ಬರಲು ಸಾಧ್ಯವಾಗಲಿಲ್ಲ. ಇದಕ್ಕೆ ಸಿನಿಮಾ ಪ್ರದರ್ಶನ ಕಾಣದಿರಲು ಅಸಲಿ ಕಾರಣ ಏನೆಂದು ಈ ಸಿನಿಮಾ ನಿರ್ದೇಶನಕ್ಕೆ ಕೈಹಾಕಿದ್ದ ಖ್ಯಾತ ಡೈರೆಕ್ಟರ್ ರಾಜೇಂದ್ರ ಸಿಂಗ್ ಬಾಬು ಅವರೇ ಬಹಿರಂಗಪಡಿಸಿದ್ದಾರೆ.
ರಾಜೇಂದ್ರ ಸಿಂಗ್ ಬಾಬು ಅವರು ಸ್ಯಾಂಡಲ್ವುಡ್ನಲ್ಲಿ ಸಾಲು ಸಾಲು ಹಿಟ್ ಸಿನಿಮಾ ನೀಡಿದ ನಿರ್ದೇಶಕರು. ಹಾಗಾಗಿ ನಟ ದರ್ಶನ್ ಅವರಿಗೆ ಐತಿಹಾಸಿಕ ಹಿನ್ನೆಲೆಯ ರಾಜೇಂದ್ರ ಸಿಂಗ್ ಬಾಬು ಸಿನಿಮಾ ನಿರ್ದೇಶನ ಮಾಡಲು ಮುಂದಾಗಿದ್ದರು. ಮೊದಲಿಗೆ ಎಲ್ಲವೂ ಸುಸೂತ್ರವಾಗಿಯೇ ನೆರವೇರಿತ್ತು. ಆದರೆ ಕಾರಣಾಂತರಗಳಿಂದ ಈ ಸಿನಿಮಾ ಅರ್ಧದಲ್ಲೇ ನಿಂತು ಹೋಗಿತ್ತು. ಇದಕ್ಕೆ ಕಾರಣವೇನು ಎಂದು ಅಭಿಮಾನಿಗಳು ಸಾಕಷ್ಟು ಬಾರಿ ಕೇಳುತ್ತಿದ್ದರೂ ಉತ್ತರ ಸಿಕ್ಕಿರಲಿಲ್ಲ. ಕನಿಷ್ಠ ಪಕ್ಷ ಮುಂದೆ ಆದ್ರೂ ಈ ಸಿನಿಮಾ ರಿಲೀಸ್ ಆಗುತ್ತಾ ಎಂಬ ಖಚಿತತೆಯೂ ಇರಲಿಲ್ಲ. ಈ ಎಲ್ಲ ಪ್ರಶ್ನೆಗಳಿಗೆ ರಾಜೇಂದ್ರ ಸಿಂಗ್ ಬಾಬು ಅವರೇ ಕೊನೆಗೂ ಉತ್ತರಿಸಿದ್ದಾರೆ.

ಈ ಬಗ್ಗೆ ಸಂದರ್ಶನದಲ್ಲಿ ಮಾತನಾಡಿರುವ ಅವರು, 'ಬಹಳ ಇಷ್ಟ ಹಾಗೂ ಕಷ್ಟಪಟ್ಟು ಗಂಡುಗಲಿ ಮದಕರಿ ನಾಯಕ ಸಿನಿಮಾ ಮುಂದಾದೆವು. ಈ ಸಿನಿಮಾಗಾಗಿ ಮೂರು ವರ್ಷಗಳ ಕಾಲ ಕತೆ ಬರೆಯಲಾಗಿತ್ತು. ಸುಮಾರು ಹನ್ನೆರಡು ವರ್ಷನ್ಗಳ ಚಿತ್ರಕತೆ ತಯಾರಾಗಿತ್ತು. ನಟ ದರ್ಶನ್ ಅವರು ಕೂಡ ತುಂಬಾ ಆಸಕ್ತಿಯಿಂದ ನಾವು ಹೇಳಿದಂತೆಲ್ಲ ಪಾತ್ರಕ್ಕೆ ಸಿದ್ಧರಾಗುತ್ತಿದ್ದರು. ರಾಕ್ಲೈನ್ ವೆಂಕಟೇಶ್ ಅವರಿಗೂ ಈ ಸಿನಿಮಾ ಮೇಲೆ ಹುಮ್ಮಸ್ಸಿತ್ತು' ಎಂದು ಹೇಳಿದ್ದಾರೆ.
'ಈ ಸಿನಿಮಾದ ಮುಹೂರ್ತ ಕೂಡ ನಡೆಯಿತು. ಬಳಿಕ ಕೇರಳದಲ್ಲೂ ಶೂಟಿಂಗ್ ಮಾಡಿದೆವು. ಎಲ್ಲವೂ ಚೆನ್ನಾಗೇ ನಡೆಯುತ್ತಿದ್ದಾಗ ಇದ್ದಕ್ಕಿದ್ದಂತೆ ಆ ಸಮಯದಲ್ಲೇ ಕೊರೋನಾ ವಕ್ಕರಿಸಿತು. ಅಷ್ಟೊತ್ತಿಗೆ ಈ ಸಿನಿಮಾದ ಹಾಡುಗಳು ಕೂಡ ಕಂಪೋಸ್ ಆಗಿತ್ತು. ಸಿನಿಮಾದ ಪಾತ್ರಗಳಿಗಾಗಿ ಎಲ್ಲ ಕಾಸ್ಟ್ಯೂಮ್, ಪ್ರಾಪರ್ಟಿಗಳು ಕೂಡ ರೆಡಿಯಾಗಿತ್ತು. ದಿಢೀರ್ ಕೋವಿಡ್ ಹೆಚ್ಚಾಗಿದ್ದರಿಂದ ಆಗ ಎಲ್ಲವನ್ನೂ ಅಲ್ಲಿಯೇ ನಿಲ್ಲಿಸುವ ಪರಿಸ್ಥಿತಿ ಎದುರಾಯಿತು' ಎಂದಿದ್ದಾರೆ.
'ಆದರೂ ಛಲ ಬಿಡದೆ ಕೋವಿಡ್ ಆದ ಮೇಲಾದರೂ ಸಿನಿಮಾ ಮತ್ತೆ ಶುರು ಮಾಡಬೇಕು ಎಂದು ನಿರ್ಧರಿಸಿದ್ದೆವು. ಆದರೆ ಕೋವಿಡ್ ಮುಗಿಯುವ ವೇಳೆಗೆ ಜನರ ಯೋಚನೆ ಬದಲಾಗಿತ್ತು. ಆ ಸಮಯದಲ್ಲಿ ಯಾರೂ ಕೂಡ ಥಿಯೇಟರ್ಗಳಿಗೆ ಬರುತ್ತಿರಲಿಲ್ಲ. ಇದನ್ನು ಮನಗಂಡು ಇಂತಹ ಸಮಯದಲ್ಲಿ ನೂರಾರು ಕೋಟಿ ಬಜೆಟ್ನ ಈ ಸಿನಿಮಾ ಮಾಡುವುದು ದೊಡ್ಡ ಸವಾಲು ಅನಿಸಿತ್ತು' ಎಂದು ರಾಜೇಂದ್ರ ಸಿಂಗ್ ಬಾಬು ವಿವರಿಸಿದ್ದಾರೆ.
ಮತ್ತೆ ಈ ಸಿನಿಮಾ ಸೆಟ್ಟೇರುತ್ತಾ?
ಸೋಷಿಯಲ್ ಮೀಡಿಯಾಗಳಲ್ಲಿ ಈಗಲೂ ದರ್ಶನ್ ಅಭಿಮಾನಿಗಳು ಆಗಾಗ ಈ ಸಿನಿಮಾ ಪೋಸ್ಟರ್ ಹಂಚಿಕೊಂಡು ಮತ್ತೆ ಈ ಸಿನಿಮಾ ಮಾಡಿ ಎಂದು ಕಾಮೆಂಟ್ ಹಾಕುತ್ತಿರುತ್ತಾರೆ. ಇದಕ್ಕೂ ಉತ್ತರ ನೀಡಿರುವ ರಾಜೇಂದ್ರ ಸಿಂಗ್ ಬಾಬು, 'ಈಗ ಪ್ಲ್ಯಾನ್ ಮಾಡಿದ ಪ್ರಾಜೆಕ್ಟ್ಗೆ ಇನ್ನು ಯಾವಾಗಲೋ ಜೀವ ಬರುತ್ತೆ. ಅದೇ ರೀತಿ ಈ ಸಿನಿಮಾಗೂ ಜೀವ ಬಂದರೆ ಕನ್ನಡದಲ್ಲಿ ಒಂದೊಳ್ಳೆ ಐತಿಹಾಸಿಕ ಸಿನಿಮಾ ಆಗಿ ಉಳಿಯಲಿದೆ' ಎಂದು ಹೇಳಿದ್ದಾರೆ.












Click it and Unblock the Notifications