ದೊಡ್ಡವರೆಲ್ಲ ಜಾಣರಲ್ಲ, ತಪ್ಪಾದ ಮೇಲೆ ಕ್ಷಮೆ ಕೇಳೋಕೆ ಏನು? ಕಮಲ್ಗೆ ಡಿಂಪಲ್ ಕ್ವೀನ್ ತರಾಟೆ
ಕನ್ನಡದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ತಮಿಳು ನಟ ಕಮಲ್ ಹಾಸನ್ ಅವರು ಕನ್ನಡಿಗರಿಗೆ ಕ್ಷಮೆ ಕೇಳುವುದಿಲ್ಲ ಎಂದು ಪದೇ ಪದೇ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಇತ್ತ ಸ್ಯಾಂಡಲ್ವುಡ್ನಿಂದಲೂ ಕಮಲ್ ಹಾಸನ್ ಕ್ಷಮೆಯಾಚನೆಗೆ ಆಗ್ರಹ ಕೇಳಿಬರುತ್ತಿದೆ. ಒಬ್ಬೊಬ್ಬರಾಗಿಯೇ ಕನ್ನಡದ ಪರ ಧ್ವನಿ ಎತ್ತುತ್ತಿದ್ದ, ನಟಿ ಡಿಂಪಲ್ ಕ್ವೀನ್ ರಚಿರಾ ರಾಮ್ ಕೂಡ ವಿಡಿಯೋ ಹಂಚಿಕೊಳ್ಳುವ ಮೂಲಕ ಕಮಲ್ ಹಾಸನ ಅವರ ಹೆಸರೇಳದೆ ತಮ್ಮ ಮಾತಿನ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ. ನಮ್ಮ ಭಾಷೆ ಬಗ್ಗೆ ಯಾರಾದರೂ ಟೀಕೆ ಮಾಡ್ತಿದ್ದಾರೆ ಅಂದಾಗ ನಾವು ಕನ್ನಡದವರು ಸುಮ್ಮನೆ ಕೂರುವುದಕ್ಕೆ ಆಗಲ್ಲ ಎಂದು ನೇರವಾಗಿ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ವಿಡಿಯೋ ಹಂಚಿಕೊಂಡಿರುವ ರಚಿತಾ, ʼಎಲ್ಲರಿಗೂ ನಮಸ್ಕಾರ, ನನಗೆ ಒಂದು ಹಾಡು ಹೇಳಬೇಕು ಅನಿಸಿತು. ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡದವನಾಗಿರು. ನಾನು ಯಾಕೆ ಈ ಹಾಡು ಹಾಡಿದೆ ಎಂದು ನಿಮಗೆಲ್ಲರಿಗೂ ಗೊತ್ತಿದೆ. ಕನ್ನಡ, ಕರ್ನಾಟಕ ಅಂತ ಬಂದ್ರೆ ಪ್ರತಿಯೊಬ್ಬ ಕನ್ನಡಿಗನಿಗೂ ಒಂದು ರೀತಿಯ ಎಮೋಷನ್. ಹಾಗೆಯೇ ನಮ್ಮ ಭಾಷೆ ಬಗ್ಗೆ ಯಾರಾದರೂ ಟೀಕೆ ಮಾಡ್ತಿದ್ದಾರೆ ಅಂದಾಗ ನಾವು ಕನ್ನಡದವರು ಸುಮ್ಮನೆ ಕೂರುವುದಕ್ಕೆ ಆಗಲ್ಲ. ನಾವು ಕನ್ನಡದವರು ಎಂತಹ ವಿಶಾಲ ಹೃದಯದವರು ಅಂದ್ರೆ ಪ್ರತಿ ಭಾಷೆ ಸಿನಿಮಾನ ನೋಡಿ ಸಪೋರ್ಟ್ ಮಾಡ್ತೀವಿ, ಪ್ರತಿ ಭಾಷೆಯ ನಟ ನಟಿಯರು, ಟೆಕ್ನಿಷಿಯನ್ಗಳಿಗೂ ಸಪೋರ್ಟ್ ಮಾಡ್ತೀವಿ. ಆದರೆ ಯಾರಾದರೂ ನಮ್ಮ ಭಾಷೆ ಬಗ್ಗೆ ಮಾತನಾಡ್ತಿದ್ದಾರೆ ಅಂದಾಗ ಅದಕ್ಕೆ ನಾವು ಯಾಕೆ ಧ್ವನಿ ಎತ್ತಬಾರದು?ʼ ಎಂದು ಪ್ರಶ್ನಿಸಿದ್ದಾರೆ.

ʼನಾವಿಲ್ಲಿ ಯಾವ ಭಾಷೆ ಬಗ್ಗೆಯೂ ಕೆಟ್ಟದಾಗಿ ಮಾತನಾಡ್ತಿಲ್ಲ, ಎಲ್ಲ ಭಾಷೆಯನ್ನೂ ನಾವು ಗೌರವದಿಂದ ಕಾಣ್ತೀವಿ. ಆದರೆ ನಮ್ಮ ಕನ್ನಡ ಭಾಷೆ ಬಗ್ಗೆ ಯಾರಾದರೂ ಮಾತನಾಡ್ತಿದ್ದಾರೆ ಅಂದಾಗ ನಾವು ಕನ್ನಡಿಗರಾಗಿ ಅದಕ್ಕಾಗಿ ನಿಲ್ಲಬೇಕು. ದೊಡ್ಡವರೆಲ್ಲ ಜಾಣರಲ್ಲ, ಚಿಕ್ಕವರೆಲ್ಲ ಕೋಣರಲ್ಲ. ಚಿಕ್ಕ ತಪ್ಪು ಮಾಡಿದ್ರೆ ದೊಡ್ಡೋರು ಕ್ಷಮೆ ಕೇಳೋವರೆಗೆ ಬಿಡೋದಿಲ್ಲ. ಆದರೆ ದೊಡ್ಡವರು ತಪ್ಪು ಮಾಡಿದ್ರೆ? ತಪ್ಪು ಮಾಡಿದ ಮೇಲೆ ಕ್ಷಮೆ ಕೇಳೋದ್ರಲ್ಲಿ ಏನ್ ತಪ್ಪಿದೆʼ ಎಂದು ರಚಿತಾ ರಾಮ್ ಕೇಳಿದ್ದಾರೆ.
ʼಕನ್ನಡ ಸರಿಯಾಗಿ ಮಾತನಾಡದವರನ್ನ ನಾವು ಹೀಗಲ್ಲ, ಹಾಗೆ ಎಂದು ಕಲಿಸ್ತೀವಿ. ಅಂತದ್ರಲ್ಲಿ ಕನ್ನಡದ ಬಗ್ಗೆ ತಪ್ಪಾಗಿ ಮಾತನಾಡುವವರನ್ನ ಏನಂತ ಹೇಳೋಣ? ನವೆಂಬರ್ 1ರಂದು ನಾವೆಲ್ಲ ಕನ್ನಡ ರಾಜ್ಯೋತ್ಸವ ಆಚರಣೆ ಮಾಡ್ತೀವಿ. ಎಲ್ಲ ಕನ್ನಡಿಗರೂ ತಮ್ಮ ಪ್ರೀತಿ ಅಭಿಮಾನವನ್ನು ವ್ಯಕ್ತಪಡಿಸ್ತೀವಿ. ಈವಾಗ ನಮ್ಮ ಭಾಷೆಯನ್ನ, ಅದರ ಮೇಲಿರುವ ಪ್ರೀತಿ ಗೌರವವನ್ನು ನಾವು ತಿಳಿಸೋಣʼ ಎಂದು ಕನ್ನಡಿಗರಿಗೆ ಕರೆ ನೀಡಿದ್ದಾರೆ.

ಕ್ಷಮೆ ಕೇಳಿದ್ರೆ ದೊಡ್ಡವರಾಗ್ತಿದ್ರು: ವಸಿಷ್ಠ ಸಿಂಹ
ಕಮಲ್ ಹಾಸನ್ ಹೇಳಿಕೆ ವಿಚಾರವಾಗಿ ಮಾತನಾಡಿರುವ ನಟ ವಸಿಷ್ಠ ಸಿಂಹ, ʼನಾವು ಕಮಲ್ ಅವರನ್ನು ತುಂಬಾ ಅತಿಯಾಗಿ ಪ್ರೀತಿಸುತ್ತೀವಿ. ಹಾಗಂತ ಅವರು ಹೇಳಿದ್ದನ್ನ ಒಪ್ಪಲು ಸಾಧ್ಯವಿಲ್ಲ. ಪ್ರೀತಿ ಇದ್ದ ಕಡೆ ಕ್ಷಮೆ, ಗೌರವ ಕೂಡ ಇರಬೇಕು. ಕಮಲ್ ಅವರು ಆಡಿರುವ ಮಾತಿಗೆ ಕ್ಷಮೆ ಕೇಳಿದ್ರೆ ತುಂಬಾ ದೊಡ್ಡವರು ಎನಿಸಿಕೊಳ್ಳುತ್ತಿದ್ದರು. ನಾವೆಲ್ಲ ಅವರನ್ನ ಇಷ್ಟಪಡ್ತೀವಿ, ಆದ್ರೆ ಬೇಡದ ಜಾಗದಲ್ಲಿ ಬೇಡವಾದ ಮಾತುಗಳನ್ನ ಆಡಬಾರದು. ಅದು ಕೂಡ ಅವರ ವಿವೇಚನೆಗೆ ಬಿಟ್ಟ ವಿಚಾರʼ ಎಂದಿದ್ದಾರೆ.
ʼಅವರು ತಮ್ಮ ಸಿನಿಮಾ ರಿಲೀಸ್ ಟೈಮಲ್ಲೇ ಕನ್ನಡಿಗರ ಭಾಷೆ ಮೇಲಿರುವ ಸೆಂಟಿಮೆಂಟ್ನ ಕೆಣಕುವುದು ತಪ್ಪು, ಕನ್ನಡಿಗರ ಸೂಕ್ಷ್ಮ ವಿಚಾರವನ್ನ ವೇದಿಕೆಯಲ್ಲಿ ಬಳಸಿಕೊಂಡಿದ್ದು ನಿಜಕ್ಕೂ ತಪ್ಪು. ಇಷ್ಟ ಎಂದು ಹೇಳಿದ್ದೆಲ್ಲ ಒಪ್ಪೋಕೆ ಆಗಲ್ಲ, ತಪ್ಪು ತಪ್ಪೇ. ಇಷ್ಟು ವರ್ಷ ತಮ್ಮ ಸಿನಿಮಾಗಳಿಂದ ನಮ್ಮೆಲ್ಲರ ಮನಸ್ಸು ಗೆದ್ದಿದ್ದಾರೆ. ಅವರು ಭಾಷೆಯ ವಿಚಾರವನ್ನು ಕೆಣಕುವ ಅಗತ್ಯವಿರಲಿಲ್ಲ. ಈಗ ಪ್ರೀತಿಯನ್ನು ಪಡೆಯುವುದು, ಕಳೆದುಕೊಳ್ಳುವುದು ಎರಡೂ ಅವರ ಕೈಯಲ್ಲಿದೆʼ ಎಂದು ವಸಿಷ್ಠ ಹೇಳಿದ್ದಾರೆ.
ʼಭಾಷೆ ಎಲ್ಲರಿಗೂ ತಾಯಿ ಸಮಾನ. ಎಲ್ಲ ಭಾಷೆಯನ್ನ ನಾವು ಗೌರವದಿಂದ ನೋಡಬೇಕು. ಎತ್ತರಕ್ಕೆ ಬೆಳೆದ ಮೇಲೆ ಏನು ಮಾತನಾಡಿದ್ರೆ ನಡೆಯುತ್ತೆ ಅನ್ನಬಾರದು. ನಮ್ಮನ್ನ ಫಾಲೋ ಮಾಡುವವರಿಗೆ ಮಾದರಿಯಾಗಿರಬೇಕು, ಜವಾಬ್ದಾರಿಯಿಂದ ಮಾತನಾಡಬೇಕು. ಈಗ ಅವರು ಕ್ಷಮೆ ಕೇಳಲ್ಲ ಎಂದಾಗ ನಾವು ಕೂಡ ಬಿಸಿ ಮುಟ್ಟಿಸಬೇಕುʼ ಎಂದು ತಿರುಗೇಟು ನೀಡಿದ್ದಾರೆ.












Click it and Unblock the Notifications