ಖ್ಯಾತ ಗಾಯಕಿ ಇಂದರ್ ಕೌರ್ ಭೀಕರ ಕೊಲೆ: ಕಾರಿನಲ್ಲೇ ಹತ್ಯೆ ಮಾಡಿ ನದಿಗೆ ಎಸೆದ ಮಾಜಿ ಪ್ರೇಮಿ, ಕೆನಡಾದಿಂದ ಬಂದು ಕೃತ್ಯ
ಪಂಜಾಬ್ನ ಲುಧಿಯಾನದಲ್ಲಿ ಕಳೆದ ಐದು ದಿನಗಳ ಹಿಂದೆ ಗನ್ ಪಾಯಿಂಟ್ನಲ್ಲಿ ಅಪಹರಣಕ್ಕೊಳಗಾಗಿದ್ದ ಪ್ರಖ್ಯಾತ 23 ವರ್ಷದ ಪಂಜಾಬಿ ಗಾಯಕಿ ಯಶಿಂದರ್ ಕೌರ್ (ಇಂದರ್ ಕೌರ್) ಅವರ ಶವ ನದಿಯಲ್ಲಿ ಮಂಗಳವಾರ ಪತ್ತೆಯಾಗಿದೆ. ಮದುವೆಯಾಗಲು ನಿರಾಕರಿಸಿದ ಕಾರಣಕ್ಕೆ ಆಕೆಯ ಮಾಜಿ ಪ್ರೇಮಿ ಕೆನಡಾದಿಂದ ರಹಸ್ಯವಾಗಿ ಭಾರತಕ್ಕೆ ಬಂದು, ಆಕೆಯನ್ನು ಕಾರಿನಲ್ಲೇ ಕೊಲೆ ಮಾಡಿ ಶವವನ್ನು ನಾಲೆಯೊಂದಕ್ಕೆ ಎಸೆದು ಪರಾರಿಯಾಗಿರುವ ಕೃತ್ಯ ಬೆಳಕಿಗೆ ಬಂದಿದೆ.
ಕೆನಡಾದಿಂದ ನೇಪಾಳ ಮಾರ್ಗವಾಗಿ ಬಂದಿದ್ದ ಹಂತಕ
ಕುಬಾ ಗ್ರಾಮದ ಸಮೀಪವಿರುವ ನೀಲೋನ್ ನಾಲೆಯಲ್ಲಿ ಗಾಯಕಿಯ ಮೃತದೇಹ ಪತ್ತೆಯಾಗಿದ್ದು, ಇಡೀ ಪಂಜಾಬ್ ಚಿತ್ರರಂಗ ಹಾಗೂ ಸಾರ್ವಜನಿಕ ವಲಯವನ್ನು ಈ ಘಟನೆ ಬೆಚ್ಚಿಬೀಳಿಸಿದೆ. ಜಮಾಲ್ಪುರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ದಲ್ವೀರ್ ಸಿಂಗ್ ನೀಡಿರುವ ಮಾಹಿತಿಯ ಪ್ರಕಾರ, ಕೊಲೆ ಆರೋಪಿ ಸುಖ್ವಿಂದರ್ ಸಿಂಗ್ ಅಲಿಯಾಸ್ ಸುಖಾ ಪ್ರಸ್ತುತ ಕೆನಡಾದಲ್ಲಿ ವಾಸಿಸುತ್ತಿದ್ದ. ಈತ ಯಶಿಂದರ್ ಕೌರ್ ಅವರನ್ನು ಮದುವೆಯಾಗಲು ಬಯಸಿದ್ದ, ಆದರೆ ಯಶಿಂದರ್ ನಿರಾಕರಿಸಿದ್ದರು. ಇದೇ ದ್ವೇಷದಲ್ಲಿ ಸುಖ್ವಿಂದರ್ ಏಪ್ರಿಲ್ 29ರಂದು ನೇಪಾಳದ ಕಠ್ಮಂಡು ಮಾರ್ಗವಾಗಿ ರಹಸ್ಯವಾಗಿ ಭಾರತಕ್ಕೆ ಬಂದಿದ್ದ. ಗಾಯಕಿಯನ್ನು ಕಿಡ್ನಾಪ್ ಮಾಡಿ ಹತ್ಯೆ ಮಾಡಿದ ಅದೇ ದಿನ, ಅಂದರೆ ಮೇ 13ರಂದು ಮತ್ತೆ ಅದೇ ನೇಪಾಳ ಮಾರ್ಗವಾಗಿ ಕೆನಡಾಗೆ ಪರಾರಿಯಾಗಿದ್ದಾನೆ ಎಂದಿದ್ದಾರೆ.

ತರಕಾರಿ ತರಲು ಹೋಗಿ ಹೆಣವಾದಳು
ಮೇ 13ರ ರಾತ್ರಿ ಸುಮಾರು 8:30ರ ಸುಮಾರಿಗೆ ಯಶಿಂದರ್ ಕೌರ್ ಅವರು ತಮ್ಮ ಫೋರ್ಡ್ ಫಿಗೋ ಕಾರಿನಲ್ಲಿ ದಿನಸಿ ಮತ್ತು ತರಕಾರಿ ತರಲು ಮನೆಯಿಂದ ಹೊರಗಡೆ ಹೋಗಿದ್ದರು. ಆದರೆ ತಡರಾತ್ರಿಯಾದರೂ ಅವರು ಮನೆಗೆ ಮರಳದಿದ್ದಾಗ ಕುಟುಂಬಸ್ಥರು ಫೋನ್ ಮಾಡಲು ಯತ್ನಿಸಿದಾಗ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಕುಟುಂಬಸ್ಥರು ಹುಡುಕಾಟ ನಡೆಸಿದಾಗ, ಮುಂಡಿಯನ್ ಕಲನ್ ಪ್ರದೇಶದ ಜಿಟಿಬಿ ನಗರದಲ್ಲಿ ಆರೋಪಿ ಸುಖ್ವಿಂದರ್ ಮತ್ತು ಆತನ ಸಹಚರರು ಗಾಯಕಿ ಯಶಿಂದರ್ ಅವರನ್ನು ಗನ್ ಪಾಯಿಂಟ್ನಲ್ಲಿ ಅಪಹರಿಸಿರುವುದು ಸಿಸಿಟಿವಿ ಮತ್ತು ಸ್ಥಳೀಯ ಮೂಲಗಳಿಂದ ತಿಳಿದುಬಂದಿದೆ.
ಕಾರಿನ ತುಂಬಾ ರಕ್ತದ ಕಲೆಗಳು: ಎಫ್ಐಆರ್ ದಾಖಲು
ಮಂಗಳವಾರ ನೀಲೋನ್ ನಾಲೆ ಬಳಿ ಯಶಿಂದರ್ ಅವರ ಫೋರ್ಡ್ ಫಿಗೋ ಕಾರು ಪತ್ತೆಯಾಗಿದ್ದು, ಕಾರಿನ ಸೀಟುಗಳ ಮೇಲೆ ಭಾರಿ ಪ್ರಮಾಣದ ರಕ್ತದ ಕಲೆಗಳು ಕಂಡುಬಂದಿವೆ. ಇದಾದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿ ಗಾಯಕಿಯ ಮೃತದೇಹ ನಾಲೆಯಲ್ಲಿ ತೇಲುತ್ತಿರುವುದು ಪತ್ತೆಯಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ದುಷ್ಕರ್ಮಿಗಳು ಆಕೆಯನ್ನು ಕಾರಿನ ಒಳಗಡೆಯೇ ಶೂಟ್ ಮಾಡಿ ಅಥವಾ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದಿದ್ದಾರೆ. ಆ ನಂತರ ಸಾಕ್ಷ್ಯ ನಾಶಪಡಿಸಲು ಶವವನ್ನು ನದಿಗೆ ಎಸೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಸ್ತುತ ಜಮಾಲ್ಪುರ ಪೊಲೀಸರು ಪ್ರಮುಖ ಆರೋಪಿ ಸುಖ್ವಿಂದರ್ ಸಿಂಗ್, ಆತನ ತಂದೆ ಪ್ರೀತಮ್ ಸಿಂಗ್ ಮತ್ತು ಆತನಿಗೆ ಸಹಾಯ ಮಾಡಿದ ಸ್ನೇಹಿತ ಕರಮಜೀತ್ ಸಿಂಗ್ ವಿರುದ್ಧ ಕೊಲೆ ಮತ್ತು ಅಪಹರಣದಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಭಾರತದಲ್ಲೇ ಇದ್ದು ಕೊಲೆಗೆ ಸಾಥ್ ನೀಡಿದ ಸುಖ್ವಿಂದರ್ ತಂದೆ ಪ್ರೀತಮ್ ಹಾಗೂ ಸ್ನೇಹಿತ ಕರಮಜೀತ್ನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು, ಕೆನಡಾಕ್ಕೆ ಓಡಿ ಹೋಗಿರುವ ಮುಖ್ಯ ಆರೋಪಿಯ ಪತ್ತೆಗಾಗಿ ತನಿಖೆ ಚುರುಕುಗೊಳಿಸಿದ್ದಾರೆ.
ಇಂದರ್ ಕೌರ್ ಯಾರು?
ಕೊಲೆಯಾಗಿರುವ 29 ವರ್ಷದ ಯಶಿಂದರ್ ಕೌರ್ (ಇಂದರ್ ಕೌರ್) ಪಂಜಾಬಿ ಪ್ರಾದೇಶಿಕ ಸಂಗೀತ ಲೋಕದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದ ಪ್ರತಿಭಾನ್ವಿತ ಗಾಯಕಿಯಾಗಿದ್ದರು. ತಮ್ಮ ವಿಶಿಷ್ಟ ಕಂಠಸಿರಿಯ ಮೂಲಕ ಪಂಜಾಬಿ ಸಂಗೀತ ವಲಯದಲ್ಲಿ ಗುರುತಿಸಿಕೊಂಡಿದ್ದ ಇವರನ್ನು ಇನ್ಸ್ಟಾಗ್ರಾಮ್ನಲ್ಲಿ 1.24 ಲಕ್ಷಕ್ಕೂ ಅಧಿಕ ಅಭಿಮಾನಿಗಳು ಫಾಲೋ ಮಾಡುತ್ತಿದ್ದರು.ಇಂದರ್ ಕೌರ್ ಅವರ ಈ ಭೀಕರ ಹತ್ಯೆಯ ಸುದ್ದಿ ತಿಳಿಯುತ್ತಿದ್ದಂತೆ ಅವರ ಸಹ-ಕಲಾವಿದರು, ಪಂಜಾಬಿ ಚಿತ್ರರಂಗದ ಗಣ್ಯರು ಹಾಗೂ ಲಕ್ಷಾಂತರ ಅಭಿಮಾನಿಗಳು ತೀವ್ರ ದಿಗ್ಭ್ರಮೆ ಮತ್ತು ಆಘಾತ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅವರ ಆತ್ಮಕ್ಕೆ ಶಾಂತಿ ಕೋರಿ ಕಂಬನಿ ಮಿಡಿಯುತ್ತಿರುವ ಅಭಿಮಾನಿಗಳು, 'ಇಂದರ್ ಕೌರ್ಗೆ ನ್ಯಾಯ ಸಿಗಬೇಕು' ಎಂದು ಅಭಿಯಾನ ಆರಂಭಿಸಿದ್ದಾರೆ.













Click it and Unblock the Notifications