Pushpa 2: ಕನ್ನಡ ಸಿನಿಮಾಗಳಿಗೆ ಕರ್ನಾಟಕದಲ್ಲಿಯೇ 'ಒಳ್ಳೆ ಮಾರ್ಯದೆ': ಸಿಡಿದೆದ್ದ ನಿರ್ಮಾಪಕ
ಇತರ ಭಾಷೆಯ ಸಿನಿಮಾಗಳಿಗಾಗಿ ಕರ್ನಾಟಕದಲ್ಲಿ ಕನ್ನಡ ಸಿನಿಮಾಗಳನ್ನು ಚಿತ್ರಮಂದಿರಗಳಿಂದ ತೆಗೆದು, ಶೋಗಳನ್ನು ಬ್ಲಾಕ್ ಮಾಡಿದವರ ವಿರುದ್ಧ ನಿರ್ಮಾಪಕ ಆರ್.ಜೆ ಪ್ರದೀಪ ನೇರವಾಗಿ ಧ್ವನಿ ಎತ್ತಿದ್ದಾರೆ. ನಾಗರಾಜ್ ಸೋಮಯಾಜಿ ನಿರ್ದೇಶನದ, ಆರ್. ಜೆ ಪ್ರದೀಪ ಅವರ ಸಕ್ಕತ್ ಸ್ಟುಡಿಯೋದ ಚೊಚ್ಚಲ ನಿರ್ಮಾಣದ ಮರ್ಯಾದೆ ಪ್ರಶ್ನೆ ಸಿನಿಮಾ ನವೆಂಬರ್ 22 ರಂದು ಬಿಡುಗಡೆಯಾಗಿದ್ದು, ಜನರಿಂದ ಬಹಳ ಮೆಚ್ಚುಗೆ ಪಡೆದಿತ್ತು.
ಕನ್ನಡ ಏಳು ಸಿನಿಮಾಗಳು ಒಂದೇ ವಾರದಲ್ಲಿ ತೆರೆ ಕಂಡಿದ್ದವು, ಈ ಪೈಕಿ ಆರ್. ಜೆ ಪ್ರದೀಪ ಅವರ ಮರ್ಯಾದೆ ಪ್ರಶ್ನೆ ಸಿನಿಮಾ ಪ್ರೇಕ್ಷಕರ ಗಮನ ಸೆಳೆದಿತ್ತು. ಅಲ್ಲದೇ ಉತ್ತಮ ರಿವ್ಯೂ ಕೂಡ ಪಡೆದು, ಚಿತ್ರ ಮುನ್ನುಗ್ಗುತ್ತಿತ್ತು. ಆದರೆ ಇತರ ಭಾಷೆಯ ಸಿನಿಮಾಗಳಿಗಾಗಿ ಕರ್ನಾಟಕದಲ್ಲಿ ಕನ್ನಡ ಸಿನಿಮಾಗಳ ಶೋಗಳನ್ನು ಬ್ಲಾಕ್ ಮಾಡಲಾಗಿದೆ. ಇದರಲ್ಲಿ ಮರ್ಯಾದೆ ಪ್ರಶ್ನೆ ಸಿನಿಮಾ ಕೂಡ ಒಂದು. ಹೀಗಾಗಿ ಸಿನಿಮಾದ ನಿರ್ಮಾಪಕರು ಈ ಬೇಸರವನ್ನು ಕೆಲವು ಪ್ರಶ್ನೆಗಳನ್ನು ಕೇಳುವ ಮೂಲಕ ಹೊರಹಾಕಿದ್ದಾರೆ.

ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಆರ್.ಜೆ ಪ್ರದೀಪ, 'ನಾನು ಆರ್.ಜೆ ಪ್ರದೀಪ ನನ್ನೂರು ಚಿಕ್ಕಬಳ್ಳಾಪುರದ, ಪೆರೆಸಂದ್ರ ನಮ್ಮೂರು, ತೆಲುಗು ಬಾರ್ಡರ್ ಹತ್ರ. ನಾನು ಹಣಕ್ಕಾಗಿ ಮನಸ್ಸು ಮಾಡಿದ್ರೆ ತೆಲುಗು ಸಿನಿಮಾ ಮಾಡೋದಿತ್ತು. ಸಖತ್ ಸ್ಟೂಡಿಯೋ ಕನ್ನಡದ ಮೊದಲ ವೆಬ್ ಸೀರೀಸ್ ನೀಡಿದ ಸಂಸ್ಥೆ ಎನ್ನುವ ಹೆಮ್ಮೆ ನನ್ನದು. ಕನ್ನಡದಲ್ಲಿ ಈ ಮೊದಲುಗಳು ಮಾಡಿದ್ದು ತಪ್ಪಾ?.
ನಮ್ಮ ಮರ್ಯಾದೇ ಪ್ರಶ್ನೆ ಸಿನಿಮಾದಲ್ಲಿ ಎಲ್ಲ ಕಲಾವಿದರು, ತಂತ್ರಜ್ಞರು ಕನ್ನಡಿಗರೇ, ಗಿಮಿಕ್ ಮಾಡದೇ, ಅನಾವಶ್ಯಕ ಮಸಾಲ ತುಂಬದೇ ಸಿನಿಮಾ ಮಾಡಿದ್ದು ತಪ್ಪಾ? ನಮ್ಮಲ್ಲಿಯೂ ಹಣವಿತ್ತು, ಬೇರೆ ರಾಜ್ಯದ ಮ್ಯೂಸಿಕ್ ಡೈರೆಕ್ಟರ್, ಸಿಂಗರ್ಸ್ಗಳಿಗೆ ಅವಕಾಶ ನೀಡೋಕೆ. ಸ್ವಾಭಿಮಾನಿ ಕನ್ನಡಿಗರು ಅಂತ ಹೇಳ್ತಿವಿ.

ಹನುಮಂತನೇ ಬಾಲ ತಿನ್ನುವಾಗ, ಪಕ್ಕದವನು ಬಂದು ಶ್ಯಾವಿಗೆ ಕೇಳಿದ್ರೆ ಕೊಡೋಕಾಗುತ್ತಾ? ಒಳ್ಳೆ ರಿವ್ಯೂಗಳ ಜೊತೆ ಮುನ್ನುಗಬೇಕಾದ್ರೆ ಒಂದು ಸಿನಿಮಾಗಾಗಿ ನಮನ್ನು ಬಲಿ ಕೊಟ್ಟು ಅವಿಗೆ ಥಿಯೇಟರ್ ಬಿಟ್ಟುಕೊಡೋದು ನಮ್ಮ ಕನ್ನಡ ಡಿಸ್ಟ್ರಿಬ್ಯೂಟರ್ಗಳ ಮರ್ಯಾದೆ ಪ್ರಶ್ನೆ ಅಲ್ಲವಾ? (95% screens block) ಮಾಡಿದ್ದಾರೆ ಏನ್ ಮಾಡಕ್ಕಾಗುತ್ತೆ ಸಾರ್..
ಸಿನಿಮಾ ನೋಡಿ ಬಂದವರಿಂದ ಇರುವ ಅಭಿಪ್ರಾಯ ಕೇಳಿ. ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇಷ್ಟೇಲ್ಲಾ ಆದರೂ ಕನ್ನಡ ಸಿನಿಮಾಗಳಿಗೆ ಥಿಯೇಟರ್ ಸಮಸ್ಯೆ. ಇನ್ಮುಂದೆ ಸಿನಿಮಾ ಬಿಡುಗಡೆ ಮಾಡುವಾಗ, ತಮಿಳು ತೆಲುಗು ಪ್ರೊಡ್ಯೂಸರ್ಸ್ ಡೇಟ್ ಕೇಳಿ ಕನ್ನಡಿಗರು ಸಿನಿಮಾ ಬಿಡುಗಡೆ ಮಾಡಬೇಕಾ? ಹೊಸ ಪ್ರತಿಭೆಗಳನ್ನು, ಹೊಸದಾಗಿ ಚಿತ್ರ ಮಾಡುವವರನ್ನು ಬೆಳೆಸದೇ ಹೋದರೆ, ಮುಂದೊಂದು ದಿನ..ಇದು ಚಿತ್ರರಂಗದ ಅಳಿವು ಉಳಿವಿನ ಮರ್ಯಾದೆ ಪ್ರಶ್ನೆ.
ಕನ್ನಡದವರು ಜೊತೆಗಿದ್ದಾರೆ, ಜೊತೆಗಿರುತ್ತಾರೆ..ಎಂಬುದು ನನ್ನ ಭಾವನೆ..ಮನಸ್ಸು ಮಾಡಿ ನಮ್ಮ ಸಿನಿಮಾ ನೋಡಿ' ಎಂದು ಪ್ರದೀಪ್ ಬರೆದುಕೊಂಡಿದ್ದಾರೆ. ಇನ್ನು ತೆಲುಗಿನ ಪುಷ್ಪ-2 ಚಿತ್ರಕ್ಕಾಗಿ ಕನ್ನಡ ಸಿನಿಮಾಗಳ ಶೋಗಳನ್ನು ಬ್ಲಾಕ್ ಮಾಡಲಾಗಿದೆ ಎನ್ನುವ ಆರೋಪ ಜೋರಾಗಿಯೇ ಕೇಳಿ ಬರುತ್ತಿದೆ.












Click it and Unblock the Notifications