Kiran Raj: ಜೀ ಕನ್ನಡಕ್ಕೆ ಬಂದ 'ಕನ್ನಡತಿ' ಹೀರೋ ಕಿರಣ್ ರಾಜ್: ಕರ್ಣನ ಕಥೆಯೇನು?
ಕಲರ್ಸ್ ಕನ್ನಡ ವಾಹಿನಿಯ ಕನ್ನಡತಿ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದಿದ್ದ ನಟ ಕಿರಣ್ ರಾಜ್ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ. ಕನ್ನಡತಿ ಧಾರಾವಾಹಿ ಮುಗಿದ ಬಳಿಕ ಮತ್ತೆ ಕಿರುತೆರೆಗೆ ಬರುತ್ತೇನೆ ಎಂದು ಅಭಿಮಾನಿಗಳಿಗೆ ಭರವಸೆ ನೀಡಿ ಚಿತ್ರರಂಗದತ್ತ ಮುಖ ಮಾಡಿದ್ದ ಕಿರಣ್ ರಾಜ್ ತಮ್ಮ ಸಿನಿಮಾಗಳನ್ನು ಯಶಸ್ವಿಯಾಗಿ ಮುಗಿಸಿ ಇದೀಗ ಮತ್ತೆ ಕಿರುತೆರೆಗೆ ಕಂಬ್ಯಾಕ್ ಮಾಡಿದ್ದಾರೆ.
ಹೊಸ ಧಾರಾವಾಹಿ ಮೂಲಕ ಮತ್ತೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿರುವ ಕಿರಣ್ ರಾಜ್ ಈ ಬಾರಿ ಜೀ ಕನ್ನಡ ವಾಹಿನಿಯಲ್ಲಿ ತಮ್ಮ ಪಯಣ ಆರಂಭಿಸಿದ್ದಾರೆ. ದಿನದಿಂದ ದಿನಕ್ಕೆ ಹೊಸ ಹೊಸ ಕಥೆಯೊಂದಿಗೆ ಜೀ ಕನ್ನಡದಲ್ಲಿ ಹೊಸ ಹೊಸ ಧಾರಾವಾಹಿಗಳು ಪ್ರಸಾರ ಕಾಣುತ್ತಲೇ ಇದ್ದು, ಕಿರಣ್ ರಾಜ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಕರ್ಣ ಧಾರಾವಾಹಿ ಈ ಸಾಲಿಗೆ ಸೇರಿಕೊಂಡಿದೆ.

ಈಗಾಗಲೇ ಕರ್ಣ ಧಾರಾವಾಹಿಯ ಪ್ರೋಮೋವನ್ನು ಜೀ ಕನ್ನಡ ವಾಹಿನಿ ಹಂಚಿಕೊಂಡಿದ್ದು, ಧಾರಾವಾಹಿಯ ಒನ್ ಲೈನ್ ಕಥೆ ಏನು ಎನ್ನುವುದು ಈಗಾಗಲೇ ಪ್ರೇಕ್ಷಕರಿಗೆ ತಿಳಿದು ಹೋಗಿದೆ. ತನ್ನದೇ ಮನೆಯಲ್ಲಿ ಅನಾಥನಂತೆ ಬದುಕುತ್ತಿರುವ ಕರ್ಣ ಜನಪ್ರಿಯ ಹಾಗೂ ಪ್ರಶಸ್ತಿ ಪುರಸ್ಕೃತ ಸ್ತ್ರೀರೋಗ ತಜ್ಞ. ಹೊರಗಿನ ಪ್ರಪಂಚಕ್ಕೆ ದೊಡ್ಡ ಡಾಕ್ಟರ್ ಆಗಿರುವ ಕರ್ಣ ಮನೆಯಲ್ಲಿ ಎಲ್ಲರ ಪಾಲಿನ ಸೇವಕ.
ಅಪ್ಪನಿಂದಲೇ ತಿಪ್ಪೆಗುಂಡಿಯಲ್ಲಿ ಸಿಕ್ಕವನು ಎಂದು ಸದಾ ಹೇಳಿಸಿಕೊಳ್ಳುವ ಕರ್ಣ. ಮನೆಯಲ್ಲಿ ಇತರರ ಪಾಲಿಗೆ ಕೆಲಸದವನಂತೆ. ಅಮ್ಮ ಹಾಗೂ ಅಜ್ಜಿಯ ಪ್ರೀತಿಯ ಕಂದನಾಗಿರುವ ಕರ್ಣ, ತನ್ನ ನೋವು ನುಂಗಿಕೊಂಡು ಹೇಗೆ ಮುನ್ನಡೆಯುತ್ತಾನೆ ಎನ್ನುವುದು ಕರ್ಣ ಧಾರಾವಾಹಿಯ ಕಥಾ ವಸ್ತು.

ಸದ್ಯ ಕರ್ಣ ಧಾರಾವಾಹಿಯ ಪ್ರೋಮೋ ವೈರಲ್ ಆಗುತ್ತಿದ್ದು, ಕಿರಣ್ ರಾಜ್ ಸ್ಟೈಲಿಶ್ ಲುಕ್ ನೋಡಿ ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ. ಇನ್ನು ಕರ್ಣನಿಗೆ ಜೋಡಿ ಯಾರು ಎನ್ನುವುದನ್ನು ಇನ್ನೂ ಕೂಡ ರಹಸ್ಯವಾಗಿಯೇ ಇಡಲಾಗಿದ್ದು, ಕನ್ನಡತಿ ಧಾರಾವಾಹಿಯ ನಾಯಕಿ ರಂಜನಿ ರಾಘವನ್ ಅವರೇ ಕಿರಣ್ ರಾಜ್ ಜೋಡಿಯಾಗಲಿ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ.
ಶೀಘ್ರದಲ್ಲೇ ಕರ್ಣನ ಸಂಗಾತಿಯ ಪ್ರೋಮೋ ಕೂಡ ರಿಲೀಸ್ ಆಗುವ ಸಾಧ್ಯತೆ ಇದೆ. ಅದೇನೇ ಇರಲಿ ಕನ್ನಡತಿ ಧಾರಾವಾಹಿ ಮೂಲಕ ಮಿಂಚಿದ್ದ ಕಿರಣ್ ರಾಜ್, ಕರ್ಣನಾಗಿ ಮತ್ತೆ ಕಿರುತೆರೆ ಮೇಲೆ ಬರುತ್ತಿರುವುದನ್ನು ಕಂಡು ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.












Click it and Unblock the Notifications