Kiccha Sudeep: ಕಿಚ್ಚ ಸುದೀಪ್ ವಿರುದ್ಧ ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು
ನಟ ಕಿಚ್ಚ ಸುದೀಪ್ ಅವರಿಗೆ ಮತ್ತೊಂದು ದೊಡ್ಡ ಶಾಕ್ ಎದುರಾಗಿದೆ. ಹಲವು ವರ್ಷಗಳ ಹಿಂದೆ ಅವರ ನಿರ್ಮಾಣದ 'ವಾರಸ್ದಾರ' ಧಾರಾವಾಹಿಗೆ ಸಂಬಂಧಿಸಿದ ಹಳೆಯ ಪ್ರಕರಣ ಇದೀಗ ಮತ್ತೆ ಜೀವ ಪಡೆದುಕೊಂಡಿದೆ. ಸುದೀಪ್ ಹಾಗೂ ಅವರ ಮ್ಯಾನೇಜರ್ ಚಕ್ರವರ್ತಿ ಚಂದ್ರಚೂಡ್ ವಂಚನೆ ಆರೋಪ ಕೇಳಿಬಂದಿದ್ದು, ಧಾರಾವಾಹಿ ಚಿತ್ರೀಕರಣಕ್ಕೆ ಸಂಬಂಧಿಸಿದ ಹಣಕಾಸು ವ್ಯವಹಾರದಲ್ಲಿ ವಂಚನೆ ನಡೆದಿದೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಕಾಫಿ ತೋಟದ ಮಾಲೀಕರಿಬ್ಬರು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ಏನಿದು ಪ್ರಕರಣ?
2016ರಲ್ಲಿ ಪ್ರಸಾರವಾಗಿದ್ದ 'ವಾರಸ್ದಾರ' ಧಾರಾವಾಹಿಯನ್ನು ನಟ ಕಿಚ್ಚ ಸುದೀಪ್ ನಿರ್ಮಾಣ ಮಾಡಿದ್ದು ಗೊತ್ತೇ ಇದೆ. ಇದು ಸಾಕಷ್ಟು ವಿವಾದಗಳನ್ನು ಸಹ ಹುಟ್ಟುಹಾಕಿತ್ತು. ಈ ಧಾರಾವಾಹಿಯ ಚಿತ್ರೀಕರಣಕ್ಕಾಗಿ ದೀಪಕ್ ಎಂಬುವವರ ಮನೆ ಮತ್ತು ಕಾಫಿ ತೋಟವನ್ನು ಬಾಡಿಗೆಗೆ ಪಡೆಯಲಾಗಿತ್ತು. ಆದರೆ ಚಿತ್ರೀಕರಣದ ವೇಳೆ ತೋಟಕ್ಕೆ ಭಾರೀ ಹಾನಿಯಾಗಿದೆ ಎಂದು ದೀಪಕ್ ಆರೋಪಿಸಿದ್ದರು.

ಕಾಫಿ ತೋಟದಲ್ಲಿದ್ದ ಮರಗಳು ಮತ್ತು ಗಿಡಗಳನ್ನು ಕಡಿಯಲಾಗಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ನಷ್ಟ ಉಂಟಾಗಿದೆ. ಮನೆ ಬಾಡಿಗೆ ಹಣವನ್ನು ಸಂಪೂರ್ಣವಾಗಿ ಪಾವತಿಸಲಾಗಿಲ್ಲ. ಈ ಎಲ್ಲ ಕಾರಣಗಳಿಂದಾಗಿ ದೀಪಕ್ 2018ರಲ್ಲಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಕಾಫಿ ತೋಟ ಮತ್ತು ಮನೆಗೆ ಆಗಿರುವ ನಷ್ಟಕ್ಕೆ ಪರಿಹಾರವಾಗಿ 95 ಲಕ್ಷ ರೂಪಾಯಿ ನೀಡಬೇಕು ಎಂದು ದೀಪಕ್ ಕೋರ್ಟ್ನಲ್ಲಿ ಮೊಕದ್ದಮೆ ಹೂಡಿದ್ದರು. ಈ ಪ್ರಕರಣ ಹಲವು ವರ್ಷಗಳಿಂದ ನ್ಯಾಯಾಲಯದಲ್ಲಿ ಮುಂದುವರಿದಿತ್ತು.
ಆದರೆ 2023ರಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಬೆಳವಣಿಗೆ ನಡೆದಿದೆ. ಎನ್. ಕುಮಾರ್ ಎಂಬವರು ದೀಪಕ್ಗೆ ಕರೆ ಮಾಡಿ, ನಮಗೂ ಸುದೀಪ್ ಹಣ ನೀಡದೆ ವಂಚಿಸಿದ್ದಾರೆ ಎಂದು ತಿಳಿಸಿದ್ದರು. ಇದರಿಂದ ಅನುಮಾನಗೊಂಡ ದೀಪಕ್, ಸುದೀಪ್ ಅವರ ಮ್ಯಾನೇಜರ್ ಚಕ್ರವರ್ತಿ ಚಂದ್ರಚೂಡ್ ಅವರನ್ನು ಸಂಪರ್ಕಿಸಿದ್ದಾರೆ. ದೀಪಕ್ ಅವರ ಹೇಳಿಕೆಯ ಪ್ರಕಾರ ಚಕ್ರವರ್ತಿ ಚಂದ್ರಚೂಡ್ ಅವರು ಚೆನ್ನೈಗೆ ಬರುವಂತೆ ಕರೆದಿದ್ದರು. ಕೇಸ್ ವಾಪಸ್ ಪಡೆದರೆ 60 ಲಕ್ಷ ರೂಪಾಯಿ ನೀಡುವುದಾಗಿ ಕಿಚ್ಚ ಸುದೀಪ್ ಭರವಸೆ ನೀಡಿದ್ದು, ಕೇಸ್ ಹಿಂಪಡೆಯುವ ಮುನ್ನ 10 ಲಕ್ಷ ರೂಪಾಯಿ ಚೆಕ್ ಅನ್ನು ಚಕ್ರವರ್ತಿ ನೀಡಿದ್ದರು. ಈ ಭರವಸೆಯನ್ನು ನಂಬಿ ದೀಪಕ್ ಅವರು ಕೋರ್ಟ್ನಲ್ಲಿ ಸಲ್ಲಿಸಿದ್ದ ಪ್ರಕರಣವನ್ನು ಹಿಂಪಡೆದಿದ್ದರು ಎನ್ನಲಾಗಿದೆ.
ಆದರೆ ಕೇಸ್ ಹಿಂಪಡೆಯುತ್ತಿದ್ದಂತೆ, ಚಕ್ರವರ್ತಿ ಚಂದ್ರಚೂಡ್ ತಮ್ಮ ಮೊಬೈಲ್ ನಂಬರ್ ಅನ್ನು ಬ್ಲಾಕ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಬಾಕಿ ಹಣವನ್ನು ನೀಡಿಲ್ಲ ಎಂದು ದೀಪಕ್ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ ಸುದೀಪ್ ಪರವಾಗಿ ಮಾತನಾಡಿರುವ ದೀಪಕ್ ಅವರ ವಿಡಿಯೋಗಳು ಚಕ್ರವರ್ತಿ ಬಳಿ ಇವೆ ಎನ್ನಲಾಗಿದೆ. ಆ ವಿಡಿಯೋಗಳನ್ನು ಒತ್ತಾಯಪೂರ್ವಕವಾಗಿ ಪಡೆದುಕೊಂಡಿದ್ದಾರೆ ಎಂದು ದೀಪಕ್ ಆರೋಪಿಸಿದ್ದಾರೆ.
ಪೊಲೀಸ್ ಆಯುಕ್ತರಿಗೆ ದೂರು
ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ದೀಪಕ್ ಅವರು ಇದೀಗ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಅಧಿಕೃತ ದೂರು ದಾಖಲಿಸಿದ್ದಾರೆ. ನಟ ಕಿಚ್ಚ ಸುದೀಪ್ ಹಾಗೂ ಮ್ಯಾನೇಜರ್ ಚಕ್ರವರ್ತಿ ಚಂದ್ರಚೂಡ್ ವಿರುದ್ಧ ವಂಚನೆ, ನಂಬಿಕೆ ದ್ರೋಹ ಮತ್ತು ಒತ್ತಾಯಪೂರ್ವಕ ನಡೆ ಆರೋಪಗಳನ್ನು ಮಾಡಿದ್ದಾರೆ. ಈ ಪ್ರಕರಣ ಇದೀಗ ಮತ್ತೆ ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದ್ದು, ಪೊಲೀಸರು ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ? ಸುದೀಪ್ ಹಾಗೂ ಅವರ ತಂಡದಿಂದ ಸ್ಪಷ್ಟನೆ ಬರಬಹುದೇ? ಎಂಬುದರ ಮೇಲೆ ಸ್ಯಾಂಡಲ್ವುಡ್ ಮಾತ್ರವಲ್ಲದೆ ಅಭಿಮಾನಿಗಳು ಕೂಡ ಕಾಯುತ್ತಿದ್ದಾರೆ.












Click it and Unblock the Notifications