Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್
ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ 'ಕರ್ಣ' ಯಶಸ್ವಿಯಾಗಿ 200 ಸಂಚಿಕೆಗಳನ್ನು ಪೂರೈಸಿದೆ. ಈ ವಿಶೇಷ ಸಂದರ್ಭದಲ್ಲಿ ವೀಕ್ಷಕರಿಗೆ ಭರ್ಜರಿ ಸರ್ಪ್ರೈಸ್ ನೀಡಲು ತಂಡ ಸಜ್ಜಾಗಿದೆ. ಈ ಮೈಲಿಗಲ್ಲನ್ನು ಸಂಭ್ರಮಿಸುತ್ತಿರುವ ಬೆನ್ನಲ್ಲೇ ಕರ್ಣ ಸೀರಿಯಲ್ನಲ್ಲಿ "ಸೀತಾರಾಮ" ಖ್ಯಾತಿಯ ನಟ ಗಗನ್ ಚಿನ್ನಪ್ಪ ಅವರ ಎಂಟ್ರಿಯಾಗಿದ್ದು, ಅಭಿಮಾನಿಗಳಲ್ಲಿ ಕುತೂಹಲ ದುಪ್ಪಟ್ಟಾಗಿದೆ.
ಕರ್ಣ ಧಾರಾವಾಹಿಯ 200 ಸಂಚಿಕೆಗಳ ಸಾರ್ಥಕ ಪಯಣದ ಬಗ್ಗೆ ನಿರ್ಮಾಪಕಿ ಶ್ರುತಿ ನಾಯ್ಡು ಸಂತಸ ವ್ಯಕ್ತಪಡಿಸಿದ್ದಾರೆ. ವೀಕ್ಷಕರ ಪ್ರೀತಿ ಮತ್ತು ಇಡೀ ತಂಡದ ಶ್ರಮಕ್ಕೆ ಅವರು ಧನ್ಯವಾದ ಅರ್ಪಿಸಿದ್ದಾರೆ. ನಟ ಗಗನ್ ಚಿನ್ನಪ್ಪ ಕಾಣಿಸಿಕೊಂಡಿರುವ ಈ ಸಂಚಿಕೆಯು ಕರ್ಣ ಮತ್ತು ನಿಧಿ ಪ್ರೇಮಕಥೆಯಲ್ಲಿ ಹೊಸ ತಿರುವು ನೀಡಲಿದ್ದು, ಕಥೆ ಯಾವ ದಿಕ್ಕಿಗೆ ಸಾಗಲಿದೆ ಎಂಬ ಕುತೂಹಲ ಮೂಡಿಸಿದೆ.

ಅರ್ಜುನನಾಗಿ ಬಂದ ಗಗನ್ ಚಿನ್ನಪ್ಪ
ಮನೆಯಲ್ಲಿ ನಿಧಿ ಮದುವೆ ವಿಚಾರ ಮುನ್ನೆಲೆಗೆ ಬಂದಿದ್ದು, ಸಂಬಂಧ ಹುಡುಕುವ ಜವಾಬ್ದಾರಿಯನ್ನು ರಮೇಶ್ ವಹಿಸಿಕೊಂಡಿದ್ದಾರೆ. ಕರ್ಣ ಮತ್ತು ನಿಧಿ ಪ್ರೀತಿಸುತ್ತಿರುವ ವಿಷಯ ತಿಳಿದಿದ್ದರೂ, ರಮೇಶ್ ಮನೆಯವರನ್ನು ಒಪ್ಪಿಸಿ ನಿಧಿಯನ್ನು ನೋಡಲು ಅರ್ಜುನ್ ಎಂಬ ಪಾತ್ರವನ್ನು ಕರೆತಂದಿದ್ದಾರೆ. ಈ ಅರ್ಜುನ್ ಪಾತ್ರದಲ್ಲಿ 'ಸೀತಾರಾಮ' ಸೀರಿಯಲ್ ಖ್ಯಾತಿಯ ಗಗನ್ ಚಿನ್ನಪ್ಪ ಕಾಣಿಸಿಕೊಳ್ಳುತ್ತಿದ್ದಾರೆ. ಕರ್ಣ ಮತ್ತು ಅರ್ಜುನ ಮುಖಾಮುಖಿಯಾಗುವ ಸಂಚಿಕೆಗಳ ಮೇಲೆ ವೀಕ್ಷಕರು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ತೆರೆ ಹಂಚಿಕೊಂಡ ಆಪ್ತ ಗೆಳೆಯರು
ಈ ಸಂಚಿಕೆಯ ವಿಶೇಷತೆಯೆಂದರೆ ರಿಯಲ್ ಲೈಫ್ ಸ್ನೇಹಿತರಾದ ಕಿರಣ್ ರಾಜ್ (ಕರ್ಣ) ಮತ್ತು ಗಗನ್ ಚಿನ್ನಪ್ಪ (ಅರ್ಜುನ್) ಇದೇ ಮೊದಲ ಬಾರಿಗೆ ಒಟ್ಟಿಗೆ ನಟಿಸುತ್ತಿದ್ದಾರೆ. ಈ ಹಿಂದೆ 'ಮಿನಿ ಬಿಗ್ ಬಾಸ್' ಶೋನಲ್ಲಿಯೂ ಈ ಇಬ್ಬರು ನಟರು ಒಂದೇ ಮನೆಯಲ್ಲಿದ್ದು ಆಪ್ತ ಗೆಳೆಯರಾಗಿದ್ದರು. ಇದೀಗ ತೆರೆಯ ಮೇಲೂ ಈ ದೋಸ್ತಿಗಳ ಜುಗಲ್ಬಂದಿ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.
ಈ ಇಬ್ಬರೂ ನಟರು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಅಭಿಮಾನಿ ಬಳಗ ಹೊಂದಿದ್ದಾರೆ. 'ಕನ್ನಡತಿ'ಯ ಮೂಲಕ ಮನೆಮಾತಾಗಿದ್ದ ಕಿರಣ್ ರಾಜ್ ಮತ್ತು 'ಸೀತಾರಾಮ' ಧಾರಾವಾಹಿಯ ಮೂಲಕ ಜನಪ್ರಿಯರಾದ ಗಗನ್ ಚಿನ್ನಪ್ಪ ಇಬ್ಬರೂ ಅಪ್ಪಟ ಪ್ರತಿಭಾವಂತರು. ಕಿರುತೆರೆಯ ಇಬ್ಬರು 'ಟಾಪ್ ಹೀರೊ'ಗಳು ಒಂದೇ ಫ್ರೇಮ್ನಲ್ಲಿ ಕಾಣಿಸಿಕೊಳ್ಳುತ್ತಿರುವುದು ಕನ್ನಡ ಕಿರುತೆರೆಯ ಮಟ್ಟಿಗೆ ಒಂದು ದೊಡ್ಡ ಸಂಗಮ ಎನ್ನಬಹುದು.
ಅರ್ಜುನ್ ಪಾತ್ರವು ಕೇವಲ ನಿಧಿಯನ್ನು ಮದುವೆಯಾಗಲು ಬಂದ ಹುಡುಗ ಮಾತ್ರವೇ? ಅಥವಾ ಬೇರೆ ಕಥೆ ಇದೆಯೇ ಎಂಬ ಪ್ರಶ್ನೆ ವೀಕ್ಷಕರಲ್ಲಿ ಮೂಡಿದೆ. ಇದು ಕಥೆಯಲ್ಲಿ 'ಲವ್ ಟ್ರಯಾಂಗಲ್' ಸೃಷ್ಟಿಸುವ ಸಾಧ್ಯತೆ ಇದೆ. ಸೋಶಿಯಲ್ ಮೀಡಿಯಾದಲ್ಲಿ ಈಗಾಗಲೇ ಕರ್ಣ ಮತ್ತು ಅರ್ಜುನ ಮುಖಾಮುಖಿಯ ಪ್ರೋಮೋಗಳು ವೈರಲ್ ಆಗಿವೆ. ನಿಧಿ ತನ್ನ ಪ್ರೀತಿಯನ್ನು ಮನೆಯವರ ಮುಂದೆ ಹೇಗೆ ವ್ಯಕ್ತಪಡಿಸುತ್ತಾಳೆ? ಅರ್ಜುನ್ನನ್ನು ನೋಡಿ ಕರ್ಣನ ಪ್ರತಿಕ್ರಿಯೆ ಹೇಗಿರುತ್ತದೆ? ಎಂಬ ಕುತೂಹಲಗಳ ಮೇಲೆ ಮುಂದಿನ ಸಂಚಿಕೆಗಳು ನಿಂತಿವೆ.












Click it and Unblock the Notifications