ದೈಹಿಕ ಸಂಪರ್ಕಕ್ಕೆ ಒತ್ತಾಯ: ನಟ ಚರಿತ್ ಬಾಳಪ್ಪ ವಿರುದ್ಧ ಮತ್ತೊಂದು ಕೇಸ್
ಕಿರುತೆರೆ ನಟ ನಟ ಚರಿತ್ ಬಾಳಪ್ಪ ವಿರುದ್ಧ ಮತ್ತೊಂದು ಲೈಂಗಿಕ ದೌರ್ಜನ್ಯ ಕೇಸ್ ದಾಖಲಾಗಿದೆ. ಮಹಿಳೆಯೊಬ್ಬರು ತಮಗೆ ಚರಿತ್ ಲೈಂಗಿಕ ಕಿರುಕುಳ ನೀಡಿರುವುದಾಗಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ಅವರ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದೆ ಎಂದು ವರದಿಯಾಗಿದೆ.
ಚರಿತ್ ಬಾಳಪ್ಪ ಅವರು ಸೀರಿಯಲ್ಗಳಲ್ಲಿ ನಟಿಸುತ್ತಿದ್ದ ಸಮಯದಲ್ಲಿ ಮಹಿಳೆ ಶೂಟಿಂಗ್ ನೋಡಲು ಹೋಗಿದ್ದರು. ಆಗ ಇಬ್ಬರ ಪರಿಚಯವಾಗಿ ಪ್ರೀತಿಯೂ ಹುಟ್ಟಿತ್ತು ಎನ್ನಲಾಗಿದೆ. ಆದರೆ, ಚರಿತ್ ಬೇರೆಯವರೊಂದಿಗೆ ವಿವಾಹವಾಗಿದ್ದರು. ಬೇರೆ ಮದುವೆಯಾದರೂ ಈ ಮಹಿಳೆ ಜೊತೆ ದೈಹಿಕ ಸಂಪರ್ಕಕ್ಕೆ ಚರಿತ್ ಒತ್ತಾಯಿಸುತ್ತಿದ್ದರು ಎಂದು ಆರೋಪಿಸಲಾಗಿದೆ.

ಇದಕ್ಕೆ ಮಹಿಳೆ ಒಪ್ಪದಿದ್ದಾಗ ಗಲಾಟೆ ಕೂಡ ಮಾಡಿದ್ದರಂತೆ. ಆಗ ಪೊಲೀಸರಿಗೆ ದೂರು ಕೊಟ್ಟ ಕಾರಣ ಸುಮ್ಮನಾಗಿದ್ದರು ಎನ್ನಲಾಗಿದೆ. ಆದರೆ ಮೂರು ವರ್ಷಗಳ ಹಿಂದೆ ಪತ್ನಿಗೆ ಡಿವೋರ್ಸ್ ನೀಡಿದ್ದ ಚರಿತ್, ಈ ಮಹಿಳೆಗೆ ಮತ್ತೆ ಪ್ರೀತಿಸುವಂತೆ ಪೀಡಿಸುತ್ತಿದ್ದ. ತನ್ನೊಂದಿಗೆ ದೈಹಿಕವಾಗಿ ಸಹಕರಿಸುವಂತೆ ಹಿಂದೆ ಬಿದ್ದಿದ್ದ. ಅಲ್ಲದೆ ತನ್ನ ಖಾಸಗಿ ಫೋಟೋ ತೋರಿಸಿ ಬ್ಲ್ಯಾಕ್ಮೇಲ್ ಕೂಡ ಮಾಡುತ್ತಿದ್ದ.
ಇದಕ್ಕೆ ಒಪ್ಪದಿದ್ದಕ್ಕೆ ತಮ್ಮ ಫೋಟೋ ವೈರಲ್ ಮಾಡುವುದಾಗಿ ಹೆದರಿಸಿದ್ದಲ್ಲದೆ, ಹಣಕ್ಕೂ ಬೇಡಿಕೆ ಇಟ್ಟಿದ್ದ. ಇದೇ ರೀತಿ ಹಣ, ಆಭರಣಗಳನ್ನು ಬ್ಲ್ಯಾಕ್ಮೇಲ್ ಮಾಡಿ ನಿರಂತರ ಸುಲಿಗೆ ಮಾಡಿದ್ದ ಎಂದು ಮಹಿಳೆ ದೂರಿದ್ದಾರೆ. ಚರಿತ್ ಪದೇ ಪದೇ ಕಿರುಕುಳ ನೀಡಿದ್ದರಿಂದ ಬೇಸತ್ತು ಪೊಲೀಸರಿಗೆ ದೂರು ನೀಡಿರುವುದಾಗಿ ತಿಳಿಸಿದ್ದಾರೆ. ದೂರು ದಾಖಲಾದ ಬೆನ್ನಲ್ಲೇ ಚರಿತ್ ನಾಪತ್ತೆಯಾಗಿದ್ದು, ಪೊಲೀಸರು ಬಲೆ ಬೀಸಿದ್ದಾರೆ.

ಕಳೆದ ಡಿಸೆಂಬರ್ನಲ್ಲೂ ಚರಿತ್ ಬಾಳಪ್ಪ ವಿರುದ್ಧ ಯುವತಿಯೊಬ್ಬರು ಲೈಂಗಿಕ ದೌರ್ಜನ್ಯ ಹಾಗೂ ಹಲ್ಲೆ ಆರೋಪ ಮಾಡಿದ್ದರು. ಲೈಂಗಿಕ ದೌರ್ಜನ್ಯದ ಆರೋಪದ ಮೇರೆಗೆ ಸೀರಿಯಲ್ ನಟ ಚರಿತ್ ಅವರನ್ನು ಬಂಧಿಲಾಗಿತ್ತು. ರಾಜರಾಜೇಶ್ವರಿ ನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಚರಿತ್ ಆ ಯುವತಿಗೆ ಪ್ರೀತಿಸುವುದಾಗಿ ಹೇಳಿ, ತನ್ನೊಂದಿಗೆ ದೈಹಿಕ ಸಂಪರ್ಕ ಹೊಂದುವಂತೆ ಒತ್ತಾಯಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು.
ಚರಿತ್ ಅವರಿಗೆ ಯುವತಿ ಮೊದಲಿನಿಂದಲೂ ಪರಿಚಯವಿದ್ದು, ಆಕೆ ಚರಿತ್ ಸ್ನೇಹಿತೆ ಎನ್ನಲಾಗಿತ್ತು. ಚರಿತ್ ತನ್ನೊಂದಿಗೆ ಕೆಲವರನ್ನು ಗುಂಪು ಸೇರಿಸಿಕೊಂಡು ಬಂದು ಯುವತಿ ವಾಸವಿದ್ದ ಮನೆಗೂ ನುಗ್ಗಿದ್ದರು ಎಂದು ದೂರಿದ್ದರು. ಯುವತಿಯ ಬಳಿ ಚರಿತ್ ಭಾರಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದರು. ಹಣ ಕೊಡದಿದ್ದರೆ ಯುವತಿಯ ಖಾಸಗಿ ಫೋಟೋ, ವಿಡಿಯೋ ವೈರಲ್ ಮಾಡುವುದಾಗಿಯೂ ಬೆದರಿಕೆ ಹಾಕಿರುವ ಆರೋಪ ಅವರ ಮೇಲಿತ್ತು.

ಚರಿತ್ ಬಾಳಪ್ಪ ಅವರು ಕನ್ನಡದ ಮುದ್ದುಲಕ್ಷ್ಮಿ ಸೀರಿಯಲ್ ಮೂಲಕ ಫೇಮಸ್ ಆಗಿದ್ದರು. ಕನ್ನಡ ಮಾತ್ರವಲ್ಲದೆ ತೆಲುಗು ಕಿರುತೆರೆಯಲ್ಲೂ ಚರಿತ್ ಮಿಂಚಿದ್ದರು. ಇವರ ಮೇಲೆ ಸಾಲು ಸಾಲು ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದ್ದು, ಒಮ್ಮೆ ಅರೆಸ್ಟ್ ಆಗಿಯೂ ಹೊರಬಂದಿದ್ದಾರೆ.
ಚರಿತ್ ಅವರ ಸಂಸಾರದಲ್ಲಿ ಬಿರುಕು ಮೂಡಿ, ಡಿವೋರ್ಸ್ ಕೂಡ ಪಡೆದುಕೊಂಡಿದ್ದರು. ಆದರೆ, ಕೋರ್ಟ್ ನಿರ್ದೇಶನಕ್ಕೆ ಪತ್ನಿ ಹಾಕಿದ್ದ ಜೀವನಾಂಶದ ನೋಟಿಸ್ ವಿಚಾರವಾಗಿ ಚರಿತ್ ಬೆದರಿಕೆ ಹಾಕಿದ್ದರು ಎಂಬ ಆರೋಪವೂ ಇದೆ. ಈ ಸಂಬಂಧ ಸರ್ಜಾಪುರ ಪೊಲೀಸ್ ಠಾಣೆಯಲ್ಲೂ ಕೇಸ್ ದಾಖಲಾಗಿತ್ತು.












Click it and Unblock the Notifications