ಮದುವೆಯಾದ ಆಟೋ ಡ್ರೈವರ್ ಹಿಂದೆ ಬಿದ್ದಿದ್ದ, ಮಾಜಿ ಪತಿ ಕೈ ಕತ್ತರಿಸಿಕೊಂಡ: ಸೋನು ಗೌಡ
ನಟಿ ಸೋನು ಗೌಡ ಅಂದರೆ ಥಟ್ ಅಂತಾ ನೆನಪಾಗುವುದೇ ಇಂತಿ ನಿನ್ನ ಪ್ರೀತಿಯ ಸಿನಿಮಾ. ದುನಿಯಾ ಸೂರಿ ನಿರ್ದೇಶಿಸಿದ ಇಂತಿ ನಿನ್ನ ಪ್ರೀತಿಯ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಸೋನು ಗೌಡ ಮೊದಲ ಚಿತ್ರದಲ್ಲೇ ಕನ್ನಡ ಸಿನಿ ಪ್ರಿಯರ ಮನಸ್ಸು ಗೆದ್ದರು. ಈ ಸಿನಿಮಾ ಬಳಿಕ ಕನ್ನಡದಲ್ಲಿ ಬಹುಬೇಡಿಕೆಯ ನಟಿಯಾಗಿದ್ದ ಸೋನು ಗೌಡ ಅದೇ ಸಮಯದಲ್ಲಿ ಸಿನಿಮಾ ಜೊತೆಗೆ ಓದು ಕೂಡ ಮುಂದುವರಿಸಿದ್ದರು.
ಇದೆಲ್ಲದರ ನಡುವೆ ಸಿನಿಮಾಗೆ ಬಂದ ಕೇವಲ ಎರಡು ವರ್ಷಗಳ ಅಂತರದಲ್ಲಿ ಸೋನು ಗೌಡ ಮದುವೆಯಾದರು. ಆದರೆ ಕೆಲವು ವರ್ಷಗಳ ಅಂತರದಲ್ಲಿ ಈ ಮದುವೆ ಮುರಿದು ಬಿದ್ದು ಇಬ್ಬರು ದೂರಾದರು. ಇದೀಗ ಮೊದಲ ಬಾರಿಗೆ ನಟಿ ಸೋನು ಗೌಡ ತಮ್ಮ ಮಾಜಿ ಪತಿಯ ಬಗ್ಗೆ ಮಾತನಾಡಿದ್ದು, ತಮ್ಮ ಮದುವೆ ಹೇಗೆ ಆಯ್ತು ಎನ್ನುವ ಇಂಟ್ರಸ್ಟಿಂಗ್ ವಿಚಾರವನ್ನು ಬಿಚ್ಚಿಟ್ಟಿದ್ದಾರೆ.

ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್ನ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, 'ನನ್ನ ಮಾಜಿ ಗಂಡ ನಟ ಶ್ರೀನಗರ ಕಿಟ್ಟಿ ಗೆಳೆಯ. 2009ರಿಂದ ನಾವಿಬ್ಬರು ಪ್ರೀತಿಸಲು ಶುರು ಮಾಡಿದೆವು. ಪ್ರೀತಿಯಲ್ಲಿ ಇದ್ದಾಗ ಒಂದು ಹಂತದಲ್ಲಿ ಅವರು ಮಾಡುವುದು ನನಗೆ ಇಷ್ಟ ಆಗುತ್ತಿರಲಿಲ್ಲ. ಆಗಲೇ ಗೊತ್ತಾಗಿತ್ತು ನನಗೂ ಅವರಿಗೂ ಸರಿ ಹೋಗುವುದಿಲ್ಲ, ಇದನ್ನು ಇಲ್ಲಿಗೆ ನಿಲ್ಲಿಸಬೇಕು ಎಂದು. ನಮ್ಮಿಬ್ಬರ ಮಧ್ಯೆ ಜಗಳ ಅತಿರೇಖಕ್ಕೆ ಹೋಗಿತ್ತು. ಒಂದು ದಿನ ತಿರುಪತಿ ದೇವಸ್ಥಾನಕ್ಕೆ ಹೋಗಿ ಬಂದು ಇದನ್ನು ಇಲ್ಲಿಗೆ ನಿಲ್ಲಿಸಬೇಕು ಎಂದು ನಿರ್ಧರಿಸಿದ್ದೆ. ತಪ್ಪು ಕಾಣಿಕೆ ಕೂಡ ಹಾಕಿ ಬಂದೆ. ಇದಕ್ಕೂ ಮುನ್ನ ನನ್ನ ಹಿಂದೆ ಬಿದ್ದಿದ್ದ ಮತ್ತೊಬ್ಬನ ಬಗ್ಗೆ ಹೇಳಬೇಕು' ಎಂದು ಆಟೋ ಡ್ರೈವರ್ ಒಬ್ಬರು ತಮ್ಮ ಹಿಂದೆ ಬಿದ್ದು ಕಾಡಿದ ಕಥೆಯನ್ನು ಸೋನು ಗೌಡ ಹಂಚಿಕೊಂಡರು.
'ಮದುವೆಯಾಗಿ ಮಕ್ಕಳಿದ್ದ ಆಟೋ ಡ್ರೈವರ್ ನನ್ನ ಹಿಂದೆ ಬಿದ್ದಿದ್ದ. ಅವನನ್ನು ನೋಡಿದ ತಕ್ಷಣ ನನಗೆ ನಡುಕ ಬರುತ್ತಿತ್ತು. ಅವನೇ ಬಂದು ನೀನು ಇಷ್ಟ ಅಂತೆಲ್ಲಾ ಹೇಳಿಕೊಂಡಿದ್ದ. ಬಸ್ ಪಾಸ್ ಇತ್ತು ನನ್ನ ಹತ್ತಿರ ಹೀಗಾಗಿ ಬಸ್ನಲ್ಲಿ ಜಾಸ್ತಿ ಓಡಾಡುತ್ತಿದೆ. ಆ ವ್ಯಕ್ತಿ ನಾನು ಹೋದ ಕಡೆಯಲ್ಲಾ ಬರುತ್ತಿದ್ದ. ಬಸ್ಗೆ ಹೋದರು ಅಲ್ಲಿಯೂ ಬರುತ್ತಿದ್ದ. ಕೊನೆಗೆ ನಾನು ಮಹಿಳೆಯರಿಗೆ ಮಾತ್ರ ಎನ್ನುವ ಒಂದು ಬಸ್ ಇತ್ತು ಅದರಲ್ಲಿ ಹೋಗಲು ಶುರು ಮಾಡಿದೆ. ನನಗೆ ಮನೆಯಿಂದ ಹೊರಗೆ ಹೋಗಲು ಭಯವಾಗುತ್ತಿತ್ತು. ಈ ವ್ಯಕ್ತಿ ಬಂದು ನನ್ನನ್ನು ಕಾಡುತ್ತಾನೆ ಅಂತಾ. ಕೊನೆಗೆ ನೀನು ಸತ್ತರೆ ಸಾಯಿ, ಭೂಮಿಗೆ ಭಾರ ಎನ್ನುವ ಅದೇ ಡೈಲಾಗ್ ಹೇಳಿ ಹೋಗಿದ್ದೆ'.
'ಅದಾದ ಮೇಲೆ ಅವರ ಫ್ರೆಂಡ್ ಒಬ್ಬರು ಬಂದರು. ಅವನಿಗೆ ಮದುವೆಯಾಗಿದೆ, ಮಕ್ಕಳಿದ್ದಾರೆ, ಕುಡಿದು ಕುಡಿದು ಕಿಡ್ನಿ ಹೋಗಿದೆ. ನೀವು ಆಸ್ಪತ್ರೆಗೆ ಹೋಗಲು ಹೇಳಿ ಅಂತಾ ಹೇಳಿದರು. ಕೊನೆಗೆ ನಾನೇ ಹೋಗಿ ಹೇಳಿದೆ ನನ್ನನ್ನು ನಿಜವಾಗಿ ಪ್ರೀತಿಸುತ್ತಿದ್ದೀರಿ ಅಂದರೆ ಹೋಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ತೆಗೆದುಕೊಳ್ಳಿ. ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ ಅಂತಾ ಹೇಳಿ ಬಂದೆ. ಅಂದೇ ಕೊನೆ ಅದಾದ ಮೇಲೆ ಆ ವ್ಯಕ್ತಿಯನ್ನು ನಾನು ಇವತ್ತಿನವರೆಗೂ ನೋಡಿಲ್ಲ' ಎಂದು ಹೇಳಿದರು.

ಬಳಿಕ ತಮ್ಮ ಮಾಜಿ ಪತಿಯ ಬಗ್ಗೆ ಮಾತು ಮುಂದುವರಿಸಿದ ಅವರು, 'ತಿರುಪತಿಗೆ ಹೋಗಿ ಬಂದ ಮೇಲೆ ಅವರ ಫೋನ್ ಎತ್ತುತ್ತಲೇ ಇರಲಿಲ್ಲ ನಾನು. ಮತ್ತೆ ಬೇರೆ ನಂಬರ್ನಿಂದ ಕಾಲ್ ಮಾಡಿದರು. ನಾನೀಗ ಮಾತನಾಡಲು ಆಗುವುದಿಲ್ಲ ಅಂದರೂ ಕೇಳದೇ ಯಾಕೆ ಅವರ ಜೊತೆ ಹೋಗಿದ್ದೆ ಅಂತಾ ಕೇಳಲು ಶುರು ಮಾಡಿದರು. ಕೊನೆಗೆ ನಾನೇ ಹೇಗೂ ದೇವರಿಗೆ ತಪ್ಪು ಕಾಣಿಕೆ ಹಾಕಿದ್ದೇನೆ ಎಂದು, ನಮ್ಮಿಬ್ಬರ ಮಧ್ಯೆ ಹೊಂದಾಣಿಕೆಯಾಗುತ್ತಿಲ್ಲ. ನನಗೆ ಸ್ವಲ್ಪ ಸಮಯ ಬೇಕು. ಫ್ರೆಂಡ್ಸ್ ಆಗಿಯೇ ಇರೋಣ ಆದರೆ ಸದ್ಯಕ್ಕೆ ನಾನು ನಿನ್ನನ್ನು ಭೇಟಿ ಮಾಡಲು ಆಗುವುದಿಲ್ಲ ಎಂದು ಫೋನ್ ಕಟ್ ಮಾಡಿದೆ'.
'ಈ ಜಗಳ ಆಡುವ ಸಮಯದಲ್ಲಿ ಅವರು ಸಿಟ್ಟಿನಿಂದ ಸಾಯುತ್ತೇನೆ ಅಂದಾಗ, ಸಾಯಿ ನೀನು ಸತ್ತರೆ ಭೂಮಿಗೆ ಭಾರ ಕಮ್ಮಿ ಆಗಲ್ಲ ಅಂತಾ ಹೇಳಿದ್ದೆ. ಅವರು ಅದನ್ನೇ ತಲೆಗೆ ತೆಗೆದುಕೊಂಡು ಫೋನ್ ಕಟ್ ಆಗುತ್ತಿದ್ದಂತೆ ಚಾಕು ತೆಗೆದುಕೊಂಡು ಕೈ ಕತ್ತರಿಸಿಕೊಂಡರು. ಅವರ ಗೆಳೆಯರಲ್ಲಾ ಫೋನ್ ಮಾಡಿದಾಗ ವಿಷಯ ಗೊತ್ತಾಗಿ ನಾನು ಆಸ್ಪತ್ರೆಗೆ ಹೋದೆ. ಅಲ್ಲಿ ಆಸ್ಪತ್ರೆ ಬೆಡ್ ಎಲ್ಲಾ ರಕ್ತವಾಗಿತ್ತು. ಅದನ್ನು ನೋಡಿ ಈ ವ್ಯಕ್ತಿ ನನ್ನನ್ನು ಇಷ್ಟು ಪ್ರೀತಿಸುತ್ತಾನಾ ಅನಿಸಿಬಿಡ್ತು. ಅಲ್ಲೇ ನಿರ್ಧರಿಸಿದೆ ಸರಿ ಮದುವೆಯಾಗೋಣ. ಮದುವೆಯಾದರೆ ಇವನನ್ನೇ ಮದುವೆಯಾಗುವುದು ಅಂತಾ ನಿರ್ಧರಿಸಿದೆ' ಎಂದರು.
'ಅಲ್ಲಿಂದ ಎಲ್ಲವೂ ಬದಲಾಗಿ ಹೋಯ್ತು. ನಾನು ಪ್ರತಿಯೊಂದನ್ನು ಕೂಡ ಅವರ ಜೊತೆ ಹೇಳಿಕೊಳ್ಳಲು ಶುರು ಮಾಡಿದೆ. ಅವನೇ ಎಲ್ಲಾ ಅನ್ನುವಂತಾಗಿತ್ತು. ಅವರ ಬಗ್ಗೆ ಪ್ರತಿಯೊಂದು ಕೂಡ ನನಗೆ ಗೊತ್ತಿತ್ತು. ಅವರಿಗೆ ತಂದೆ ಇರಲಿಲ್ಲ, ತುಂಬು ಕುಟುಂಬ ಇರಲಿಲ್ಲ ಹೀಗಾಗಿ ಅವರು ತುಂಬಾ ಒರಟಾಗಿ ಬೆಳೆದರು. ಇದೆಲ್ಲಾ ಗೊತ್ತಿದ್ದ ನಾನು ಅವನನ್ನು ಮದುವೆಯಾದರೆ ಅವನ ಬದುಕಿನಲ್ಲಿ ಎಲ್ಲಾ ಬದಲಾಗುತ್ತದೆ. ನಾನು ಎಲ್ಲವನ್ನೂ ಕೊಡುತ್ತೇನೆ ಅಂದುಕೊಂಡಿದ್ದೆ. ಅವರ ಬಗ್ಗೆ ನಮ್ಮ ತಂದೆ-ತಾಯಿಗೆ ಎಲ್ಲರೂ ಬಂದು ದೂರು ಹೇಳುತ್ತಿದ್ದರು. ಆದರೆ ನಾನು ಮಾತ್ರ ಅವರನ್ನೇ ಮದುವೆಯಾಗುವುದು ಅಂತಾ ನಿರ್ಧರಿಸಿದ್ದೆ'.

'ನಾನು ಈ ಹಿಂದೆ ಲವ್ ರಿಜೆಕ್ಟ್ ಮಾಡಿ ಸಾಯಿ ಎಂದವರೆಲ್ಲಾ ಬಿಟ್ಟು ಹೋದರು. ಆದರೆ ಇವರು ಕೈ ಕತ್ತರಿಸಿಕೊಂಡು ಸಾಯಲು ಮುಂದಾದರು. ಯಾರು ಇದೆಲ್ಲಾ ಮಾಡುತ್ತಾರೆ. ಈ ರೀತಿಯಲ್ಲಾ ಮಾಡುತ್ತಾರೆ ಅಂದರೆ ನನ್ನನ್ನು ನಿಜವಾಗಿಯೂ ಇಷ್ಟಪಡುತ್ತಿದ್ದಾರೆ ಅಂತಾ. ಯಾವುದೇ ರೀತಿಯಲ್ಲೂ ಇವರು ನನ್ನ ಬಿಟ್ಟುಕೊಡಲ್ಲ ಅಂತಾ, ನಾನು ಮದುವೆಯಾದರೆ ಇದೇ ಹುಡುಗನನ್ನು ಅಂತಾ ನಿರ್ಧರಿಸಿದೆ ಹೀಗೆ ನನ್ನ ಮದುವೆ ಆಯ್ತು' ಎಂದು ಸೋನು ಗೌಡ ಹೇಳಿದ್ದಾರೆ.












Click it and Unblock the Notifications