SIIMA Awards: ದುಬೈ ನೆಲದಲ್ಲೂ 'ಕನ್ನಡ ಪಾಠ' ಮಾಡಿದ ಕಿಚ್ಚ
ಪ್ರತಿ ವರ್ಷದಂತೆ ದಕ್ಷಿಣ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ (SIIMA) ಪ್ರದಾನ ಕಾರ್ಯಕ್ರಮ ನಿನ್ನೆ ದುಬೈನಲ್ಲಿ ಅದ್ಧೂರಿಯಾಗಿ ನೆರವೇರಿತು. ಮೊದಲ ದಿನವೇ ಕನ್ನಡ ಹಾಗೂ ತೆಲುಗು ಚಿತ್ರರಂಗಕ್ಕೆ ವಿವಿಧ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಈ ಬಾರಿ ಸೈಮಾದಲ್ಲಿ ಕನ್ನಡ ಚಿತ್ರರಂಗಕ್ಕೆ ಹೆಚ್ಚು ಪ್ರಶಸ್ತಿಗಳು ಮುಡಿಗೇರಿವೆ. ಕಾರ್ಯಕ್ರಮದಲ್ಲಿ ಸ್ಯಾಂಡಲ್ವುಡ್ನ ಪ್ರಮುಖ ನಟ-ನಟಿಯರ ದಂಡು ಸೇರಿತ್ತು.
ಇನ್ನು ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ಕೂಡ ಸೈಮಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ವೇದಿಕೆ ಮೇಲೆ ನಟ ಸುದೀಪ್ ಕನ್ನಡ ಪಾಠ ಮಾಡಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ವೇದಿಕೆ ಮೇಲೆ ವ್ಯಕ್ತಿಯೊಬ್ಬರಿಗೆ ʼಅದು ಕನ್ನಡ್ ಅಲ್ಲ...ಕನ್ನಡʼ ಎಂದು ಕಿವಿಮಾತು ಹೇಳಿದ್ದಾರೆ.

ವೇದಿಕೆ ಮೇಲೆಯೇ ಕಿಚ್ಚ ಕನ್ನಡದ ಉಚ್ಛಾರಣೆ ಬಗ್ಗೆ ಈ ರೀತಿ ಗಾಂಭೀರ್ಯವಾಗಿ ಮಾತನಾಡಿದ್ದಾರೆ. ಮೂಲಗಳ ಪ್ರಕಾರ ಚಿತ್ರರಂಗಕ್ಕೆ ಸೇರಿದ ಹೈದರಾಬಾದ್ ಮೂಲದ ವ್ಯಕ್ತಿಯೊಬ್ಬರು ಈ ರೀತಿ ವೇದಿಕೆ ಮಾತನಾಡುವಾಗ ಕನ್ನಡವನ್ನು ಕನ್ನಡ್ ಎಂದು ತಪ್ಪಾಗಿ ಉಚ್ಛರಿಸಿದ್ದರು. ಕೂಡಲೇ ಮಧ್ಯಪ್ರವೇಶಿಸಿದ ಕಿಚ್ಚ ಸುದೀಪ್, ಅದು ಕನ್ನಡ್ ಅಲ್ಲ ರೀ, ಕನ್ನಡ ಎಂದು ತಿಳಿಹೇಳಿದ್ದಾರೆ.
ಕನ್ನಡ್ ಅಲ್ಲ ಕನ್ನಡ 💛♥️@KicchaSudeep sir 🔥🔥🔥#Kannada #Karnataka #Sudeep #MaxTheMovie
— BFC_Faithful (@BfcFaithful) September 15, 2024
pic.twitter.com/RXCXxjHrvC
ಮುಂಬೈನವರು ಕನ್ನಡವನ್ನು ಕನ್ನಡ್ ಎನ್ನುವುದನ್ನು ಕೇಳಿದ್ದೇನೆ. ಆದರೆ, ದಕ್ಷಿಣದ ಹೈದರಾಬಾದ್ನವರಾಗಿ ನೀವೂ ಕನ್ನಡ್ ಅನ್ನುವುದು ನಾಟ್ ಓಕೆ... ಎಂದು ಎಲ್ಲರ ಸಮ್ಮುಖದಲ್ಲೇ ಕಿಚ್ಚ ಹೇಳಿದ್ದಾರೆ. ಕೂಡಲೇ ಎಚ್ಚೆತ್ತ ಆ ವ್ಯಕ್ತಿಯು ಕ್ಷಮೆ ಕೇಳಿ, ʼಕನ್ನಡʼ ಎಂದು ಸ್ಪಷ್ಟವಾಗಿ ಉಚ್ಛರಿಸಿದ್ದಾರೆ.
ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಕಿಚ್ಚ ಸುದೀಪ್ ಫೋಟೋ ಹಂಚಿಕೊಂಡು, ಕನ್ನಡದ ಕಂದ ಎಂದೆಲ್ಲ ಕೊಂಡಾಡುತ್ತಿದ್ದಾರೆ. ಸುದೀಪ್ ಅವರ ಕನ್ನಡ ಪ್ರೇಮಕ್ಕೆ ಕನ್ನಡಿಗರೆಲ್ಲ ಫಿದಾ ಆಗಿದ್ದಾರೆ.
ಈ ಹಿಂದೆಯೂ ಸುದೀಪ್ ಅವರು ಕನ್ನಡದ ವಿಚಾರವಾಗಿ ಮಾತನಾಡಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರು. ಸುದೀಪ್ ಎರಡೆರಡು ಬಾರಿ ಇದೇ ರೀತಿ ಉತ್ತರ ಭಾರತದ ಮಂದಿಗೆ ಕನ್ನಡ ಪಾಠ ಮಾಡಿದ್ದರು. ಸುದೀಪ್ ನಟನೆಯ 'ವಿಕ್ರಾಂತ್ ರೋಣ' ಚಿತ್ರ ಸುದ್ದಿಗೋಷ್ಠಿಯ ವೇದಿಕೆಯಲ್ಲೂ ಇದೇ ಪ್ರಸಂಗ ನಡೆದಿತ್ತು. ಅಂದು ತಮ್ಮ ಜೊತೆಗೆ ಕೂತಿದ್ದವರು ಮಾತನಾಡುತ್ತಾ 'ಕನ್ನಡ್' ಅಂದಿದ್ದನ್ನು ಕೇಳಿ ತಕ್ಷಣವೇ ಅದನ್ನು ಸುದೀಪ್ ಸರಿ ಮಾಡಿದ್ದರು. ಅವರು ಕ್ಷಮೆ ಕೇಳಿ ಕನ್ನಡ ಎಂದು ಮಾತು ಮುಂದುವರೆಸಿದ್ದರು. ಹಿಂದಿ ನಿರೂಪಕಿ ಕೂಡ ಕ್ಷಮೆ ಕೇಳಿದ್ರು, ಬಿಡದೇ ಇನ್ಮುಂದೆ ಯಾರು ʼಕನ್ನಡ್ʼ ಅನ್ನಬಾರದು ಆ ರೀತಿ ಸುದೀಪ್ ತಿಳಿ ಹೇಳಿದ್ದರು.
ಹಿಂದಿ ಬಗ್ಗೆಯೂ ಟಾಕ್ವಾರ್: ಈ ಹಿಂದೆ ಹಿಂದಿ ರಾಷ್ಟ್ರೀಯ ಭಾಷೆ ಎನ್ನುವ ವಿಚಾರವಾಗಿ ನಟ ಸುದೀಪ್ ಹಾಗೂ ಬಾಲಿವುಡ್ ನಟ ಅಜಯ್ ದೇವಗನ್ ನಡುವೆ ಟ್ವೀಟ್ ವಾರ್ ನಡೆದಿತ್ತು. ಸಂದರ್ಶನದಲ್ಲಿ ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ, ರಾಷ್ಟ್ರೀಯ ಭಾಷೆಯಾಗಿ ಒಪ್ಪಲು ಸಾಧ್ಯವಿಲ್ಲ ಎಂದಿದ್ದರು. ಇದೇ ವಿಚಾರಕ್ಕೆ ಅಜಯ್ ದೇವಗನ್ ಟ್ವಿಟರ್ನಲ್ಲಿ ಪ್ರತ್ರಿಕ್ರಿಯೆ ನೀಡಿದ್ದರು.
ಕನ್ನಡ ಸೇರಿದಂತೆ ದಕ್ಷಿಣದ ಸಿನಿಮಾಗಳು ಪ್ಯಾನ್ ಇಂಡಿಯಾದಲ್ಲಿ ಹಿಟ್ ಆಗುತ್ತಿದೆ. ಆದರೆ ಹಿಂದಿ ಸಿನಿಮಾಗಳು ನಮ್ಮ ದಕ್ಷಿಣದಲ್ಲಿ ಹೆಣಗಾಡುತ್ತಿವೆ. ಹಿಂದಿ ಸಿನಿಮಾಗಳು ಡಬ್ ಆಗುತ್ತಿದ್ದು, ಹಿಂದಿ ಇನ್ನು ಮುಂದೆ ರಾಷ್ಟ್ರಭಾಷೆಯಲ್ಲ ಎಂದಿದ್ದರು ಸುದೀಪ್. ಇದಕ್ಕೆ ಉತ್ತರಿಸಿದ್ದ ದೇವಗನ್, ನಿಮ್ಮ ಪ್ರಕಾರ ಹಿಂದಿ ನಮ್ಮ ರಾಷ್ಟ್ರ ಭಾಷೆ ಅಲ್ಲ ಅನ್ನೋದಾದ್ರೆ, ನಿಮ್ಮ ಮಾತೃಭಾಷೆಯ ಸಿನಿಮಾಗಳನ್ನು ಹಿಂದಿಯಲ್ಲಿ ಏಕೆ ಡಬ್ ಮಾಡಿ, ಬಿಡುಗಡೆ ಮಾಡ್ತೀರಿ? ಎಂದಿದ್ದರು.
ಇದಕ್ಕೆ ಮತ್ತೆ ಉತ್ತರಿಸಿದ್ದ ಸುದೀಪ್, ನೀವು ಹಿಂದಿಯಲ್ಲಿ ಟ್ವೀಟ್ ಮಾಡಿರುವ ಅಕ್ಷರಗಳು ನನಗೆ ಅರ್ಥವಾಯಿತು. ಆದರೆ ನಾನು ಕನ್ನಡದಲ್ಲಿ ಟೈಪ್ ಮಾಡಿದ್ದರೆ ನಿಮಗೆ ಅರ್ಥವಾಗುತ್ತಿತ್ತಾ? ಏಕೆಂದರೆ ನಾವು ಹಿಂದಿ ಕಲಿತಿದ್ದೇವೆ, ಎಲ್ಲಾ ಭಾಷೆಗಳನ್ನೂ ಪ್ರೀತಿಸಿ ಗೌರವಿಸುತ್ತೇವೆ. ನಾವೂ ಭಾರತಕ್ಕೆ ಸೇರಿದವರಲ್ಲವೇ ಸರ್? ಎಂದು ಕನ್ನಡದ ಪರ ಧ್ವನಿ ಎತ್ತಿದ್ದರು. ಇದಾದ ನಂತರ ಅಜಯ್ ದೇವಗನ್ ಕೂಡ ಮೆತ್ತಗಾಗಿದ್ದರು.












Click it and Unblock the Notifications