ನಟ ದರ್ಶನ್ ಅಭಿಮಾನಿಗಳಿಗೆ ಮತ್ತೊಂದು ಸಿಹಿಸುದ್ದಿ
ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಸಿಹಿಸುದ್ದಿಯೊಂದು ಹೊರಬಿದ್ದಿದೆ. ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲು ಸೇರಿರುವ ದರ್ಶನ್ ಅವರ ಸಿನಿಮಾಗೆ ಪ್ರಶಸ್ತಿಗಳ ಸುರಿಮಳೆ ಹರಿದಿದೆ. ಇತ್ತೀಚೆಗೆ ಸೈಮಾದಲ್ಲೂ ದರ್ಶನ್ ಅಭಿನಯದ 'ಕಾಟೇರ' ಸಿನಿಮಾ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. ಈಗ ಇಂಟರ್ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ (IIFA) ನೀಡುವ ಪ್ರಶಸ್ತಿಗಳಲ್ಲೂ ʼಕಾಟೇರʼ ಖದರ್ ತೋರಿಸಿದೆ.
ಅಬುಧಾಬಿಯಲ್ಲಿ ಈ ವರ್ಷದ ಇಂಟರ್ ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ ಪ್ರಶಸ್ತಿ ಪ್ರದಾನ (ಐಫಾ ಅವಾರ್ಡ್ಸ್ 2024) ಅದ್ಧೂರಿಯಾಗಿ ನಡೆದಿದೆ. ಅಬುಧಾಬಿಯಲ್ಲಿ ಸೆಪ್ಟೆಂಬರ್ 27ರಿಂದ ನಡೆದ ಐಫಾ ಅವಾರ್ಡ್ಸ್ನಲ್ಲಿ ಭಾರತದ ಐದು ಪ್ರಮುಖ ಚಿತ್ರರಂಗಳ ಗಣ್ಯರು ಭಾಗಿಯಾಗಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಚಿತ್ರರಂಗದ ಅತ್ಯುತ್ತಮ ಸಿನಿಮಾ, ತಂತ್ರಜ್ಞರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಇನ್ನು ಕನ್ನಡದ ವಿಚಾರಕ್ಕೆ ಬಂದರೆ ಸೈಮಾದಲ್ಲೂ 'ಕಾಟೇರ' ಹಾಗೂ 'ಸಪ್ತಸಾಗರದಾಚೆ ಎಲ್ಲೋ ಸೈಡ್ ಎ' ಸಿನಿಮಾಗಳು ಕಮಾಲ್ ಮಾಡಿದ್ದವು. ಈ ಐಫಾ ಅವಾರ್ಡ್ಸ್ನಲ್ಲೂ ಈ ಎರಡು ಸಿನಿಮಾಗಳು ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದೆ.
ನಟ ದರ್ಶನ್ ಅಭಿನಯಿಸಿದ್ದ 'ಕಾಟೇರ' ಅತ್ಯುತ್ತಮ ಸಿನಿಮಾ ಪ್ರಶಸ್ತಿ ಗೆದ್ದುಕೊಂಡಿದೆ. ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ತರುಣ್ ಸುಧೀರ್ ಅವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ, ನಟಿ ಶ್ರುತಿ ಅವರಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ, ಚೊಚ್ಚಲ ನಟನೆಗೆ ಆರಾಧಾನಾ ಅವರಿಗೆ ಪ್ರಶಸ್ತಿ, ಜಗಪತಿ ಬಾಬು ಅವರಿಗೆ ಅತ್ಯುತ್ತಮ ಖಳನಾಯಕ ಪ್ರಶಸ್ತಿ, ವಿ.ಹರಿಕೃಷ್ಣ ಅವರಿಗೆ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಕಾಟೇರ ಸಿನಿಮಾದಿಂದ ಸಿಕ್ಕಿದೆ.
2024ನೇ ಸಾಲಿನ ದಕ್ಷಿಣ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ (SIIMA) ಪ್ರಧಾನ ಕಾರ್ಯಕ್ರಮ ಇತ್ತೀಚೆಗೆ ದುಬೈನಲ್ಲಿ ಅದ್ಧೂರಿಯಾಗಿ ನಡೆಯಿತು. ಇದರಲ್ಲೂ ನಟ ದರ್ಶನ್ ಅಭಿಯಿಸಿದ್ದ ʼಕಾಟೇರʼ ಸಿನಿಮಾ ಕೂಡ ಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. ಈ ಸಿನಿಮಾಗೆ ʼಅತ್ಯುತ್ತಮ ಕನ್ನಡ ಸಿನಿಮಾʼ ಪ್ರಶಸ್ತಿ, ಚೊಚ್ಚಲ ನಟನೆಗೆ ಆರಾಧನಾ ಅವರಿಗೆ ʼಅತ್ಯುತ್ತಮ ಹೊಸ ನಟಿ ಪ್ರಶಸ್ತಿʼ, ಮೊದಲ ಸಿನಿಮಾದಲ್ಲೇ ಆರಾಧಾನಾ ಪ್ರಶಸ್ತಿ ಕೈಗೆತ್ತಿಕೊಂಡಿದ್ದರು. ಖ್ಯಾತ ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಅವರಿಗೆ ʼಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿʼ ಹಾಗೂ ಮಂಗ್ಲಿ ಅವರಿಗೆ ʼಅತ್ಯುತ್ತಮ ಗಾಯಕಿʼ ಪ್ರಶಸ್ತಿಯು ಕಾಟೇರ ಸಿನಿಮಾದಿಂದ ಸಿಕ್ಕಿತ್ತು.

ರಕ್ಷಿತ್ ಸಿನಿಮಾಗೂ ಹೆಚ್ಚು ಪ್ರಶಸ್ತಿ: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ 'ಸಪ್ತ ಸಾಗರದಾಚೆ ಎಲ್ಲೊ' ಸಿನಿಮಾ ಕೂಡ ಐಫಾದಲ್ಲಿ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ರಕ್ಷಿತ್ ಶೆಟ್ಟಿ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ, ರುಕ್ಮಿಣಿ ವಸಂತ್ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ, ಗೋಪಾಲ ಕೃಷ್ಣ ದೇಶಪಾಂಡೆ ಅವರಿಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ, ಧನಂಜಯ ರಂಜನ್ ಅವರಿಗೆ ಅತ್ಯುತ್ತಮ ಸಾಹಿತ್ಯ ಪ್ರಶಸ್ತಿ, ಎಂಸಿ ಬಿಜ್ಜು ಅವರಿಗೆ ಅತ್ಯುತ್ತಮ ಗಾಯಕ ಪ್ರಶಸ್ತಿ, ಶ್ರೀಲಕ್ಷ್ಮಿ ಬೆಳ್ಮಣ್ಣು ಅವರಿಗೆ ಅತ್ಯುತ್ತಮ ಗಾಯಕಿ ಪ್ರಶಸ್ತಿ ಸಪ್ತ ಸಾಗರದಾಚೆ ಎಲ್ಲೊ ಸೈಡ್ ಎ ಸಿನಿಮಾದಿಂದ ಸಿಕ್ಕಿದೆ.
ಈ ಬಾರಿ ಹಲವು ವಿಭಾಗಗಳಿದ್ದರೂ ಕೇವಲ ಕನ್ನಡದ ಎರಡು ಸಿನಿಮಾಗಳಿಗಷ್ಟೇ ಪ್ರಶಸ್ತಿಗಳನ್ನು ನೀಡಲಾಗಿದೆ ಎಂದು ಅಪಸ್ವರ ಕೇಳಿಬಂದಿದೆ. ಕನ್ನಡ ಸಿನಿಮಾಗಳಿಗೆ ಪ್ರಶಸ್ತಿ ನೀಡುವ ವಿಚಾರದಲ್ಲಿ ಐಫಾ ತಾರತಮ್ಯ ಮಾಡಿದೆ ಎಂದು ಸಹ ಹೇಳಲಾಗುತ್ತಿದೆ.












Click it and Unblock the Notifications