ನಟ ಕಮಲ್ ಹಾಸನ್ಗೆ ಬಿಗ್ ಶಾಕ್ ಕೊಡಲು ಮುಂದಾದ ಕನ್ನಡಿಗರು, ಏನದು?
ಕನ್ನಡ ತಮಿಳು ಭಾಷೆಯಿಂದ ಹುಟ್ಟಿದ್ದು ಎನ್ನುವ ಮೂಲಕ ತಮಿಳು ಚಿತ್ರರಂಗದ ಖ್ಯಾತ ನಟ ಕಮಲ್ ಹಾಸನ್ ವಿವಾದಕ್ಕೆ ಗುರಿಯಾಗಿದ್ದಾರೆ. ಮತ್ತೊಂದೆಡೆ ಕಮಲ್ ವೇದಿಕೆಯಲ್ಲಿ ಈ ರೀತಿ ಹೇಳಿದಾಗ ಅದೇ ಕಾರ್ಯಕ್ರಮದಲ್ಲಿದ್ದ ನಟ ಶಿವರಾಜ್ಕುಮಾರ್ ಕೂಡ ಇದನ್ನು ಯಾಕೆ ಖಂಡಿಸಲಿಲ್ಲ? ಎಂದು ಕನ್ನಡಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ಕಮಲ್ ಹಾಸನ್ ಅವರು ಕನ್ನಡದ ಬಗ್ಗೆ ನೀಡಿರುವ ಈ ರೀತಿ ವಿವಾದಾತ್ಮಕ ಹೇಳಿಕೆಗೆ ತಕ್ಷಣವೇ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದಿದ್ದಾರೆ. ಮತ್ತೊಂದೆಡೆ ಕಮಲ್ ಅವರಿಗೆ ದೊಡ್ಡ ಶಾಕ್ ನೀಡಲು ಕನ್ನಡಿಗರು ಮುಂದಾಗಿದ್ದಾರೆ. ಅದೇನು ಗೊತ್ತಾ?
ಕಮಲ್ ಹಾಸನ್ ಆಡಿರುವ ಒಂದು ಮಾತು ಇದೀಗ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ. ಕನ್ನಡ ತಮಿಳಿನಿಂದ ಹುಟ್ಟಿದ್ದಲ್ಲ ಎಂದು ಹೇಳುವ ಮೂಲಕ ಕಮಲ್ಗೆ ತಿರುಗೇಟು ನೀಡುತ್ತಿದ್ದಾರೆ. ಸದ್ಯ ಕನ್ನಡಪರ ಸಂಘಟನೆಗಳು ಸೇರಿದಂತೆ ರಾಜ್ಯದಾದ್ಯಂತ ಕಮಲ್ ಹಾಸನ್ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿವೆ. ಕಮಲ್ ಹಾಸನ್ ತಾವು ದೊಡ್ಡ ಹೀರೊ, ನಾನು ಏನು ಮಾತನಾಡಿದ್ರು ನಡೆಯುತ್ತೆ ಅನ್ನೋ ಮನೋಭಾವ ಮೊದಲು ಬಿಡಿ, ಕನ್ನಡವೆ ಬೇರೆ, ತಮಿಳು ಬೇರೆ. ನಮ್ಮದು ಸಾವಿರಾರು ವರ್ಷ ಇತಿಹಾಸ ಇರುವ ಭಾಷೆ. ತಮಿಳಿನಿಂದ ಕನ್ನಡ ಹುಟ್ಟಿದ್ದು ಅನ್ನೋ ನಿಮ್ಮ ದುರಹಂಕಾರದ ಮಾತಿಗೆ ನಮ್ಮ ಧಿಕ್ಕಾರ. ನಿಮ್ಮ ಹೇಳಿಕೆ ವಾಪಸ್ ಪಡೆಯಿರಿ ಎಂದು ಖಂಡಿಸುತ್ತಿದ್ದಾರೆ.

ಕಮಲ್ ಹಾಸನ್ ಅವರು ಥಗ್ ಲೈಫ್ ಸಿನಿಮಾದ ಪ್ರಚಾರದ ವೇಳೆ ಈ ಹೇಳಿಕೆ ನೀಡಿ ವಿವಾದದ ಕಿಡಿ ಹೊತ್ತಿಸಿದ್ದಾರೆ. ಈಗ ಇದೇ ಅವರಿಗೆ ಕಂಟಕ ತಂದೊಡ್ಡುವ ಸಾಧ್ಯತೆ ಇದೆ. ಕಮಲ್ ಹಾಸನ್ ಅವರಿಗೆ ಕರ್ನಾಟಕದಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ಅಪಾರ ಅಭಿಮಾನಿಗಳಿದ್ದಾರೆ. ಹೀಗಾಗಿ ಕರ್ನಾಟಕದಲ್ಲೂ ಈ ಸಿನಿಮಾ ಅದ್ದೂರಿಯಾಗಿ ರಿಲೀಸ್ ಮಾಡಲು ಕಮಲ್ ಮುಂದಾಗಿದ್ದಾರೆ. ಈ ಹೊತ್ತಿನಲ್ಲೇ ಅವರು ಕನ್ನಡಿಗರನ್ನು ಕೆಣಕುವ ಕೆಲಸ ಮಾಡಿ, ತಮ್ಮ ಸಿನಿಮಾಗೆ ಆಪತ್ತು ತಂದುಕೊಂಡಿದ್ದಾರೆ. ಕನ್ನಡದ ಬಗ್ಗೆ ಕೇವಲವಾಗಿ ಮಾತನಾಡಿರುವ ಕಮಲ್ ಅವರ ಥಗ್ ಲೈಫ್ ಸಿನಿಮಾ ಕರ್ನಾಟಕದಲ್ಲಿ ರಿಲೀಸ್ ಆಗಬಾರದು ಎನ್ನುತ್ತಿದ್ದಾರೆ. ರಾಜ್ಯದೆಲ್ಲೆಡೆ ಈ ಸಿನಿಮಾಗೆ ಬಾಯ್ಕಾಟ್ ಬಿಸಿ ಹೆಚ್ಚಾಗಿದೆ.
ಕಮಲ್ರನ್ನ ಮೆಚ್ಚಿದ್ದೇವೆ ಅಂತ ಅವರ ಮಾತು ಒಪ್ಪಲ್ಲ: ಜಗ್ಗೇಶ್
ಕಲೆಗೆ ಜಾತಿ ಇಲ್ಲ, ಎಲ್ಲ ಭಾಷೆಯ ಕಲಾವಿದರು ಶಾರದಾಸುತರು ಒಪ್ಪುತ್ತೇವೆ. ಆ ನಿಟ್ಟಿನಲ್ಲಿ ಕಮಲ್ ಹಾಸನ್ ಅವರನ್ನ ಮೆಚ್ಚಿದ್ದೇವೆ ಅಂದ ಮಾತ್ರಕ್ಕೆ ಕನ್ನಡ ತಮಿಳಿನಿಂದ ಹುಟ್ಟಿದೆ ಎಂದ ಅವರ ಮಾತು ಒಪ್ಪುವುದಿಲ್ಲ. ಕನ್ನಡಕ್ಕೆ 2.5 ಸಾವಿರ ವರ್ಷದ ಇತಿಹಾಸವಿದೆ. ಅಷ್ಟೇಕೆ ಹನುಮದೇವರು ಕನ್ನಡ ಕಲಿಪುಂಗವ ಅವನ ಕಾಲ ರಾಮಾಯಣ ಇಷ್ಟು ಅರ್ಥವಾದರೆ ಸಾಕಲ್ಲವೇ ಸಾರ್? ಎಂದು ನವರಸನಾಯಕ ಜಗ್ಗೇಶ್ ಕೂಡ ಕಮಲ್ ಹಾಸನ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ನಟ ಚೇತನ್ ಖಂಡನೆ
'ಕನ್ನಡ ಹುಟ್ಟಿದ್ದು ತಮಿಳಿನಿಂದ' ಎಂದು ಕಮಲ್ ಹಾಸನ್ ಅವರು ಹೇಳಿದ್ದಾರೆ. ಇದು ನಿಜವಲ್ಲ, ತಮಿಳು ಕನ್ನಡಕ್ಕಿಂತ ಹಳೆಯದು ಇರಬಹುದು; ಆದರೆ, ಕನ್ನಡ ಅದರಿಂದ ಹುಟ್ಟಿದ್ದಲ್ಲ ಎಂದು ನಟ ಚೇತನ್ ಅಹಿಂಸಾ ಕೂಡ ಖಂಡಿಸಿದ್ದಾರೆ. ಎರಡೂ ದ್ರಾವಿಡ ಭಾಷೆಗಳು ಒಂದೇ ಮೂಲ-ದ್ರಾವಿಡ ಪೂರ್ವಜರನ್ನು ಹಂಚಿಕೊಳ್ಳುತ್ತವೆ. ಈ ಸಹಸ್ರಮಾನಗಳಲ್ಲಿ ʼಅಕ್ಕ-ತಂಗಿಯರಾಗಿʼ (ಕೆಲವು ಸಾಂಸ್ಕೃತಿಕ ಪರಸ್ಪರ ಕ್ರಿಯೆಯೊಂದಿಗೆ) ಪ್ರತ್ಯೇಕ ಮಾರ್ಗಗಳಲ್ಲಿ ಬೆಳೆದುಕೊಂಡು ಬಂದಿದ್ದಾವೆ. ನಟ ಕಮಲ್ ಹಾಸನರದ್ದು ದೋಷಪೂರಿತ ಅತಿ-ಸರಳೀಕರಣ ಎಂದು ಹೇಳಿದ್ದಾರೆ.
ವಿವಾದದ ಬಗ್ಗೆ ಶಿವಣ್ಣ ಹೇಳಿದ್ದೇನು?
ಕಮಲ್ ಹಾಸನ್ ಅವರು ಕನ್ನಡದ ಬಗ್ಗೆ ಮಾತನಾಡಿದ ಕಾರ್ಯಕ್ರಮದಲ್ಲಿ ನಟ ಶಿವಣ್ಣ ಕೂಡ ಇದ್ದರು. ಕನ್ನಡದ ಬಗ್ಗೆ ದೊಡ್ಡಮಟ್ಟದಲ್ಲಿ ಕೇಳಿಬರುತ್ತಿರುವ ವಿವಾದದ ಬಗ್ಗೆ ಶಿವಣ್ಣ ಕೊನೆಗೂ ಪ್ರತಿಕ್ರಿಯೆ ನೀಡಿದ್ದಾರೆ. ಕಮಲ್ ಹಾಸನ್ ಅವರು ಬಂದಿದ್ದಾಗ ಅವರು ಕನ್ನಡದ ಬಗ್ಗೆ, ಕರ್ನಾಟಕ, ಬೆಂಗಳೂರಿನ ಬಗ್ಗೆ ಬಹಳ ಹೆಮ್ಮೆಯಿಂದ ಮಾತನಾಡಿದ್ರು, ಕರ್ನಾಟಕದ ಹಲವು ವಿಷಯಗಳನ್ನ ನೆನಪು ಮಾಡಿಕೊಂಡ್ರು, ನಾನು ಅವರ ಬಹಳ ಬಿಗ್ ಫ್ಯಾನ್, ಅವರಿಂದ ನಾನು ಸ್ಫೂರ್ತಿ ಪಡೆದಿದ್ದೇನೆ. ಕಮಲ್ ಸರ್ ನನ್ನ ಗೌರವದಿಂದ ಆ ಸಮಾರಂಭಕ್ಕೆ ಕರೆದಿದ್ರು, ಅದೇ ಗೌರವದಿಂದ ನಾನೂ ಹೋಗಿದ್ದೆ. ಅವರು ಹಿರಿಯರು, ಯಾವುದಕ್ಕೆ ಏನ್ ಮಾಡಬೇಕು ಅನ್ನೋದು ಅವರಿಗೆ ಗೊತ್ತು. ಅವರು ಅದನ್ನ ಮಾಡ್ತಾರೆ ಎಂದು ಶಿವಣ್ಣ ಹೇಳಿದ್ದಾರೆ.
ವೇದಿಕೆ ಮೇಲೆ ಏನು ತಪ್ಪಾಯಿತು ಎಂದು ನನಗೂ ತಿಳಿಯಲಿಲ್ಲ. ಇಂದು ಬಂದು ನೋಡಿದಾಗ ದೊಡ್ಡ ವಿವಾದ ಆಗಿದೆ. ಕಮಲ್ ಸರ್ ಅಲ್ಲೇ ಇದ್ರು, ಎಲ್ಲರ ಜೊತೆ ಮಾತನಾಡುತ್ತಿದ್ದರು. ಇದನ್ನು ಅವರ ಬಳಿಯೇ ಕೇಳಬಹುದಿತ್ತು. ಆದರೆ ಯಾಕೆ ಕೇಳಿಲ್ಲ ಅನ್ನೋದು ಗೊತ್ತಿಲ್ಲ, ಆದರೆ ಕನ್ನಡ ಪ್ರೀತಿ ಎಂಬುದು ಯಾರೋ ಒಬ್ಬರು ಮಾತನಾಡಿದಾಗ ಮಾತ್ರ ಬರಬಾರ್ದು, ಕನ್ನಡ ಪ್ರೇಮ ಎಂಬುದು ಸದಾ ಕಾಲ ಜೊತೆಯಲ್ಲೇ ಇರಬೇಕು. ನಾವು ಬೇಕಾದರೆ ಕನ್ನಡಕ್ಕಾಗಿ ಹೋರಾಡಿ ಸಾಯುತ್ತೀವಿ, ಆದರೆ ಕೇವಲ ಮಾತಲ್ಲಿ ಹೇಳಿ ಪೋಸ್ ಕೊಡೋದು ದೊಡ್ಡ ವಿಷಯವಲ್ಲ ಎಂದಿದ್ದಾರೆ.
ನಾವು ಕನ್ನಡಕ್ಕೆ ಏನು ಮಾಡಿದ್ದೀವಿ ಅನ್ನೋದನ್ನು ಹುಡುಕಿ ನೀಡಬೇಕು. ನಿಮ್ಮ ಮನಸ್ಸನ್ನ ಕೇಳಿಕೊಂಡು ನೋಡಿದರೆ ಇದಕ್ಕೆ ಉತ್ತರ ಸಿಗುತ್ತೆ, ಕನ್ನಡ ಸಿನಿಮಾಗೆ ಏನ್ ಮಾಡಿದ್ದೀರಿ? ಯಾರೋ ಸ್ಟಾರ್ ನಟರ ಸಿನಿಮಾಗಳಿಗೆ ಸಪೋರ್ಟ್ ಮಾಡಿದ್ರೆ ಸಾಲಲ್ಲ, ಹೊಸಬರ ಸಿನಿಮಾಗೂ ಬೆಂಬಲ ಕೊಡಬೇಕು. ನಾವು ಮಾಡುತ್ತಿರುವುದು ಸರಿನಾ, ತಪ್ಪಾ ಅಂತ ನೀವೇ ಕೇಳಿಕೊಂಡ್ರೆ ಉತ್ತರ ಸಿಗುತ್ತೆ ಎಂದು ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ. ಕಮಲ್ ಹಾಸನ್ ಅವರ ಬಗ್ಗೆ ನಾನು ಪ್ರತ್ಯೇಕವಾಗಿ ಮಾತನಾಡುವ ಅಗತ್ಯವಿಲ್ಲ, ಅವರು ಹಿರಿಯರಾಗಿದ್ದು ಯಾವುದು ಸರಿ? ಯಾವುದು ತಪ್ಪು? ಅನ್ನೋದು ಅವರಿಗೆ ಗೊತ್ತಿದೆ. ಅವರಿಗೂ ಕನ್ನಡ ಭಾಷೆ ಬಗ್ಗೆ ಅಪಾರ ಪ್ರೀತಿ ಇದೆ, ಅವರು ಕನ್ನಡದ ಹಲವು ಸಿನಿಮಾಗಳಲ್ಲೂ ನಟಿಸಿದ್ದಾರೆ. ಅವರು ಏನು ಮಾಡಬೇಕೋ ಅದನ್ನ ಮಾಡುತ್ತಾರೆ ಎಂಬ ಭರವಸೆ ಇದೆ ಎಂದು ಶಿವಣ್ಣ ಹೇಳಿದ್ದಾರೆ.
-
Vijay Sethupathi: ರಿಷಬ್ ಶೆಟ್ಟಿ ಜೊತೆ ನಟಿಸುವ ದೊಡ್ಡ ಆಸೆ ನನಗಿದೆ: ಆಸೆ ಬಿಚ್ಚಿಟ್ಟ ನಟ ವಿಜಯ್ ಸೇತುಪತಿ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications