'ನನ್ನ ದೂರಿಗೆ ಬೆಲೆ ಇಲ್ವಾ, ಯಾರಾದ್ರೂ ಒತ್ತಡ ಹಾಕಿದ್ರಾ?' ಪೊಲೀಸರ ಬಗ್ಗೆ ವಿಜಯಲಕ್ಷ್ಮಿ ದರ್ಶನ್ ಅಸಮಾಧಾನ
ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರಿಗೆ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಕೆಲವರು ಅಶ್ಲೀಲವಾಗಿ ಕಾಮೆಂಟ್ ಮಾಡಿದ್ದರು. ಇದರ ಸ್ಕ್ರೀನ್ಶಾಟ್ಗಳನ್ನು ಹಂಚಿಕೊಂಡಿದ್ದ ವಿಜಯಲಕ್ಷ್ಮಿ ಅವರು ಸೈಬರ್ ಪೊಲೀಸರಿಗೆ ದೂರು ನೀಡಿದ್ದರು. ಆದರೆ ದೂರು ನೀಡಿ ಹಲವು ದಿನಗಳಾದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವಿಜಯಲಕ್ಷ್ಮಿ ಅವರು ಅಸಮಾಧಾನ ಹೊರಹಾಕಿದ್ದಾರೆ. ಈ ಬಗ್ಗೆ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಸುದೀರ್ಘವಾಗಿ ಬರೆದುಕೊಂಡಿರುವ ಅವರು, 'ಮತ್ತೊಬ್ಬ ಮಹಿಳೆ ಸಲ್ಲಿಸಿದ ದೂರಿನ ಮೇಲೆ ಕೇವಲ ಒಂದು ದಿನದಲ್ಲೇ ಕ್ರಮ ಕೈಗೊಳ್ಳಲಾಗಿದೆ' ಎಂದು ನಟಿ ರಮ್ಯಾ ಅವರ ಪ್ರಕರಣವನ್ನು ಪರೋಕ್ಷವಾಗಿ ಉಲ್ಲೇಖಿಸಿ ಬೇಸರ ವ್ಯಕ್ತಪಡಿಸಿದ್ದಾರೆ.
ವಿಜಯಲಕ್ಷ್ಮಿ ಅವರು ದಾವಣಗೆರೆಯಲ್ಲಿ ಡೆವಿಲ್ ಸಿನಿಮಾದ ಸಂಭ್ರಮಾಚರಣೆ ವೇಳೆ, ದರ್ಶನ್ ಅವರು ಇಲ್ಲದೆ ಇದ್ದಾಗ ಕೆಲ ವ್ಯಕ್ತಿಗಳು ಅವರ ಹಾಗೂ ಅಭಿಮಾನಿಗಳ ಬಗ್ಗೆ ಮಾತನಾಡುತ್ತಿದ್ದಾರೆ, ಅವರು ಹೊರಗಡೆ ಇದ್ದಾಗ ಮಾತೇ ಬರಲ್ಲ" ಎಂದು ತಿರುಗೇಟು ನೀಡಿದ್ದರು. ಈ ವಿಡಿಯೋ ವೈರಲ್ ಆಗಿ ಕೆಲವರು ವಿಜಯಲಕ್ಷ್ಮಿ ಅವರ ಬಗ್ಗೆ ಕೆಟ್ಟ ಪದಗಳನ್ನು ಬಳಸಿ ನಿಂದಿಸಿದ್ದರು, ಅಶ್ಲೀಲವಾಗಿ ಕಾಮೆಂಟ್ ಮಾಡಿದ್ದರು. ಇದರಿಂದ ಕೋಪಗೊಂಡಿದ್ದ ಅವರು ಬೆಂಗಳೂರು ಪೊಲೀಸ್ ಕಮೀಷನರ್ ಕಚೇರಿಗೆ ತೆರಳಿ, ಸೈಬರ್ ಕ್ರೈಂಗೆ ದೂರು ನೀಡಿದ್ದರು. ಆದರೆ ದೂರು ನೀಡಿ ಹಲವು ದಿನಗಳು ಕಳೆದರೂ ಪೊಲೀಸರಿಂದ ಯಾವುದೇ ಕ್ರಮ ಇಲ್ಲ ಎಂದು ಅಸಮಾಧಾನ ಹೊರಹಾಕಿ ಪೋಸ್ಟ್ ಹಂಚಿಕೊಂಡಿದ್ದಾರೆ.

'ಕಾನೂನಿನ ಮೇಲೆ ನಂಬಿಕೆ ಇತ್ತು'
'ನಾನು ಯಾವಾಗಲೂ ನಮ್ಮ ದೇಶದಲ್ಲಿ ವ್ಯವಸ್ಥೆ ಮತ್ತು ಕಾನೂನು ಎಲ್ಲರಿಗೂ ಒಂದೇ ರೀತಿಯಲ್ಲಿದೆ ಎಂದು ನಂಬಿದ್ದೆ. ಆದರೆ ನಿಜವಾಗಿ ಹೇಳಬೇಕಾದರೆ, ನನ್ನ ಈ ಅನುಭವವು ಆ ನಂಬಿಕೆಯನ್ನು ಪ್ರಶ್ನಿಸುವಂತಾಗಿದೆ. ನಾನು ದಾಖಲಿಸಿದ ದೂರನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಲಾಗಿದೆ. ಆದರೆ ಮತ್ತೊಬ್ಬ ಮಹಿಳೆ ಸಲ್ಲಿಸಿದ ದೂರಿನ ಮೇಲೆ ಕೇವಲ ಒಂದು ದಿನದಲ್ಲೇ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ನನ್ನ ದೂರಿಗೆ ಮಹತ್ವವೇ ಇಲ್ಲವೇ? ಅಥವಾ ಅದು ಮಾನ್ಯವಲ್ಲವೇ? ಎಂಬ ಪ್ರಶ್ನೆ ನನ್ನ ಮನಸ್ಸಿನಲ್ಲಿ ಮೂಡುತ್ತದೆ' ಎಂದಿದ್ದಾರೆ.
'ನನ್ನ ವಕೀಲರು ಈ ಕೇಸ್ ವಿಚಾರವಾಗಿ ನಿರಂತರವಾಗಿ ಫಾಲೋ-ಅಪ್ ಮಾಡಿದರೂ ಸಹ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಇಂದು ನನ್ನ ದೂರನ್ನು ಇನ್ನೂ ಪರಿಶೀಲಿಸಿಲ್ಲ ಎಂಬುದನ್ನು ನೆನಪಿಸಲು ನಾನೇ ಸ್ವತಃ ಪೊಲೀಸ್ ಕಮೀಷನರ್ ಕಚೇರಿಗೆ ಹೋಗಬೇಕಾಯಿತು. ಈ ವಿಳಂಬಕ್ಕೆ ಯಾವುದೇ ಹೊರಗಿನ ಒತ್ತಡ ಅಥವಾ ಪ್ರಭಾವ ಕಾರಣವಾಗಿಲ್ಲ ಎಂದು ನಾನು ಆಶಿಸುತ್ತೇನೆ' ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
'ನಾನು ಸುಮ್ಮನೆ ಇರುವವಳಲ್ಲ'
'ನ್ಯಾಯವು ಯಾರು ಒಳಗೊಂಡಿದ್ದಾರೆ ಎಂಬುದರ ಮೇಲೆ ಅವಲಂಬಿತವಾಗಿರಬಾರದು ಮತ್ತು ಇಂತಹ ವರ್ತನೆಯನ್ನು ಬೆಂಬಲಿಸುವವರಿಗೂ ಅಥವಾ ಆಶ್ರಯ ನೀಡುವವರಿಗೂ ಅಂಧವಾಗಿ ಬೆಂಬಲಿಸುವ ಬದಲು, ಆ ಶಕ್ತಿಗೆ ಪಾಠ ಕಲಿಸುವ ಸಮಯ ಬಂದಿದೆ. ನಾನು ಇನ್ನೂ ಕಾಯುತ್ತಿದ್ದೇನೆ. ಇದನ್ನು ನಾನು ಸುಮ್ಮನೆ ಬಿಟ್ಟುಕೊಡುವುದಿಲ್ಲ' ಎಂದು ವಿಜಯಲಕ್ಷ್ಮಿ ಖಾರವಾಗಿ ಬರೆದುಕೊಂಡಿದ್ದಾರೆ. ಬೆಂಗಳೂರು ಪೊಲೀಸ್, ಕರ್ನಾಟಕ ಸರ್ಕಾರ ಹಾಗೂ ಗೃಹ ಸಚಿವ ಜಿ.ಪರಮೇಶ್ವರ್ ಅವರನ್ನು ಟ್ಯಾಗ್ ಕೂಡ ಮಾಡಿದ್ದಾರೆ.
ಇತ್ತೀಚೆಗೆ ನಟಿ ರಮ್ಯಾ ಅವರಿಗೂ ಇದೇ ರೀತಿ ಸಾಮಾಜಿಕ ಮಾಧ್ಯಮಗಳಲ್ಲಿ ಅಶ್ಲೀಲವಾಗಿ ಕಾಮೆಂಟ್ ಹಾಗೂ ಮೆಸೇಜ್ ಹಾಕಿದ್ದರು. ಇದರ ವಿರುದ್ಧ ರಮ್ಯಾ ಕೂಡ ಪೊಲೀಸರಿಗೆ ದೂರು ನೀಡಿದ್ದರು. ತಕ್ಷಣ ಕ್ರಮ ತೆಗೆದುಕೊಂಡಿದ್ದ ಪೊಲೀಸರು ಹಲವರನ್ನು ಬಂಧಿಸಿದ್ದರು. ಇದೇ ವಿಚಾರವನ್ನು ವಿಜಯಲಕ್ಷ್ಮಿಅವರು ಪರೋಕ್ಷವಾಗಿ ಉಲ್ಲೇಖಿಸಿ, ಪೊಲೀಸರ ಮೇಲೆ ನಿರ್ಲಕ್ಷ್ಯದ ಆರೋಪ ಮಾಡಿದ್ದಾರೆ.












Click it and Unblock the Notifications