ನಟಿ ಅರ್ಚನಾ ಕೊಟ್ಟಿಗೆ ಬಿಗ್ಬಾಸ್ಗೆ ಹೋಗೋದು ಪಕ್ಕಾನಾ? ದೊಡ್ಮನೆಯಲ್ಲಿ ಮಾತಿಗೇನೂ ಕೊರತೆ ಇರಲ್ಲ ಬಿಡಿ ಎಂದ ಜನ
ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಕನ್ನಡ ಸೀಸನ್ 13' (Bigg Boss Kannada Season 13) ಆರಂಭಕ್ಕೆ ದಿನಗಣನೆ ಶುರುವಾಗುತ್ತಿದ್ದಂತೆ, ದೊಡ್ಮನೆಗೆ ಎಂಟ್ರಿ ಕೊಡುವ ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಬಾರಿ ಯಾರೆಲ್ಲ ಸ್ಪರ್ಧಿಗಳು ಬರಬಹುದು ಎಂಬ ಚರ್ಚೆಯ ನಡುವೆ, ಸ್ಯಾಂಡಲ್ವುಡ್ನ ಪ್ರತಿಭಾನ್ವಿತ ನಟಿ ಅರ್ಚನಾ ಕೊಟ್ಟಿಗೆ (Archana Kottige) ಅವರ ಹೆಸರು ಜೋರಾಗಿಯೇ ಕೇಳಿಬರುತ್ತಿದೆ. ಈಗಾಗಲೇ ಕೆಲವು ಸಿನಿಮಾಗಳ ಮೂಲಕ ಕನ್ನಡಿಗರಿಗೆ ಹತ್ತಿರವಾಗಿರುವ ಅರ್ಚನಾ, ಇತ್ತೀಚೆಗಷ್ಟೇ ಸ್ಟಾರ್ ಕ್ರಿಕೆಟರ್ ಶರತ್ ಬಿಆರ್ ಅವರನ್ನು ವರಿಸುವ ಮೂಲಕ ಸುದ್ದಿಯಲ್ಲಿದ್ದರು.
ನೆಟ್ಟಿಗರ ಗಮನ ಸೆಳೆದ ಸಂದರ್ಶನ; ದೊಡ್ಮನೆಗೆ ಡಿಮ್ಯಾಂಡ್
ಇತ್ತೀಚೆಗೆ ಯೂಟ್ಯೂಬ್ ಚಾನೆಲ್ವೊಂದರ ಸಂದರ್ಶನದಲ್ಲಿ ನಟಿಯರಾದ ಖುಷಿ ರವಿ, ಅಮೃತಾ ಅಯ್ಯಂಗಾರ್ ಜೊತೆ ಅರ್ಚನಾ ಕೊಟ್ಟಿಗೆ ಕಾಣಿಸಿಕೊಂಡಿದ್ದರು. ಈ ಇಂಟರ್ವ್ಯೂನಲ್ಲಿ ಅರ್ಚನಾ ಅವರು ಮಾತನಾಡಿದ ಶೈಲಿ, ಅವರಲ್ಲಿನ ಹ್ಯೂಮರ್ ಸೆನ್ಸ್ ಮತ್ತು ಚುರುಕುತನಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ವಿಡಿಯೋ ನೋಡಿದ ನೂರಾರು ಅಭಿಮಾನಿಗಳು, "ಮೇಡಂ, ನಿಮ್ಮ ಈ ಮಾತಿನ ಚಾತುರ್ಯಕ್ಕೆ ನೀವು ಬಿಗ್ಬಾಸ್ ಮನೆಗೆ ಹೋಗಲೇಬೇಕು. ನೀವು ದೊಡ್ಮನೆಗೆ ಹೋದರೆ ಗ್ಯಾರಂಟಿ ಫುಲ್ ಎಂಟರ್ಟೈನ್ಮೆಂಟ್ ಸಿಗುತ್ತದೆ. ಅಲ್ಲಿ ಮಾತಿಗೆ ಕೊರತೆಯೇ ಇರುವುದಿಲ್ಲ" ಎಂದು ಕಮೆಂಟ್ ಮಾಡುವ ಮೂಲಕ ಬಿಗ್ಬಾಸ್ಗೆ ಹೋಗುವಂತೆ ಒತ್ತಾಯಿಸುತ್ತಿದ್ದಾರೆ.

ಬಿಗ್ಬಾಸ್ ಎಂಟ್ರಿ ಬಗ್ಗೆ ಅರ್ಚನಾ ಕೊಟ್ಟಿಗೆ ಕ್ಲಾರಿಟಿ
ತಮ್ಮ ಬಿಗ್ಬಾಸ್ ಸಂಭಾವ್ಯ ಸ್ಪರ್ಧೆಯ ಬಗ್ಗೆ ಹರಡಿರುವ ವದಂತಿಗಳಿಗೆ ನಟಿ ಅರ್ಚನಾ ಕೊಟ್ಟಿಗೆ ಅವರೇ ನೇರವಾಗಿ ಸ್ಪಷ್ಟನೆ ನೀಡಿದ್ದಾರೆ. ಅಭಿಮಾನಿಗಳ ನಿರೀಕ್ಷೆಗೆ ಕೊಂಚ ಬ್ರೇಕ್ ಹಾಕಿರುವ ಅವರು, ಸದ್ಯಕ್ಕೆ ರಿಯಾಲಿಟಿ ಶೋಗೆ ಹೋಗುವ ಯಾವುದೇ ಆಲೋಚನೆ ತಮಗಿಲ್ಲ ಎಂದು ತಿಳಿಸಿದ್ದಾರೆ. "ನನ್ನ ಸಂಪೂರ್ಣ ಗಮನ ಈಗ ಸಿನಿಮಾಗಳ ಮೇಲಿದೆ. ಹಿಂದೆ ಒಮ್ಮೆ ಬಿಗ್ಬಾಸ್ ತಂಡದಿಂದ ಆಫರ್ ಬಂದಿದ್ದಾಗ ನಾನೇ ಒಪ್ಪಿರಲಿಲ್ಲ. ಮುಂದಿನ ದಿನಗಳಲ್ಲಿ ನನ್ನದೇನಾದರೂ ಸಿನಿಮಾ ಬಿಡುಗಡೆಯಾದರೆ ಅದರ ಪ್ರಚಾರಕ್ಕಾಗಿ ಬಿಗ್ಬಾಸ್ ಮನೆಗೆ ಅತಿಥಿಯಾಗಿ ಹೋಗುತ್ತೇನೆಯೇ ಹೊರತು, ಸ್ಪರ್ಧಿಯಾಗಿ ಮನೆ ಒಳಗೆ ಹೋಗುವ ಪ್ಲಾನ್ ಇಲ್ಲ" ಎಂದು ಅರ್ಚನಾ ಖಚಿತಪಡಿಸಿದ್ದಾರೆ. ಸದ್ಯ ಕೆಲವು ಸಿನಿಮಾಗಳ ಮಾತುಕತೆ ನಡೆಯುತ್ತಿದ್ದು, ಒಳ್ಳೆಯ ಅವಕಾಶಗಳಿಗಾಗಿ ಕಾಯುತ್ತಿರುವುದಾಗಿ ಅವರು ಹೇಳಿದ್ದಾರೆ. ಇದರೊಂದಿಗೆ ಅರ್ಚನಾ ಕೊಟ್ಟಿಗೆ ಬಿಗ್ಬಾಸ್ ಸೀಸನ್ 13ಕ್ಕೆ ಹೋಗುವುದು ಬರೀ ಗಾಸಿಪ್ ಎಂದು ಖುದ್ದಾಗಿ ಅವರೇ ತೆರೆ ಎಳೆದಿದ್ದಾರೆ.
ಕಾಮನ್ ಮ್ಯಾನ್ ಕೂಡ ಬಿಗ್ಬಾಸ್ ಮನೆಗೆ ಎಂಟ್ರಿ
ಇನ್ನು ಬಿಗ್ ಬಾಸ್ ಕನ್ನಡ ಸೀಸನ್ 13ರ ಮತ್ತೊಂದು ಪ್ರಮುಖ ಹೈಲೈಟ್ ಎಂದರೆ, ಈ ಬಾರಿ ಶೋನಲ್ಲಿ 'ಕಾಮನ್ ಮ್ಯಾನ್' ಅಂದರೆ ಸಾಮಾನ್ಯ ಜನರಿಗೂ ಸ್ಪರ್ಧಿಸುವ ಸುವರ್ಣಾವಕಾಶ ನೀಡಲಾಗುತ್ತಿದೆ. ಕಳೆದ ಕೆಲವು ಸೀಸನ್ಗಳಲ್ಲಿ ಕೇವಲ ಸೆಲೆಬ್ರಿಟಿಗಳಿಗಷ್ಟೇ ಸೀಮಿತವಾಗಿದ್ದ ದೊಡ್ಮನೆಯ ಬಾಗಿಲು, ಈ ಬಾರಿ ಮತ್ತೆ ಸಾಮಾನ್ಯ ಪ್ರತಿಭೆಗಳಿಗಾಗಿ ತೆರೆದುಕೊಳ್ಳುತ್ತಿರುವುದು ವೀಕ್ಷಕರಲ್ಲಿ ಕುತೂಹಲವನ್ನು ದುಪ್ಪಟ್ಟು ಮಾಡಿದೆ. ರಾಜ್ಯದ ಮೂಲೆ ಮೂಲೆಗಳಿಂದ ಬರುವ ಸಾಮಾನ್ಯ ಜನರು ಸೆಲೆಬ್ರಿಟಿಗಳ ಜೊತೆ ಹೇಗೆ ಪೈಪೋಟಿ ನಡೆಸಲಿದ್ದಾರೆ ಎಂಬುದು ಈ ಸೀಸನ್ನ ಹಾಟ್ ಟಾಪಿಕ್ ಆಗಿದೆ.
ಅರ್ಚನಾ ಕೊಟ್ಟಿಗೆ ಅವರಂತಹ ಸಖತ್ ಮಾತುಗಾರ್ತಿ ಹಾಗೂ ಸೋಷಿಯಲ್ ಮೀಡಿಯಾ ಸೆನ್ಸೇಷನ್ಗಳು ಒಂದೆಡೆ ಸಂಭಾವ್ಯ ಪಟ್ಟಿಯಲ್ಲಿದ್ದರೆ, ಮತ್ತೊಂದೆಡೆ ಸಾಗರೋಪಾದಿಯಲ್ಲಿ ಹರಿದುಬರಲಿರುವ ಸಾಮಾನ್ಯ ಜನರ ಎಂಟ್ರಿ ಬಿಗ್ ಬಾಸ್ ಇತಿಹಾಸದಲ್ಲೇ ಹೊಸದೊಂದು ಕಿಚ್ಚು ಹಚ್ಚುವುದು ಗ್ಯಾರಂಟಿ ಎನ್ನಲಾಗುತ್ತಿದೆ. ಸದ್ಯದಲ್ಲೇ ಅಧಿಕೃತ ಆಡಿಷನ್ ಪ್ರಕ್ರಿಯೆಗಳ ವಿವರಗಳು ಹೊರಬೀಳಲಿದ್ದು, ಈ ಬಾರಿ ದೊಡ್ಮನೆಯ ಅಂಗಳದಲ್ಲಿ ಸೆಲೆಬ್ರಿಟಿ ವರ್ಸಸ್ ಕಾಮನ್ ಮ್ಯಾನ್ ಜಟಾಪಟಿ ಸಖತ್ ಕುತೂಹಲ ಹುಟ್ಟಿಸಿದೆ.













Click it and Unblock the Notifications