ಖ್ಯಾತ ಗಾಯಕಿ ಅರ್ಚನಾ ಉಡುಪಗೆ ಏಕಾಏಕಿ ಧ್ವನಿ ಹೋಗಿದ್ದೇಗೆ?
'ನಾನು ತೆರೆದ ಪುಸ್ತಕ ಅದರಲ್ಲಿ ಮುಚ್ಚಿದಲು ಏನೂ ಇಲ್ಲ. ಬೇರೆ ಕ್ಷೇತ್ರಗಳಂತೆ ನಮ್ಮ ಕ್ಷೇತ್ರದಲ್ಲಿಯೂ ಕಾಂಪಿಟೇಷನ್ ಇತ್ತು. ಕೆಲವು ಕಡೆಗಳಲ್ಲಿ ಆರೋಗ್ಯಕರ ಸ್ಪರ್ಧೆ ಇದ್ದರೆ, ಬಹಳ ಕಡೆ ಕೆಟ್ಟ ಸ್ಪರ್ಧೆ ಇರುತ್ತದೆ ಅದರಲ್ಲೂ ನಮ್ಮ ಕ್ಷೇತ್ರದಲ್ಲಿ. ಯಾರನ್ನಾದರೂ ಒಳ್ಳೆಯ ರೀತಿಯಲ್ಲಿ ಹಿಂದಿಕ್ಕಲು ಆಗಲ್ಲ ಅಂತಾ ಗೊತ್ತಾದ ತಕ್ಷಣ ಬೇರೆ ಮಾರ್ಗಗಳೆಲ್ಲಾ ಬರುತ್ತದೆ. ಅದರಲ್ಲೂ ಮಹಿಳೆಯರಿಗೆ ಆಕೆಯ ಚಾರಿತ್ರ್ಯದ ಬಗ್ಗೆ ಮಾತನಾಡುತ್ತಾರೆ. ನನಗೂ ಆ ಅನುಭವ ಆಗಿದೆ' ಎಂದು ಖ್ಯಾತ ಗಾಯಕಿ ಅರ್ಚನಾ ಉಡುಪ ತಮ್ಮ ಜೀವನದಲ್ಲಿ ತಮ್ಮನ್ನು ಕುಗ್ಗಿಸಿದ ಘಟನೆಗಳ ಬಗ್ಗೆ ಮಾತನಾಡಿದ್ದಾರೆ.
ಬುಕ್ ಬ್ರಹ್ಮ ಯೂಟ್ಯೂಬ್ ಚಾನೆಲ್ ಜೊತೆ ಮಾತನಾಡಿದ ಅವರು, 'ನನ್ನ ಚಾರಿತ್ರ್ಯದ ಬಗ್ಗೆ ಮಾತನಾಡಿದ ಸಮಯದಲ್ಲಿ ನನ್ನ ಪತಿ ನನಗೆ ಬಲವಾಗಿ ಬೆನ್ನೆಲುಬಾಗಿ ನಿಂತ ಕಾರಣದಿಂದ ಅದೆಲ್ಲಾ ನನಗೆ ಅಷ್ಟೊಂದು ಪರಿಣಾಮ ಬೀರಲಿಲ್ಲ. ಸ್ವಲ್ಪ ದಿನ ತೊಂದರೆಯಾಯ್ತು ಯಾಕೆಂದರೆ ಅದೆಲ್ಲಾ ನನಗೆ ಹೊಸತು. ಇವಾಗಂತೂ ಎಮ್ಮೆ ಚರ್ಮದ ರೀತಿಯಾಗಿದೆ. ಯಾರು ಏನಾದರೂ ಹೇಳಿಕೊಳ್ಳಿ ಅಂತಾ ಬಿಟ್ಟು ಬಿಟ್ಟಿದ್ದೇನೆ. ನನ್ನ ಹಿಂದೆ ಮಾತನಾಡಿದರೆ, ನಾನು ಅವರಿಗಿಂತ ಎರಡು ಹೆಜ್ಜೆ ಮುಂದೆ ಇದ್ದೇನೆ ಅಂತಾ. ಮಾತನಾಡಿದರೆ ಅವರಿಗೆ ಖುಷಿಯಾಗುತ್ತದೆ ಅಂದರೆ ಅವರ ಪಾಡಿಗೆ ಅವರು ಖುಷಿಪಡಲಿ ಅಂತಾ ಬಿಟ್ಟು ಬಿಡುತ್ತೇನೆ. ಇದು ಎಲ್ಲರ ಜೀವನದ ಒಂದು ಭಾಗ ಅನಿಸುತ್ತದೆ ನನಗೆ' ಎಂದರು.

'ಇನ್ನೊಂದು ತುಂಬಾ ದೊಡ್ಡದಾಗಿ ನನಗೆ ಹೊಡೆತ ಬಿದ್ದಿರುವುದು ಅಂದರೆ ನಾನು ಹೈಪಿಚ್ ಹಾಡುಗಳಿಗೆ ಕಿರುಚಾಡುತ್ತಿದ್ದೆ. ಹೈಪಿಚ್ ಹಾಡುಗಳಿಗೆ ನನ್ನನ್ನೇ ಕರೆಸುತ್ತಿದ್ದರು. ಆವಾಗ ಗೊತ್ತಾಗುತ್ತಿರಲಿಲ್ಲ ಆ ಜೋಶ್ನಲ್ಲಿ ಹಾಡುತ್ತಿದ್ದೆ. ಕ್ರಮೇಣ ಗಂಟಲಿಲ್ಲಿ ಸಣ್ಣ ನೋವು ಬರಲು ಶುರುವಾಯ್ತು. ನಾಲ್ಕು ಗಂಟೆಗಳ ಕಾಲ ಕಾರ್ಯಕ್ರಮದಲ್ಲಿ ಹಾಡುವಾಗ ನೋವು ಬರುತಿತ್ತು. ಅಪ್ಪಂಗೆ ಕೂಡ ಹೇಳಿದ್ದೆ ನನಗೆ ಕಷ್ಟವಾಗುತ್ತಿದೆ ಅಂತಾ. ಆಗ ಅವರು ಅದು ನಿನ್ನ ಭ್ರಮೆ ಎನ್ನುತ್ತಿದ್ದರು. ಅಲ್ಲದೇ ಮಾತು ಕಮ್ಮಿ ಮಾಡು ಅನ್ನುತ್ತಿದ್ದರು. ನಾನು ಕೂಡ ಅದನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ' ಎಂದರು.
'ಒಂದು ದಿನ ಯಾವುದೋ ಒಂದು ದೊಡ್ಡ ಪ್ರಮಾಣದ ಕಾರ್ಯಕ್ರಮ ಇತ್ತು. ಹೋಗಲು ರೆಡಿಯಾಗಿ ಚಪ್ಪಲಿ ಹಾಕಿಕೊಳ್ಳುತ್ತಿದ್ದೆ. ನೆಪ ಮಾತ್ರಕ್ಕೆ ಒಂದು ಸಾರಿ ಕೆಮ್ಮು ಬಂತು. ಆ ಕೆಮ್ಮು ಬಂದು ಹೋದ ಮೇಲೆ ನನಗೆ ಧ್ವನಿನೇ ಬರುತ್ತಿಲ್ಲ. ಎಷ್ಟೇ ಪ್ರಯತ್ನ ಮಾಡಿದರೂ ಮೂರು ಮೂರು ಧ್ವನಿ ಬರುತ್ತಿದೆ. ಅಮ್ಮ ಏನಾಗಲ್ಲ ಅಂತಾ ಕಳುಹಿಸಿದರು. ಅಲ್ಲಿ ಹೋಗಿ ಹೆದರಿಕೊಂಡೇ ವೇದಿಕೆ ಹತ್ತಿದೆ. ಹಾಡಲು ಪ್ರಯತ್ನಪಟ್ಟಾಗ ಮತ್ತೆ ಮೂರು ಮೂರು ಧ್ವನಿ ಬಂತು. ಅವತ್ತು ಒಂದೇ ಹಾಡು ಹಾಡಿದ್ದು, ಮತ್ತೆ ವೇದಿಕೆ ಪಕ್ಕದಲ್ಲಿ ಕಣ್ಣೀರು ಹಾಕಿಕೊಂಡು ಕುಳಿತಿದ್ದೆ'.

'ಆ ಕಾರ್ಯಕ್ರಮದಿಂದ ಬಂದ ಮೇಲೆ ಸರಿನೇ ಹೋಗಲಿಲ್ಲ. ನಾನು ಮಾಡದೇ ಇರುವ ಔಷಧಿಗಳಿಲ್ಲ. ಎಲ್ಲರೂ ಸರಿಯಾಗುತ್ತದೆ ಅಂತಾ ಹೇಳಿದರು. ಆದರೆ ಯಾವಾಗ ಅಂತಾ ಹೇಳಲಿಲ್ಲ. ಎಷ್ಟೋ ತಿಂಗಳು ಕಾರ್ಯಕ್ರಮಗಳನ್ನು ಒಪ್ಪಿಕೊಂಡಿದ್ದೆ. ಅವರಿಗೆಲ್ಲಾ ಏನು ಹೇಳುವುದು, ಹಾಡೋದಿರಲಿ ಮಾತನಾಡಲು ಸಹ ಆಗುತ್ತಿರಲಿಲ್ಲ. ಆ ಒತ್ತಡ ನನಗೆ ಹೆಚ್ಚಾಗುತ್ತಿತ್ತು. ಒಬ್ಬರು ವೈದ್ಯರ ಬಳಿ ಹೋದಾಗ ಅವರು ಟೆಸ್ಟ್ ಮಾಡಿ ಆಪರೇಷನ್ ಮಾಡಬೇಕು. ಮಾಡಿದ ಮೇಲೆ ಧ್ವನಿ ಇರಲೂಬಹುದು ಹೋಗಲುಬಹುದು ಎಂದರು. ನಾನು ಅಲ್ಲಿಂದ ಅತ್ತು ಆಚೆ ಓಡಿ ಬಂದೆ. ನಾನು ದಿನಾ ಎದ್ದು ಹಾಡಲು ಟ್ರೈ ಮಾಡುವುದು ಅಳುವುದು ಇದೇ ನನ್ನ ದಿನಚರಿ ಆಗಿತ್ತು. ಕೊನೆಯಲ್ಲಿ ನಮ್ಮ ಆಪ್ತರ ಸಲಹೆ ಮೇರೆ ಒಬ್ಬರ ಬಳಿ ಹೋದೆವು ಅವರು ಔಷಧಿ ಕೊಟ್ಟ ನಾಲ್ಕು ತಿಂಗಳಲ್ಲಿ ನನ್ನ ಧ್ವನಿ ಸರಿ ಹೋಯಿತು' ಎಂದು ತಮ್ಮ ಜೀವನದಲ್ಲಿ ನೋವು ತಂದ ಘಟನೆ ಬಗ್ಗೆ ಹಂಚಿಕೊಂಡಿದ್ದಾರೆ.












Click it and Unblock the Notifications