Shiva Rajkumar: 'ಡಾಕ್ಟರ್ ಮೇಲೆ ನಂಬಿಕೆ ಇಡೋಣ' ಎಂದ ಶಿವ ರಾಜ್ಕುಮಾರ್
ಕರುನಾಡ ಚರ್ಕವರ್ತಿ ಶಿವರಾಜ್ ಕುಮಾರ್ ಅವರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕಳೆದ ಕೆಲವು ತಿಂಗಳಿಂದ ಚಿಕಿತ್ಸೆ ಪಡೆಯುತ್ತಿರೋದಾಗಿ ಶಿವಣ್ಣ ಈಗಾಗಲೇ ಹೇಳಿದ್ದಾರೆ. ಶಿವಣ್ಣ ಅನಾರೋಗ್ಯದ ವಿಚಾರ ತಿಳಿದು ಅಭಿಮಾನಿಗಳು ಬೇಸರಗೊಂಡಿದ್ದು, ಅವರು ಬೇಗ ಹುಷಾರಾಗಲಿ ಎಂದು ಹಾರೈಸುತ್ತಿದ್ದಾರೆ. ಇದೀಗ ತಮ್ಮ ಆರೋಗ್ಯದ ಬಗ್ಗೆ ಸ್ವತಃ ಶಿವಣ್ಣ ಮಾತನಾಡಿದ್ದಾರೆ.
ಟಿವಿ 9 ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಶಿವಣ್ಣ, 'ಆರೋಗ್ಯದ ವಿಚಾರದಲ್ಲಿ ಏನೂ ಮಾಡಲು ಆಗುವುದಿಲ್ಲ. ಒಮ್ಮೊಮ್ಮೆ ಇಂತಹ ಸಂದರ್ಭಗಳು ಬರುತ್ತದೆ. ಬಂದಾಗ ಏನೂ ಮಾಡಲು ಆಗುವುದಿಲ್ಲ. ನಾವು ಎದುರಿಸಬೇಕು. ಸ್ವಲ್ಪ ಭಯ ಇರುತ್ತದೆ. ಆದರೆ ಧೈರ್ಯವಾಗಿ ಎದುರಿಸಬೇಕು. ಕುಟುಂಬ ಜೊತೆಗೆ ಇದೆ, ಕನ್ನಡ ಚಿತ್ರರಂಗ ಜೊತೆಗೆ ಇದೆ. ಹೀಗಾಗಿ ಎಲ್ಲವನ್ನೂ ಎದುರಿಸೋಣ' ಎಂದು ಶಿವಣ್ಣ ಹೇಳಿದ್ದಾರೆ.

'ಕನ್ನಡ ಚಿತ್ರರಂಗದ ಬಹುತೇಕ ಎಲ್ಲಾ ನಟರು ಕಾಲ್ ಮಾಡಿ ಆತ್ಮಸ್ಥೈರ್ಯ ತುಂಬಿದ್ದಾರೆ. ಸುದೀಪ್, ಡಾಲಿ ಧನಂಜಯ್, ದುನಿಯಾ ವಿಜಯ್ ಇರಬಹುದು ಎಲ್ಲಾ ಕರೆ ಮಾಡಿದ್ದರು. ಪಾಪ ಯಶ್ಗೆ ಕಾಲ್ ಮಾಡಿ ಮಾತನಾಡಲು ತುಂಬಾ ಬೇಜಾರು. ಆದರೆ ಎಲ್ಲರಿಗೂ ನನ್ನ ಮೇಲೆ ಕಾಳಜಿ ಇದೆ. ಸದ್ಯ ಚಿಕಿತ್ಸೆ ನಡೆಯುತ್ತಿದೆ. ನಾನು ಕೂಡ ಧೈರ್ಯವಾಗಿ ಹುಷಾರಾಗುತ್ತಿದ್ದೇನೆ' ಎಂದರು.
'ಜೀವನದಲ್ಲಿ ಎಂತಹ ಸಂದರ್ಭ ಬಂದರೂ ಎದುರಿಸಲೇಬೇಕು. ಸೆಲೆಬ್ರೆಟಿ ಅಂತಲ್ಲ..ಯಾರೇ ಇದ್ದರೂ ಸಹ ಇಂತಹ ಸಂದರ್ಭದಲ್ಲಿ ಆತ್ಮಸ್ಥೈರ್ಯ ಇರಬೇಕು. ಆ ಧೈರ್ಯವನ್ನು ಅವರು ತೆಗೆದುಕೊಳ್ಳಬೇಕು. ಆದಾಗ ಏನೂ ಮಾಡಲೂ ಆಗುವುದಿಲ್ಲ. ಆದರೆ ಹುಷಾರಾಗಲು ಮಾರ್ಗಗಗಳು ಇದ್ದೇ ಇರುತ್ತಲ್ಲ. ಹೀಗಾಗಿ ಅದರ ಬಗ್ಗೆ ಜಾಸ್ತಿ ತಲೆ ಕೆಡಿಸಿಕೊಳ್ಳುವುದು' ಬೇಡ ಎಂದರು.

'ನಾವು ಡಾಕ್ಟರ್ ಮೇಲೆ ನಂಬಿಕೆ ಇಡೋಣ, ಇಡಲೇಬೇಕು. ಜೀವನ ಸಾಗಲೇಬೇಕು. ಹೀಗಿದ್ದರೂ ನಾನು ಕೆಲಸ ಮಾಡುತ್ತಿದ್ದೇನೆ. ಆರೋಗ್ಯ ಸಮಸ್ಯೆ ವಿಚಾರ ಗೊತ್ತಾದಾಗ ಮುಂದೆ ಏನು ಮಾಡುವುದು ಎನ್ನುವ ಚಿಂತೆ ಇತ್ತು. ನಾವು ಸ್ಟ್ರಾಂಗ್ ಅಂತಾ ಅಂದುಕೊಳ್ಳುತ್ತೇವೆ. ಆದರೆ ಭಾವನಾತ್ಮಕವಾಗಿ ಸ್ಪಲ್ಪ ಯೋಚನೆ ಮಾಡಿಯೇ ಮಾಡುತ್ತೇವೆ. ಆದರೆ ಎಲ್ಲರೂ ಜೊತೆಯಲ್ಲಿ ನಿಂತರು'.
'ಡಾಕ್ಟರ್ ಸಹ ಚಿಂತೆ ಮಾಡುವುದು ಏನು ಇಲ್ಲ. ನೀವು ನಿಮಗೆ ಬೇಕು ಅನಿಸಿದಷ್ಟು ಕೆಲಸ ಮಾಡಿ. ಚಿಕಿತ್ಸೆ ಅದರ ಪಾಡಿಗೆ ನಡೆಯುತ್ತದೆ. ಒಂದು ವೇಳೆ ಆಯಾಸ ಏನಾದರೂ ಬಂದರೆ ಕೆಲಸ ಮಾಡುವುದನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿ. ಒಂದು ತಿಂಗಳು ರೆಸ್ಟ್ ಮಾಡಿ. ಈ ಎಲ್ಲಾ ಚಿಕಿತ್ಸೆ ಮುಗಿಯುತ್ತಿದ್ದ ಹಾಗೆ ಮತ್ತೆ ಕೆಲಸ ಶುರು ಮಾಡಬಹುದು ಅಂತಾ ಡಾಕ್ಟರೇ ಹೇಳಿದ್ದಾರೆ' ಎಂದು ಶಿವಣ್ಣ ಹೇಳಿದ್ದಾರೆ.
'ಸದ್ಯ ನನ್ನ ಎಲ್ಲಾ ಕೆಲಸಗಳು ನಡೆಯುತ್ತಿದೆ. ಮುಂದಿನ ಸಿನಿಮಾಗಳು ಕೂಡ ನಡೆಯುತ್ತಿದೆ. ಚಿತ್ರತಂಡದಲ್ಲಿ ಕೆಲವರು ಕೆಲಸ ಕಡಿಮೆ ಮಾಡೋಣ ಅಂತಾ ಹೇಳುತ್ತಾರೆ. ಆದರೆ ನನಗೆ ಬಿಟ್ಟು ಬಿಡಲು ಇಷ್ಟವಿಲ್ಲ. ನನ್ನ ಕೈಯಲ್ಲಿ ಏನೂ ಮಾಡಲು ಆಗುತ್ತದೆ. ಅದೆಲ್ಲವನ್ನೂ ನಾನು ಮಾಡಿದ್ದೇನೆ. ಮಾಡುತ್ತೇನೆ' ಎಂದು ಶಿವರಾಜ್ ಕುಮಾರ್ ತಮ್ಮ ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ.












Click it and Unblock the Notifications