ಹೆಸರು ಮಾಡೋಕೆ ಇಂತಹ ದಾರಿ ಹಿಡಿಯಬಾರದು: ಮಡೆನೂರು ಮನುಗೆ ನಟ ವಸಿಷ್ಠ ಬುದ್ಧಿಮಾತು
ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮನು ನಟ ಶಿವರಾಜ್ಕುಮಾರ್ ಅವರ ಸಾವಿನ ಬಗ್ಗೆ ಮಾತನಾಡಿದ್ದ ಆಡಿಯೋ ವೈರಲ್ ಆಗಿ ಸಂಚಲನ ಸೃಷ್ಟಿಸಿತ್ತು. ಇತ್ತೀಚೆಗೆ ಈ ವಿಚಾರವಾಗಿ ಮನು ಶಿವಣ್ಣನ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದರು. ಶಿವಣ್ಣ ಕೂಡ ಕ್ಷಮಿಸಿ ಮುಂದಿನ ಭವಿಷ್ಯಕ್ಕೆ ಒಳ್ಳೆಯದಾಗಲಿ ಎಂದಿದ್ದರು. ಇದೀಗ ಮಡೆನೂರು ಮನುಗೆ ನಟ ವಸಿಷ್ಠ ಸಿಂಹ ವೇದಿಕೆಯಲ್ಲೇ ಬುದ್ಧಿ ಹೇಳಿದ್ದಾರೆ. 'ಈ ರೀತಿ ಎಲ್ಲ ಮಾಡಿ, ಹೆಸರು ಮಾಡೋದು ಬೇರೆಯವರಿಗೆ ಅನುಕರಣೆ ಆಗಬಾರದು' ಎಂದಿದ್ದಾರೆ.
'ಮನು ನಮ್ಮ ಹಾಸನದ ಹುಡುಗ. ಇತ್ತೀಚೆಗೆ ಕೆಲ ಅನಾವಶ್ಯಕ ವಿಚಾರಗಳಲ್ಲಿ ತೊಡಗಿಸಿಕೊಂಡಿದ್ದರಿಂದ ಜೀವನದಲ್ಲಿ ಕೆಲವು ಏಳುಬೀಳು ನೋಡಬೇಕಾಯ್ತು. ನೀನು ಹಾಸನದ ಹಳ್ಳಿಯಿಂದ ಕೆಂಪು ಬಸ್ ಹತ್ತಿಕೊಂಡು ಬಂದಾಗ ನಿನಗೆ ಇದ್ದ ಕನಸು, ಕಾಮಿಡಿ ಕಿಲಾಡಿಗಳು ಟೈಟಲ್ ಗೆದ್ದಾಗ ಅದು ಮುಂದಿನ ಹಾದಿಗೆ ಬಲ ಕೊಡುವಂತಿರಬೇಕು. ನಮಗೆ ಅದೆಲ್ಲ ಉತ್ತೇಜನ ಕೊಡಬೇಕೇ ಹೊರತು ಯಾವುದೇ ಅಹಂ ತರಬಾರದು' ಎಂದು ಮಡೆನೂರು ಮನುಗೆ ಕಿವಿಮಾತು ಹೇಳಿದ್ದಾರೆ.

'ವಿಮಾನದಲ್ಲಿ ಕೂರಬೇಕು, ಅದು ನಂದೇ ಅನ್ನಬಾರದು'
'ಕಾಲ ಕೆಟ್ಟಾಗ ಹೀಗೆಲ್ಲ ಆಗೋದು ಸಹಜ. ಕೆಲ ವಿಚಾರಗಳು ನಮ್ಮ ಲೆಕ್ಕಾಚಾರ ದಾಟಿ ನಡೆಯುತ್ತವೆ. ಬದುಕು ಎಲ್ಲವನ್ನೂ ಕಲಿಸುತ್ತೆ, ನಾವು ಕಲಿಯಲ್ಲ ಅಂದ್ರೆ ಸರಿಯಾದ ಸಮಯದಲ್ಲಿ ಆ ಪಾಠ ಕಲಿಸಿಬಿಡುತ್ತೆ. ಜೀವನಕ್ಕಿಂತ ದೊಡ್ಡ ಗುರು ಇಲ್ಲ ಎಂದು ಕಿವಿಮಾತು ಹೇಳಿದ್ದಾರೆ. ನಾವು ಚಿಕ್ಕವರಿದ್ದಾಗ ವಿಮಾನ ನೋಡಬೇಕು, ಅದರಲ್ಲಿ ಒಮ್ಮೆ ಕೂರಬೇಕು ಅನ್ನೋ ಆಸೆ ಇರಬೇಕು. ಅದನ್ನು ಬಿಟ್ಟು ವಿಮಾನದಲ್ಲಿ ಕುಳಿತ ತಕ್ಷಣ ವಿಮಾನವೇ ನನ್ನದು ಅಂದುಕೊಳ್ಳುವುದು ತಪ್ಪಾಗುತ್ತೆ' ಎಂದು ಪಾಠ ಹೇಳಿದ್ದಾರೆ.
'ಆಸೆ ಪಡೋದು ತಪ್ಪಲ್ಲ, ನಾವು ಎಷ್ಟು ಬೆಳೆಯುತ್ತೀವೋ ಅಷ್ಟು ಪ್ರಬುದ್ಧರಾಗಬೇಕು. ನಿನ್ನ ಮೇಲೆ ಪ್ರೀತಿ ಇರೋದಕ್ಕೆ ಈ ಮಾತು ಹೇಳ್ತಿದ್ದೀನಿ. ಫೋನಲ್ಲಿ ನಿನ್ನ ಬೈದಿದ್ದೆ, ಈಗ ಎಲ್ಲರ ಮುಂದೆ ಹೇಳ್ತಿದ್ದೀನಿ. ಮುಂದೆ ಈ ರೀತಿಯ ವಿಚಾರಗಳು ನಡೆಯಲ್ಲ ಎಂಬ ಭರವಸೆ ಕೊಡ್ತೀಯ ಅಂತ ನಂಬಿದ್ದೀನಿ. ಒಳ್ಳೆಯದಾಗಲಿ ಮಗಾ' ಎಂದಿದ್ದಾರೆ.
'ಒಳ್ಳೆಯ ಗುರಿ ಮುಂದೆ ಇದ್ದಾಗ ಈಗಿನ ಸಾಧನೆಗಿಂತ ಇನ್ನೂ ಸಾಧಿಸಬೇಕಿರೋದು ತುಂಬಾ ಇದೆ. ಕೈಲಾದಷ್ಟು ಒಳ್ಳೆಯ ವಿಷಯಗಳನ್ನ ಮಾತ್ರ ಹಂಚಬೇಕು. ಇತ್ತೀಚಿನ ಘಟನೆಯಿಂದ ನಿನ್ನ ಹೆಸರು ಎಲ್ಲರಿಗೂ ಗೊತ್ತಾಯ್ತು ಅನ್ನೋದು ಬೇರೆಯವರಿಗೆ ಅನುಕರಣೆ ಆಗಬಾರದು. ಈ ತರ ಏನೋ ಒಂದು ಮಾಡಿ ಹೆಸರು ಮಾಡಬೇಕು, ಜನರಿಗೆ ತಲುಪಬೇಕು ಅನ್ನೋ ದಾರಿ ಪಾಲಿಸಬಾರದು. ಈಗ ಮನು ತನ್ನ ತಪ್ಪನ್ನ ತಿಳಿದುಕೊಂಡು ಪ್ರಾಯಶ್ಚಿತ ಮಾಡಿಕೊಂಡು ನಿಮ್ಮ ಮುಂದೆ ಬಂದಿದ್ದಾನೆ. ಮುಂದೆ ನಿಮ್ಮೆಲ್ಲರ ಹಾರೈಕೆ ಇರಲಿ' ಎಂದು ವಸಿಷ್ಠ ಹೇಳಿದ್ದಾರೆ.












Click it and Unblock the Notifications