ನಟ್ಟು ಬೋಲ್ಟು ಮುನಿಸು ಮರೆತು ಸುದೀಪ್ ಹುಟ್ಟುಹಬ್ಬಕ್ಕೆ ಶುಭಕೋರಿದ ಡಿ.ಕೆ.ಶಿವಕುಮಾರ್
ಸ್ಯಾಂಡಲ್ವುಡ್ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಕಿಚ್ಚನ ಬರ್ತ್ಡೇ ಹಿನ್ನೆಲೆ ಇಂದು ಎಲ್ಲೆಡೆ ಸಂಭ್ರಮ ಮನೆ ಮಾಡಿದೆ. ಇತ್ತೀಚೆಗೆ ಕನ್ನಡ ಚಿತ್ರರಂಗದ ನಟ್ಟು ಬೋಲ್ಟ್ ಟೈಟ್ ಮಾಡುವ ಹೇಳಿಕೆ ವಿಚಾರವಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ನಟ ಕಿಚ್ಚ ಸುದೀಪ್ ನಡುವೆ ಮಾತಿನ ಸಮರ ನಡೆದಿತ್ತು. ಡಿಕೆಶಿ ಹೇಳಿಕೆಗೆ ಖಡಕ್ ತಿರುಗೇಟು ನೀಡಿದ್ದ ಕಿಚ್ಚ ಎಲ್ಲರ ನಟ್ಟು ಬೋಲ್ಟ್ ಟೈಟ್ ಇದೆ ಎಂದಿದ್ರು. ಇದೇ ವಿಚಾರಕ್ಕೆ ಇಬ್ಬರ ನಡುವೆ ಮುನಿಸಿಗೆ ಕಾರಣವಾಗಿತ್ತು. ಇಂದು ಮುನಿಸು ಮರೆತಿ ಡಿ.ಕೆ.ಶಿವಕುಮಾರ್ ಕಿಚ್ಚನ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ.
ಚಲನಚಿತ್ರೋತ್ಸವದ ಉದ್ಘಾಟನಾ ಕಾರ್ಯಕ್ರಮಕ್ಕೆ ಚಿತ್ರರಂಗದವರು ಬರಲಿಲ್ಲ ಎಂಬ ವಿಚಾರವಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗರಂ ಆಗಿದ್ದರು. ವೇದಿಕೆಯಲ್ಲೇ ಮಾತನಾಡಿದ್ದ ಅವರು, ಇದನ್ನು ವಾರ್ನಿಂಗ್ ಅಂತಾದ್ರೂ ತಿಳ್ಕೊಳ್ಳಿ, ಚಿತ್ರರಂಗದವರ ನಟ್ಟು ಬೋಲ್ಟ್ ಟೈಟ್ ಮಾಡೋದು ಗೊತ್ತಿದೆ ಎಂದು ಹೇಳಿದ್ದರು. ಈ ಹೇಳಿಕೆಗೆ ಸಿನಿಮಾರಂಗದ ಹಲವರಿಂದ ಖಂಡನೆಯೂ ವ್ಯಕ್ತವಾಗಿತ್ತು. ಇದಾದ ಕೆಲ ತಿಂಗಳ ನಂತರ ಕಿಚ್ಚ ಸುದೀಪ್ ಅವರು ಸಂದರ್ಶನವೊಂದರಲ್ಲಿ ಈ ವಿಚಾರದ ಬಗ್ಗೆ ಪ್ರಸ್ತಾಪಿಸಿದ್ದರು. ಅಲ್ಲದೆ ಎಲ್ಲರ ನಟ್ಟು ಬೋಲ್ಟ್ ಸರಿಯಾಗಿಯೇ ಇದೆ ಎಂದು ಡಿಕೆ ಶಿವಕುಮಾರ್ ಅವರ ಸ್ಟೈಲಲ್ಲೇ ಕೌಂಟರ್ ಕೊಟ್ಟಿದ್ದರು.

ಚಿತ್ರರಂಗದ ವಿಚಾರ ಚಿತ್ರರಂಗದವರಿಗೆ ಮಾತ್ರವೇ ಗೊತ್ತು. ಡಿಕೆ ಶಿವಕುಮಾರ್ ಅವರು ಆ ಹೇಳಿಕೆ ನೀಡುವ ಮುನ್ನ ಕೆಲವು ಸತ್ಯ ಅರ್ಥ ಮಾಡಿಕೊಳ್ಳಬೇಕಿತ್ತು. ವಿಚಾರ ತಿಳಿದು ಮಾತನಾಡಿದ್ದರೆ ಅವರ ಮೇಲಿನ ಗೌರವ ಹೆಚ್ಚಾಗುತ್ತಿತ್ತು. ಚಿತ್ರರಂಗದವರಿಗೆ ಮನಸ್ಸಿಗೆ ನೋವಾಗುತ್ತಿರಲಿಲ್ಲ. ಚಿತ್ರರಂಗದಲ್ಲಿ ನಾವು ಯಾರೂ ಮೈ ಮಾರಿಕೊಂಡು ಬದುಕುತ್ತಿಲ್ಲ. ಅಂತಹ ಪದಗಳನ್ನು ಬಳಸಬೇಕಾದ್ರೆ ಸತ್ಯ ಅರ್ಥ ಮಾಡಿಕೊಳ್ಳಬೇಕು. ನಾವು ಅವರಿಗೆ ಎಷ್ಟು ಗೌರವ ಕೊಡುತ್ತೇವೋ ಅಷ್ಟೇ ಗೌರವ ನಮಗೂ ಕೊಡಿ. ಅವರ ಮೇಲಿನ ಗೌರವದಿಂದ ನಾವು ಪ್ರತಿಕ್ರಿಯೆ ಕೊಡಲಿಲ್ಲ. ಈ ಹೇಳಿಕೆಯಿಂದ ನೋವಾಗಿದ್ದು ನಿಜ ಎಂದು ಸುದೀಪ್ ಖಂಡಿಸಿದ್ದರು.
ನಟ ಸುದೀಪ್ ಹೇಳಿಕೆ ವಿಚಾರವಾಗಿ ಮತ್ತೆ ಪ್ರತಿಕ್ರಿಯಿಸಿದ್ದ ಡಿಸಿಎಂ ಡಿಕೆ ಶಿವಕುಮಾರ್, ನಾನು ಯಾರಿಗೂ ಉತ್ತರ ಕೊಡೋಕೆ ಹೋಗಲ್ಲ, ನಾನೇನೂ ಅದರ ಬಗ್ಗೆ ಮಾತನಾಡುವುದು ಬೇಕಿಲ್ಲ. ಫಿಲಂ ಚೇಂಬರ್ಗೆ ಹೋಗಿ ನಿಮ್ಮ ದಾಖಲೆ ಹಾಗೂ ನಿಮ್ಮ ಹಿಸ್ಟರಿ ತೆಗೆದುಕೊಂಡು ಬನ್ನಿ. ಇದಕ್ಕೆಲ್ಲ ಕಾಲವೇ ಉತ್ತರ ಕೊಡುತ್ತೆ ಎಂದು ಗರಂ ಆಗಿ ಹೇಳಿದ್ದರು. ನಟ್ಟು ಬೋಲ್ಟ್ ವಿಚಾರ ಇಬ್ಬರ ನಡುವೆ ಮುನಿಸಿಗೆ ಕಾರಣವಾಗಿತ್ತು ಎಂಬ ಮಾತು ಕೇಳಿಬಂದಿತ್ತು. ಆದರೆ ನಿನ್ನೆ ಇದೇ ವಿಚಾರವಾಗಿ ಮಾತನಾಡಿದ ಕಿಚ್ಚ ಸುದೀಪ್ ಅವರು ನಟ್ಟು ಬೋಲ್ಟ್ ವಿಚಾರದಲ್ಲಿ ಡಿಕೆ ಸಾಹೇಬ್ರ ತಪ್ಪೇನಿಲ್ಲ, ಇದಕ್ಕೆಲ್ಲ ಕಾರಣ ಸಾಧುಕೋಕಿಲ ಎಂದು ಗೊಂದಲಗಳಿಗೆ ತೆರೆ ಎಳೆದಿದ್ರು. ಈ ಹಿನ್ನೆಲೆ ಇಂದು ಡಿಕೆ ಶಿವಕುಮಾರ್ ಅವರ ಸುದೀಪ್ ಹುಟ್ಟುಹಬ್ಬಕ್ಕೆ ಪೋಸ್ಟ್ ಮೂಲಕ ಶುಭಕೋರಿದ್ದಾರೆ.

ಕನ್ನಡ ಚಿತ್ರರಂಗದ ಮಾಣಿಕ್ಯ, ಅಭಿನಯ ಚಕ್ರವರ್ತಿ, ನಟ ಸುದೀಪ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ದೇವರು ನಿಮಗೆ ಉತ್ತಮ ಆಯುರಾರೋಗ್ಯ ನೀಡಿ ಕಾಪಾಡಲಿ. ಕನ್ನಡ ಚಿತ್ರರಂಗಕ್ಕೆ ಮತ್ತಷ್ಟು ಸೇವೆ ಸಲ್ಲಿಸುವಂತಾಗಲಿ ಎಂದು ಶುಭ ಹಾರೈಸುತ್ತೇನೆ ಎಂದು ಸುದೀಪ್ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ.












Click it and Unblock the Notifications