ದರ್ಶನ್ನ 2 ತಿಂಗಳು ಚಚ್ತಾ ಇದ್ರು, ಭೂಮಿಗೆ ಹಾಕೋವರೆಗೂ ಬಿಡಲಿಲ್ಲ: ಡಿಕೆ ಶಿವಕುಮಾರ್ ಹೇಳಿದ್ದೇನು?
ನಟ ದರ್ಶನ್ ತೂಗುದೀಪ ಅವರು ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲು ಸೇರಿದ್ದು ಗೊತ್ತೇ ಇದೆ. ಈ ಕೇಸ್ನಲ್ಲಿ ದರ್ಶನ್ ಅರೆಸ್ಟ್ ಆದಾಗಲೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ತಮ್ಮ ಹೇಳಿಕೆಗಳ ಮೂಲಕ ಗಮನ ಸೆಳೆದಿದ್ದರು. ಈ ಕೇಸ್ನಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ನೇರವಾಗಿ ಹೇಳಿದ್ದರು. ಇದು ಪೊಲೀಸ್ ವಿಚಾರ, ನಾನು ಇದರಲ್ಲಿ ತಲೆ ಹಾಕಲ್ಲ ಎಂದಿದ್ದರು. ಇದೀಗ ದರ್ಶನ್ ಅವರ ಪ್ರಕರಣದ ಬಗ್ಗೆ ಮತ್ತೆ ಮಾತನಾಡಿರುವ ಡಿಕೆ ಶಿವಕುಮಾರ್, ದರ್ಶನ್ನ ಸುಮಾರು 15 ದಿನಗಳ ಕಾಲ ಚಚ್ತಾನೇ ಇದ್ರು ಎಂದು ಹೇಳಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ಹೌದು, ಇತ್ತೀಚೆಗೆ ರಿಪಬ್ಲಿಕ್ ಕನ್ನಡ ಸುದ್ದಿವಾಹಿನಿ ಆಯೋಜಿಸಿದ್ದ ಸಂವಾದದಲ್ಲಿ ಡಿಕೆ ಶಿವಕುಮಾರ್ ಅವರು ನಟ ದರ್ಶನ್ ಅವರ ಬಗ್ಗೆ ಈ ಹೇಳಿಕೆ ನೀಡಿದ್ದಾರೆ. ಕೊಲೆ ಕೇಸ್ನಲ್ಲಿ ದರ್ಶನ್ ಅರೆಸ್ಟ್ ಆದಾಗ ನಡೆದ ಬೆಳವಣಿಗೆಗಳ ಬಗ್ಗೆ ಡಿಕೆಶಿ ವೇದಿಕೆಯಲ್ಲಿ ಪ್ರಸ್ತಾಪಿಸಿದ್ದಾರೆ. ಮುಖ್ಯವಾಗಿ ಮಾಧ್ಯಮಗಳಲ್ಲಿ ದರ್ಶನ್ ಕುರಿತಾದ ಸುದ್ದಿ ಪ್ರಸಾರದ ವಿಚಾರವಾಗಿಯೂ ಅವರು ಮಾತನಾಡಿದ್ದಾರೆ.

'ಪತ್ರಿಕೋದ್ಯಮ ಅಂದ್ರೆ ಸಮಾಜವನ್ನ ತಿದ್ದುವ ಕೆಲಸ ಮಾಡಬೇಕು. ನಿಮ್ಮಲ್ಲೂ ಸಮಸ್ಯೆಗಳಿರಬಹುದು, ಟಿವಿ ಚಾನಲ್ಗಳೂ ನಡೆಯಬೇಕು, ಅದಕ್ಕಾಗಿ ಮಾಧ್ಯಮದವರು ಕೂಡ ಏನೇನೋ ಮಾಡ್ತೀರಿ. ಇನ್ನು ನಟ ದರ್ಶನ್ ವಿಚಾರವನ್ನು ತೆಗೆದುಕೊಂಡರೆ ಮಾಧ್ಯಮಗಳು ಏನು ಒಂದು 15 ದಿನ, ಎರಡು ತಿಂಗಳು ಚಚ್ತಾ ಇದ್ರು ಅವನನ್ನ, ಕೊನೆಗೆ ಅವನನ್ನ ಭೂಮಿಗೆ ಹಾಕೋವರೆಗೂ ಬಿಡಲಿಲ್ಲ' ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
'ನಾನು ಏನಯ್ಯಾ ಬೆಳಿಗ್ಗೆ ಸಾಯಂಕಾಲ ಇದನ್ನೇ ತೋರಿಸ್ತೀರ ಅಂತ ಕೇಳಿದ್ದಕ್ಕೆ ಅದನ್ನ ಹಾಕಲಿಲ್ಲ ಅಂದ್ರೆ ನಮ್ಮ ಟಿವಿ ಓಡೋದಿಲ್ಲ ಅಂತಾರೆ, ಕ್ರೈಂ ಸ್ಟೋರಿ ಅವನದ್ದು (ದರ್ಶನ್) ತೋರಿಸಲಿಲ್ಲ ಅಂದ್ರೆ ಟಿವಿನೇ ನಡೆಯಲ್ಲ ಸರ್ ಅಂದ್ರು. ಹಾಗಾಗಿ ಏನೂ ಮಾಡೋಕೆ ಆಗಲ್ಲ, ನಿಮ್ಮದೂ ಕೂಡ ಬಹಳ ಕಷ್ಟ ಇದೆ' ಎಂದು ಡಿಸಿಎಂ ಹೇಳಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ದರ್ಶನ್ ಕೇಸ್ನಲ್ಲಿ ಮೊದಲಿಗೆ ಕೆಲವು ಪ್ರಭಾವಿ ವ್ಯಕ್ತಿಗಳು ರಾಜಕಾರಣಿಗಳು ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇದನ್ನು ತಳ್ಳಿಹಾಕಿದ್ದ ಡಿಕೆ ಶಿವಕುಮಾರ್ ಅವರು ನಮಗೆ ಯಾರ ಒತ್ತಡವೂ ಇಲ್ಲ, ನಮ್ಮ ಗೃಹ ಸಚಿವರಾಗಲಿ ಅಥವಾ ಬೇರೆಯವರಾಗಲಿ ತನಿಖೆ ವಿಚಾರದಲ್ಲಿ ಮಧ್ಯಪ್ರವೇಶಿಸುವುದಿಲ್ಲ. ನಾವು ಯಾರಿಗೂ ಶಿಫಾರಸು ಮಾಡಲ್ಲ, ನಮಗೆ ಏನೂ ತಿಳಿದಿಲ್ಲ ಎಂದಿದ್ದರು.
ನಾನೂ ಜೈಲಿಗೆ ಹೋಗಿದ್ದೆ
'ರಾಜಕಾರಣಿಯಾಗಿ ನನ್ನನ್ನೂ ಜೈಲಿಗೆ ಕಳಿಸಿದ್ರು. ಬಿಜೆಪಿ ಸರ್ಕಾರ ನನ್ನ ಮೇಲೆ ಇಡಿ ಕೇಸ್ ಹಾಕಿ ಜೈಲಿಗೆ ಕಳಿಸಿತ್ತು. ಹಾಗಾಗಿ ತಿಹಾರ್ ಜೈಲು ನೋಡಿದೆ. ಅಲ್ಲಿಂದ ಹೊರಗೆ ರಿಲೀಸ್ ಆಗಿ ಬಂದ ಮೇಲೆ ಲಕ್ಷಾಂತರ ಜನ ಬಂದು ನನ್ನನ್ನ ಸ್ವಾಗತಿಸಿದರು. ಸಮಸ್ಯೆ ಎದುರಾಗಿದ್ದು ನನಗೆ, ನೋವು ಅನುಭವಿಸಿದ್ದು ನಾನು. ಜನ ಪ್ರಾರ್ಥನೆ ಮಾಡಿದ್ರು, ಕಣ್ಣೀರು ಹಾಕಿದ್ರು, ನನ್ನ ನೋಡೋಕೆ ದೆಹಲಿವರೆಗೆ ಬಂದಿದ್ರು. ಕೋರ್ಟ್ನಲ್ಲೂ ಜನ ಸೇರಿದ್ರು. ಅಂತಿಮವಾಗಿ ನ್ಯಾಯಾಲಯವೇ ನನ್ನನ್ನು ಕಾಪಾಡಿತು' ಎಂದು ಡಿಕೆ ಶಿವಕುಮಾರ್ ನೆನೆದಿದ್ದಾರೆ.












Click it and Unblock the Notifications