ನಟ ಧ್ರುವ ಸರ್ಜಾ ಕಡೆಯಿಂದ ನನಗೆ ಟಾರ್ಚರ್: ಅಸಲಿ ವಿಚಾರ ತಿಳಿಸಿದ ನಿರ್ದೇಶಕ
ನಟ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಸಿನಿಮಾ ಒಪ್ಪಿಕೊಂಡು ಮೂರು ಕೋಟಿ ಹಣ ಪಡೆದಿದ್ದರು. ಬಳಿಕ ಹಣ ವಾಪಸ್ ಕೊಡದೆ, ಸಿನಿಮಾ ಮಾಡದೆ ವಂಚಿಸಿದ್ದಾರೆ ಎಂದು ನಿರ್ದೇಶಕ ರಾಘವೇಂದ್ರ ಹೆಗಡೆ ಗಂಭೀರ ಆರೋಪ ಮಾಡಿದ್ದರು. ಈ ಸಂಬಂಧ ಮುಂಬೈನಲ್ಲಿ ಧ್ರುವ ವಿರುದ್ಧ ದೂರು ಕೂಡ ದಾಖಲಾಗಿತ್ತು. ಬಳಿಕ ಸ್ಪಷ್ಟನೆ ನೀಡಿದ್ದ ಧ್ರುವ ಅವರ ಆಪ್ತ ಬಳಗವು ನಿರ್ದೇಶಕರ ಆರೋಪ ಸುಳ್ಳು, ಅವರು ಬೇರೆ ಭಾಷೆಯಲ್ಲಿ ಸಿನಿಮಾ ಮಾಡಲು ಕೇಳಿದ್ದರು. ಇದಕ್ಕೆ ಧ್ರುವ ಒಪ್ಪಲಿಲ್ಲ. ಅವರ ಆರೋಪಕ್ಕೆ ಕಾನೂನಿನ ಮೂಲಕವೇ ಉತ್ತರ ಕೊಡುವುದಾಗಿ ಹೇಳಿದ್ದರು. ಇದಕ್ಕೆ ನಿರ್ದೇಶಕ ರಾಘವೇಂದ್ರ ಹೆಗಡೆ ಅವರು ಮತ್ತೆ ತಿರುಗೇಟು ನೀಡಿದ್ದಾರೆ. ಧ್ರುವ ಅವರಿಂದ ಟಾರ್ಚರ್ ಆಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ವಿಡಿಯೋ ಮೂಲಕ ಸ್ಪಷ್ಟನೆ ನೀಡಿರುವ ನಿರ್ದೇಶಕ ರಾಘವೇಂದ್ರ ಹೆಗಡೆ, ಧ್ರುವ ಸರ್ಜಾ ಹಣ ವಂಚನೆ ನಡೆಸಿದ್ದಾರೆ ಎಂಬ ಆರೋಪದೊಂದಿಗೆ ಮುಂಬೈನಲ್ಲಿ ದೂರು ದಾಖಲಿಸಿದ ಬಳಿಕ ನನ್ನನ್ನು "ಕನ್ನಡ ವಿರೋಧಿ" ಎಂದು ಕೆಲವರು ಬಿಂಬಿಸುತ್ತಿದ್ದಾರೆ. ನಾನು ಹುಟ್ಟಿದ್ದು ಕರ್ನಾಟಕ ಕರಾವಳಿಯಲ್ಲಿ. ವೈಯಕ್ತಿಕ ಜೀವನಕ್ಕಾಗಿ ಮುಂಬೈಗೆ ಬಂದೆ. ಅಲ್ಲಿ ಆಟೋ ಚಾಲಕ, ವೇಟರ್, ಹೋಟೆಲ್ ಮಾಲೀಕ, ಚಿತ್ರರಂಗದ ಸಹ-ಸಂಕಲನಕಾರ, ನಿರ್ದೇಶಕನಾಗಿ ಕೊನೆಗೆ ಮಾಲೀಕನಾಗಿ ಬೆಳೆದೆ. ಬಳಿಕ ನಿರ್ಮಾಪಕ ಹಾಗೂ ನಿರ್ದೇಶಕನಾಗಬೇಕೆಂಬ ಆಸೆಯಿಂದ ಮೊದಲಿಗೆ ನನ್ನ ತಾಯ್ನಾಡು ಕನ್ನಡ ಚಿತ್ರ ಮಾಡಲು ನಿರ್ಧರಿಸಿದೆ ಎಂದಿದ್ದಾರೆ.

'ಮೊದಲಿಗೆ ದರ್ಶನ್ ಅವರ ಜೊತೆ 'ಜಗ್ಗುದಾದಾ' ಸಿನಿಮಾ ನಿರ್ದೇಶಿಸಿದೆ. ಅದು ಸೂಪರ್ ಹಿಟ್ ಆಯ್ತು, ನಂತರ 'ಶನಿ' ಹಾಗೂ 'ಮಹಾಕಾಳಿ' ಸೀರಿಯಲ್ಗಳನ್ನೂ ಮಾಡಿದೆ. ಎರಡನೇ ಸಿನಿಮಾ ಮಾಡಲು ನಟ ಧ್ರುವ ಸರ್ಜಾಗೆ ಹಣ ನೀಡಿದ್ದೆ. ಅವರೊಂದಿಗೆ ಹಲವು ಹಣಕಾಸಿನ ಮಾತುಕತೆಗಳು ನಡೆದವು. ಧ್ರುವ ಅವರು ಮೊದಲು "ಕೆಡಿ" ಸಿನಿಮಾ ಮುಗಿಸಬೇಕೆಂದು ಹೇಳಿದರು. ಅದಕ್ಕೆ ನಾನು ಒಪ್ಪಿಕೊಂಡೆ. ಆದರೆ ಹೀಗೆ 8 ವರ್ಷ ಕಳೆಯಿತು' ಎಂದಿದ್ದಾರೆ.
'ಈ ಮಧ್ಯೆ ತಮಿಳಿನ 'ಅಮರನ್' ಸಿನಿಮಾ ರಿಲೀಸ್ ಆಯ್ತು, ಆ ಕಥೆಗೂ ನಮ್ಮ ಕಥೆಗೂ ಸಾಕಷ್ಟು ಸಾಮ್ಯತೆ ಇತ್ತು. ಹೀಗಾಗಿ ಆ ಕಥೆಯನ್ನು ರದ್ದುಗೊಳಿಸೋಣ ಎಂದೆ. ಬಳಿಕ ಧ್ರುವ ಸರ್ಜಾ ಅವರು ಕನ್ನಡದಲ್ಲೇ ಸಿನಿಮಾ ಮಾಡುವುದಾಗಿ ಹೇಳಿದರು. ಧ್ರುವ ಹಾಗೂ ಅರ್ಜುನ್ ಸರ್ಜಾ ಬಂದು ಯಾವ ರೀತಿಯ ಸಿನಿಮಾ ಮಾಡ್ತೀರಾ?' ಎಂದು ಕೇಳಿದರು. ನಾನು 'ಕನ್ನಡ ಸಿನಿಮಾವನ್ನೇ ಮಾಡ್ತೀನಿ, ಪ್ಯಾನ್ ಇಂಡಿಯಾ ಬೇಡ, ಅದು ಹೆಚ್ಚು ಖರ್ಚು ಎಂದು ಸ್ಪಷ್ಟವಾಗಿ ಹೇಳಿದ್ದೆ' ಎಂದು ವಿವರಿಸಿದ್ದಾರೆ.

'ಧ್ರುವ ಅವರ ಮಾರ್ಟಿನ್ ಮತ್ತು ಕೆಡಿ ಎರಡೂ ಪ್ಯಾನ್ ಇಂಡಿಯಾ ಸಿನಿಮಾಗಳು. ಈಗ ನಾನು ಮುಂಬೈ ನಿರ್ಮಾಪಕರಿಗೆ ಡೇಟ್ ಕೊಟ್ಟಿದ್ದೇನೆ. ನಂತರ ನನ್ನ ಸಿನಿಮಾ ಮಾಡೋಣ ಎಂದು ಧ್ರುವ ಹೇಳಿದ್ರು. ಈಗಾಗಲೇ 8 ವರ್ಷ ಕಳೆದಿವೆ, ಮತ್ತೊಂದು ಸಿನಿಮಾ ಎಂದರೆ ಇನ್ನೂ 4 ವರ್ಷ ಸೇರಿ ಒಟ್ಟು 12 ವರ್ಷ ವ್ಯರ್ಥವಾಗುತ್ತೆ. ಬೇರೆ ಸಂಸ್ಥೆಯವರು ನಮ್ಮ ಸಿನಿಮಾ ಮುಗಿಯುವವರೆಗೆ ಹೊಸ ಸಿನಿಮಾ ಮಾಡಬಾರದು ಎಂದು ನನಗೆ ನೋಟಿಸ್ ಕಳಿಸಿದ್ರು. ಹಲವು ವರ್ಷಗಳು ಕಾಯಲು ಆಗಲ್ಲ ಅಂತ ನಾನು ಧ್ರುವ ಸರ್ಜಾಗೆ ಕೋರ್ಟ್ ನೋಟಿಸ್ ಕಳಿಸಿದ್ದೆ. ನಮ್ಮ ಒಪ್ಪಂದದಲ್ಲಿ ಏನಿತ್ತೊ ಅಷ್ಟೇ ಕೇಳುತ್ತಿದ್ದೇನೆ. ನನ್ನ ಹಣವನ್ನು ವಾಪಸ್ ಕೊಡಿ ಎಂದಿದ್ದೇನೆ'.
'ನಾನು ಕನ್ನಡದಲ್ಲೇ ಸಿನಿಮಾ ಎಂದಿದ್ದೆ'
'ಆದರೆ ನನ್ನನ್ನು 'ಕನ್ನಡ ವಿರೋಧಿ' ಎಂದು ಬಿಂಬಿಸುತ್ತಿದ್ದಾರೆ. ನಾನು ತೆಲುಗು ಅಥವಾ ತಮಿಳು ಸಿನಿಮಾ ಮಾಡಬೇಕೆಂದಿದ್ದರೆ, ಕನ್ನಡ ನಟನನ್ನು ಏಕೆ ಆಯ್ಕೆ ಮಾಡುತ್ತೇನೆ? ಆ ಭಾಷೆಗಳಲ್ಲಿ ಹೀರೋಗಳು ಇರಲಿಲ್ಲವೇ? ನಮ್ಮ ಒಪ್ಪಂದದಲ್ಲಿ ಎಲ್ಲವೂ ಸ್ಪಷ್ಟವಾಗಿತ್ತು. ಕನ್ನಡದಲ್ಲೇ ಸಿನಿಮಾ ಫಿಕ್ಸ್ ಆಗಿತ್ತು. ತಮಿಳು ಅಥವಾ ತೆಲುಗು ಎಂದು ಇರಲಿಲ್ಲ. ನನ್ನ ತಾಯಿನಾಡಿನ ಆಶೀರ್ವಾದ ನನ್ನ ಜೊತೆ ಇದೆ. ಧ್ರುವ ಅವರ ಹೇಳಿಕೆ ಸುಳ್ಳು. ಜಗ್ಗುದಾದಾ ನಂತರ ನಾನು ಸಿನಿಮಾ ಮಾಡಿಲ್ಲ. ಈಗ 8 ವರ್ಷಗಳಲ್ಲಿ ಸಿನಿಮಾ ಮಾಡದಂತೆ ನನ್ನನ್ನು ತಡೆದು, ಧ್ರುವ ಸರ್ಜಾ ಮೆಂಟಲ್ ಟಾರ್ಚರ್ ನೀಡಿದ್ದಾರೆ. ಅವರು ಆಗಲೇ ಡೇಟ್ ಕೊಟ್ಟಿದ್ದರೆ ಈಗ ಕಷ್ಟವಾಗುತ್ತಿರಲಿಲ್ಲ' ಎಂದು ರಾಘವೇಂದ್ರ ಹೆಗಡೆ ಹೇಳಿದ್ದಾರೆ.












Click it and Unblock the Notifications