Dawood Ibrahim: ಧುರಂಧರ್ ಸಿನಿಮಾಗೆ ಬೆದರಿದ ಡಿ-ಕಂಪನಿ: ದಾವೂದ್ ಇಬ್ರಾಹಿಂ ಬದುಕಿದ್ದಾನೆ ಎಂದು ತೋರಿಸಲು ದೊಡ್ಡ ಸಂಚು
ಇತ್ತೀಚೆಗಷ್ಟೇ ತೆರೆಕಂಡು ಭರ್ಜರಿ ಪ್ರದರ್ಶನ ಕಾಣುತ್ತಿರುವ ನಟ ರಣವೀರ್ ಸಿಂಗ್ ನಟನೆಯ ಬಾಲಿವುಡ್ನ ಸ್ಪೈ ಥ್ರಿಲ್ಲರ್ ಸಿನಿಮಾ 'ಧುರಂಧರ್-2' ಈಗ ಭೂಗತ ಲೋಕದಲ್ಲಿ ಭಾರಿ ತಲ್ಲಣ ಸೃಷ್ಟಿಸಿದೆ. ಪಾಕಿಸ್ತಾನದಲ್ಲಿ ಆಶ್ರಯ ಪಡೆದಿರುವ ಮೋಸ್ಟ್ ವಾಂಟೆಡ್ ಭಯೋತ್ಪಾದಕ ದಾವೂದ್ ಇಬ್ರಾಹಿಂ ನೇತೃತ್ವದ 'ಡಿ-ಕಂಪನಿ' (D-Company), ಈ ಚಿತ್ರದ ಯಶಸ್ಸಿನ ಬೆನ್ನಲ್ಲೇ ಮುಂಬೈನಲ್ಲಿ ತನ್ನ ಸ್ಲೀಪರ್ ಸೆಲ್ಗಳನ್ನು ಮತ್ತು ಭೂಗತ ಜಾಲವನ್ನು ದಿಢೀರ್ ಸಕ್ರಿಯಗೊಳಿಸಿದೆ ಎಂದು ತನಿಖಾ ಸಂಸ್ಥೆಗಳ ಮೂಲಗಳು ಬಹಿರಂಗಪಡಿಸಿವೆ.
ದಾವೂದ್ ಬದುಕಿದ್ದಾನೆ ಎಂದು ತೋರಿಸಲು ಯತ್ನ
ಎರಡು ಭಾಗಗಳ ಈ ಬ್ಲಾಕ್ಬಸ್ಟರ್ ಚಿತ್ರದಲ್ಲಿ ಭೂಗತ ಲೋಕದ ಸತ್ಯವನ್ನು ಬಿಚ್ಚಿಟ್ಟಿರುವುದೇ ಡಿ-ಕಂಪನಿಯ ಹತಾಶೆಗೆ ಮುಖ್ಯ ಕಾರಣ ಎನ್ನಲಾಗಿದೆ. 'ಧುರಂಧರ್' ಚಿತ್ರದಲ್ಲಿ 'ಬಡೇ ಸಾಹೇಬ್' ಎಂಬ ಪಾತ್ರವೊಂದನ್ನು ಸೃಷ್ಟಿಸಲಾಗಿದ್ದು, ಆ ಪಾತ್ರದಲ್ಲಿರುವ ವ್ಯಕ್ತಿಯನ್ನು ಹಾಸಿಗೆ ಹಿಡಿರುವಂತೆ ತೋರಿಸಲಾಗಿದೆ. ಈ ಪಾತ್ರದ ಮುಖಲಕ್ಷಣಗಳು ಮತ್ತು ಶೈಲಿಯು ದಾವೂದ್ ಇಬ್ರಾಹಿಂಗೆ ಹೋಲುತ್ತವೆ. ಭೂಗತ ಲೋಕದಲ್ಲಿ ದಾವೂದ್ ಸಾಮ್ರಾಜ್ಯ ಮುಳುಗುತ್ತಿದೆ ಮತ್ತು ಆತ ಸತ್ತಿದ್ದಾನೆ ಎಂಬ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಈ ಸಿನಿಮಾ ಬಂದಿರುವುದು ಡಿ ಗ್ಯಾಂಗ್ಗೆ ಭಾರಿ ಹಿನ್ನಡೆ ತಂದಿದೆ.

ಹೀಗಾಗಿ, ದಾವೂದ್ ಇಬ್ರಾಹಿಂ ಇನ್ನೂ ಬದುಕಿದ್ದಾನೆ ಮತ್ತು ಸಕ್ರಿಯನಾಗಿದ್ದಾನೆ ಎಂಬುದನ್ನು ಸಾಬೀತುಪಡಿಸಲು ಡಿ-ಕಂಪನಿ ಈಗ ಮುಂಬೈನಲ್ಲಿ ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯಕ್ಕೆ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ. ಭೂಗತ ಜಾಲದಲ್ಲಿ ತನ್ನ ಕಳೆದುಹೋದ ವರ್ಚಸ್ಸನ್ನು ಮರಳಿ ಪಡೆಯಲು ದಾವೂದ್ ಗ್ಯಾಂಗ್ ಭಾರತದ ಪ್ರಭಾವಿ ವ್ಯಕ್ತಿಯೊಬ್ಬರನ್ನು ಗುರಿಯಾಗಿಸಲು ಅಥವಾ ದೊಡ್ಡ ದಾಳಿ ನಡೆಸಲು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ (ISI) ಜೊತೆ ಕೈಜೋಡಿಸಿದೆ. ಹೊಸ ಯುವಕರನ್ನು ಗ್ಯಾಂಗ್ಗೆ ಸೇರಿಸಿಕೊಳ್ಳುವ ಜವಾಬ್ದಾರಿಯನ್ನು 'ಛೋಟಾ ಶಕೀಲ್' ತಂಡಕ್ಕೆ ನೀಡಲಾಗಿದ್ದು, ಅವರಿಗೆ ಶಸ್ತ್ರಾಸ್ತ್ರ ಒದಗಿಸುವ ಹಾಗೂ ತರಬೇತಿ ನೀಡುವ ಹೊಣೆಯನ್ನು ಐಎಸ್ಐ ಹೊತ್ತುಕೊಂಡಿದೆ. ಈ ಇಡೀ ಕಾರ್ಯಾಚರಣೆಯನ್ನು ಕಾರ್ಯಗತಗೊಳಿಸುವ ಜವಾಬ್ದಾರಿಯನ್ನು ಕುಖ್ಯಾತ ಶೂಟರ್ ಮುನ್ನಾ ಜಿಂಗಾಡಾಗೆ ವಹಿಸಲಾಗಿದೆ ಎಂದು ವರದಿಯಾಗಿದೆ.
ಆಘಾತಕಾರಿ ವಿಷಯವೆಂದರೆ, ಈ ಕಾರ್ಯಾಚರಣೆಗಾಗಿ ಮುಂಬೈನ ಬೀದಿಗಳಿಂದ ಆಯ್ದುಕೊಂಡ ಯುವಕರಿಗೆ ಅಸಲಿ ಕಾರಣವನ್ನೇ ತಿಳಿಸಿಲ್ಲ. ಮುಂಬೈನ ಬಾಂದ್ರಾ ಗರೀಬ್ ನಗರದಲ್ಲಿದ್ದ ಅಕ್ರಮ ಮಸೀದಿಯೊಂದರ ಮೇಲಿನ ಬುಲ್ಡೋಜರ್ ಕಾರ್ಯಾಚರಣೆಯನ್ನು ಮುಂದಿಟ್ಟುಕೊಂಡು, ಯುವಕರನ್ನು ಭಾವನಾತ್ಮಕವಾಗಿ ಪ್ರಚೋದಿಸಿ ಈ ಭೀಕರ ಸಂಚಿಗೆ ಬಳಸಿಕೊಳ್ಳಲಾಗುತ್ತಿದೆ ಎನ್ನುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ದೆಹಲಿ ಪೊಲೀಸರಿಂದ ಶೋಧ
ಇತ್ತೀಚೆಗಷ್ಟೇ ದೆಹಲಿ ಪೊಲೀಸರು ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ಈ ಇಡೀ ಭಯೋತ್ಪಾದಕ ಸಂಚು ಬಯಲಾಗಿದೆ. ಪಾಕಿಸ್ತಾನದ ಐಎಸ್ಐ ಮತ್ತು ಮುಂಬೈ ಭೂಗತ ಲೋಕದ ನಡುವಿನ ಕೊಂಡಿಯನ್ನು ಕತ್ತರಿಸುವಲ್ಲಿ ಭಾರತೀಯ ಸುರಕ್ಷತಾ ಸಂಸ್ಥೆಗಳು ಯಶಸ್ವಿಯಾಗಿವೆ. ಸಕಾಲದಲ್ಲಿ ಪ್ರಮುಖ ಆರೋಪಿಗಳನ್ನು ಬಂಧಿಸುವ ಮೂಲಕ ದೇಶದ ಮೇಲೆ ಎದುರಾಗಿದ್ದ ಭಾರಿ ಗಂಡಾಂತರವನ್ನು ಭಾರತೀಯ ಏಜೆನ್ಸಿಗಳು ತಡೆದಿವೆ. ಧುರಂಧರ್ನಂತರ ಸಿನಿಮಾವೊಂದರ ಯಶಸ್ಸು ಭೂಗತ ಲೋಕವನ್ನು ಈ ಮಟ್ಟಿಗೆ ಬೆಚ್ಚಿಬೀಳಿಸಿರುವುದು ಮತ್ತು ಮುಂಬೈನಲ್ಲಿ ಮತ್ತೆ ಭಯೋತ್ಪಾದನೆಯ ನೆರಳು ಮೂಡಿಸುತ್ತಿರುವುದು ತನಿಖಾ ಸಂಸ್ಥೆಗಳನ್ನು ಎಚ್ಚೆತ್ತುಕೊಳ್ಳುವಂತೆ ಮಾಡಿದೆ.
ಬಾಲಿವುಡ್ನ ಇತ್ತೀಚಿನ ಸ್ಪೈ ಥ್ರಿಲ್ಲರ್ ಬ್ಲಾಕ್ಬಸ್ಟರ್ ಸಿನಿಮಾ 'ಧುರಂಧರ್' ನಲ್ಲಿ ಭೂಗತ ಲೋಕದ ದೊರೆ ದಾವೂದ್ ಇಬ್ರಾಹಿಂನನ್ನು ಹೋಲುವ ಪಾತ್ರವನ್ನು ಅತ್ಯಂತ ರೋಚಕವಾಗಿ ಮತ್ತು ರಹಸ್ಯವಾಗಿ ಚಿತ್ರಿಸಲಾಗಿದೆ. ಚಿತ್ರದಲ್ಲಿ ದಾವೂದ್ ಇಬ್ರಾಹಿಂ ಹೆಸರನ್ನು ನೇರವಾಗಿ ಬಳಸದಿದ್ದರೂ, ಅವನನ್ನೇ ಹೋಲುವ ಪಾತ್ರಕ್ಕೆ 'ಬಡೇ ಸಾಹೇಬ್' ಎಂದು ಹೆಸರಿಡಲಾಗಿದೆ. ನಟ ರಣವೀರ್ ಸಿಂಗ್ ಮುಖ್ಯ ಭೂಮಿಕೆಯಲ್ಲಿರುವ ಈ ಎರಡು ಭಾಗಗಳ ಸಿನಿಮಾದಲ್ಲಿ, ಈ ಪಾತ್ರವು ಇಡೀ ಕಥೆಗೆ ಒಂದು ಪ್ರಮುಖ ತಿರುವು ನೀಡುತ್ತದೆ.
'ಬಡೇ ಸಾಹೇಬ್' ಪಾತ್ರವನ್ನು ಆಸ್ಪತ್ರೆಯಲ್ಲಿ ಹಾಸಿಗೆ ಹಿಡಿದಿರುವಂತೆ ತೋರಿಸಿರುವುದು. ಆ ಪಾತ್ರದ ಹಾವಭಾವ, ಮಲಗಿರುವ ಶೈಲಿ ಮತ್ತು ಮುಖಲಕ್ಷಣಗಳು ಪ್ರೇಕ್ಷಕರಿಗೆ ತಕ್ಷಣವೇ ದಾವೂದ್ ಇಬ್ರಾಹಿಂನನ್ನು ನೆನಪಿಸುವಂತೆ ಅತ್ಯಂತ ನಿಖರವಾಗಿ ಮೂಡಿಬಂದಿವೆ. ಭೂಗತ ಲೋಕದಲ್ಲಿ ದಾವೂದ್ ಸಾಮ್ರಾಜ್ಯ ಮುಳುಗುತ್ತಿದೆ ಮತ್ತು ಆತನ ಆರೋಗ್ಯ ಕ್ಷೀಣಿಸುತ್ತಿದೆ ಎಂಬ ನೈಜ ಪ್ರಪಂಚದ ಚರ್ಚೆಗಳನ್ನು ಈ ದೃಶ್ಯ ಪ್ರತಿಫಲಿಸುವಂತಿದೆ. ಚಿತ್ರದಲ್ಲಿ ಬಡೇ ಸಾಹೇಬ್ ಪಾತ್ರದ ದುರ್ಬಲತೆಯನ್ನು ತೋರಿಸುವ ಮೂಲಕ, ಭಾರತೀಯ ರಹಸ್ಯ ಸಂಸ್ಥೆಗಳು ಭೂಗತ ಜಾಲ ಮತ್ತು ಪಾಕಿಸ್ತಾನದ ಐಎಸ್ಐ (ISI) ಮೈತ್ರಿಯನ್ನು ಹೇಗೆ ಬೇಧಿಸುತ್ತವೆ ಎಂಬುದನ್ನು ಸಿನಿಮಾ ಅತ್ಯಂತ ರೋಮಾಂಚಕಾರಿಯಾಗಿ ತೆರೆದಿಡುತ್ತದೆ.













Click it and Unblock the Notifications