Nayanthara: ಲೇಡಿ ಸೂಪರ್ ಸ್ಟಾರ್ ನಯನತಾರಾಗೆ ಭಾರೀ ಮುಖಭಂಗ!
Dhanush vs Nayanthara: ಲೇಡಿ ಸೂಪರ್ ಸ್ಟಾರ್ ಅಂತಲೇ ಖ್ಯಾತಿ ಗಳಿಸಿರುವ ನಯನತಾರಾ ಅವರಿಗೆ ಭಾರೀ ಮುಖಭಂಗವಾಗುವ ಪರಿಸ್ಥಿತಿಯೊಂದು ನಿರ್ಮಾಣವಾಗಿದೆ. ನಯನತಾರಾ ಅವರು ಈಚೆಗೆ ತಮಿಳಿನ ಪ್ರಸಿದ್ಧ ನಟ, ಗಾಯಕ ಹಾಗೂ ನಿರ್ಮಾಪಕ ಧನುಷ್ ಅವರ ವಿರುದ್ಧ ತಿರುಗಿ ಬಿದಿದ್ದರು.
ಧನುಷ್ ಅವರು ರಜನೀಕಾಂತ್ ಅವರ ಮಾಜಿ ಅಳಿಯ ಸಹ ಹೌದು. ಈಚೆಗೆ ಹಕ್ಕುಸ್ವಾಮ್ಯ (Copyright Case)ಕ್ಕೆ ಸಂಬಂಧಿಸಿದಂತೆ ಧನುಷ್ ಅವರು ನಯನತಾರಾ ಮೇಲೆ ದೂರು ದಾಖಲಿಸಿದ್ದರು. ಇದೀಗ ಈ ಪ್ರಕರಣದಲ್ಲಿ ನಯನತಾರಾ ಅವರಿಗೆ ಭಾರೀ ದೊಡ್ಡ ಹಿನ್ನಡೆ ಎದುರಾಗಿದೆ. ಧನುಷ್ಗೆ ನಯನತಾರಾ ಹಾಕಿದ್ದ ಸವಾಲು ತಿರುಗುಬಾಣವಾಗಿದೆ. ಅದೇನು ಎನ್ನುವ ವಿವರ ಇಲ್ಲಿದೆ.

ಧನುಷ್ ಅವರು ನಾನುಂ ರೌಡಿ ದಾನ್ (ನಾನೂ ರೌಡಿನೇ) ಎನ್ನುವ ತಮಿಳು ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಈ ಸಿನಿಮಾದ ನಟಿಯಾಗಿ ನಯನತಾರಾ ಅವರು ನಟಿಸಿದ್ದರು. ಇದೇ ಸಿನಿಮಾದ ನಿರ್ದೇಶನವನ್ನು ನಯನತಾರಾ ಅವರ ಪತಿ ವಿಘ್ನೇಶ್ ಶಿವನ್ ಅವರು ನಿರ್ದೇಶಿಸಿದ್ದರು.
ಇನ್ನು ನಯನತಾರಾ ಹಾಗೂ ವಿಘ್ನೇಶ್ ಅವರ ವಿವಾಹ ಡಾಕ್ಯುಮೆಂಟರಿಯನ್ನು ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಮಾಡಿದೆ. ಆದರೆ, ಈ ಸಿನಿಮಾದ / ಸಿನಿಮಾ ನಿರ್ಮಾಣದ ಸಮಯದ ಕೆಲವು ಸೀನ್ಗಳನ್ನು ಧನುಷ್ ಅವರ ಒಪ್ಪಿಗೆ ಪಡೆದುಕೊಳ್ಳದೆ ಡಾಕ್ಯುಮೆಂಟರಿಯಲ್ಲಿ ಬಳಸಿಕೊಳ್ಳಲಾಗಿದೆ ಎನ್ನುವ ಆರೋಪ ಕೇಳಿ ಬಂದಿತ್ತು.
ಈ ಸಂಬಂಧ ಧನುಷ್ ಕೋರ್ಟ್ ಮೊರೆ ಹೋಗಿದ್ದರು. ಹಕ್ಕುಸ್ವಾಮ್ಯ ಅರ್ಜಿಯನ್ನು ಸಹ ಸಲ್ಲಿಸಿದ್ದರು. ಈ ಡಾಕ್ಯುಮೆಂಟರಿ ಪ್ರಸಾರವನ್ನು ನೆಟ್ಫ್ಲಿಕ್ಸ್ ಇಂಡಿಯಾ ಮಾಡಿದ್ದು. ಧನುಷ್ ಅವರು ಸಲ್ಲಿಸಿರುವ ಅರ್ಜಿಯನ್ನು ರದ್ದು ಮಾಡಬೇಕು ಅಂತ ಮದ್ರಾಸ್ ಹೈಕೋರ್ಟ್ಗೆ ಮತ್ತೊಂದು ಅರ್ಜಿಯನ್ನು ಸಹ ಸಲ್ಲಿಸಲಾಗಿತ್ತು. ಇದನ್ನು ಮದ್ರಾಸ್ ಹೈಕೋರ್ಟ್ ತಳ್ಳಿ ಹಾಕಿದೆ. ಈ ಮೂಲಕ ನಯನತಾರಾಗೆ ಭಾರೀ ಹಿನ್ನಡೆಯಾಗಿದೆ.
ಧನುಷ್ ಆರೋಪವೇನು ?
ಡಾಕ್ಯುಮೆಂಟರಿಯಲ್ಲಿ ತಮ್ಮ ಸಿನಿಮಾದ ದೃಶ್ಯಗಳನ್ನು ಬಳಸಲಾಗಿದೆ ಎಂದು ಧನುಷ್ ಅವರು ಗರಂ ಆಗಿದ್ದರು. ನಯನತಾರಾ ಹಾಗೂ ವಿಘ್ನೇಶ್ ಶಿವನ್ ಸೇರಿದಂತೆ ಇದನ್ನು ನಿರ್ಮಾಣ ಮಾಡಿದ ರೌಡಿ ಪಿಕ್ಚರ್ಸ್ ಮೇಲೂ ಧನುಷ್ ಅವರು ಕೇಸ್ ದಾಖಲಿಸಿದ್ದರು. ಧನುಷ್ ಅವರು ನಿರ್ಮಾಣ ಮಾಡಿದ್ದ ನಾನುಂ ರೌಡಿ ದಾನ್ ಎನ್ನುವ ಸಿನಿಮಾದ 3 ಸೆಕೆಂಡ್ ದೃಶ್ಯಗಳನ್ನು ಅವರ ಅನುಮತಿ ಇಲ್ಲದೆ ನೆಟ್ಫ್ಲಿಕ್ಸ್ ಡಾಕ್ಯುಮೆಂಟರಿಯಲ್ಲಿ ಬಳಸಿಕೊಳ್ಳಲಾಗಿದೆ.
ನೆಟ್ಫ್ಲಿಕ್ಸ್ನಲ್ಲಿ ನಯನತಾರಾ: ಬಿಯಾಂಡ್ ದಿ ಫೇರಿಟೇಲ್ ಎನ್ನುವ ಡಾಕ್ಯುಮೆಂಟರಿ ರಿಲೀಸ್ ಆಗಿತ್ತು. ಇದರಲ್ಲಿ ಒಪ್ಪಿಗೆ ಇಲ್ಲದೆ ಕೆಲವು ನಿರ್ದಿಷ್ಟ ಸೀನ್ಗಳನ್ನು ಬಳಸಲಾಗಿದೆ. ಅದನ್ನು ಡಾಕ್ಯುಮೆಂಟರಿಯಿಂದ ತೆಗೆದು ಹಾಕದೆ ಇದ್ದರೆ. ಕಾನೂನಾತ್ಮಕ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದರು.
10 ಕೋಟಿ ಡಿಮ್ಯಾಂಡ್: ಈ ಡಾಕ್ಯುಮೆಂಟರಿಯಲ್ಲಿ ಸಿನಿಮಾದ ದೃಶ್ಯಗಳನ್ನು ಬಳಸಿಕೊಂಡಿದ್ದಕ್ಕಾಗಿ 10 ಕೋಟಿ ರೂಪಾಯಿ ಕೊಡುವಂತೆ ಧನುಷ್ ಅವರು ಆಗ್ರಹಿಸಿದ್ದರು. ಅಲ್ಲದೆ ನೋಟಿಸ್ ಸಹ ಜಾರಿ ಮಾಡಿದ್ದರು. ಇದೀಗ ಈ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
ಧನುಷ್ ಕೋಪಕ್ಕೆ ಕಾರಣವೇನು: ಇನ್ನು ಈ ಸಿನಿಮಾದ ದೃಶ್ಯಗಳನ್ನು ಬಳಸಿಕೊಂಡಿದ್ದಕ್ಕೆ ಮಾತ್ರ ಧನುಷ್ ಅವರು ಕೋಪ ಗೊಂಡಿರಲಿಲ್ಲ ಎನ್ನಲಾಗಿದೆ. ಈ ಸಿನಿಮಾದ ನಿರ್ದೇಶಕ ವಿಘ್ನೇಶ್ ಅವರು ಸಿನಿಮಾ ನಿರ್ಮಾಣದ ಸಮಯದಲ್ಲಿ ವಿಳಂಬ ಮಾಡಿದ್ದರು. ಇದರಿಂದ ಧನುಷ್ ಅವರ ಬಜೆಟ್ ಹೆಚ್ಚಳವಾಗಿತ್ತು ಎನ್ನುವ ಆರೋಪವೂ ಇದೆ. ಇನ್ನು ಇದೇ ಸಿನಿಮಾದ ಶೂಟಿಂಗ್ನಲ್ಲೇ ವಿಘ್ನೇಶ್ ಹಾಗೂ ನಯನತಾರಾ ಅವರ ನಡುವೆ ಪ್ರೇಮಾಂಕುರವಾಗಿತ್ತು.
ಇದೇ ಕಾರಣಕ್ಕೆ ಧನುಷ್ ಅವರು ನಯನತಾರಾ ಹಾಗೂ ವಿಘ್ನೇಶ್ ಮೇಲೆ ಅಸಮಾಧಾನಿತರಾಗಿದ್ದಾರೆ ಎಂದೂ ಹೇಳಲಾಗಿದೆ. ಇದೀಗ ಈ ಪ್ರಕರಣದಲ್ಲಿ ನಯನತಾರಾ ಅವರಿಗೆ ಭಾರೀ ಹಿನ್ನಡೆ ಉಂಟಾಗಿದೆ.












Click it and Unblock the Notifications