ನಟಿ ಬಿ.ಸರೋಜಾದೇವಿಗೆ ವಿಶೇಷ ಗೌರವ: ನಟಿ ತಾರಾ ಸಿಎಂಗೆ ಮನವಿ ಮಾಡಿದ್ದೇನು?
ಭಾರತೀಯ ಸಿನಿಮಾರಂಗದ ಖ್ಯಾತ ನಟಿ ಕನ್ನಡದ ಬಿ.ಸರೋಜಾದೇವಿ ಅವರು ಇತ್ತೀಚೆಗಷ್ಟೇ ನಿಧನರಾಗಿದ್ದು, ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. 6 ದಶಕಗಳ ಕಾಲ ಸಿನಿಮಾಗಳಲ್ಲಿ ಮಿಂಚಿದ್ದ ಸರೋಜಾದೇವಿ ಅವರ ನಿಧನಕ್ಕೆ ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಸಿನಿ ಪ್ರೇಕ್ಷಕರು ಕಂಬನಿ ಮಿಡಿದಿದ್ದಾರೆ. ಇದೀಗ ಸರೋಜಾದೇವಿ ಅವರಿಗೆ ವಿಶೇಷ ಗೌರವ ಸಲ್ಲಿಸಲು ತಯಾರಿ ನಡೆಯುತ್ತಿದೆ. ಈ ಸಂಬಂಧ ಹಿರಿಯ ನಟಿ ತಾರಾ ಅನುರಾಧ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ.
ಸುಮಾರು 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಅವರನ್ನು ಕನ್ನಡದ ಮೊದಲ ಮಹಿಳಾ ಸೂಪರ್ಸ್ಟಾರ್ ಎಂದು ಸಹ ಕರೆಯಲಾಗುತ್ತದೆ. "ಅಭಿನಯ ಸರಸ್ವತಿ" ಹಾಗೂ ಕನ್ನಡದ ಗಿಳಿ ಎಂಬ ಬಿರುದುಗಳೂ ಅವರಿಗೆ ಕೊಡಲಾಗಿದೆ. ಇದೀಗ ಸರೋಜಾದೇವಿ ಅವರಿಗೆ ವಿಶೇಷ ಗೌರವ ಸಲ್ಲಿಸುವ ವಿಚಾರವಾಗಿ ನಟಿ ತಾರಾ ಅನುರಾಧ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಈ ಸಂಬಂಧ ಅವರು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ಹಿರಿಯ ಕಲಾವಿದೆ ಬಿ.ಸರೋಜಾದೇವಿ ಅವರ ಹೆಸರಿನಲ್ಲಿ ಚಲನಚಿತ್ರ ಪ್ರಶಸ್ತಿ ಘೋಷಣೆ ಮಾಡುವಂತೆ ನಟಿ ತಾರಾ ಅನುರಾಧ ಅವರು ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಈ ಮೂಲಕ ನಟಿಗೆ ವಿಶೇಷ ಗೌರವ ಸಲ್ಲಿಸಲು ಮುಂದಾಗಿದ್ದಾರೆ.

ರಾಜ್ಯ ಪ್ರಶಸ್ತಿಗೆ ಸರೋಜಾದೇವಿ ಹೆಸರಿಡಿ
ಕನ್ನಡ ಚಿತ್ರರಂಗದ ಪ್ರತಿಭೆಗಳಿಗೆ ಕೆಲವು ಮಹನೀಯರ ಹೆಸರಲ್ಲಿ ರಾಜ್ಯ ಪ್ರಶಸ್ತಿಗಳನ್ನು ನೀಡುವ ಮೂಲಕ ಸರ್ಕಾರ ಗೌರವಿಸುತ್ತಿದೆ. ಈಗ ಹೊಸದಾಗಿ ಅಭಿನಯ ಶಾರದೆ ಜಯಂತಿ ಅಮ್ಮನವರ ಹೆಸರಲ್ಲೂ ಪ್ರಶಸ್ತಿ ಇಟ್ಟಿರುವುದು ಅತ್ಯಂತ ಸಂತೋಷದ ವಿಷಯ. ಇದೀಗ ನನ್ನದೊಂದು ಸಣ್ಣ ಮನವಿ ಇದೆ. ಪಂಚಭಾಷಾ ತಾರೆ ಪದ್ಮಶ್ರೀ, ಪದ್ಮಭೂಷಣ ಶ್ರೀಮತಿ ಬಿ. ಸರೋಜಾದೇವಿ ಅವರ ಹೆಸರಲ್ಲೂ ಒಂದು ರಾಜ್ಯ ಪ್ರಶಸ್ತಿ ನೀಡಬೇಕು. ಸಿನಿಮಾರಂಗದಲ್ಲಿ ಸಾಧನೆಗೈದು, ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು, ಅವರಿಂದ ಚಿತ್ರರಂಗಕ್ಕೂ ಒಳ್ಳೆಯ ಹೆಸರು ಬಂದಿದೆ. ಸಂಕಷ್ಟದಲ್ಲಿರುವ ಕಲಾವಿದರನ್ನು ಗುರುತಿಸಿ ಈ ತಾಯಿಯ ಹೆಸರಲ್ಲಿ ತಾವು ಪ್ರಶಸ್ತಿ ನೀಡಬೇಕೆಂದು ಎಂದು ನಟಿ ತಾರಾ ಮನವಿ ಮಾಡಿದ್ದಾರೆ.
ಸರೋಜಾದೇವಿ ಅವರು 17ನೇ ವಯಸ್ಸಿನಲ್ಲಿ 1955ರಲ್ಲಿ ತೆರೆಕಂಡ "ಮಹಾಕವಿ ಕಾಳಿದಾಸ" ಚಿತ್ರದಿಂದ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ನಂತರ 1957ರ "ಪಾಂಡುರಂಗ ಮಹಾತ್ಮಂ" ಮೂಲಕ ತೆಲುಗು ಚಿತ್ರರಂಗದಲ್ಲಿ, 1958ರ "ನಾಡೋಡಿ ಮನ್ನನ್" ಮೂಲಕ ತಮಿಳು ಚಿತ್ರರಂಗಕ್ಕೆ ಹಾಗೂ 1959ರ "ಪೈಘಮ್" ಮೂಲಕ ಹಿಂದಿ ಚಿತ್ರರಂಗ ಪ್ರವೇಶಿಸಿದ್ದರು. ಕನ್ನಡದಲ್ಲಿ "ಕಿತ್ತೂರು ಚೆನ್ನಮ್ಮ", "ಬಬ್ರುವಾಹನ", "ಅಮರಶಿಲ್ಪಿ ಜಕಣಾಚಾರಿ", "ಕಥಾಸಾಗರ", "ರತ್ನಗಿರಿ ರಹಸ್ಯ", "ಭಾಗ್ಯವಂತರು", "ಶ್ರೀನಿವಾಸ ಕಲ್ಯಾಣ", "ಚಿರಂಜೀವಿ" ಸೇರಿದಂತೆ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಿ.ಸರೋಜಾದೇವಿ ಅವರ ನಟನೆ, ವಿವಿಧ ಭಾಷಾ ಸಾಂಸ್ಕೃತಿಕ ಸಂಗಮ ಹಾಗೂ ನಟನೆಯ ನೈಪುಣ್ಯದಿಂದ ಭಾರತದ ಚಲನಚಿತ್ರರಂಗದಲ್ಲಿ ಅಳಿಸಲಾಗದ ಗುರುತು ಬಿಟ್ಟಿದ್ದಾರೆ.












Click it and Unblock the Notifications