Actress Amulya: ಅಣ್ಣನ ಪಾರ್ಥೀವ ಶರೀರದ ಮುಂದೆ ಮೌನಕ್ಕೆ ಜಾರಿದ ನಟಿ ಅಮೂಲ್ಯ
ಬೆಂಗಳೂರು,ಅಕ್ಟೋಬರ್ 18: ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಬರ ಸಿಡಿಲು ಬಡಿದಿದ್ದು, ಸ್ಯಾಂಡಲ್ವುಡ್ನ ಯುವ ನಿರ್ದೇಶಕ ಹಾಗೂ ನಟಿ ಅಮೂಲ್ಯ ಅವರ ಸಹೋದರ ದೀಪಕ್ ಅಸರ್ ವಿಧಿವಶರಾಗಿದ್ದಾರೆ. 42 ವರ್ಷದ ದೀಪಕ್ ಅರಸ್ ಬಹುಕಾಲದ ಅನಾರೋಗ್ಯದಿಂದ ಮೃತರಾಗಿದ್ದಾರೆ.
ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ದೀಪಕ್ ಅರಸ್ ಕೆಲ ಸಮಯದಿಂದ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದು, ಇತ್ತೀಚಿಗೆ ಖಾಸಗಿ ಆಸ್ಪತ್ರೆಗೆ ಮತ್ತೆ ದಾಖಲಿಸಲಾಗಿತ್ತು. ದುರಾದೃಷ್ಟವಶಾತ್ ಇಂದು( ಅಕ್ಟೋಬರ್ 18) ಶುಕ್ರವಾರ ಬೆಳಗ್ಗೆ ಆರು ಗಂಟೆ ಸುಮಾರಿಗೆ ಚಿಕಿತ್ಸೆ ಫಲಕಾರಿ ಆಗದೇ ಇಹಲೋಕ ತ್ಯಜಿಸಿದ್ದಾರೆ. ದೀಪಕ್ ಅರಸ್ ಅವರ ಸಾವಿನಿಂದಾಗಿ ಅಮೂಲ್ಯ ಅವರ ಕುಟುಂಬದಲ್ಲಿ ಶೋಕ ಮಡುಗಟ್ಟಿದೆ.

ಬೆಂಗಳೂರಿನ ಆರ್ಆರ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ದೀಪಕ್ ಅರಸ್ ಅವರು ಕೊನೆಯುಸಿರೆಳೆದಿದ್ದಾರೆ. ಬಳಿಕ ಮಲ್ಲೇಶ್ವರಂನಲ್ಲಿರುವ ನಿವಾಸಕ್ಕೆ ಮೃತ ದೇಹವನ್ನು ತರಲಾಗಿದ್ದು, ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಕುಟುಂಬಸ್ಥರು ಸೇರಿದಂತೆ ಚಿತ್ರರಂಗದ ಸ್ನೇಹಿತರು ದೀಪಕ್ ಅರಸ್ ಅವರ ಅಂತಿಮ ದರ್ಶನ ಪಡೆದಿದ್ದು, ನಟಿ ಅಮೂಲ್ಯ ಹಾಗೂ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ಇನ್ನು ಇಂದು( ಅಕ್ಟೋಬರ್ 18) ಶುಕ್ರವಾರ ದೀಪಕ್ ಅರಸ್ ಅವರ ಪಾರ್ಥೀವ ಶರೀರವನ್ನು ಸ್ವಗ್ರಾಮ ನಾಗಮಂಗಲಕ್ಕೆ ತೆಗೆದುಕೊಂಡು ಹೋಗಲಿದ್ದು, ಅಲ್ಲಿಯೇ ಅಂತಿಮ ವಿಧಿವಿಧಾನಗಳು ನಡೆಯುವ ಸಾಧ್ಯತೆ ಇದೆ. ದೀಪಕ್ ಅರಸ್ ಅವರಿಗೆ ಮದುವೆ ಆಗಿ ಇಬ್ಬರು ಮಕ್ಕಳು ಇದ್ದಾರೆ.
ಕನ್ನಡ ಚಿತ್ರರಂಗದ ಭರವಸೆಯ ನಿರ್ದೇಶಕರಾಗಿದ್ದ ದೀಪಕ್ ಅರಸ್, ಬಿಗ್ಬಾಸ್ ಖ್ಯಾತಿಯ ನಟ ರಾಕೇಶ್ ನಾಯಕನಾಗಿ ಮತ್ತು ಅಮೂಲ್ಯ ನಾಯಕಿಯಾಗಿ ನಟಿಸಿದ ಮನಸಾಲಜಿ ಹಾಗೂ ಸೋನಲ್ ಮೊಂಥೆರೋ ಹಾಗೂ ಡಾರ್ಲಿಂಗ್ ಕೃಷ್ಣ ಅಭಿನಯದ ಶುಗರ್ ಫ್ಯಾಕ್ಟರಿ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಇನ್ನಷ್ಟು ಸಿನಿಮಾಗಳನ್ನು ನಿರ್ದೇಶಿಸುವ ಉತ್ಸಾಹದಲ್ಲಿದ್ದ ದೀಪಕ್ ಅನಾರೋಗ್ಯದ ಕಾರಣದಿಂದ ಹಿಂದೆ ಸರಿದಿದ್ದರು.

ಮನೆಯ ಭವಿಷ್ಯವಾಗಿದ್ದ, ಇನ್ನಷ್ಟು ಸಿನಿಮಾಗಳನ್ನು ನಿರ್ದೇಶಿಸಿ ಚಿತ್ರರಂಗದಲ್ಲಿ ಮಿಂಚಬೇಕಾಗಿದ್ದ ಅಣ್ಣ ಕುಟುಂಬಸ್ಥರು, ಪತ್ನಿ ಇಬ್ಬರು ಮಕ್ಕಳನ್ನು ಅಗಲಿ ಮಲಗಿರುವುದನ್ನು ಕಂಡು, ಅಣ್ಣನ ಪಾರ್ಥೀವ ಶರೀರದ ಮುಂದೆ ಅಮೂಲ್ಯ ಮೌನವಾಗಿ ನಿಂತಿದ್ದಾರೆ. ಅಣ್ಣನ ಮೃತದೇಹದ ಮುಂದೆ ನಿಂತ ಅಮೂಲ್ಯ ಅವರನ್ನು ಕಂಡರೆ ಎಂತಹ ಕಲ್ಲು ಹೃದಯ ಕೂಡ ಕರಗುವಂತಿತ್ತು. ಸದ್ಯ ದೀಪಕ್ ಅರಸ್ ಅವರ ಮೃತದೇಹ ನಾಗಮಂಗಲ ಕಡೆ ರವಾನೆ ಆಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.












Click it and Unblock the Notifications