ವಿರೋಧಿಗಳು ತಾವಾಗಿಯೇ ನಾಶವಾಗಲಿ ಎಂಬ ಕೈ ತಂತ್ರ, ಬಿಜೆಪಿಗೆ ಪಾಠಗಳು
"ಅತಿಯಾದ ಆತ್ಮವಿಶ್ವಾಸ ಬಿಜೆಪಿಗೆ ಹಿನ್ನಡೆ ಉಂಟು ಮಾಡಿತು. ಬಹುಜನ ಸಮಾಜ ಪಕ್ಷ ಹಾಗೂ ಸಮಾಜವಾದಿ ಪಕ್ಷದ ಮೈತ್ರಿಯ ಶಕ್ತಿಯನ್ನು ಗುರುತಿಸುವಲ್ಲಿ ನಾವು ವಿಫಲರಾದೆವು" -ಉತ್ತರಪ್ರದೇಶದಲ್ಲಿನ ಲೋಕಸಭೆ ಉಪ ಚುನಾವಣೆಯ ಆಘಾತಕಾರಿ ಸೋಲಿನ ನಂತರ ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೀಡಿದ ಉತ್ತರ ಇದು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಈ ಉತ್ತರದಲ್ಲೇ ಕರ್ನಾಟಕ ಬಿಜೆಪಿ ಪಾಲಿಗೆ ರೆಡಿಮೇಡ್ ಪಾಠಗಳಿವೆ. ಏನು ಆ ಪಾಠ ಎಂಬುದರ ಬಗ್ಗೆ ವಿಶ್ಲೇಷಣಾತ್ಮಕವಾಗಿ ನೋಡುವ ಪ್ರಯತ್ನವೇ ಈ ಲೇಖನ. ಉತ್ತರಪ್ರದೇಶದ ಗೋರಖ್ ಪುರ ಹಾಗೂ ಫುಲ್ ಪುರ್ ಎರಡೂ ಲೋಕಸಭಾ ಕ್ಷೇತ್ರದಲ್ಲೂ ಕಳೆದ ಬಾರಿ ಮೂರು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಬಿಜೆಪಿ ಗೆದ್ದಿತ್ತು.
ಜತೆಗೆ ಆ ಎರಡೂ ಕ್ಷೇತ್ರದಿಂದ ಸ್ಪರ್ಧಿಸಿ, ಗೆದ್ದವರು ಉತ್ತರ ಪ್ರದೇಶದ ಸರಕಾರದಲ್ಲಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಗಾದಿಯಲ್ಲಿ ಕೂತಿರುವ ಯೋಗಿ ಆದಿತ್ಯನಾಥ್ ಹಾಗೂ ಕೇಶವ್ ಪ್ರಸಾದ್ ಮೌರ್ಯ. ಸೋತು- ಸುಣ್ಣವಾಗಿ ನೆಲ ಅಲ್ಲ, ಪಾತಾಳ ಸೇರಿದ್ದ ಬಹುಜನ ಸಮಾಜ ಪಕ್ಷ ಹಾಗೂ ಸಮಾಜವಾದಿ ಪಕ್ಷ ಹೀಗೆ ದಿಡಗ್ಗನೆ ಎದ್ದು, ಜತೆಯಾಗಿ ಕೈ ಜೋಡಿಸಿ, ಮುಷ್ಟಿ ಮಾಡಿ ಬಿಜೆಪಿಗೆ ಘಾತ ಮಾಡಬಹುದು ಎಂದು ಬಿಜೆಪಿ ಅಂದಾಜು ಮಾಡಿರಲಿಕ್ಕಿಲ್ಲ.
ಯೋಗಿ ಆದಿತ್ಯನಾಥ್ ಬುದ್ಧಿವಂತಿಕೆ ಉತ್ತರ
ಯೋಗಿ ಆದಿತ್ಯನಾಥ್ ಅವರೇನೋ ಇದು ಅತಿಯಾದ ಆತ್ಮವಿಶ್ವಾಸ ತಂದಿತ್ತ ಸೋಲು ಎನ್ನುವ ಬುದ್ಧಿವಂತಿಕೆ ಉತ್ತರ ಕೊಟ್ಟಿದ್ದಾರೆ. ಅದನ್ನೇ ಉತ್ತರಪ್ರದೇಶದಲ್ಲಿ ಬಿಜೆಪಿಯ ಆಡಳಿತ ವೈಖರಿಗೆ ಜನರು ನೀಡಿದ ಫಲಿತಾಂಶ ಎಂದು ವ್ಯಾಖ್ಯಾನಿಸಿದರೆ ಹಾಗೂ ಕೇಂದ್ರ ಸರಕಾರದ ಆಡಳಿತ ವೈಖರಿಗೆ ಮತದಾರ ಪ್ರಭು ನೀಡಿದ ಉತ್ತರ ಇದು ಎಂದು ಭಾವಿಸಿದರೆ ಆಗ ಪರಿಸ್ಥಿತಿ ಬದಲಾಗುತ್ತದೆ.
ನಿರ್ಲಕ್ಷ್ಯವೋ ಅಥವಾ ಅತಿ ಆತ್ಮವಿಶ್ವಾಸವೋ
ಏಕೆಂದರೆ ಈ ಹಿಂದಿನ ಚುನಾವಣೆಯಲ್ಲಿ ಬಿಜೆಪಿ ಪಡೆದ ಮತಗಳು ಅಲ್ಲಿ ಎಷ್ಟಿದ್ದವು ಅಂದರೆ, ಎಸ್ ಪಿ- ಬಿಎಸ್ ಪಿ ಗೆ ದೊರೆತ ಮತಗಳನ್ನು ಒಟ್ಟು ಮಾಡಿದರೆ ಅದಕ್ಕಿಂತಲೂ ಹೆಚ್ಚು. ಅಂದರೆ ಅಲ್ಲಿನ ಎರಡು ಸ್ಥಳೀಯ ಶಕ್ತಿಗಳು ಜತೆಯಾಗಿ ನಿಂತು ಬಡಿದಾಡಿದರೂ ನಮಗೇನಾದೀತು ಎಂಬ ಧೋರಣೆ ಕೇಸರಿ ಪಕ್ಷದಲ್ಲಿ ಇದ್ದಿರಬಹುದು. ಇದನ್ನು ನಿರ್ಲಕ್ಷ್ಯ ಎನ್ನಬೇಕೋ ಅಥವಾ ಅತಿ ಆತ್ಮವಿಶ್ವಾಸ ಎನ್ನಬೇಕೋ?
ಸ್ಥಳೀಯ ನಾಯಕತ್ವ ಕಡೆಗಣನೆ ಆದರೆ ಏನಾಗುತ್ತದೆ ಎಂಬ ಪಾಠ
ಸ್ಥಳೀಯ ನಾಯಕತ್ವ ಕಡೆಗಣನೆ ಆದರೆ ಏನಾಗುತ್ತದೆ ಎಂಬುದಕ್ಕೆ ಗುಜರಾತ್ ವಿಧಾನಸಭೆಯಲ್ಲಿ ಪಡೆದ ಪ್ರಯಾಸದ ಗೆಲುವು ಒಂದು ಉದಾಹರಣೆಯಾಗಿ ಕಣ್ಣ ಮುಂದಿದೆ. ಉತ್ತರಪ್ರದೇಶವೂ ಹಾಗೇ. ಅಲ್ಲಿನ ಸ್ಥಳೀಯ ನಾಯಕತ್ವ ನಿರ್ಲಕ್ಷ್ಯವಾಗಿ ಬಂದಿರುವ ಫಲಿತಾಂಶ ಈ ಲೋಕಸಭೆ ಫಲಿತಾಂಶ. ಕರ್ನಾಟಕದಲ್ಲೂ ಬಿಜೆಪಿ ಆಡಳಿತಾವಧಿಯಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಹೇಳಬೇಕಾದ ಯಡಿಯೂರಪ್ಪ ಆದಿಯಾಗಿ ಬಿಜೆಪಿ ನಾಯಕರು ಮೋದಿ ಸಾಧನೆ ಬಗ್ಗೆಯೇ ಮಾತನಾಡುತ್ತಿರುವುದು ಗಮನಿಸಿದರೆ ಈಗಲಾದರೂ ರಣತಂತ್ರ ಬದಲಿಸಿಕೊಳ್ಳಲು ಅವಕಾಶ ಇದೆ. ಒಂದು ಕಾಲದಲ್ಲಿ ಕಾಂಗ್ರೆಸ್ ನಲ್ಲಿ ಇದೇ ರೀತಿ ಸ್ಥಳೀಯ ನಾಯಕತ್ವ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. ಅಲ್ಲೀಗ ಬದಲಾವಣೆ ಆಗಿದೆ. ಈ ಹಿಂದೆ ಬಿಜೆಪಿಯಲ್ಲಿ ಸ್ಥಳೀಯ ನಾಯಕರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಅಲ್ಲೂ ಈಗ ಪರಿಸ್ಥಿತಿ ಬದಲಾಗಿದೆ. ಕೇಂದ್ರ ನಾಯಕತ್ವವೇ ಮೇಲುಗೈ ಆಗಿದೆ.
ಅಂಥ ಯುದ್ಧಕ್ಕೆ ಬಿಜೆಪಿ ಸಿದ್ಧವಿದೆಯೆ?
ಉತ್ತರಪ್ರದೇಶದ ಪ್ರಯೋಗವನ್ನು ಜೆಡಿಎಸ್ ಹಾಗೂ ಕಾಂಗ್ರೆಸ್ ಸೇರಿ ಕರ್ನಾಟಕದಲ್ಲಿ ಮಾಡಿಬಿಟ್ಟರೆ, ಅಂದರೆ ಚುನಾವಣೆ ಪೂರ್ವವಾಗಿಯೇ ಮೈತ್ರಿ ಘೋಷಿಸಿದರೆ ಅಂಥ ಯುದ್ಧಕ್ಕೆ ಬಿಜೆಪಿ ಸಿದ್ಧವಿದೆಯೆ? ಸದ್ಯಕ್ಕೇನೋ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಸ್ವತಂತ್ರವಾಗಿ ಅಧಿಕಾರ ಹಿಡಿಯುತ್ತದೆ ಎಂಬ ವಿಶ್ವಾಸದಲ್ಲಿದ್ದಾರೆ. ಕುಮಾರಸ್ವಾಮಿ ಅವರಿಗೆ ಜೆಡಿಎಸ್ ಬಗ್ಗೆ ಅಂಥದ್ದೇ ವಿಶ್ವಾಸ ಇದೆ. ಆದರೆ ಈಗಿನ ಚುನಾವಣೆ ಫಲಿತಾಂಶದಿಂದ ಉತ್ತೇಜಿತರಾಗಿ, ಚುನಾವಣೆಗೆ ಮುಂಚೆಯೇ ಜೆಡಿಎಸ್- ಕಾಂಗ್ರೆಸ್ ಕೈ ಜೋಡಿಸಿದರೆ ಅದರ ಘಾತ ಬೇರೆ ರೀತಿಯಲ್ಲೇ ಇರುತ್ತದೆ.
ಕಾಂಗ್ರೆಸ್ ದು ಕಾದು ನೋಡುವ ತಂತ್ರ
ಕಾಂಗ್ರೆಸ್ ನ ರಣತಂತ್ರದ ಬಗ್ಗೆ ಒಂದು ಮಾತಿದೆ. ಅದೂ ಒಂದು ರಣತಂತ್ರವೇ. ಅದೇನೆಂದರೆ, ವಿರೋಧಿಗಳು ತಾವಾಗಿಯೇ ನಾಶವಾಗುತ್ತಾರೆ. ಒಂದಿಷ್ಟು ತಾಳ್ಮೆಯಿಂದ ಇದ್ದರೆ ಜನರೇ ಅವರ ಬಗ್ಗೆ ಬೇಸರಗೊಂಡು ನಮಗೆ ಮತ ಕೊಡ್ತಾರೆ ಎಂಬ ತಂತ್ರವೊಂದಿದೆ. ಭಾರಿ ನಿರೀಕ್ಷೆ ಹುಟ್ಟು ಹಾಕಿ ಭಾರತದಾದ್ಯಂತ ಬಾವುಟ ನೆಡುತ್ತಿರುವ ಬಿಜೆಪಿಯು ತಪ್ಪು ಮಾಡುವುದನ್ನೇ ಸದ್ಯಕ್ಕೆ ಕಾಂಗ್ರೆಸ್ ತನ್ನ ಗೆಲುವು ಎಂದು ಭಾವಿಸಿದೆ. ಆದ್ದರಿಂದಲೇ ಉತ್ತರ ಪ್ರದೇಶ ಉಪ ಚುನಾವಣೆಯಲ್ಲಿನ ಬಿಜೆಪಿ ಸೋಲನ್ನು ಸಂಭ್ರಮಿಸುತ್ತಿದೆ.