'ತೆನೆಹೊತ್ತ' ಮೈಸೂರು: 11 ಕ್ಷೇತ್ರಗಳಲ್ಲಿ ಗೆದ್ದು ಬೀಗಿದವರ ವಿವರ
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಹೈ ವೋಲ್ಟೇಜ್ ಕ್ಷೇತ್ರವೆಂದೇ ಹೆಸರಾದ ಮೈಸೂರಿನಲ್ಲಿ ಜನಮತ ತಲೆಕೆಳಗಾಗಿದೆ. ಕಾಂಗ್ರೆಸ್ ಭದ್ರಕೋಟೆ ಎಂದುಕೊಂಡಿದ್ದ ಸಿದ್ದರಾಮಯ್ಯ ಅವರ ಚಾಮುಂಡೇಶ್ವರಿ ಕ್ಷೇತ್ರದ ಲೆಕ್ಕಾಚಾರ ಉಲ್ಟಾ ಆಗಿದೆ.
ಜಿಲ್ಲೆಯಲ್ಲಿ ಒಟ್ಟು 11 ವಿಧಾನಸಭೆ ಕ್ಷೇತ್ರಗಳಿದ್ದು, ಐದು ಕ್ಷೇತ್ರಗಳಲ್ಲಿ ಜೆಡಿಎಸ್ ಜಯಭೇರಿ ಬಾರಿಸಿದೆ. ಉಳಿದ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ತಲಾ ಮೂರು ಕ್ಷೇತ್ರಗಳನ್ನು ಹಂಚಿಕೊಂಡಿದೆ.
ಈ ಮೂಲಕ ಮೈಸೂರು ಜಿಲ್ಲೆಯಲ್ಲಿ ತೆನೆಹೊತ್ತ ರೈತ ಮಹಿಳೆಯ ಪ್ರಾಬಲ್ಯ ಗಟ್ಟಿಯಾಗಿದೆ ಎಂಬುದು ಸಾಬೀತಾಗಿದೆ. ಸಿದ್ದರಾಮಯ್ಯ ಮತ್ತು ಜಿಟಿ ದೇವೇಗೌಡ ಅವರನ್ನ ಬಿಟ್ಟರೇ ಮತ್ಯಾವ ಅಭ್ಯರ್ಥಿಗಳು ಮೈಸೂರಿನ ಅಖಾಡದಲ್ಲಿ ಸೋಲು-ಗೆಲುವನ್ನ ಕಂಡಿದ್ದಾರೆ ಎಂಬ ಸಂಪೂಣ ಪರಿಚಯ ಇಲ್ಲಿದೆ ನೋಡಿ....

ಸಿದ್ದುಗೆ 'ಕೈ'ಕೊಟ್ಟ ಚಾಮುಂಡೇಶ್ವರಿ
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಜೆಡಿಎಸ್ ನ ಜಿ.ಟಿ.ದೇವೇಗೌಡ ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ. ನಿರೀಕ್ಷೆಯಂತೆ ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ 35 ಸಾವಿರ ಮತಗಳಿಂದ ಹೀನಾಯ ಸೋಲು ಕಂಡಿದ್ದಾರೆ. ಸ್ವಕ್ಷೇತ್ರ ವರುಣಾವನ್ನು ಮಗ ಡಾ.ಯತೀಂದ್ರಗೆ ಬಿಟ್ಟು ಕೊಟ್ಟ ಸಿದ್ದರಾಮಯ್ಯ ಪಕ್ಕದ ಚಾಮುಂಡೇಶ್ವರಿಯಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದರು. ಆದ್ರೆ, ಸದಾ ಜನರೊಂದಿಗೆ ಬೆರೆತಿದ್ದ ಜಿ.ಟಿ.ದೇವೇಗೌಡರ ಮುಂದೆ ಸಿದ್ದ ರಣತಂತ್ರ ನಡೆಯಲಿಲ್ಲ.

ವರುಣಾದಲ್ಲಿ ಡಾ ಯತೀಂದ್ರಗೆ ಗೆಲುವು
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋಲನುಭವಿಸಿದರೆ, ಇತ್ತ ವರುಣ ಕ್ಷೇತ್ರದಲ್ಲಿ ಅವರ ಪುತ್ರ ಡಾ.ಯತೀಂದ್ರ ಗೆಲುವು ಸಾಧಿಸಿ ಗಮನ ಸೆಳೆದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಯತೀಂದ್ರ ಸಿದ್ದರಾಮಯ್ಯ 78,158 ಮತಗಳನ್ನು ಪಡೆದು ತಮ್ಮ ಪ್ರತಿ ಸ್ಫರ್ಧಿ ಬಿಜೆಪಿಯ ತೋಟದಪ್ಪ ಬಸವರಾಜು ವಿರುದ್ಧ ಗೆಲುವು ಸಾಧಿಸಲಿದ್ದಾರೆ.

ಕೃಷ್ಣರಾಜ ಕ್ಷೇತ್ರದಲ್ಲಿ 'ಕಮಲ'
ನಗರದ ಕೃಷ್ಣರಾಜ ಕ್ಷೇತ್ರದಲ್ಲಿ ಮಾಜಿ ಸಚಿವ ಬಿಜೆಪಿ ಅಭ್ಯರ್ಥಿ ಎಸ್.ಎ.ರಾಮದಾಸ್ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಎಂ.ಕೆ.ಸೋಮಶೇಖರ್ ಸೋಲನುಭವಿಸಿದ್ದಾರೆ. ರಾಮದಾಸ್ ಗೆ 21929 ಮತಗಳು ಲಭ್ಯವಾಗಿದ್ದರೆ, ಸೋಮಶೇಖರ್ ಗೆ 12264 ಮತಗಳು ಸಿಕ್ಕಿವೆ. ಜೆಡಿಎಸ್ ಅಭ್ಯರ್ಥಿ ಕೆ.ವಿ.ಮಲ್ಲೇಶ್ ಕೇವಲ 4085 ಮತಗಳಿಸಿದ್ದಾರೆ.

ಚಾಮರಾಜಕ್ಷೇತ್ರದಲ್ಲೂ ಬಿಜೆಪಿ
ಚಾಮರಾಜ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಲ್.ನಾಗೇಂದ್ರ ಗೆಲುವು ಸಾಧಿಸಿದ್ದಾರೆ. ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಪ್ರೊ.ಕೆ.ಎಸ್.ರಂಗಪ್ಪ ಅವರು 14195 ಮತಗಳನ್ನು ಗಳಿಸಿ ಹಿನ್ನಡೆ ಅನುಭವಿಸಿದ್ರೆ, ಕಾಂಗ್ರೆಸ್ ಅಭ್ಯರ್ಥಿ ಹಾಲಿ ಶಾಸಕ ವಾಸು ಅವರು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.

'ಕೈ'ಹಿಡಿದ ನರಸಿಂಹರಾಜ ಕ್ಷೇತ್ರ
ನರಸಿಂಹರಾಜ ಕ್ಷೇತ್ರದಲ್ಲಿ ಸಚಿವ ತನ್ವೀರ್ ಸೇಠ್ ಗೆಲುವಿನತ್ತ ದಾಪುಗಾಲು ಹಾಕಿದ್ದಾರೆ. ತನ್ವೀರ್ ಸೇಠ್ ಅವರು 11389 ಮತಗಳಿಸಿ ಮುನ್ನಡೆ ಕಾದುಕೊಂಡಿದ್ದಾರೆ. ಎಸ್.ಡಿ.ಪಿ.ಐ.ನ ಅಬ್ದುಲ್ ಮಜೀದ್ ಅವರು 6500 ಮತಗಳನ್ನು ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಬಿಜೆಪಿಯ ಸಂದೇಶಸ್ವಾಮಿ 5080 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಜೆಡಿಎಸ್ ಅಭ್ಯರ್ಥಿ ಅಬ್ದುಲ್ಲಾ ಅವರು 1990 ಮತಗಳನ್ನು ಪಡೆದು ಕೊನೆ ಸ್ಥಾನಕ್ಕೆ ಇಳಿದಿದ್ದಾರೆ.

ಕಾಂಗ್ರೆಸ್ ಪಾಲಾದ ಎಚ್.ಡಿ.ಕೋಟೆ
ಎಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ದಿವಂಗತ ಚಿಕ್ಕಮಾದು ಅವರ ಪುತ್ರ ಸಿ.ಅನಿಲ್ ಕುಮಾರ್ ಅವರು ಕಾಂಗ್ರೆಸ್ ನಿಂದ ಸ್ಪರ್ಧಿಸಿ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಅವರು 55485, ಮತಗಳಿಸಿದ್ದಾರೆ. ಕಾಂಗ್ರೆಸ್, ಜೆಡಿಎಸ್ ನಡುವೆ ತೀವ್ರ ಪೈಪೋಟಿ ಇತ್ತು. ಜೆಡಿಎಸ್ ಅಭ್ಯರ್ಥಿ ಚಿಕ್ಕಣ್ಣ 41,125 ಮತಗಳಿಸಿ ಎರಡನೆ ಸ್ಥಾನ ಪಡೆದಿದ್ದಾರೆ. ಬಿಜೆಪಿಯಿಂದ ಮಾಜಿ ಎಂಎಲ್ ಸಿ ಸಿದ್ದರಾಜು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

ತೆನೆಹೊತ್ತ ಕೆ.ಆರ್.ನಗರ
ಕೆ.ಆರ್.ನಗರ ವಿಧಾನಸಭೆ ಕ್ಷೇತ್ರದಲ್ಲಿ ಹಾಲಿ ಶಾಸಕ ಜೆಡಿಎಸ್ ಅಭ್ಯರ್ಥಿ ಸಾ.ರಾ.ಮಹೇಶ್ ಹ್ಯಾಟ್ರಿಕ್ ಜಯಗಳಿಸಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ನಡುವೆ ತೀವ್ರ ಪೈಪೋಟಿ ಇತ್ತು. ಸಾ.ರಾ.ಮಹೇಶ್ ಅವರಿಗೆ 41456 ಮತಗಳು ಲಭ್ಯವಾಗಿವೆ. ಕಾಂಗ್ರೆಸ್ ಅಭ್ಯರ್ಥಿ ಡಿ.ರವಿಶಂಕರ್ ಗೆ 32174 ಮತಗಳು ಸಿಕ್ಕಿವೆ.

ಟಿ ನರಸೀಪುರದಲ್ಲಿ ಜೆಡಿಎಸ್ ಗೆಲುವು
ಟಿ ನರಸೀಪುರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಅಶ್ವಿನ್ ಕುಮಾರ್ 74595 ಮತ ಪಡೆದು ಜಯಗೊಳಿಸಿದ್ರೆ, ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ (47, 800) ವಿರುದ್ಧ ಅಭೂತಪೂರ್ವ ಗೆಲುವು ಸಾಧಿಸಿ ಅಚ್ಚರಿ ಮೂಡಿಸಿದ್ದಾರೆ.

ಹುಣಸೂರು ವಿಶ್ವನಾಥ್
ಕಡೆ ಕ್ಷಣದವರೆಗೂ ತೀವ್ರ ಕುತೂಹಲ ಕೆರಳಿಸಿದ್ದ ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಕಡೆಗೆ ಜೆಡಿಎಸ್ ಅಭ್ಯರ್ಥಿ ವಿಶ್ವನಾಥ್ ಜಯಭೇರಿ ಬಾರಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ, ಹಾಲಿ ಶಾಸಕ ಎಚ್.ಪಿ.ಮಂಜುನಾಥ್ ಹಾಗೂ ಎಚ್.ವಿಶ್ವನಾಥ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಬಿಜೆಪಿಯಿಂದ ರಮೇಶ್ ಮಾರ್ ಅಭ್ಯರ್ಥಿಯಾಗಿದ್ದರೂ ಮೂರನೆ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ವಿಶ್ವನಾಥ್ 91,667 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಇನ್ನು ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ 83,092 ಮತಗಳನ್ನು ಪಡೆದಿದ್ದು, 8575 ಮತಗಳ ಅಂತರದಿಂದ ಭರ್ಜರಿ ಜಯಭೇರಿ ಬಾರಿಸಿದ್ದಾರೆ.

'ಕೈ' ತಪ್ಪಿದ ನಂಜನಗೂಡು
ಉಪಚುನಾವಣೆಯ ಬಳಿಕ ನಂಜನಗೂಡಿನಲ್ಲಿ ಬಿಜೆಪಿ ಭಾರೀ ಸದ್ದು ಮಾಡಿತ್ತು. ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್ ಅಳಿಯ ಹರ್ಷವರ್ಧನ್ 77780 ಮತ ಪಡೆದು ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿ ( 65404 ) ವಿರುದ್ಧ ಗೆಲುವು ಸಾಧಿಸಿ ಇದೇ ಪ್ರಥಮ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದಾರೆ.

ಪಿರಿಯಾಪಟ್ಟಣದಲ್ಲಿ ಜೆಡಿಎಸ್
ಪಿರಿಯಾಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿ ಕೆ. ಮಹದೇವ್ ಅವರು 77317 ಮತ ಪಡೆದು, ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಅಭ್ಯರ್ಥಿ ವೆಂಕಟೇಶ್ ( 69893) ವಿರುದ್ಧ ಗೆಲುವು ಸಾಧಿಸಿದ್ದಾರೆ.












Click it and Unblock the Notifications