ತಿರುಪತಿ ವೆಂಕಟರಮಣನ ಮೊರೆ ಹೋದ ದೇವೇಗೌಡ
ಬೆಂಗಳೂರು, ಮೇ 17: ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಸರ್ಕಾರ ರಚನೆಗೆ ತೊಡಕು ಎದುರಾಗುತ್ತಿದ್ದಂತೆಯೇ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರು ಮತ್ತೆ ದೇವರ ಮೊರೆ ಹೋಗಲು ನಿರ್ಧರಿಸಿದ್ದಾರೆ.
ತಿರುಪತಿಯ ವೆಂಕಟರಮಣ ದೇವಸ್ಥಾನಕ್ಕೆ ತೆರಳಲಿರುವ ದೇವೇಗೌಡ ಅವರು ಅಲ್ಲಿ ವಿಶೇಷ ಪೂಜೆ, ಹೋಮ ಹವನಗಳನ್ನು ನಡೆಸಲಿದ್ದಾರೆ.
ಬಡ 'ಕೈ' ಶಾಸಕ ಖಾಸಗಿ ವಿಮಾನದ ಮೂಲಕ ಪರಾರಿ!
ಮಧ್ಯಾಹ್ನ 3 ಗಂಟೆ ಸುಮಾರಿಗೆ ವಿಶೇಷ ವಿಮಾನದಲ್ಲಿ ಕುಟುಂಬದವರ ಸಮೇತ ದೇವೇಗೌಡ ಅವರು ತಿರುಪತಿಗೆ ತೆರಳಲಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಬೇಸರ ಮೂಡಿಸಿವೆ. ಈ ರೀತಿಯ ಬೆಳವಣಿಗೆಗಳು ನಡೆಯಲಿವೆ ಎಂಬುದನ್ನು ನಿರೀಕ್ಷೆ ಮಾಡಿರಲಿಲ್ಲ ಎಂದು ದೇವೇಗೌಡ ಹೇಳಿದ್ದಾರೆ.
ಚುನಾವಣೆ ಪ್ರಕ್ರಿಯೆ ಆರಂಭವಾದ ಸಂದರ್ಭದಿಂದಲೂ ದೇವೇಗೌಡ ಮತ್ತು ಅವರ ಕುಟುಂಬದ ಸದಸ್ಯರು ಪೂಜಾ ಕಾರ್ಯಗಳನ್ನು ನಿರಂತರವಾಗಿ ಮಾಡಿಸುತ್ತಿದ್ದಾರೆ. ಮತದಾನದ ದಿನ, ಫಲಿತಾಂಶದ ದಿನಗಳಂದು ಸಹ ದೇವೇಗೌಡ ಹಾಗೂ ಅವರ ಕುಟುಂಬದವರು ವಿಶೇಷ ಪೂಜಾ ಕಾರ್ಯಗಳನ್ನು ನಡೆಸಿದ್ದರು.
22 ವರ್ಷದ ಹಿಂದಿನ 'ಕರ್ಮ' ಕಾಂಗ್ರೆಸ್ಗೆ ಎರವಾಗಲಿದೆಯೇ?
ಕಾಂಗ್ರೆಸ್ ಬೆಂಬಲದೊಂದಿಗೆ ಜೆಡಿಎಸ್ ಸರ್ಕಾರವನ್ನು ಅಸ್ತಿತ್ವಕ್ಕೆ ತರಲು ಪ್ರಯತ್ನ ಮಾಡುತ್ತಿರುವ ದೇವೇಗೌಡ ಅವರು ಮಗ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿಸುವ ಬಯಕೆ ಹೊಂದಿದ್ದಾರೆ. ಇದಕ್ಕಾಗಿ ಅವರ ಮನೆಯಲ್ಲಿ ನಿರಂತರವಾದ ಹೋಮ ಹವನ, ಪ್ರಾರ್ಥನೆಗಳು ಜರುಗುತ್ತಿವೆ.
ಅತಿ ಹೆಚ್ಚು ಶಾಸಕರ ಬಲವನ್ನು ಹೊಂದಿರುವುದರಿಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆ ಸುಲಭವಾಗಲಿದೆ ಎಂದು ಭಾವಿಸಲಾಗಿತ್ತು. ಆದರೆ, ರಾಜ್ಯಪಾಲ ವಜೂಭಾಯಿ ವಾಲಾ ಅವರು ಅತಿ ಹೆಚ್ಚು ಸೀಟುಗಳನ್ನು ಗೆದ್ದ ಬಿಜೆಪಿಗೆ ಸರ್ಕಾರ ರಚಿಸಲು ಅವಕಾಶ ನೀಡಿರುವುದು ಈ ಎರಡೂ ಪಕ್ಷಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.