ಅತಂತ್ರ ಸ್ಥಿತಿಯತ್ತ ಕರ್ನಾಟಕ ವಿಧಾನಸಭೆ! ಸಾಧ್ಯತೆಗಳೇನು?
ಬೆಂಗಳೂರು, ಮೇ 15 : ಭಾರತೀಯ ಜನತಾ ಪಕ್ಷ ಗೆಲುವಿನ ಹತ್ತಿರ ಬಂದಿದ್ದರೂ ಸ್ಪಷ್ಟ ಬಹುಮತ ಗಳಿಸದ ಕಾರಣ, ರಾಜಕೀಯ ಲೆಕ್ಕಾಚಾರಗಳು ಶುರುವಾಗಿವೆ. ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಮುಂದೆ ಏನು ಮಾಡಬೇಕು ಎಂಬ ಚಿಂತನಮಂಥನದಲ್ಲಿ ಮುಳುಗಿದ್ದಾರೆ.
ದೇಶದಾದ್ಯಂತ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ, ಗುಲಾಲು ಎರಚಿ, ಸಿಹಿತಿಂಡಿಯನ್ನು ಹಂಚಿ ವಿಜಯೋತ್ಸವದಲ್ಲಿ ಮುಳುಗಿದ್ದರೆ, ರಾಷ್ಟ್ರೀಯ ನಾಯಕರನೇಕರು ಹಲವಾರು ಹೇಳಿಕೆಗಳನ್ನು ನೀಡುತ್ತ, ಬಿಜೆಪಿ ಸರಕಾರ ಮಾಡೇ ಮಾಡುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆಜಾದ್ ತಂತ್ರ : ಕುಮಾರಸ್ವಾಮಿ ಸಿಎಂ, ಕೈ -ತೆನೆ ಮೈತ್ರಿ
ಈ ನಡುವೆ ಮಹತ್ವದ ಬೆಳವಣಿಗೆಯೊಂದರಲ್ಲಿ, ಗೆದ್ದಿರುವ ಮತ್ತು ಗೆಲ್ಲುವ ಸಾಧ್ಯತೆಯಿರುವ ಎಲ್ಲ ಶಾಸಕರನ್ನು ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್ ಡಿ ದೇವೇಗೌಡರು ತಮ್ಮ ಬಳಿಗೆ ಕರೆಸಿಕೊಂಡಿದ್ದಾರೆ. ಭಾರತೀಯ ಜನತಾ ಪಕ್ಷ ಇವರನ್ನು ಹೈಜಾಕ್ ಮಾಡುವ ಅಥವಾ ಆಪರೇಷನ್ ಕಮಲದಡಿ ಸೆಳೆದುಕೊಳ್ಳುವ ಸಾಧ್ಯತೆ ಇರುವುದನ್ನು ತಳ್ಳಿ ಹಾಕದು.
ಅತಂತ್ರವಾಗುತ್ತಿದ್ದಂತೆ ಕರ್ನಾಟಕಕ್ಕೆ ಧಾವಿಸಿರುವ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಝಾದ್ ಅವರು ತ್ವರಿತವಾಗಿ ಜೆಡಿಎಸ್ ಸುಪ್ರೀಮೋ ದೇವೇಗೌಡರ ಜೊತೆ ಮಾತುಕತೆ ಆರಂಭಿಸಿದ್ದು, ಭಾರತೀಯ ಜನತಾ ಪಕ್ಷವನ್ನು ಅಧಿಕಾರದಿಂದ ದೂರವಿಡಲು ಮೈತ್ರಿಯ ತಂತ್ರ ರೂಪಿಸುತ್ತಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿಯನ್ನು ತಳ್ಳಿಹಾಕುವಂತಿಲ್ಲ.
ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ 2018: ಗೆದ್ದವರ ಸಂಪೂರ್ಣ ಪಟ್ಟಿ
ಯಾವ್ಯಾವ ಮೈತ್ರಿಯ ಸಾಧ್ಯತೆಗಳಿವೆ? ಏನೇನು ಆಗಲಿದೆ? ಯಾರು ಮುಖ್ಯಮಂತ್ರಿಯಾಗಲಿದ್ದಾರೆ? ಯಾರು ಮನೆಕಡೆ ಕಾಲು ಹಾಕಲಿದ್ದಾರೆ? ಕಮಲ ಅರಳುವುದಾ, ನಿರಾಶೆಯಿಂದ ಮುದುಡುವುದಾ ಕೆಲವೇ ಗಂಟೆಗಳಲ್ಲಿ ಗೊತ್ತಾಗಲಿದೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಬಲವಾದ ಸಾಧ್ಯತೆ
ಭಾರತವನ್ನು ಕಾಂಗ್ರೆಸ್ ಮುಕ್ತ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಹೇಳಿ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷಗಳನ್ನು ಕೆಣಕಿರುವುದರಿಂದ, ಇದನ್ನು ತಡೆಯುವುದಕ್ಕಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯನ್ನು ತಳ್ಳಿಹಾಕುವಂತಿಲ್ಲ. ಈ ಮೈತ್ರಿ ಸಂಭವವಾದರೆ ಯಾರು ಮುಖ್ಯಮಂತ್ರಿಯಾಗಬೇಕು ಎಂಬ ಪ್ರಶ್ನೆಗೆ ಉತ್ತರ ಕಂಡುಹಿಡಿಯುವುದು ಅಷ್ಟು ಕಷ್ಟವಾಗಲಿಕ್ಕಿಲ್ಲ.
In Pics: ಕರ್ನಾಟಕ ಜನಾದೇಶ: ಒಂದಷ್ಟು ಕಹಿ, ಮತ್ತಷ್ಟು ಸಿಹಿ
ಜೆಡಿಎಸ್-ಬಿಜೆಪಿ ಮೈತ್ರಿ ತಳ್ಳಿಹಾಕುವಂತಿಲ್ಲ
ಭಾರತೀಯ ಜನತಾ ಪಕ್ಷಕ್ಕೆ ಹೆಚ್ಚೂಕಡಿಮೆ 8ರಿಂದ 10 ಸ್ಥಾನಗಳು ಕಡಿಮೆ ಬೀಳುವ ಸಾಧ್ಯತೆಗಳಿರುವುದರಿಂದ, ಎಲ್ಲ ಇದ್ದೂ ಏನೂ ಮಾಡಲಾಗದಂಥಹ ಸ್ಥಿತಿಯಲ್ಲಿದೆ. ಆದರೆ, ಕೈಕಟ್ಟಿ ಕುಳಿತುಕೊಳ್ಳುವ ಜಾಯಮಾನದವರೇ ಅಲ್ಲ ಬಿಜೆಪಿ ಚಾಣಕ್ಯ ಅಮಿತ್ ಶಾ. ಜೆಡಿಎಸ್ ಗೆ ಅಧಿಕಾರ ಕೊಟ್ಟು, ಕುಮಾರಸ್ವಾಮಿಯವರಿಗೆ ಮುಖ್ಯಮಂತ್ರಿಗೆ ಪಟ್ಟು ನೀಡಿದರೂ ಸರಿ ಕಾಂಗ್ರೆಸ್ಸಿಗೆ ಮಾತ್ರ ಅಧಿಕಾರದ ಬೇಟನ್ ನೀಡಬಾರದು ಎಂದು ನಿರ್ಣಯಕ್ಕೆ ಬಂದರೂ ಅಚ್ಚರಿಯಿಲ್ಲ.
ಯಡಿಯೂರಪ್ಪ ಜೆಡಿಎಸ್ ಮೈತ್ರಿ ಒಪ್ಪದಿದ್ದರೆ
ಜೆಡಿಎಸ್ ಕಾಂಗ್ರೆಸ್ ಜೊತೆಗೆ ಸೇರಿದರೂ ಸರಿ, ಬಿಜೆಪಿ ಜೊತೆ ಸೇರಿದರೂ ಸರಿ ಯಡಿಯೂರಪ್ಪನವರಿಗೆ ಮುಖ್ಯಮಂತ್ರಿ ಪಟ್ಟ ಸಿಗುವುದು ಅಪರೂಪದಲ್ಲಿ ಅಪರೂಪ. ಆದ್ದರಿಂದ, ತಮಗೆ ಸಿಗಲಿರುವ ಕಟ್ಟಕಡೆಯ ಅವಕಾಶವನ್ನು ಕಳೆದುಕೊಳ್ಳಲು ಅವರು ಸಿದ್ಧರಿರುತ್ತಾರಾ? ಅಲ್ಲದೆ ಜೆಡಿಎಸ್ ಜೊತೆ ಕೈಜೋಡಿಸಿ ಒಮ್ಮೆ ಮೋಸಹೋಗಿದ್ದಾರೆ. ಹಾಗಾಗಿ, ಅವರು ತಮ್ಮ ಆಪ್ತರೊಡನೆ ಚಿಂತಿಸಿ ಜೆಡಿಎಸ್ ಗೆ ಬೆಂಬಲ ನೀಡಲು ಸಾಧ್ಯವಿಲ್ಲ ಎಂದು ನಿರ್ಣಯಕ್ಕೆ ಬಂದರೆ ಜೆಡಿಎಸ್ ಗತ್ಯಂತರವಿಲ್ಲದೆ ಕಾಂಗ್ರೆಸ್ ಜೊತೆ ಹೋಗಬೇಕಾಗುತ್ತದೆ ಮತ್ತು ಬಿಜೆಪಿ ನಾಯಕರು ಕೈಕಟ್ಟಿ ಕುಳಿತುಕೊಳ್ಳಬೇಕಾಗುತ್ತದೆ.
ಯಾವ ಮಾತುಕತೆಯೂ ಫಲಪ್ರದವಾಗದಿದ್ದರೆ
ಕುಮಾರಸ್ವಾಮಿ ಮುಖ್ಯಮಂತ್ರಿ ಆದರೆ ನಮಗೆ ಅಭ್ಯಂತರವಿಲ್ಲ ಎಂದು ಕಾಂಗ್ರೆಸ್ ಧುರೀಣರು ಜಾಣತನದ ಒಪ್ಪಿಗೆಯನ್ನು ಈಗಾಗಲೆ ನೀಡಿಬಿಟ್ಟಿದ್ದಾರೆ. ಇನ್ನೇನು, ದೇವೇಗೌಡರ ಕಡೆಯ ಇಚ್ಛೆಯೂ ಪೂರ್ಣವಾಗುವ ಸಂದರ್ಭವ ಸಂದರ್ಭ ಬಂದಿದೆ. ಇಂಥ ಅವಕಾಶವನ್ನು ಅವರು ಕಳೆದುಕೊಳ್ಳುವುದು ಸಾಧ್ಯವೇ ಇಲ್ಲ. ಒಂದು ವೇಳೆ, ಕಾಂಗ್ರೆಸ್ ಮತ್ತು ಜೆಡಿಎಸ್ ಲೆಕ್ಕಾಚಾರ ಕೈಗೂಡದಿದ್ದರೆ ಮತ್ತು ಬಿಜೆಪಿ ಜೆಡಿಎಸ್ ಜೊತೆ ಬಂಧಕ್ಕೆ ಒಪ್ಪದಿದ್ದರೆ ಅನಿವಾರ್ಯವಾಗಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕಾಗುತ್ತದೆ. ಏಕೆಂದರೆ, ಕಾಂಗ್ರೆಸ್ ಸರಕಾರ ರಚಿಸುವ ಪರಿಸ್ಥಿತಿಯಲ್ಲೇ ಇಲ್ಲ.