ಕೆಜೆಪಿಗೆ ಚುನಾವಣಾ ಆಯೋಗದ ಮಾನ್ಯತೆ ಪ್ರಾಪ್ತಿ

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಾರಥ್ಯದ ಕೆಜೆಪಿಗೆ ಚುನಾವಣಾ ಆಯೋಗವು ರಾಜ್ಯ ಪಕ್ಷ ಎಂಬ ಸ್ಥಾನಮಾನ ದಯಪಾಲಿಸಿದೆ. ಆದರೆ, ಮಾಜಿ ಸಚಿವ ಶ್ರೀರಾಮುಲು ನೇತೃತ್ವದ ಬಿಎಸ್ಆರ್ ಕಾಂಗ್ರೆಸ್ ಪಕ್ಷವು ಆ ಮಾನ್ಯತೆಯಿಂದ ವಂಚಿತಗೊಂಡಿದೆ.
ಹೊಸ ಕಾಯಂ ಚಿಹ್ನೆ ಯಾವುದು?: ಪಕ್ಷಕ್ಕೆ ತಾತ್ಕಾಲಿಕವಾಗಿ ನೀಡಲಾಗಿದ್ದ ತೆಂಗಿನಕಾಯಿ ಚಿಹ್ನೆ ಬಗ್ಗೆ ಅಸಮಾಧಾನಗೊಂಡಿದ್ದ ಕೆಜೆಪಿ ಅಧ್ಯಕ್ಷ ಯಡಿಯೂರಪ್ಪ ಅವರು ಈಗ ಅವರ ಇಚ್ಛೆಗೆ ಅನುಗುಣವಾಗಿ, ಆಯೋಗದ ಮಿತಿಯಲ್ಲಿ ಹೊಸ ಕಾಯಂ ಚಿಹ್ನೆಯನ್ನು ಪಡೆಯಬಹುದಾಗಿದೆ.
ಯಾವುದೇ ರಾಜಕೀಯ ಪಕ್ಷವೊಂದು ವಿಧಾನಸಭಾ ಚುನಾವಣೆಯಲ್ಲಿ ಚಲಾವಣೆಗೊಂಡ ಮತಗಳ ಪೈಕಿ ಕನಿಷ್ಟ ಶೇ. 6 ರಷ್ಟು ಮತಗಳನ್ನು ಗಳಿಸಿದರೆ ಅದಕ್ಕೆ ಆಯೋಗವು ರಾಜ್ಯ ಪಕ್ಷ ಎಂಬ ಮಾನ್ಯತೆ ನೀಡುತ್ತದೆ. ಅಂದಹಾಗೆ, ಕೆಜೆಪಿ ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಶೇ. 9.83 ರಷ್ಟು ಮತ ಪಡೆದಿದೆ.
ಬಿಎಸ್ಆರ್ ಕಾಂಗ್ರೆಸ್ ಕೇವಲ ಶೇ. 2.69 ಮತಗಳನ್ನು ಗಳಿಸಿರುವುದರಿಂದ ಆ ಪಕ್ಷಕ್ಕೆ ರಾಜ್ಯ ಪಕ್ಷದ ಮಾನ್ಯತೆ ಸಿಗುವುದಿಲ್ಲ. ಇದಕ್ಕಾಗಿ ಆ ಪಕ್ಷ ಮತ್ತೂಂದು ಚುನಾವಣೆವರೆಗೆ ಕಾಯಬೇಕಾಗುತ್ತದೆ.
ಇದುವರೆಗೆ ಕೆಜೆಪಿ ನೋಂದಾಯಿತ ಆದರೆ ಮಾನ್ಯತೆ ಪಡೆಯದ ರಾಜಕೀಯ ಪಕ್ಷವಾಗಿತ್ತು. ಇನ್ನು ಮುಂದೆ ಅದು ನೋಂದಾಯಿತ ಹಾಗೂ ಮಾನ್ಯತೆ ಪಡೆದ ರಾಜಕೀಯ ಪಕ್ಷವಾಗಲಿದೆ. ಇದರಿಂದ ಸಹಜವಾಗಿಯೇ ಪಕ್ಷಕ್ಕೆ ಒಂದು ಸಾಂಸ್ಥಿಕ ರೂಪ ಬರಲಿದೆ. ಪಕ್ಷಾಂತರ ನಿಷೇಧ ಕಾಯ್ದೆ ಸೇರಿದಂತೆ ರಾಜಕೀಯ ಪಕ್ಷಕ್ಕೆ ಸಂಬಂಧಿಸಿದಂತೆ ಮತ್ತಿತರ ನಿಯಮಗಳು ಈ ಪಕ್ಷಕ್ಕೂ ಅನ್ವಯವಾಗಲಿವೆ.
ಈ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಯಡಿಯೂರಪ್ಪ ಅವರು, ಇನ್ನು ಮುಂದೆ ಪಕ್ಷದ ಸಂಘಟನೆ ಬಲಪಡಿಸಲು ಹೆಚ್ಚಿನ ಒತ್ತು ನೀಡಲಾಗುವುದು. ಲೋಕಸಭೆ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.












Click it and Unblock the Notifications