ಬಂಗಾಳದ ಗದ್ದುಗೆಗೆ 'ಮೋದಿ' ಮಂತ್ರ: ಎಕ್ಸಿಟ್ ಪೋಲ್ ಸಮೀಕ್ಷೆಗಳಲ್ಲಿ ಬಿಜೆಪಿಗೆ ಬಹುಮತ, ಟಿಎಂಸಿಗೆ ಮುಖಭಂಗ
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ 2026ರ ಎರಡನೇ ಹಾಗೂ ಅಂತಿಮ ಹಂತದ ಮತದಾನದ ಪ್ರಕ್ರಿಯೆಯು ಮುಕ್ತಾಯಗೊಂಡಿದ್ದು, ಅಂದಾಜು ಶೇ 91.41 ರಷ್ಟು ದಾಖಲೆ ಪ್ರಮಾಣದ ಮತದಾನ ದಾಖಲಾಗಿದೆ. ಪಶ್ಚಿಮ ಬಂಗಾಳದ 142 ವಿಧಾನಸಭಾ ಕ್ಷೇತ್ರಗಳಿಗೆ ಇಂದು ನಡೆದ ಅಂತಿಮ ಹಂತದ ಮತದಾನವು ಅತ್ಯಂತ ಬಿರುಸಿನಿಂದ ಜರುಗಿದೆ. ಮತದಾನದ ಪ್ರಕ್ರಿಯೆ ಮುಗಿಯುತ್ತಿದ್ದಂತೆಯೇ ವಿವಿಧ ಸಂಸ್ಥೆಗಳ ಎಕ್ಸಿಟ್ ಪೋಲ್ (ಮತಗಟ್ಟೆ ಸಮೀಕ್ಷೆ) ಫಲಿತಾಂಶಗಳು ಹೊರಬಿದ್ದಿದ್ದು, ಪಶ್ಚಿಮ ಬಂಗಾಳದಲ್ಲಿ ಈ ಬಾರಿ ಬಿಜೆಪಿ ಅಧಿಕಾರಕ್ಕೇರುವ ಸುಳಿವು ನೀಡಿವೆ.
ಮ್ಯಾಟ್ರಿಜ್ (MATRIZE): ಬಿಜೆಪಿ 146-161 ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರಕ್ಕೇರಲಿದೆ ಎಂದು ಅಂದಾಜಿಸಿದೆ. ಟಿಎಂಸಿ 125-140 ಸ್ಥಾನಗಳಿಗೆ ಸೀಮಿತವಾಗಬಹುದು ಎಂದು ಹೇಳಿದೆ.

ಪಿ-ಮಾರ್ಕ್ (P-MARQ): ಈ ಸಮೀಕ್ಷೆಯ ಪ್ರಕಾರ ಬಿಜೆಪಿ 150-175 ಸ್ಥಾನಗಳೊಂದಿಗೆ ಭರ್ಜರಿ ಜಯ ಸಾಧಿಸಲಿದೆ. ಟಿಎಂಸಿ 118-138 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ.
ಚಾಣಕ್ಯ ಸ್ಟ್ರಾಟಜೀಸ್ (CHANAKYA STRATEGIES): ಬಿಜೆಪಿ 150-160 ಸ್ಥಾನಗಳನ್ನು ಮತ್ತು ಟಿಎಂಸಿ 130-140 ಸ್ಥಾನಗಳನ್ನು ಗೆಲ್ಲಲಿದೆ ಎಂದು ಈ ಸಂಸ್ಥೆ ಭವಿಷ್ಯ ನುಡಿದಿದೆ
ಹೊಸ ಇತಿಹಾಸ ನಿರ್ಮಿಸಲಿದೆಯಾ ಬಿಜೆಪಿ?
ಮ್ಯಾಟ್ರಿಜ್, ಪಿ-ಮಾರ್ಕ್ ಮತ್ತು ಚಾಣಕ್ಯ ಸ್ಟ್ರಾಟಜೀಸ್ನಂತಹ ಪ್ರಮುಖ ಸಂಸ್ಥೆಗಳು ಬಿಜೆಪಿ 146ರಿಂದ 175 ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರಕ್ಕೇರಲಿದೆ ಎಂದು ಭವಿಷ್ಯ ನುಡಿದಿವೆ. ಇದಕ್ಕೆ ವ್ಯತಿರಿಕ್ತವಾಗಿ, 'ಪೀಪಲ್ಸ್ ಪಲ್ಸ್' ಸಮೀಕ್ಷೆಯು ಟಿಎಂಸಿ 177ರಿಂದ 187 ಸ್ಥಾನಗಳನ್ನು ಗೆದ್ದು ಮತ್ತೆ ಅಧಿಕಾರವನ್ನು ಉಳಿಸಿಕೊಳ್ಳಲಿದೆ ಎಂದು ಅಂದಾಜಿಸಿದೆ. ಒಟ್ಟಾರೆಯಾಗಿ ಪ್ರಮುಖ ಸಮೀಕ್ಷೆಗಳು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಬಹುಮತದ ಗಡಿ (147 ಸ್ಥಾನಗಳು) ದಾಟಲಿದೆ ಎಂದು ತಿಳಿಸಿವೆ.
ಆದರೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಾವು 2/3 ಬಹುಮತದೊಂದಿಗೆ ಮತ್ತೆ ಸರ್ಕಾರ ರಚಿಸುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಶಾಂತಿ ಕಾಪಾಡಲು ಚುನಾವಣೋತ್ತರವಾಗಿಯೂ ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದ್ದು, ಮೇ 4ರಂದು ಹೊರಬೀಳಲಿರುವ ಅಂತಿಮ ಫಲಿತಾಂಶದ ಮೇಲೆ ಇಡೀ ದೇಶದ ಕಣ್ಣು ನೆಟ್ಟಿದೆ. 2021ರ ಚುನಾವಣೆಯಲ್ಲಿ ಟಿಎಂಸಿ 215 ಸ್ಥಾನಗಳನ್ನು ಗೆದ್ದಿದ್ದರೆ, ಬಿಜೆಪಿ 77 ಸ್ಥಾನಗಳನ್ನು ಪಡೆದಿತ್ತು.
ಭವಾನಿಪುರ ಕ್ಷೇತ್ರದಲ್ಲಿ ಶೇ.90ಕ್ಕೂ ಹೆಚ್ಚು ಮತದಾನವಾಗಿದ್ದು, ಇದು ಹಿಂದಿನ ಚುನಾವಣೆಗಳಿಗಿಂತ ಹೆಚ್ಚಿನ ದಾಖಲೆಯಾಗಿದೆ ಎಂದು ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ತಿಳಿಸಿದ್ದಾರೆ. ಮತದಾನದ ವೇಳೆ ಕೆಲವು ಅಕ್ರಮಗಳ ದೂರುಗಳು ಕೇಳಿಬಂದಿದ್ದು, ಬುರ್ಖಾ ಧರಿಸಿದ ಪುರುಷರು ನಕಲಿ ಮತ ಚಲಾಯಿಸಲು ಯತ್ನಿಸಿದ ಘಟನೆಗಳು ವರದಿಯಾಗಿವೆ. ಯಾವುದೇ ಅಕ್ರಮ ಸಾಬೀತಾದಲ್ಲಿ ಮರುಮತದಾನ ನಡೆಸಲಾಗುವುದು ಎಂದು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಅಗರ್ವಾಲ್ ಎಚ್ಚರಿಸಿದ್ದಾರೆ.













Click it and Unblock the Notifications