Tamil nadu: ಕಮಲ್ ಹಾಸನ್ - ರಜನೀಕಾಂತ್ ಮಾಡದ ಸಾಧನೆ ಮಾಡಿದ ವಿಜಯ್ - ಬಿಜೆಪಿ ಮೊದಲ ಬಾರಿ ಅಧಿಕಾರಕ್ಕೆ ಸಣ್ಣ ಅವಕಾಶ
Tamil nadu: ತಮಿಳುನಾಡು ರಾಜಕೀಯದಲ್ಲಿ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷದ ದರ್ಬಾರ್ ಮುಂದುವರಿದಿದೆ. ಆದರೆ, ಇತ್ತೀಚೆಗಷ್ಟೇ ಪಕ್ಷವನ್ನು ಸ್ಥಾಪಿಸಿದ್ದ ನಟ ವಿಜಯ್ ಅವರು ತಮಿಳುನಾಡಿನ ರಾಜಕೀಯದಲ್ಲಿ ಮೊದಲ ಪ್ರಯತ್ನದಲ್ಲಿಯೇ ಮಹತ್ವದ ಸಾಧನೆ ಮಾಡಿದ್ದಾರೆ. ತಮಿಳುನಾಡಿನಲ್ಲಿ ಈ ಬಾರಿಯ ತಮಿಳುನಾಡಿನ ರಾಜಕೀಯವು ವಿಜಯ್ ಇಲ್ಲದೆ ಅಪೂರ್ಣ ಎನ್ನುವಂತೆ ಆಗಿದೆ. ತಮಿಳುನಾಡಿನ ವಿಧಾನಸಭೆ ಚುನಾವಣೆಯ ಮೊದಲ ಪ್ರಯತ್ನದಲ್ಲಿಯೇ 18ರಿಂದ 24 ವಿಧಾನಸಭಾ ಕ್ಷೇತ್ರಗಳಲ್ಲಿ ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ ಪಕ್ಷವು ಗೆಲುವು ಸಾಧಿಸಲಿದೆ ಎಂದು ಎಕ್ಸಿಟ್ ಪೋಲ್ ಸಮೀಕ್ಷೆಗಳು ಹೇಳಿವೆ.
ತಮಿಳುನಾಡಿನ ವಿಧಾನಸಭೆ ಚುನಾವಣೆಯ ಫಲಿತಾಂಶಕ್ಕೆ ಸಂಬಂಧಿಸಿದಂತೆ ಎಕ್ಸಿಟ್ ಪೋಲ್ ಫಲಿತಾಂಶಗಳ ಪ್ರಕಾರ ಡಿಎಂಕೆ ಪಕ್ಷವೇ ಅಧಿಕಾರಕ್ಕೆ ಬರಲಿದೆ. ಆದರೆ ಎಐಎಡಿಎಂಕೆ - ಎನ್ಡಿಎಯೊಂದಿಗೆ ಟಿವಿಕೆ ಕೈಜೋಡಿಸಿದರೆ ರಾಜಕೀಯ ಚಿತ್ರಣವೇ ಬದಲಾಗುವ ಸಾಧ್ಯತೆ ಇದೆ. ದ್ರಾವಿಡ ಅಸ್ಮಿತೆಯನ್ನು ಮುಂದಿಟ್ಟುಕೊಂಡು ಹಾಗೂ ಅಹಿಂದ ಮತಗಳನ್ನೇ ಗುರಿಯಾಗಿಸಿಕೊಂಡಿದ್ದ ವಿಜಯ್ ಅವರಿಗೆ ಮೊದಲ ಹಂತದಲ್ಲಿ ಸಾಧಾರಣ ಯಶಸ್ಸು ಸಿಕ್ಕಿದೆ. ತಮಿಳುನಾಡಿನಲ್ಲಿ ನಟರಾದ ರಜನೀಕಾಂತ್ ಹಾಗೂ ಕಮಲ್ ಹಾಸನ್ಗೆ ಮಾಡಲು ಸಾಧ್ಯವಾಗದ ಸಾಧನೆಯನ್ನು ನಟ - ರಾಜಕಾರಣಿ ವಿಜಯ್ ಅವರು ಮಾಡಿದ್ದಾರೆ.

ಹೌದು ತಮಿಳುನಾಡು ರಾಜಕೀಯದಲ್ಲಿ ಸ್ಟಾರ್ ನಟ ವಿಜಯ್ ಎಂಟ್ರಿ ಸಂಚಲನ ಸೃಷ್ಟಿ ಮಾಡಿತ್ತು. ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಪಕ್ಷವು ಮೊದಲ ಪ್ರಯತ್ನದಲ್ಲಿಯೇ ನೆಲೆ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಲಿದೆ ಎಂದು ಪೀಪಲ್ಸ್ ಪಲ್ಸ್ ಸೇರಿದಂತೆ ವಿವಿಧ ಮತಗಟ್ಟೆ ಸಮೀಕ್ಷೆಗಳು ಹೇಳಿವೆ. ಆದರೆ, ಅಧಿಕಾರಕ್ಕೇರುವುದು ಸಾಧ್ಯವಿಲ್ಲ ಎನ್ನಲಾಗುತ್ತಿದೆ. ಈ ಬಾರಿಯೂ ಡಿಎಂಕೆ ಪಕ್ಷವೇ ಅಧಿಕಾರಕ್ಕೇರುವ ಸಾಧ್ಯತೆ ಇದೆ. ಆದರೆ, ಕೊನೆಯ ಹಂತದಲ್ಲಿ ಅತಂತ್ರ ವಿಧಾನಸಭೆ ಚುನಾವಣೆ ಸೃಷ್ಟಿಯಾದರೆ, ಎಐಎಡಿಎಂಕೆ - ಪಕ್ಷೇತರರು ಸೇರಿ ಸರ್ಕಾರ ರಚನೆ ಮಾಡುವ ಸಣ್ಣ ಸಾಧ್ಯತೆಯೂ ಇದೆ. ಇಲ್ಲವೇ ಡಿಎಂಕೆ ಪಕ್ಷದೊಂದಿಗೆ ಸೇರಿ ಉಪ ಮುಖ್ಯಮಂತ್ರಿ ಸ್ಥಾನ ಪಡೆಯುವ ಅವಕಾಶವು ಇದೆ.
ಈ ರೀತಿಯ ಪರಿಸ್ಥಿಯು ನಿರ್ಮಾಣವಾಗುವ ಸಾಧ್ಯತೆ ಕಡಿಮೆ ಎಂದೇ ಹೇಳಲಾಗುತ್ತಿದೆ. ಆದರೆ ಕೆಲವೊಮ್ಮೆ ಎಕ್ಸಿಟ್ ಪೋಲ್ ಸಮೀಕ್ಷೆಗಳು ಸುಳ್ಳಾಗಿರುವುದು ಸಹ ಇದೆ. ಆದರೆ ವಿಜಯ್ ಅವರು ತಮ್ಮ ಮೊದಲ ಪ್ರಯತ್ನದಲ್ಲಿಯೇ ರಾಜಕೀಯ ನೆಲೆ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ನಿಟ್ಟಿನಲ್ಲಿ ನೋಡಿದರೆ ನಟ ಕಮಲ್ ಹಾಸನ್ ಹಾಗೂ ರಜನೀಕಾಂತ್ಗೆ ಮಾಡಲು ಸಾಧ್ಯವಾಗದ ಸಾಧನೆ ಮಾಡಿದ್ದಾರೆ. ಈ ಇಬ್ಬರೂ ನಟರು ರಾಜಕೀಯಕ್ಕೆ ಧುಮುಕ್ಕಿದ್ದರಾದರೂ, ಸ್ವಾತಂತ್ರ್ಯವಾಗಿ ಪಕ್ಷ ಕಟ್ಟುವಲ್ಲಿ ವಿಫಲರಾಗಿದ್ದರು. ರಜನೀಕಾಂತ್ ರಾಜಕೀಯಕ್ಕೆ ಬರುತ್ತೇನೆ ಎಂದು ಹೇಳಿದರಾದರೂ ಪೂರ್ಣ ಪ್ರಮಾಣದಲ್ಲಿ ಪಕ್ಷ ಸ್ಥಾಪನೆ ಮಾಡಿ ರಾಜಕೀಯ ಪ್ರಾರಂಭಿಸಲಿಲ್ಲ. ಇನ್ನು ಕಮಲ್ ಹಾಸನ್ ಅವರು ತಮ್ಮ ರಾಜಕೀಯ ಪಕ್ಷ ಮಕ್ಕಳ್ ನೀಧಿ ಮೈಯಂ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆಯನ್ನೇ ಮಾಡಲಿಲ್ಲ. ಬದಲಾಗಿ ಡಿಎಂಕೆ ಪಕ್ಷಕ್ಕೆ ಬೆಂಬಲ ನೀಡಿದೆ. ಇತ್ತೀಚೆಗೆ ಅವರು ಡಿಎಂಕೆ ಬೆಂಬಲದೊಂದಿಗೆ ರಾಜ್ಯಸಭೆ ಪ್ರವೇಶ ಮಾಡಿದ್ದರು.
ಎಕ್ಸಿಟ್ ಪೋಲ್ ಸಮೀಕ್ಷೆಗಳ ಪ್ರಕಾರ, ತಮಿಳುನಾಡಿನ ಅಧಿಕಾರವು ಡಿಎಂಕೆ ಪಾಲಿಗೆ ಒಲಿಯಲಿದೆ. ಉಳಿದಂತೆ ಎಡಿಎಂಕೆ - ಬಿಜೆಪಿ ಮೈತ್ರಿಕೂಟವು 2ನೇ ಸ್ಥಾನಕ್ಕೆ ತೃಪ್ತಿಪಡಬೇಕಾಗಿದ್ದು, ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸುವ ಸಾಧ್ಯತೆಯಿದೆ. ಎಡಿಎಂಕೆ ಮತ್ತು ಟಿವಿಕೆ ಮೈತ್ರಿ ಸಾಧ್ಯವಾದರೆ ತಮಿಳುನಾಡು ರಾಜಕಾರಣ ಮತ್ತಷ್ಟು ರಂಗೇರಬಹುದು. ಆದರೆ ಅಚ್ಚರಿಯ ಫಲಿತಾಂಶ ಬಂದು ಡಿಎಂಕೆ ವಿರೋಧಿ ಬಣದೆಲ್ಲಿರುವವರು ಹಾಗೂ ಟಿವಿಕೆ ಒಂದಾದರೆ ತಮಿಳುನಾಡಿನಲ್ಲಿ ಬಿಜೆಪಿ ಮೊದಲ ಬಾರಿ ಅಧಿಕಾರಕ್ಕೇರಬಹುದು. ಮೊದಲ ಬಾರಿ ಅಧಿಕಾರಕ್ಕೇರುವುದಕ್ಕೆ ಬಿಜೆಪಿ ದೊಡ್ಡ ರಿಸ್ಕ್ ಸಹ ತೆಗೆದುಕೊಳ್ಳಬಹುದು. ಈ ಎಲ್ಲಾ ಕುತೂಹಲಕ್ಕೆ ಹಾಗೂ ಅಂತಿಮ ಫಲಿತಾಂಶಕ್ಕಾಗಿ ಮೇ 4 ವರೆಗೂ ಕಾಯಬೇಕಿದೆ.













Click it and Unblock the Notifications