ಪಶ್ಚಿಮ ಬಂಗಾಳದಲ್ಲಿ ಮತ್ತೆ ಮಮತಾ ಬ್ಯಾನರ್ಜಿ: ಎಕ್ಸಿಟ್ ಪೋಲ್ ಮುನ್ನೋಟ
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ 2026ರ ಅಂತಿಮ ಹಂತದ ಮತದಾನವು ಅಭೂತಪೂರ್ವ ಜನಬೆಂಬಲದೊಂದಿಗೆ ಮುಕ್ತಾಯಗೊಂಡಿದ್ದು, ಸಂಜೆ 5 ಗಂಟೆಯ ವೇಳೆಗೆ ರಾಜ್ಯದಲ್ಲಿ ಸರಿಸುಮಾರು ಶೇ 90ರಷ್ಟು ದಾಖಲೆ ಪ್ರಮಾಣದ ಮತದಾನವಾಗಿದೆ. ಈ ಬಾರಿಯ ಚುನಾವಣೆ ಅಕ್ಷರಶಃ ಇತಿಹಾಸ ಸೃಷ್ಟಿಸುತ್ತಿದ್ದು, ಮೊದಲ ಹಂತದಲ್ಲಿ ಶೇ 93.19 ರಷ್ಟು ಮತದಾನವಾಗಿತ್ತು. ಇಂದಿನ ಅಂತಿಮ ಹಂತದಲ್ಲಿ 142 ಕ್ಷೇತ್ರಗಳ 41,000ಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ 3.5 ಕೋಟಿಗೂ ಹೆಚ್ಚು ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಇದೇ ವೇಳೆ ಚುನಾವಣೋತ್ತರ ಸಮೀಕ್ಷೆಯ (ಎಕ್ಸಿಟ್ ಪೋಲ್) ಫಲಿತಾಂಶ ಕೂಡ ಹೊರಬಿದ್ದಿದೆ.
ಟಿಎಂಸಿಗೆ ಬಹುಮತ
ಪೀಪಲ್ಸ್ ಪಲ್ಸ್' (Peoples Pulse) ಎಕ್ಸಿಟ್ ಪೋಲ್ ಫಲಿತಾಂಶದ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ ಮತ್ತೊಮ್ಮೆ ತೃಣಮೂಲ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಸಾಧ್ಯತೆ ದಟ್ಟವಾಗಿದೆ. ಒಟ್ಟು 294 ಸೀಟುಗಳ ಪೈಕಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ 177ರಿಂದ 187 ಸ್ಥಾನಗಳನ್ನು ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಅಂದಾಜಿಸಲಾಗಿದೆ. ಇನ್ನು ಬಿಜೆಪಿ 95 ರಿಂದ 110 ಸ್ಥಾನಗಳನ್ನು ಪಡೆಯುವ ಮೂಲಕ ಪ್ರಬಲ ಪೈಪೋಟಿ ನೀಡಲಿದೆ. ಕಾಂಗ್ರೆಸ್ 1 ರಿಂದ 3 ಮತ್ತು ಎಡರಂಗ ಕೇವಲ 0 ರಿಂದ 1 ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಬಹುದು ಎಂದು ಸಮೀಕ್ಷೆ ತಿಳಿಸಿದೆ.

ಬಹುಮತದೊಂದಿಗೆ ಸರ್ಕಾರ ರಚನೆ: ಮಮತಾ ಬ್ಯಾನರ್ಜಿ
ಮತದಾನದ ಪ್ರಕ್ರಿಯೆಯ ನಡುವೆಯೇ ಭವಾನಿಪುರ ಕ್ಷೇತ್ರದ ಟಿಎಂಸಿ ಅಭ್ಯರ್ಥಿ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ. "ನಮಗೆ ಲಭ್ಯವಿರುವ ಮಾಹಿತಿಯ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸೋಲುತ್ತಿದೆ. ನಾವು 2/3 ಬಹುಮತದೊಂದಿಗೆ ಮತ್ತೆ ಸರ್ಕಾರವನ್ನು ರಚಿಸಲಿದ್ದೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಳೆದ 2021ರ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ 215 ಸ್ಥಾನಗಳನ್ನು ಗೆದ್ದು ಭರ್ಜರಿ ಜಯ ಸಾಧಿಸಿದ್ದರೆ, ಬಿಜೆಪಿ ತನ್ನ ಬಲವನ್ನು 77 ಸ್ಥಾನಗಳಿಗೆ ಏರಿಸಿಕೊಂಡಿತ್ತು. ಈ ಬಾರಿಯ ಹೈ-ವೋಲ್ಟೇಜ್ ಕದನದ ಫಲಿತಾಂಶವು ಮೇ 4ರಂದು ಪ್ರಕಟವಾಗಲಿದೆ.
ಚುನಾವಣಾ ಪ್ರಕ್ರಿಯೆಯು ಬಹುತೇಕ ಶಾಂತಿಯುತವಾಗಿ ನಡೆದಿದ್ದರೂ, ಕೆಲವು ಮತಗಟ್ಟೆಗಳಲ್ಲಿ ಇವಿಎಂ ಯಂತ್ರಗಳಿಗೆ ಟೇಪ್ ಹಚ್ಚಿರುವುದು ಅಥವಾ ಅಕ್ರಮ ಎಸಗಿರುವ ಬಗ್ಗೆ ದೂರುಗಳು ಕೇಳಿಬಂದಿವೆ. ಭವಿಷ್ಯದಲ್ಲಿ ಪಶ್ಚಿಮ ಬಂಗಾಳದ ಚುನಾವಣೆಗಳನ್ನು ಕೇವಲ ಒಂದೇ ಹಂತದಲ್ಲಿ ನಡೆಸಲಾಗುವುದು ಎಂಬ ಮಹತ್ವದ ಸುಳಿವನ್ನು ಅವರು ನೀಡಿದ್ದಾರೆ.
ಭವಾನಿಪುರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ದಾಖಲೆ ಪ್ರಮಾಣದ ಮತದಾನವಾಗಿದ್ದು, ಶೇ.90ಕ್ಕೂ ಹೆಚ್ಚು ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ತಿಳಿಸಿದ್ದಾರೆ. 2021ರಲ್ಲಿ ಇಲ್ಲಿ ಶೇ.82 ರಷ್ಟು ಹಾಗೂ 2024ರಲ್ಲಿ ಶೇ.78 ರಷ್ಟು ಮತದಾನವಾಗಿತ್ತು ಎಂದು ಅವರು ಹೋಲಿಕೆ ಮಾಡಿದ್ದಾರೆ. ಈ ಬಾರಿ ಕೇವಲ 10-12 ನಕಲಿ ಮತಗಳನ್ನು ಹಾಕಲು ಮಾತ್ರ ಅವರಿಗೆ ಸಾಧ್ಯವಾಯಿತು ಎಂದು ಅವರು ಹೇಳಿದ್ದಾರೆ.
ಮತದಾನದ ವೇಳೆ ನಡೆದ ಅಕ್ರಮಗಳ ಬಗ್ಗೆ ಪ್ರಸ್ತಾಪಿಸಿದ ಅವರು, ವಾರ್ಡ್ 77ರ ಕೆಲವು ಬೂತ್ಗಳಲ್ಲಿ ಬುರ್ಖಾ ಧರಿಸಿದ್ದ 4-5 ಪುರುಷರು ನಕಲಿ ಮತ ಚಲಾಯಿಸಲು ಯತ್ನಿಸಿದರು ಎಂದು ಆರೋಪಿಸಿದ್ದಾರೆ. ಅವರನ್ನು ಹಿಡಿಯಲು ಯತ್ನಿಸಿದಾಗ ಅವರು ಅಲ್ಲಿಂದ ಪರಾರಿಯಾದರು ಎಂದು ಮಾಹಿತಿ ನೀಡಿದ್ದಾರೆ. ಇವಿಎಂ ಯಂತ್ರಗಳಿಗೆ ಟೇಪ್ ಹಚ್ಚಿರುವ ದೂರುಗಳ ಬಗ್ಗೆ ಈಗಾಗಲೇ ಸಿಇಒ ಮನೋಜ್ ಅಗರ್ವಾಲ್ ಅವರು ಮರುಮತದಾನದ ಎಚ್ಚರಿಕೆ ನೀಡಿದ್ದು, ಇದರ ನಡುವೆಯೇ ಸುವೇಂದು ಅವರ ಈ ಹೇಳಿಕೆ ರಾಜಕೀಯ ಸಂಚಲನ ಮೂಡಿಸಿದೆ.













Click it and Unblock the Notifications