ಕನಕಗಿರಿ : ತಂಗಡಗಿ ವಿರುದ್ಧ ಅಲೆ ಜೋರು
ಭತ್ತದ ಕಣಜ ಎಂದು ಹೆಸರಾಗಿರುವ ಕೊಪ್ಪಳ ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ಬಿಸಿಲು ಎಷ್ಟು ಸ್ಥಿರವಾಗಿರುತ್ತದೆಯೋ ವಿಧಾನಸಭೆ ಕ್ಷೇತ್ರದಲ್ಲಿ ರಾಜಕೀಯ ಲೆಕ್ಕಾಚಾರಗಳು ಅಷ್ಟೇ ಅಸ್ಥಿರವಾಗಿರುತ್ತವೆ. ಇಲ್ಲಿ ಇಂಥೋರೇ ಗೆಲ್ತಾರೆ ಎಂದು ಖಚಿತವಾಗಿ ಹೇಳುವುದು ಅಸಾಧ್ಯ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ಗಳಿಗೆ ಇದ್ದಷ್ಟೇ ಸಮಪ್ರಮಾಣದ ಅವಕಾಶಗಳು ಹೊಸದಾಗಿ ಹುಟ್ಟಿರುವ ಕೆಜೆಪಿ ಮತ್ತು ಬಿಎಸ್ಆರ್ ಕಾಂಗ್ರೆಸ್ಸಿಗೂ ಇವೆ. ಪಕ್ಷಕ್ಕೆ ದ್ರೋಹ ಬಗೆದು 'ಆಪರೇಷನ್'ಗೊಳಗಾದವರಿಗೆ, ಅಭ್ಯರ್ಥಿಯನ್ನೇ ಮರೆತ ಪಕ್ಷಕ್ಕೆ ಮತದಾರರು ಪಾಠ ಕಲಿಸುವರೆ? ಕನಕಗಿರಿಯಲ್ಲಿ ಯಾವ ಜಾತಿಯ ಬೆಂಬಲ ಯಾರಿಗಿದೆ ಎಂಬುದರ ನೋಟ ಇಲ್ಲಿದೆ.
ಕ್ಷೇತ್ರದಲ್ಲಿ ಶಿವರಾಜ್ ತಂಗಡಗಿ ವಿರುದ್ಧದ ಅಲೆ ಜೋರಾಗಿದೆ. ಮಂತ್ರಿಯಾದ ಮೇಲೆ ತಂಗಡಗಿ ತೆಗೆದುಕೊಂಡ ನಿರ್ಧಾರಗಳು ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಮೊದಲು ಪಕ್ಷೇತರನಾಗಿ ಗೆದ್ದಿದ್ದ ತಂಗಡಗಿ, ಬಿಜೆಪಿಗೆ ಬೆಂಬಲ ನೀಡಿ, ನಂತರ ಉಚ್ಚಾಟನೆಗೊಂಡು, ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ರಾದ್ದಾಂತ ಸೃಷ್ಟಿಸಿಕೊಂಡರು. ಕ್ಷೇತ್ರದ ಕಡೆಗೂ ಸುಳಿಯಲೇ ಇಲ್ಲ. ಇದು ಜನರಲ್ಲಿ ಸಿಟ್ಟು ತಂದಿದೆ. ಈಗ ಕಾಂಗ್ರೆಸ್ನಿಂದ ಸ್ಪರ್ಧಿಸುವ ಇರಾದೆ ಹೊಂದಿರುವ ತಂಗಡಗಿ, ಹಿಂದುಳಿದ ವರ್ಗದವರ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ.
ಆದರೆ ಕಳೆದ ಚುನಾವಣೆಯಲ್ಲಿ ಕೇವಲ 2183 ಮತಗಳ ಅಂತರದಿಂದ ಸೋತಿದ್ದ ಮುಕುಂದರಾವ್ ಭವಾನಿಮಠ ಪರ ಜನರು ಒಲವು ತೋರಿಸುತ್ತಿದ್ದಾರೆ. ಒಂದು ವೇಳೆ ಬಿಎಸ್ಆರ್ ಪಕ್ಷದಿಂದ ಟಿಕೆಟ್ ಗಿಟ್ಟಿಸಿರುವ ಭವಾನಿಮಠ ಅವರಿಗೆ ಕಳೆದ ಬಾರಿಯ ಸೋಲಿನ ಅನುಕಂಪದ ಲಾಭ ಲಭಿಸಲಿದೆ. ಇದರ ಜೊತೆಗೆ ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಆದರೆ, ಕೆಜೆಪಿ ಅಭ್ಯರ್ಥಿಯನ್ನಾಗಿ ಬಸವರಾಜ್ ದಡೇಸೂಗೂರ್ ಹೆಸರನ್ನ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ಈ ಬೆಳವಣಿಗೆ ಭವಾನಿಮಠ ಅವರಿಗೆ ಕೊಂಚ ಹಿನ್ನಡೆ ತರಬಹುದು.