ಎಲೆಕ್ಷನ್ ಕಿಂಗ್ ಗೆ ಯುದ್ಧಕ್ಕೆ ಮುನ್ನವೇ ಸೋಲು
ಹೋಮಿಯೋಪತಿ ಡಾ. ಕೆ ಪದ್ಮರಾಜನ್ ಅವರು ಸೇರಿದಂತೆ ಸೇರಿದಂತೆ ಒಟ್ಟು 7 ಜನರ ನಾಮಪತ್ರಗಳನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ. ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಿಂದ ಒಟ್ಟು 133 ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಿದ್ದರು.
ಗುರುವಾರ ಜರುಗಿದ ನಾಮಪತ್ರಗಳ ಪರಿಶೀಲನೆ ನಂತರ 127 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ. ಪದ್ಮರಾಜನ್ ಕರ್ನಾಟಕದ ಮತದಾರರಲ್ಲ, 10 ಜನ ಅನುಮೋದಕರ ಹೆಸರು ಹಾಗೂ ಸಹಿ ಇಲ್ಲ ಹಾಗೂ ಫಾರ್ಮ್ ಸಂಖ್ಯೆ 26ನ್ನು ಸಲ್ಲಿಸಿಲ್ಲ. ಆದ್ದರಿಂದ ತಿರಸ್ಕರಿಸಲಾಗಿದೆ ಎಂದು ಆಯೋಗ ಹೇಳಿದೆ.
ಪದ್ಮರಾಜನ್ ದಾಖಲೆ: ರಾಷ್ಟ್ರಪತಿ, ಉಪರಾಷ್ಟ್ರಪತಿ, ರಾಜ್ಯಪಾಲರ ವಿರುದ್ಧ ಸ್ಪರ್ಧಿಸಿ ಲಿಮ್ಕಾ ದಾಖಲೆ ಪಟ್ಟಿಗೆ ಸೇರ್ಪಡೆಗೊಂಡಿರುವ ತಮಿಳುನಾಡು ಮೂಲದ ವ್ಯಕ್ತಿಯೊಬ್ಬ ಇದೀಗ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಲ್ಲಿ ರಾಜ್ಯದ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.
ತಮಿಳುನಾಡಿನ ಸೇಲಂ ಜಿಲ್ಲೆಯ ಮೆಟ್ಟೂರು ಮೂಲದ ಮೂಲತಃ ಹೋಮಿಯೋಪತಿ ವೈದ್ಯರಾಗಿರುವ 55 ವರ್ಷದ ಪದ್ಮರಾಜನ್ ಟೈರ್ ರಿಮೋಲ್ಡಿಂಗ್ ವ್ಯವಹಾರ ನಡೆಸುತ್ತಿದ್ದಾರೆ. ಸತತ 25 ವರ್ಷಗಳಿಂದ ಲೋಕಸಭೆ, ರಾಜ್ಯಸಭೆ, ವಿಧಾನಸಭೆ ಚುನಾವಣೆಗಳಲ್ಲೂ ಸ್ಪರ್ಧಿಸುವ ಮೂಲಕ ಲಿಮ್ಕಾ ದಾಖಲೆಗೆ ಸೇರ್ಪಡೆಗೊಂಡಿದ್ದಾರೆ. 1988ರಿಂದ ಆರಂಭಗೊಂಡಿರುವ ರಾಜಕೀಯದಲ್ಲಿನ ನಾಮಪತ್ರ ಸಲ್ಲಿಕೆಯಾಟ ಇದುವರೆಗೂ ನಿಂತಿಲ್ಲ.
1988ರಲ್ಲಿ ತಮಿಳುನಾಡಿನ ಮೆಟ್ಟೂರಿನಲ್ಲಿ ಚುನಾವಣಾ ಕ್ಷೇತ್ರ ಮೆಟ್ಟಿದ ಇವರು, ಆಗಿನ ಸಿಪಿಎಂನ ಮಾಜಿ ಶಾಸಕ ಸೆರಂಗನ್ ವಿರುದ್ಧ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದರು. ಅಂದಿನಿಂದ ಪದ್ಮರಾಜನ್ ಅವರು ರಾಷ್ಟ್ರಪತಿ ಚುನಾವಣೆಯಲ್ಲಿ ನಾಲ್ಕು ಬಾರಿ ಕಣಕ್ಕಿಳಿದ್ದಾರೆ. 1997ರಲ್ಲಿ ಕೆ.ಆರ್.ನಾರಾಯಣ್, 2002ರಲ್ಲಿ ಎ.ಪಿ.ಜೆ.ಅಬ್ದುಲ್ ಕಲಾಂ, 2007ರಲ್ಲಿ ಪ್ರತಿಭಾ ಪಾಟೀಲ, 2012ರಲ್ಲಿ ಪ್ರಣಬ್ ಮುಖರ್ಜಿ ವಿರುದ್ಧ ಸ್ಪರ್ಧಿಸಿದ್ದಾರೆ.
ಉಪ ರಾಷ್ಟ್ರಪತಿ ವಿರುದ್ಧ 1997ರಲ್ಲಿ ಕೃಷ್ಣಕಾಂತ, 2002ರಲ್ಲಿ ಭೈರೋನ್ ಸಿಂಗ್ ಶೆಖಾವತ್, 2007 ಮತ್ತು 2012ರಲ್ಲಿ ಎರಡು ಬಾರಿ ಹಮೀದ್ ಅನ್ಸಾರಿ ವಿರುದ್ಧ ಕಣಕ್ಕಿಳಿದಿರುವ ಪದ್ಮರಾಜನ್ ಲೋಕಸಭೆ ಚುನಾವಣೆಯಲ್ಲಿ ವಿವಿಧ ರಾಜ್ಯಗಳಲ್ಲಿ ಒಟ್ಟು 24 ಬಾರಿ ಸ್ಪರ್ಧಿಸಿದ್ದಾರೆ. ಧರ್ಮಪುರಿ ಲೋಕಸಭಾ ಕ್ಷೇತ್ರದಿಂದ ಒಟ್ಟು ಏಳು ಬಾರಿ ಸ್ಪರ್ಧಿಸಿರುವ ಪದ್ಮರಾಜನ್ ಅವರು, ಕರ್ನಾಟಕ ಲೋಕಸಭೆಯಿಂದ 1996ರಲ್ಲಿ ಸಿ. ನಾರಾಯಣಸ್ವಾಮಿ, 2004ರಲ್ಲಿ ಬೀದರ್, 2009ರಲ್ಲಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಸ್ಪರ್ಧಿಸಿದ್ದಾರೆ.
ಪಾಂಡಿಚೇರಿ, ತಮಿಳುನಾಡು, ಕೇರಳ, ಅಸ್ಸಾಂ, ಕರ್ನಾಟಕ ರಾಜ್ಯಗಳಿಂದ ರಾಜ್ಯಸಭೆಗೆ 28 ಬಾರಿ ಸ್ಪರ್ಧಿಸಿರುವ ಪದ್ಮರಾಜನ್, ವಿಧಾನಸಭಾ ಚುನಾವಣೆಗೆ 46 ಬಾರಿ ಸ್ಪರ್ಧಿಸಿದ್ದಾರೆ. 1988ರಲ್ಲಿ ಮೆಟ್ಟೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು ನಂತರ ಕಂಗ್ಯಾಯಮ್, ರಾಣಿಪೇಟ್, ಪೆರುಂದರಿ, ಮೈಲಾಪೂರ, ಆಂಧ್ರಪ್ರದೇಶದ ಕಡಪ್ಪ, ಕೇರಳದ ತಿರುರಂಗಡಿ, ಅಟ್ಟೂರು, ಬೃಗೂರು, ಪುಡುಕೊಟ್ಟಿ, ಅರುಪ್ಪುಕೊಟ್ಟಿ, ತಿರುಚ್ಚಿ-2, ಆಂಡಿಪೆಟ್ಟಿ, ಸೈದಪೆಟ್ಟಿ, ತ್ರೀರುವಲ, ಕಂಚಿಪೂರಂ, ಕುಮಿಡಿಪೊಂಡಿ, ಅಕ್ಸಿಕೊಂಡೆ, ಪಯ್ಯಾನೂರ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿದ ಅನುಭವ ಹೊಂದಿದ್ದಾರೆ.
ಗಿನ್ನಿಸ್ ದಾಖಲೆ ನಿರ್ಮಾಣಕ್ಕೆ ನಾಮಪತ್ರ ಸಲ್ಲಿಕೆ ಮಾಡುತ್ತಿದ್ದೇನೆ. ಯಾವುದೇ ಕಾರಣಕ್ಕೂ ಚುನಾವಣಾ ಪ್ರಚಾರ ಮಾಡುವುದಿಲ್ಲ. ದಾಖಲೆಗಾಗಿ ನಾಮಪತ್ರ ಸಲ್ಲಿಕೆ ಮಾಡುತ್ತಿದ್ದೇನೆ. ಇದುವರೆಗೆ 12 ಲಕ್ಷ ರೂ. ನಾಮಪತ್ರ ಸಲ್ಲಿಕೆಗೆ ವೆಚ್ಚ ಮಾಡಿದ್ದೇನೆ. ಆದರೆ ರಾಷ್ಟ್ರಪತಿ ಚುನಾವಣೆಯಲ್ಲಿ ಮಾತ್ರ ಹಣ ಮರುಪಾವತಿ ಆಗಿದೆ.
ಹು-ಧಾ ಸೆಂಟ್ರಲ್ ವಿಧಾನಸಭಾ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ತಮಿಳುನಾಡು ಮೂಲದ ಡಾ.ಕೆ.ಪದ್ಮರಾಜನ್ ಸಲ್ಲಿಸಿರುವ ನಾಮಪತ್ರದಲ್ಲಿ ಹಲವು ದೋಷಗಳಿತ್ತು. ಪಕ್ಷೇತರ ಅಭ್ಯರ್ಥಿಗೆ 10 ಸೂಚಕರ ಅವಶ್ಯಕತೆ ಇದೆ. ಆದರೆ ಸಲ್ಲಿಕೆ ಮಾಡಿರುವ ನಾಮಪತ್ರದಲ್ಲಿ ಕಡಿಮೆ ಸೂಚಕರಿದ್ದಾರೆ. ಅಲ್ಲದೆ, ಆಸ್ತಿ ಘೋಷಣೆ ಮಾಡಿಲ್ಲ, ಹೊಸದಾಗಿ ಬ್ಯಾಂಕ್ ಖಾತೆ ಸಂಖ್ಯೆ ನೀಡಿಲ್ಲ. ಆದ್ದರಿಂದ ಪದ್ಮರಾಜನ್ ಅವರ ನಾಮಪತ್ರ ತಿರಸ್ಕೃತಗೊಳ್ಳಲಿದೆ. ಆದರೂ ಮತ್ತೆ ಎಲ್ಲಾ ದಾಖಲೆಗಳನ್ನು ಒದಗಿಸಿ ಬೇರೆ ನಾಮಪತ್ರ ಸಲ್ಲಿಕೆ ಮಾಡಬಹುದಾಗಿತ್ತು. ಆದರೆ, ಕಾಲ ಮೀರಿತ್ತು. ಪದ್ಮರಾಜನ್ ಚುನಾವಣೆಗೆ ನಿಲ್ಲುವ ಮುನ್ನವೇ ಹಿಂದೆ ಹೆಜ್ಜೆ ಇಟ್ಟಿದ್ದಾರೆ.