ಕಾರವಾರ ಕ್ಷೇತ್ರ: ಕಡಲ ಕಿನಾರೆ ಒಲಿಯುವುದು ಯಾರಿಗೆ?
ಕಾರವಾರ, ಜನವರಿ 10: ಪ್ರಕೃತಿ ಸೌಂದರ್ಯದ ನೆಲವೀಡಾದ ಉತ್ತರ ಕನ್ನಡ ಜಿಲ್ಲೆಗೆ ಜಲಪಾತಗಳ ಜಿಲ್ಲೆ ಎಂಬ ಉಪಮೇಯವೂ ಇದೆ. ಅಡಿಕೆ ಬೆಲೆ ಮತ್ತು ನಿಸರ್ಗಕ್ಕೆ ಪೂರಕವಾಗುವ ಕೆಲಸಗಳಿಗೆ ಒತ್ತು ನೀಡುವವರನ್ನೇ ಜಿಲ್ಲೆಯ ಜನ ಗೆಲ್ಲಿಸುತ್ತ ಬಂದಿದ್ದಾರೆ.
ಕಾರವಾರ ಇಲ್ಲಿನ ಒಂದು ಬಹುಮುಖ್ಯ ವಿಧಾನಸಭಾ ಕ್ಷೇತ್ರ. ನೊಬೆಲ್ ಪುರಸ್ಕೃತ ಕವಿ ರವೀಂದ್ರನಾಥ್ ಠಾಗೂರರಿಗೆ ಗೀತಾಂಜಲಿ ರಚಿಸಲು ಸ್ಫೂರ್ತಿಯಾಗಿದ್ದು ಇದೇ ಕಾರವಾರದ ಕಡಲತೀರವಂತೆ. ಅದಕ್ಕೆಂದೇ ಇಲ್ಲಿನ ಕಡಲ ತೀರಕ್ಕೆ, ರವೀಂದ್ರನಾಥರ ಹೆಸರು!
ಆನಂದ್ ಅಸ್ನೋಟಿಕರ್ ಇನ್ನೂ ಜೆಡಿಎಸ್ ಸೇರ್ಪಡೆಗೊಂಡಿಲ್ಲ
ಕರ್ನಾಟಕ ಹಾಗೂ ಗೋವೆಯ ಗಡಿಯಿಂದ ದಕ್ಷಿಣಕ್ಕೆ ಸುಮಾರು 15 ಕಿ.ಮೀ. ದೂರದಲ್ಲಿರುವ ಕಾರವಾರ ಅರಬ್ಬೀ ಸಮುದ್ರದಂಚಿನಲ್ಲಿರುವ ನಗರ.
ಬೆಂಗಳೂರಿನಿಂದ ಸುಮಾರು 520 ಕಿ.ಮೀ. ವಾಯುವ್ಯ ದಿಕ್ಕಿನಲ್ಲಿದೆ. ಕಡಲ ಕಿನಾರೆಯ ಈ ನಗರವು ಪ್ರವಾಸಿಗರ ತಾಣವೂ ಹೌದು. ಇಲ್ಲಿನ ಕಡಲು ಹಾಗೂ ಸುತ್ತಲೂ ಇರುವ ಪುರಾಣ ಪ್ರಸಿದ್ಧ ಸ್ಥಳಗಳಾದ ಗೋಕರ್ಣ, ಮುರುಡೇಶ್ವರಹಾಗೂ ಹಲವಾರು ಚಿಕ್ಕ, ದೊಡ್ಡ ಪವಿತ್ರ ಸ್ಥಳಗಳು, ಹತ್ತಾರು ಸುಂದರ ಕಡಲ ಕಿನಾರೆಗಳು ಎಲ್ಲರನ್ನೂ ಕೈಬೀಸಿ ಕರೆಯುತ್ತದೆ.
ಅರಬ್ಬೀ ಸಮುದ್ರದ ಬಂದರಾಗಿ ಅಭಿವೃದ್ಧಿಪಡಿಸಲಾದ ಕಾರವಾರ ಕರ್ನಾಟಕದ ಎರಡನೆ ಪ್ರಮುಖ ಬಂದರು. ದೇಶದ ಅತೀ ದೊಡ್ಡ ನೌಕಾನೆಲೆ ಕಾರವಾರ. ಕರ್ನಾಟಕದ ಏಕೈಕ ಅಣು ವಿದ್ಯುತ್ ಸ್ಥಾವರ ಕೈಗಾ ಕಾರವಾರದಲ್ಲಿದೆ.ಕಾಳಿ ನದಿ ತೀರದಲ್ಲಿರುವ ಕಾರವಾರದ ಭಾರತದ ಪಶ್ಚಿಮ ಕರಾವಳಿ ಭಾಗದಲ್ಲಿ ಗುರುತಿಸಿಕೊಂಡಿದೆ. ನೀರಾವರಿ, ವಿದ್ಯುತ್ ಯೋಜನೆಗಳಿಗೆ ಪರಿಸರಪ್ರೇಮಿಗಳಿಂದ ವಿರೋಧ ಇದ್ದೇ ಇದೆ.
ಮತ ಒಲಿಯುವುದು ಯಾರಿಗೆ?
ಕನ್ನಡ ಇಲ್ಲಿನ ಆಡಳಿತ ಭಾಷೆಯಾದರೂ, ಬಹುಪಾಲು ಕೊಂಕಣಿ ಭಾಷಿಗರು, ಗೋವಾ ಹಾಗೂ ಮುಂಬೈ ಭಾಗದ ಸಂಸ್ಕೃತಿಯ ಛಾಪು ಎದ್ದು ಕಾಣುತ್ತದೆ. ಮರಾಠಿಗರ ಪ್ರಭಾವ ಕೂಡಾ ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಬಲ್ಲದು. ಮೀನುಗಾರಿಕೆ ಅಲ್ಲದೆ, ಪಶು ಸಂಗೋಪಣೆ, ರೇಷ್ಮೆ, ತೋಟಗಾರಿಕೆ, ಔಷಧೀಯ ಸಸ್ಯಗಳ ವಾಣಿಜ್ಯ ವ್ಯವಹಾರ, ಜೇನು ಕೃಷಿ, ವಿವಿಧ ಹಣ್ಣು, ಹೂವು ಬೆಳೆಗಾರರು ಯಥೇಚ್ಛವಾಗಿ ಕಾಣ ಸಿಗುತ್ತಾರೆ. ಹೀಗಾಗಿ ಸಣ್ಣ ಹಾಗೂ ಮಧ್ಯಮ ಕೈಗಾರಿಕೆ ಮೇಲೆ ಯಾವ ಪಕ್ಷದವರು ಗಮನ ಹರಿಸುತ್ತಾರೋ ಅವರ ಕಡೆಗೆ ಹೆಚ್ಚಿನ ಮತ ಒಲಿಯಲಿದೆ.
ಆದಾಯವೆಲ್ಲ ಪರರಾಜ್ಯದ ಪಾಲು!
ಇದಲ್ಲದೆ, ರಾಸಾಯನಿಕ ಮಸ್ಲಿನ್ ಬಟ್ಟೆ, ಆಭರಣವಿನ್ಯಾಸ, ಏಲಕ್ಕಿ, ಗೋಡಂಬಿ, ಮೆಣಸು ಸೇರಿದಂತೆ ಸಾಂಬಾರು ಪದಾರ್ಥಗಳ ಮಾರುಕಟ್ಟೆಗೆ ರಾಜ್ಯದ ಇತರೆಡೆಯಿಂದ ಸರಿಯಾದ ಸಂಪರ್ಕವಿಲ್ಲ. ಹುಬ್ಬಳ್ಳಿ ಧಾರವಾಡದ ಮಾರುಕಟ್ಟೆಯನ್ನು ನಂಬಿಕೊಳ್ಳಬೇಕು. ಇಲ್ಲದಿದ್ದರೆ ಆದಾಯವೆಲ್ಲವೂ ಪರರಾಜ್ಯ ಪಾಲಾಗುವುದನ್ನು ತಪ್ಪಿಸಲು ಸಾಧ್ಯವಾಗುತ್ತಿಲ್ಲ. ಕೊಂಕಣ್ ರೈಲ್ವೆಯ ಲಾಭ ಗೋವಾ, ಮಹಾರಾಷ್ಟ್ರಕ್ಕೆ ಸಿಗುತ್ತಿರುವುದು ಸುಳ್ಳಲ್ಲ. ಈ ಬಗ್ಗೆ ಯಾವೊಬ್ಬ ಜನಪ್ರತಿನಿಧಿಯು ಸೊಲ್ಲೆತ್ತಿಲ್ಲ.
ಬೇಲೆಕೇರಿ ಅದಿರು ಪ್ರಕರಣ ಸದ್ದು ಮಾಡೀತೆ?
ಇನ್ನು ಕಾರವಾರ ವಿಧಾನಸಭಾ ಕ್ಷೇತ್ರದ ರಾಜಕೀಯ ವೃತ್ತಾಂತ ಅವಲೋಕಿಸುವುದಾದರೆ ಪಕ್ಷೇತರ ಹಾಲಿ ಶಾಸಕ ಸತೀಶ್ ಸೈಲ್ ಕಾಂಗ್ರೆಸ್ ಬಾಗಿಲು ತಟ್ಟುತ್ತಿದ್ದಾರೆ. ಅವರು ಕಾಂಗ್ರೆಸ್ ನಿಂದ ಟಿಕೇಟ್ ದೊರಕುವ ನಿರೀಕ್ಷೆಯಲ್ಲಿದ್ದರೆ, ಆನಂದ್ ಅಸ್ನೋಟಿಕರ್ ಬಿಜೆಪಿಯಲ್ಲಿ ಸಕ್ರಿಯರಾಗಲು ಯತ್ನಿಸುತ್ತಿದ್ದಾರೆ. ಸತೀಶ್ ಸೈಲ್ ಹೆಸರು ಬೇಲೆಕೇರಿ ಅದಿರು ಪ್ರಕರಣದಲ್ಲಿ ತಗುಲುಹಾಕಿಕೊಂಡಿರುವುದರಿಂದ, ಇದರ ಉಪಯೋಗವನ್ನು ಬಿಜೆಪಿ ಪಡೆದುಕೊಳ್ಳುವ ನಿರೀಕ್ಷೆಯಿದೆ.
ಸತೀಶ್ ಸೇಲ್ ಮತ್ತೆ ಗೆಲ್ತಾರಾ..?
ಉಷ್ಣವಿದ್ಯತ್ ಸ್ಥಾವರದಿಂದಾಗಿ ಪರಿಸರಕ್ಕೆ ಹಾನಿ, ಅಡಿಕೆದರ, ಶಿಥಿಲಗೊಂಡ ರಸ್ತೆ, ಈಗೀಗ ನೀರಿನ ಸಮಸ್ಯೆ, ಮೂಲಸೌಕರ್ಯಗಳ ಕೊರತೆ ಇವೇ ಈ ಕ್ಷೇತ್ರದ ಬಹುಮುಖ್ಯ ಸಮಸ್ಯೆಗಳು. 2013 ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಿಂತು ಸತೀಶ್ ಸೇಲ್ 80727 ಮತಗಳನ್ನು ಪಡೆದು ಬಿಜೆಪಿಯ ಆನಂದ್ ಅಸ್ನೋಟಿಕರ್(44847) ವಿರುದ್ಧ ಗೆಲುವು ಸಾಧಿಸಿದ್ದರು. ಈ ಬಾರಿಯೂ ಅವರೇ ಗೆಲ್ಲುತ್ತಾರೆಯೇ? ಕಡಲ ಕಿನಾರೆ ಯಾರಿಗೆ ಒಲಿಯಲಿದೆ ಎಂಬುದನ್ನು ಕಾದುನೋಡಬೇಕು.