ಕ್ಷೇತ್ರ ಪರಿಚಯ : ಪಕ್ಷಗಳ ಪ್ರಾಬಲ್ಯಕ್ಕಿಲ್ಲಿ 2ನೇ ಸ್ಥಾನ!
ಹರಿಹರೇಶ್ವರನ ನೆಲೆಯಿಂದಾಗಿ ಐತಿಹಾಸಿಕವಾಗಿ ಪ್ರಸಿದ್ಧಿ ಪಡೆದಿರುವ ಕ್ಷೇತ್ರ ದಾವಣಗೆರೆ ಜಿಲ್ಲೆಯ ಹರಿಹರ. ದಾವಣಗೆರೆ-ಹರಿಹರ ಅವಳಿ ನಗರಗಳು. ಇಟ್ಟಿಗೆ ಭಟ್ಟಿ, ಮರಳು ಗಣಿಗಾರಿಕೆಗೆ ಕ್ಷೇತ್ರ ಪ್ರಸಿದ್ಧಿ ಪಡೆದಿದೆ. ಉತ್ತರ ಮತ್ತು ದಕ್ಷಿಣ ಕರ್ನಾಟಕವನ್ನು ರೈಲು, ರಸ್ತೆ ಮಾರ್ಗದಲ್ಲಿ ಸಂಪರ್ಕಿಸುವ ಕ್ಷೇತ್ರವಿದು.
ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯನ್ನು ಒಡಲಲ್ಲಿ ಹೊಂದಿದೆ ಹರಿಹರ. ಜಿಲ್ಲೆಯಲ್ಲಿ ಹೆಚ್ಚು ಭತ್ತ ಬೆಳೆಯುವ ತಾಲೂಕುಗಳಲ್ಲಿ ಹರಿಹರವೂ ಒಂದು. ಕೆಎಸ್ಆರ್ಟಿಸಿ ಮತ್ತು ಖಾಸಗಿ ಬಸ್ಸುಗಳು ಹೆಚ್ಚಾಗಿ ಸಂಚರಿಸುತ್ತವೆ. ಉತ್ತರ ಕರ್ನಾಟಕ, ರಾಜಧಾನಿ ಬೆಂಗಳೂರನ್ನು ಬೆಸೆಯುವ ರೈಲು ಮಾರ್ಗವೂ ಹರಿಹರ ಮೂಲಕ ಹಾದು ಹೋಗುತ್ತದೆ.
ಪಕ್ಷಗಳ ಪ್ರಾಬಲ್ಯಕ್ಕೆ ಇಲ್ಲಿ ಎರಡನೇ ಸ್ಥಾನ. ಜಾತಿ ಲೆಕ್ಕಾಚಾರವೇ ಇಲ್ಲಿ ಪ್ರಥಮ. ಪಕ್ಷಕ್ಕಿಂತ ಅಭ್ಯರ್ಥಿಗಳ ಜಾತಿಗೆ ಬೆಂಬಲ ಹೆಚ್ಚು. ಹರಿಹರದಿಂದ ಲಿಂಗಾಯತ ಇಲ್ಲವೇ ಕುರುಬ ಸಮುದಾಯದ ಅಭ್ಯರ್ಥಿಗಳು ಸ್ಪರ್ಧಿಸುವುದು ವಾಡಿಕೆ.

ರಾಜಕೀಯವಾಗಿ ಜೆಡಿಎಸ್ನ ಎಚ್.ಎಸ್.ಶಿವಶಂಕರ್ ಕ್ಷೇತ್ರದ ಹಾಲಿ ಶಾಸಕರು. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ನ ಎಸ್.ರಾಮಪ್ಪ ಅವರನ್ನು ಸೋಲಿಸಿದ್ದಾರೆ. ಕೆಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಯಡಿಯೂರಪ್ಪ ಆಪ್ತರಾದ ಬಿ.ಪಿ.ಹರೀಶ್ ಸಹ ಸೋತಿದ್ದರು. ಬಿಜೆಪಿ ಠೇವಣಿ ಕಳೆದುಕೊಂಡಿತ್ತು.
ಈ ಬಾರಿ ಬಿ.ಪಿ.ಹರೀಶ್ ಬಿಜೆಪಿಯಿಂದ ಸ್ಪರ್ಧಿಸಲಿದ್ದಾರೆ. ಅಚ್ಚರಿಯ ಅಭ್ಯರ್ಥಿ ಎಂಬಂತೆ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ವಿಶ್ರಾಂತ ಕುಲಪತಿ ಮಹೇಶ್ವರಪ್ಪ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಹಬ್ಬಿದೆ.
ಶಿವಮೊಗ್ಗ ರಾಜಕೀಯದ ಪ್ರಭಾವ ಹರಿಹರದಲ್ಲೂ ಸ್ಪಲ್ಪ ಮಟ್ಟಿಗೆ ಕೆಲಸ ಮಾಡುತ್ತದೆ. ಆದ್ದರಿಂದ, ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಬಹುದು ಎಂಬುದು ಲೆಕ್ಕಾಚಾರ.
ಎಸ್.ರಾಮಪ್ಪ ಅವರನ್ನು ಗೆಲ್ಲಿಸಬೇಕು ಎಂದು ಕಾಂಗ್ರೆಸ್ ನಾಯಕರು ಒಂದಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹರಿಹರ ಕಾಂಗ್ರೆಸ್ ಎಂಬ ಪೇಜ್ ಸಕ್ರಿಯವಾಗಿದೆ. ಭರ್ಜರಿಯಾಗಿ ಪ್ರಚಾರ ನಡೆಯುತ್ತಿದೆ.
2013ರ ಚುನಾವಣೆಯಲ್ಲಿ ಎಚ್.ಎಸ್.ಶಿವಶಂಕರಪ್ಪ 59,666 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್ನ ಎಸ್.ರಾಮಪ್ಪ 40,613 ಮತ, ಬಿಜೆಪಿಯ ಎಸ್.ಎಂ.ವಿರೇಶ್ 5,959 ಮತ, ಕೆಜೆಪಿಯಿಂದ ಸ್ಪರ್ಧಿಸಿದ್ದ ಬಿ.ಪಿ.ಹರೀಶ್ 37,786 ಮತಗಳನ್ನು ಪಡೆದಿದ್ದರು.












Click it and Unblock the Notifications