ಹಿಂದುತ್ವ: ಸಿದ್ದರಾಮಯ್ಯ Vs ಯೋಗಿ ಆದಿತ್ಯನಾಥ್: ಬಿಜೆಪಿ ಮೇಲುಗೈ?
Recommended Video

ಕರ್ನಾಟಕ ಅಸೆಂಬ್ಲಿ ಚುನಾವಣಾ ವರ್ಷದಲ್ಲಿ, ರಾಜಕೀಯ ಜಿದ್ದಾಜಿದ್ದಿನಿಂದ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗುತ್ತಿರುವ, ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ವಾಕ್ಸಮರ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ಈ ಎರಡು ಪಕ್ಷಗಳ ಅಬ್ಬರದ ನಡುವೆ, ಜೆಡಿಎಸ್ ಯಾಕೋ ಮಂಕಾದಂತಿದೆ.
ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಎರಡು ಸುತ್ತಿನ ಕರ್ನಾಟಕ ಪ್ರವಾಸದ ನಂತರ, ಯಾವ ವಿಚಾರದ ಮೇಲೆ ಚುನಾವಣಾ ಪ್ರಚಾರ ನಡೆಸಬೇಕು ಎನ್ನುವ ಕಾಂಗ್ರೆಸ್ಸಿನ ಲೆಕ್ಕಾಚಾರ ಉಲ್ಟಾ ಹೊಡೆಯುತ್ತಿದೆಯಾ?
ಪ್ರಣಾಳಿಕೆಯಲ್ಲಿ ಏನು ಭರವಸೆ ನೀಡಿದ್ದೇವೋ ಅದನ್ನೆಲ್ಲಾ ಪೂರೈಸಿದ್ದೇವೆ, ನಮಗೆ ಕೂಲಿ ಕೊಡಿ ಎಂದು ಸಾಧನಾ ಸಮಾವೇಶದಲ್ಲಿ ಭಾಷಣ ಮಾಡುತ್ತಿದ್ದ ಸಿದ್ದರಾಮಯ್ಯನವರು, ಸದ್ಯ ಹಿಂದುತ್ವ, ಬಿಜೆಪಿ, RSS ಸುತ್ತ ತಮ್ಮ ಹೇಳಿಕೆಯನ್ನು ಕೇಂದ್ರೀಕರಿಸುತ್ತಿದ್ದಾರೆ. ಜೊತೆಗೆ, ಕಾಂಗ್ರೆಸ್ ಮುಖಂಡರೂ 'ಹಿಂದುತ್ವದ' ವಿಚಾರದಲ್ಲೇ ಗಿರಿಗಿಟ್ಲೆಯಾಡುತ್ತಿದ್ದಾರೆ.
ಬಿಜೆಪಿ ಮತ್ತು RSSಗೆ ಸಿದ್ದರಾಮಯ್ಯ 'ಉಗ್ರ' ಪಟ್ಟಕೊಟ್ಟ ನಂತರ ವ್ಯಾಪಕ ಪ್ರತಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ, ಮುಖ್ಯಮಂತ್ರಿಗಳು ಒಮ್ಮೆ Uಟರ್ನ ಹೊಡೆದು, ನಂತರ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ನಾವು ಭಯೋತ್ಪಾದಕರು ನಮ್ಮನ್ನು ಜೈಲಿಗೆ ಅಟ್ಟಿ, ಇಲ್ಲಾಂದ್ರೆ ಕ್ಷಮೆ ಕೇಳಿ ಎಂದು ಸಿಎಂ ಈ ಹೇಳಿಕೆಯ ವಿಚಾರಕ್ಕೆ ಬಿಜೆಪಿಯವರು ಮತ್ತಷ್ಟು ಜೀವ ತುಂಬುತ್ತಿದ್ದಾರೆ.
ಹತ್ತೊಂಬತ್ತು ರಾಜ್ಯಗಳಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಅಧಿಕಾರದಲ್ಲಿರುವಾಗ, ದಿನದಿಂದ ದಿನಕ್ಕೆ 'ಕಾಂಗ್ರೆಸ್ ಮುಕ್ತ್ ಭಾರತ್' ಆಗುತ್ತಿರುವಾಗ, ಕಾಂಗ್ರೆಸ್ ನೇತೃತ್ವದ ಸರಕಾರದ ಮುಖ್ಯಮಂತ್ರಿಯೊಬ್ಬರು ಬಿಜೆಪಿಯನ್ನು ಉಗ್ರರಿಗೆ ಹೋಲಿಸಿದ್ದು, ಮತದಾರರಿಗೆ ಮಾಡಿದ ಅವಮಾನ ಎಂದು ಬಿಜೆಪಿ ರಾಷ್ಟ್ರೀಯ ಮಟ್ಟದಲ್ಲಿ ಮೈಲೇಜ್ ತೆಗೆದುಕೊಳ್ಳಲು ಮುಂದಾಗಿದೆ. ಮುಂದೆ ಓದಿ..

ಹಿಂದುತ್ವದ ಮೇಲೆಯೇ ಚುನಾವಣೆಗೆ ಹೋಗಬೇಕು
ಅಭಿವೃದ್ದಿ ವಿಚಾರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಚುನಾವಣೆಗೆ ಹೋದರೆ, ಪಕ್ಷಕ್ಕೆ ಕೊಂಚ ಹಿನ್ನಡೆಯಾಗಬಹುದು ಎನ್ನುವುದನ್ನು ಅರಿತಿರುವ ಬಿಜೆಪಿ ವರಿಷ್ಠರು, ಹಿಂದುತ್ವದ ಮೇಲೆಯೇ ಚುನಾವಣೆಗೆ ಹೋಗಬೇಕು ಎನ್ನುವ ಕಟ್ಟುನಿಟ್ಟಿನ ಸೂಚನೆಯನ್ನು ರಾಜ್ಯ ಬಿಜೆಪಿ ಮುಖಂಡರಿಗೆ ನೀಡಿದ್ದಾರೆ ಎನ್ನುವ ಮಾಹಿತಿಯಿದೆ.

ಕನಿಷ್ಠ ಎಂಟು ಬಾರಿಯಾದರೂ ಚುನಾವಣಾ ಪ್ರಚಾರದಲ್ಲಿ ಯೋಗಿ
ಕರ್ನಾಟಕ ಚುನಾವಣೆಯ ಬಹಿರಂಗ ಪ್ರಚಾರ ಮುಗಿಯುವ ಮುನ್ನ ಕನಿಷ್ಠ ಎಂಟು ಬಾರಿಯಾದರೂ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಬೇಕು ಎನ್ನುವ ವರಿಷ್ಠರ ಸೂಚನೆಯ ಹಿನ್ನಲೆಯಲ್ಲಿ ಎರಡು ಬಾರಿ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಈಗಾಗಲೇ ರಾಜ್ಯಕ್ಕೆ ಬಂದು ಹೋಗಿದ್ದಾರೆ. ಜೊತೆಗೆ, ಹಿಂದುತ್ವದ ವಿಚಾರಕ್ಕೆ ನಾಂದಿ ಹಾಡಿ ಹೋಗಿದ್ದಾರೆ. ಯೋಗಿ ಬಂದು ಹೋದ ನಂತರ, ಕಾಂಗ್ರೆಸ್ಸಿನವರೂ ಹಿಂದುತ್ವದ ಬಗ್ಗೆ ಹೇಳಿಕೆ ನೀಡಲು ಆರಂಭಿಸಿದ್ದಾರೆ. ಅಲ್ಲಿಗೆ, ಅಮಿತ್ ಶಾ ಏನು ಚುನಾವಣಾ ಪ್ರಚಾರಕ್ಕೆ ತಳಹದಿ ಬಯಸಿದ್ದರೋ, ಅದು ಆದಂತಾಗಿದೆ ಎನ್ನುವ ಮಾತಿದೆ.

ಹಿಂದುತ್ವದ ವಿಚಾರಕ್ಕೆ ಬರಲಿ ಎನ್ನುವ ಬಿಜೆಪಿಯ ತಂತ್ರಗಾರಿಕೆ
ಜನರ ತೆರಿಗೆ ದುಡ್ಡಿನಲ್ಲಿ ಸಾಧನಾ ಸಮಾವೇಶ ಮಾಡುತ್ತಿರುವ ಮುಖ್ಯಮಂತ್ರಿಗಳು, ಸರಕಾರದ ಇದುವರೆಗಿನ ಸಾಧನೆಯ ಬಗ್ಗೆ ಜನರಿಗೆ ವಿವರಿಸುವುದನ್ನು ಬಿಟ್ಟು, ಬಿಜೆಪಿ, RSS, ಗೋಹತ್ಯೆಯ ಹಿಂದೆ ಬಿದ್ದಿದ್ದಾರೆ. ಗೋಹತ್ಯೆ ನಿಲ್ಲಿಸಬೇಕೆಂದು ಹೇಳುವ ಪ್ರಧಾನಿ ಮೋದಿಯವರ ಅವಧಿಯಲ್ಲಿ ಬೀಫ್ ರಫ್ತು ಹೆಚ್ಚಾಗಿರುವುದು ಯಾಕೆ ಎಂದು ಸಾರ್ವಜನಿಕ ಸಭೆಯಲ್ಲಿ ಪ್ರಶ್ನಿಸುತ್ತಿದ್ದಾರೆ. ಇದೆಲ್ಲಾ ಹಿಂದುತ್ವದ ವಿಚಾರಕ್ಕೆ ಬರಲಿ ಎನ್ನುವ ಬಿಜೆಪಿಯ ತಂತ್ರಗಾರಿಕೆ ಎನ್ನಲಾಗುತ್ತಿದೆ.

ಹಿಂದುತ್ವದ ಪ್ರಯೋಗ ನಡೆಸಿ ಸದ್ಯದ ಮಟ್ಟಿಗೆ ಮೇಲುಗೈ
ಹಲವು ಭಾಗ್ಯ ಯೋಜನೆಗಳು, ಜನಪ್ರಿಯ ಇಂದಿರಾ ಕ್ಯಾಂಟೀನ್, ಕನ್ನಡಪರ ನಿಲುವು, ಉಭಯ ರಾಜ್ಯಗಳ ನದಿನೀರು ಹಂಚಿಕೆಯಲ್ಲಿ ಸಮರ್ಥ ನಡೆ ಮುಂತಾದವುಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಿದರೆ, ಸಿದ್ದರಾಮಯ್ಯ ಮೇಲುಗೈ ಸಾಧಿಸುವ ಸಾಧ್ಯತೆ ಜಾಸ್ತಿ ಎನ್ನುವುದನ್ನು ಅರಿತಿರುವ ಅಮಿತ್ ಶಾ, ಹಿಂದುತ್ವದ ಪ್ರಯೋಗ ನಡೆಸಿ ಸದ್ಯದ ಮಟ್ಟಿಗೆ ಮೇಲುಗೈ ಸಾಧಿಸಿರುವುದು ಸ್ಪಷ್ಟ.

ಅಭಿವೃದ್ದಿ ಮಂತ್ರಕ್ಕೆ ಎರಡನೇ ಪ್ರಾಶಸ್ತ್ಯ ಸಿಗುವ ಎಲ್ಲಾ ಲಕ್ಷಣಗಳು
ನಾವೂ ಹಿಂದೂಗಳು, ನಾವು ದೇವರನ್ನು ನಂಬುತ್ಟೇವೆ, ದೇವಸ್ಥಾನಕ್ಕೆ ಹೋಗುತ್ತೇವೆ. ಯೋಗಿ ಬೇಕಾದರೆ ಐವತ್ತು ಸಲ ಬರಲಿ, ಅಮಿತ್ ಶಾ ನೂರು ಸಲ ಬರಲಿ, ನಮಗೆ ಭಯವಿಲ್ಲ ಎಂದು ಸಿದ್ದರಾಮಯ್ಯ, ಪರಮೇಶ್ವರ್, ದಿನೇಶ್ ಗುಂಡೂರಾವ್ ಆದಿಯಾಗಿ ಕಾಂಗ್ರೆಸ್ ಮುಖಂಡರು' ಹಿಂದುತ್ವದ' ಜಪವನ್ನು ಮಾಡುತ್ತಿರುವುದು, ಮುಂದಿನ ದಿನಗಳಲ್ಲಿ ಇನ್ನಷ್ಟು ತೀಕ್ಷ್ಣವಾಗುವ ಸಾಧ್ಯತೆಯಿರುವುದರಿಂದ, ಚುನಾವಣಾ ಪ್ರಚಾರದಲ್ಲಿ ಅಭಿವೃದ್ದಿ ಮಂತ್ರಕ್ಕೆ ಎರಡನೇ ಪ್ರಾಶಸ್ತ್ಯ ಸಿಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.












Click it and Unblock the Notifications