ವಿಡಿಯೋ : ಹಿರಿಯೂರು ಜೆಡಿಎಸ್ ಅಭ್ಯರ್ಥಿ ಡಿ.ಯಶೋಧರ್ ಸಂದರ್ಶನ
Recommended Video
ಚಿತ್ರದುರ್ಗ, ಏಪ್ರಿಲ್ 18 : 'ಹಿರಿಯೂರು ಕ್ಷೇತ್ರದ ಜನರು ಸ್ಥಳೀಯ ಅಭ್ಯರ್ಥಿಯನ್ನು ಬೆಂಬಲಿಸಬೇಕು. ರಾಷ್ಟ್ರೀಯ ಪಕ್ಷಗಳು ಹೊರಗಡೆಯಿಂದ ಅಭ್ಯರ್ಥಿಯನ್ನು ಕರೆತಂದು ಚುನಾವಣೆಗೆ ನಿಲ್ಲಿಸಿ, ಜನರ ಆಶಯವನ್ನು ಗಾಳಿಗೆ ತೂರುತ್ತಿವೆ' ಎಂದು ಜೆಡಿಎಸ್ ಅಭ್ಯರ್ಥಿ ಡಿ.ಯಶೋಧರ್ ಆರೋಪಿಸಿದರು.
ಡಿ.ಯಶೋಧರ್ ಚಿತ್ರದುರ್ಗ ಜಿಲ್ಲಾ ಜೆಡಿಎಸ್ ಅಧ್ಯಕ್ಷರು. 2018ರ ವಿಧಾನಸಭೆ ಚುನಾವಣೆಗೆ ಹಿರಿಯೂರು ಕ್ಷೇತ್ರದಿಂದ ಅವರು ಸ್ಪರ್ಧಿಸುತ್ತಿದ್ದಾರೆ. ಒನ್ ಇಂಡಿಯಾ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಚುನಾವಣೆ ಸಿದ್ಧತೆ, ಎದುರಾಳಿ ಮುಂತಾದ ವಿಚಾರಗಳ ಕುರಿತು ಮಾತನಾಡಿದ್ದಾರೆ.
ಕ್ಷೇತ್ರ ಪರಿಚಯ : ತ್ರಿಕೋನ ಸ್ಪರ್ಧೆಯಲ್ಲಿ ಹಿರಿಯೂರು
ಹಿರಿಯೂರಿನಲ್ಲಿ ನಿಮ್ಮ ಎದುರಾಳಿ ಯಾರು?
ಕ್ಷೇತ್ರದಲ್ಲಿ ನಮ್ಮ ಎದುರಾಳಿ ಕಾಂಗ್ರೆಸ್. ಗ್ರಾಮೀಣ ಮತ್ತು ಪಟ್ಟಣ ಪ್ರದೇಶದಲ್ಲಿ ಪಕ್ಷದ ಹಲವು ಕಾರ್ಯಕರ್ತರಿದ್ದಾರೆ. ಸಾಂಪ್ರದಾಯಿಕ ಮತಗಳನ್ನು ಪಕ್ಷ ಹೊಂದಿದೆ. ಆದ್ದರಿಂದ, ಅವರು ನನ್ನ ಎದುರಾಳಿ.
ಕ್ಷೇತ್ರದಲ್ಲಿ ಬಿಜೆಪಿ ಈ ವರೆಗಿನ ಚುನಾವಣೆಯಲ್ಲಿ ಹೇಳಿಕೊಳ್ಳುವಂತಹ ಸಾಧನೆ ಮಾಡಿಲ್ಲ. ಈ ಬಾರಿ ಬಾರಿ ಬೆಂಗಳೂರಿನಿಂದ ಅಭ್ಯರ್ಥಿಯನ್ನು ಕರೆತಂದು ಚುನಾವಣೆಗೆ ನಿಲ್ಲಿಸಲಾಗಿದೆ. ಆದ್ದರಿಂದ, ಬಿಜೆಪಿಯನ್ನು ಗಂಭೀರವಾಗಿ ಪರಿಗಣಿಸಿದ್ದೇನೆ.
ಹಿರಿಯೂರು: ಬಿಜೆಪಿ, ಜೆಡಿಎಸ್ ಅಬ್ಬರದ ಪ್ರಚಾರ, ಕಣಕ್ಕಿಳಿಯದ ಕಾಂಗ್ರೆಸ್
ಜೆಡಿಎಸ್ ಪಕ್ಷವನ್ನು ಏಕೆ ಬೆಂಬಲಿಸಬೇಕು?
'ಹಿರಿಯೂರು ಕ್ಷೇತ್ರದಲ್ಲಿ ಪ್ರಜಾತಂತ್ರ ವ್ಯವಸ್ಥೆಗೆ ವಿರುದ್ಧವಾಗಿ, ಜನರ ಆಶಯವನ್ನು ಗಾಳಿಗೆ ತೂರಿ ರಾಷ್ಟ್ರಿಯ ಪಕ್ಷಗಳು ಚುನಾವಣೆಯನ್ನು ನಡೆಸುತ್ತಿವೆ. ಸ್ಥಳೀಯ ನಾಯಕರನ್ನು ಕಡೆಗಣಿಸಿ, ಹೊರಗಿನಿಂದ ಅಭ್ಯರ್ಥಿಗಳನ್ನು ಕರೆತಂದು ಚುನಾವಣೆಗೆ ನಿಲ್ಲಿಸುತ್ತಿವೆ. ಈ ಕೆಟ್ಟ ವ್ಯವಸ್ಥೆ ದೂರವಾಗಲು ಸ್ಥಳೀಯ ಅಭ್ಯರ್ಥಿಯಾದ ನನ್ನನ್ನು ಬೆಂಬಲಿಸಬೇಕು, ಜನರು ಬೆಂಬಲ ನೀಡುತ್ತಾರೆ ಎಂಬ ವಿಶ್ವಾಸವಿದೆ'.
ಜೆಡಿಎಸ್ ಕಿಂಗ್ ಮೇಕರ್ ಆಗಲಿದೆಯೇ?
'ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಸ್ಪಷ್ಟ ಬಹುಮತ ಪಡೆದು ಸರ್ಕಾರ ರಚನೆ ಮಾಡಬೇಕು ಎಂಬುದು ಎಚ್.ಡಿ.ಕುಮಾರಸ್ವಾಮಿ ಮತ್ತು ಜೆಡಿಎಸ್ ಕಾರ್ಯಕರ್ತರ ಕನಸು. ಅದು ನನಸಾಗಲಿದೆ ಎಂಬ ನಂಬಿಕೆ ಇದೆ. ರಾಷ್ಟ್ರೀಯ ಪಕ್ಷಗಳ ಜೊತೆ ಅಧಿಕಾರ ಹಂಚಿಕೊಳ್ಳುವ ಚಿಂತನೆ ನಮಗಿಲ್ಲ'.