ಬೆಂಗಳೂರು ಬಸವನಗುಡಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಕೆ ಬಾಗೇಗೌಡ ಸಂದರ್ಶನ
Recommended Video

ಕರ್ನಾಟಕದ ಪ್ರಜ್ಞಾವಂತರ ಕ್ಷೇತ್ರಗಳ ಪೈಕಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಬರುವ ಬಸವನಗುಡಿ ಕ್ಷೇತ್ರವೂ ಒಂದು ಎಂದೇ ಹೇಳಲಾಗುತ್ತದೆ. ಕಳೆದ ಬಾರಿಯಂತೆ, ಈ ಬಾರಿಯೂ ಇಲ್ಲಿ ತ್ರಿಕೋಣ ಸ್ಪರ್ಧೆ.
ಆದರೆ, ಕಳೆದ ಬಾರಿ ಕಾಂಗ್ರೆಸ್ ಇಲ್ಲಿ ಸಮರ್ಥ ಅಭ್ಯರ್ಥಿಯನ್ನು ನಿಲ್ಲಿಸಿ ಬಿಜೆಪಿಗೆ ಪೈಪೋಟಿ ನೀಡಿತ್ತು. ಈ ಬಾರಿಯೂ ಕಾಂಗ್ರೆಸ್ಸಿನಿಂದ ಬೋರೇಗೌಡರು ಕಣದಲ್ಲಿದ್ದರೂ, ಅದ್ಯಾಕೋ ಅವರ ಪ್ರಚಾರ ಸರಿಯಾಗಿ ಕಿಕ್ಕೇ ಪಡೆದಿಲ್ಲ.
ಒಕ್ಕಲಿಗರು, ಅಹಿಂದ ಮತ್ತು ಬ್ರಾಹ್ಮಣ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವ ಬಸವನಗುಡಿಯಲ್ಲಿ, 1994ರಿಂದ ಇದುವರೆಗೆ ನಡೆದ ಐದು ಚುನಾವಣೆಯಲ್ಲಿ ಬಿಜೆಪಿ ನಾಲ್ಕು ಬಾರಿ ಗೆದ್ದಿದೆ. ಜೊತೆಗೆ, ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಆರು ಬಿಬಿಎಂಪಿ ವಾರ್ಡಿನಲ್ಲಿ ಬಿಜೆಪಿಯದ್ದೇ ಕಾರುಬಾರು.
ದೇವೇಗೌಡ್ರು ವಿಶೇಷ ಕಾಳಜಿ ವಹಿಸಿರುವ ಕ್ಷೇತ್ರಗಳಲ್ಲಿ ಒಂದೆಂದೇ ಬಿಂಬಿಸಲಾಗಿರುವ ಕ್ಷೇತ್ರಗಳ ಪೈಕಿ ಬಸವನಗುಡಿ ಕೂಡಾ ಒಂದು. ಈ ಬಾರಿ ಕ್ಷೇತ್ರದಲ್ಲಿ ಹದಿನೈದು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಜೊತೆ ಆಪ್, ಜೆಡಿಯು, ಆರ್ಪಿಐ, ಎಐಎಂಇಪಿ ಪಕ್ಷದ ಅಭ್ಯರ್ಥಿಗಳೂ ತಮ್ಮ ರಾಜಕೀಯ ಭವಿಷ್ಯವನ್ನು ಒರೆಗಚ್ಚಿದ್ದಾರೆ.
ಈ ಬಾರಿ ಬಸವನಗುಡಿಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ತುರುಸಿನ ಸ್ಪರ್ಧೆ ಇರುವುದು ಕ್ಷೇತ್ರವನ್ನು ರೌಂಡ್ ಹಾಕಿದಾಗ ಕಂಡು ಬಂದ ರಾಜಕೀಯ ಚಿತ್ರಣ. ಕ್ಷೇತ್ರದಿಂದ ಜೆಡಿಎಸ್ ಟಿಕೆಟಿನಿಂದ ಎರಡನೇ ಬಾರಿ ಸ್ಪರ್ಧಿಸುತ್ತಿರುವ ಕೆ ಬಾಗೇಗೌಡ ಅವರ ಜೊತೆ 'ಒನ್ ಇಂಡಿಯಾ' ನಡೆಸಿದ ಸಂದರ್ಶನದ ಹೈಲೆಟ್ಸ್, ಮುಂದೆ ಓದಿ.

ಬರೀ ಹದಿನೈದು ದಿನದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ನಿಂತುಕೊಂಡೆ
ಪ್ರ: ಕಳೆದ ಬಾರಿಯೂ ತ್ರಿಕೋಣ ಸ್ಪರ್ಧೆ, ಈ ಬಾರಿ ಹೇಗಿದೆ ರಾಜಕೀಯ ಚಿತ್ರಣ?
ಬಾಗೇಗೌಡ: ಕಳೆದ ಬಾರಿ ನಮಗೆ ಕಾಲಾವಕಾಶ ಕಡಿಮೆ ಸಿಕ್ಕಿತ್ತು. ಬರೀ ಹದಿನೈದು ದಿನದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ನಿಂತುಕೊಂಡೆ. ಯಾವ ಬೂತ್, ಎಲ್ಲಿ ಎಷ್ಟು ಜನರಿದ್ದಾರೆ ಮುಂತಾದ ಮಾಹಿತಿಗಳು ನನಗಿರಲಿಲ್ಲ. ಈ ಬಾರಿ ಉತ್ತಮ ಕಾಲಾವಕಾಶವನ್ನು ಪಕ್ಷ ನನಗೆ ನೀಡಿದೆ. ಪ್ರತೀ ಮನೆಮನೆಗೂ ಹೋಗಿ ಪ್ರಚಾರ ಮಾಡುತ್ತಿದ್ದೇವೆ.
ಎರಡು ಬಾರಿ ಬಿಜೆಪಿಗೆ, ಒಂದು ಬಾರಿ ಕಾಂಗ್ರೆಸ್ಸಿಗೆ ಮತದಾರ ಒಲಿದಿದ್ದಾನೆ. ಈ ಬಾರಿ ಪ್ರಾದೇಶಿಕ ಪಕ್ಷ ಕರ್ನಾಟಕದಲ್ಲಿ ಬರಬೇಕು, ಕುಮಾರಸ್ವಾಮಿ ಸಿಎಂ ಆಗಿ ಅಭಿವೃದ್ದಿ ಕೆಲಸ ನಡಿಯಲಿ ಎನ್ನುವ ಆಶಾಭಾವನೆ ಎಲ್ಲರಲ್ಲೂ ಇದೆ. ಕರ್ನಾಟಕದಲ್ಲಿ ಕುಮಾರಣ್ಣ, ಬಸವನಗುಡಿಯಲ್ಲಿ ಬಾಗೇಗೌಡರು ಎನ್ನುವುದು ಇಲ್ಲಿನ ಜನರ ಅಭಿಪ್ರಾಯ.
ಈ ಕ್ಷೇತ್ರದಲ್ಲಿ ಅಭಿವೃದ್ದಿ ಕೆಲಸಗಳು ನಡೆದಿಲ್ಲ. ಆಟದ ಮೈದಾನ, ರಸ್ತೆ, ಒಳಚರಂಡಿ ಮುಂತಾದ ವ್ಯವಸ್ಥೆಗಳು ಸರಿಯಿಲ್ಲ ಎನ್ನುವುದು ಮನೆಮನೆಗೆ ಹೋಗುತ್ತಿರುವುದರಿಂದ ಅರ್ಥವಾಗುತ್ತಿದೆ. ಬದಲಾವಣೆ ಮಾಡಬೇಕು ಎನ್ನುವುದನ್ನು ಜನ ತೀರ್ಮಾನಿಸಿದ್ದಾರೆ, ಅದನ್ನು ಮಾಡೇ ಮಾಡುತ್ತಾರೆ.

ಈ ಬಾರಿ ಗೆಲ್ಲಿಸಬೇಕು ಎನ್ನುವ ತವಕ ಮತದಾರರಲ್ಲಿದೆ
ಪ್ರ: ಕಾಂಗ್ರೆಸ್ ಕಾಟಾಚಾರಕ್ಕೆ ಅಭ್ಯರ್ಥಿಯನ್ನು ನಿಲ್ಲಿಸಿದ್ದಾರಾ?
ಬಾಗೇಗೌಡ: ಈಗ ಕಣದಲ್ಲಿರುವ ಕಾಂಗ್ರೆಸ್ ಅಭ್ಯರ್ಥಿ ನನಗೂ ಪರಿಚಯಸ್ಥರೇ, ಆದರೆ ಜನರಿಗೆ ಅವರ ಮುಖ ಪರಿಚಯವಿಲ್ಲ. ಮೊದಲು ಕಾಂಗ್ರೆಸ್ಸಿನ ಚಂದ್ರಶೇಖರ್ ಇದ್ದಾಗ, ಜನರೊಂದಿಗೆ ಬೆರೆಯುತ್ತಿದ್ದರು. ನಾವು ಕಳೆದ ಬಾರಿ ಚುನಾವಣೆ ಸೋತರೂ, ಜನರೊಂದಿಗೆ ಬೆರೆತೆವು, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದೆವು.
ಹೋದ ಸಲಿ ಅಣ್ಣನನ್ನು ಸೋಲಿಸಿದೆವು, ಈ ಬಾರಿ ಗೆಲ್ಲಿಸಬೇಕು ಎನ್ನುವ ತವಕ ಮತದಾರರಲ್ಲಿದೆ. ಜನ ಗೆಲ್ಲಿಸ್ತಾರೆ ಎನ್ನುವ ನಂಬಿಕೆಯಲ್ಲಿದ್ದೇನೆ.

ನಮ್ಮದು ಲೋಕಲ್ ಪಾರ್ಟಿ. ಜನ ಹರಸುತ್ತಾರೆ
ಪ್ರ: ಒಕ್ಕಲಿಗ ಸಮುದಾಯದ ಮತ ಒಡೆಯುವ ಉದ್ದೇಶ ಕಾಂಗ್ರೆಸ್ಸಿಗೆ ಇದೆಯಾ?
ಬಾಗೇಗೌಡ: ನೋಡೀ.. ಮಹಾಭಾರತದಲ್ಲೂ ಕುತುಂತ್ರವಿತ್ತು, ಇನ್ನು ಬಸವನಗುಡಿಯಲ್ಲಿ ಇರದೇ ಇರುತ್ತಾ? ರಾಜಕೀಯ ಎಂದ ಮೇಲೆ ಕುತಂತ್ರ ಇದ್ದೇ ಇರುತ್ತೆ. ಕಾಂಗ್ರೆಸ್ ಅವರ ಭಾವನೆಯಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಾರೆ. ಅವರದ್ದು ನ್ಯಾಷನಲ್ ಪಾರ್ಟಿ, ನಮ್ಮದು ಲೋಕಲ್ ಪಾರ್ಟಿ. ಜನ ಹರಸುತ್ತಾರೆ.

ಕ್ಯಾಂಡಿಡೇಟ್ ಗಳು ಸರಿಯಾಗಿ ಸ್ಪಂದಿಸುತ್ತಿರಲಿಲ್ಲ
ಪ್ರ: ಕ್ಷೇತ್ರದ ಆರರಲ್ಲಿ ಆರೂ ಬಿಬಿಎಂಪಿ ವಾರ್ಡ್ ಬಿಜೆಪಿ ಗೆದ್ದಿದೆಯಲ್ಲಾ?
ಬಾಗೇಗೌಡ: ಬಿಜೆಪಿ ಯಾಕೆ ಗೆದ್ದಿದ್ದು ಅಂದರೆ ನನಗೆ ಕಳೆದ ಬಾರಿ ಟೈಂ ಕಮ್ಮಿಯಿತ್ತು. ನಾನೂ ಸ್ವಲ್ಪ ಮನಸ್ತಾಪ ಮಾಡಿಕೊಂಡಿದ್ದೆ. ಏರಿಯಾಗೆ ಹೋಗಿರಲಿಲ್ಲ. ಮೊದಲಿನಿಂದಲೂ ಕ್ಷೇತ್ರದಲ್ಲಿ ಇದ್ದರೆ, ಎರಡ್ಮೂರು ಸೀಟು ಗೆಲ್ಲಿಸಿ ಕೊಡುತ್ತಿದೆ. ನಮ್ಮಲ್ಲಿದ್ದ ಕ್ಯಾಂಡಿಡೇಟ್ ಗಳು ಸರಿಯಾಗಿ ಸ್ಪಂದಿಸುತ್ತಿರಲಿಲ್ಲ ಎನ್ನುವ ಮಾತನ್ನು ಒಪ್ಪಿಕೊಳ್ಳುತ್ತೇನೆ. ಅದನ್ನೆಲ್ಲಾ ಈಗ ಕವರ್ ಮಾಡುತ್ತೇನೆ.

ಹತ್ತೆನ್ನೆರಡು ಸಾವಿರ ವೋಟ್ ಇದೆ
ಪ್ರ: ಅಹಿಂದ ಮತ ಹೆಚ್ಚಾಗಿರುವ ಕ್ಷೇತ್ರ, ಬಿಎಸ್ಪಿ ಮೈತ್ರಿ ವರ್ಕೌಟ್ ಆಗುತ್ತಾ?
ಬಾಗೇಗೌಡ: ಬಿಎಸ್ಪಿ ವೋಟೂ ಸ್ವಲ್ಪ ಇದೆ, ಅದಕ್ಕಿಂತ ಹೆಚ್ಚಾಗಿ ಅಹಿಂದ ಮತ ಜೆಡಿಎಸ್ ಪಕ್ಷಕ್ಕಿದೆ. 10-12ಸಾವಿರ ವೋಟ್ ಇದೆ. ಜಿಎಸ್ಟಿ, ನೋಟ್ ಬ್ಯಾನ್ ಮುಂತಾದ ವಿಚಾರದಿಂದ ಜನ ತೊಂದರೆ ಅನುಭವಿಸುತ್ತಿದ್ದಾರೆ. ಬಿಜೆಪಿಯವರು ಸಿಕ್ಕಾಪಟ್ಟೆ ಜಾಹೀರಾತು ಕೊಡುತ್ತಿದ್ದಾರೆ. ಭಗವಂತ ಅವರಿಗೆ ದುಡ್ಡು ಕೊಟ್ಟಿದ್ದಾನೆ. ಆದರೆ, ಕರ್ನಾಟಕದ ಜನ ಬುದ್ದಿವಂತರಿದ್ದಾರೆ. ಆರೂವರೆ ಕೋಟಿ ಜನ ಕುಮಾರಣ್ಣನ ಲೈಕ್ ಮಾಡುತ್ತಿದ್ದಾರೆ. ಅವರು ಸಿಎಂ ಆಗುತ್ತಾರೆ ಎನ್ನುವ ಭಾವನೆ ಜನರಿಗಿದೆ.

ಮೋದಿ ಈ ದೇಶದ ಪ್ರಧಾನಿ
ಪ್ರ: ಮೋದಿಯವರ ಪ್ರಚಾರ ಎಫೆಕ್ಟ್ ಆಗುತ್ತಾ?
ಬಾಗೇಗೌಡ: ನೋಡಿ.. ಅವರು ಈ ದೇಶದ ಪ್ರಧಾನಿ.. ಇಡೀ ದೇಶಕ್ಕೆ ಪ್ರಚಾರಕ್ಕೆ ಹೋಗುತ್ತಾರೆ. ಅವರನ್ನು ಇಲ್ಲಿ ಬರಬೇಡಿ ಅನ್ನೋಕೆ ನಾವ್ಯಾರು? ಅವರ ಪಕ್ಷದ ಪರವಾಗಿ ಪ್ರಚಾರ ಮಾಡೇ ಮಾಡುತ್ತಾರೆ.
ಪ್ರ: ಕ್ಷೇತ್ರದ ಮತದಾರರಲ್ಲಿ ನಿಮ್ಮ ಮನವಿ?
ಬಾಗೇಗೌಡ: 45ವರ್ಷ ಇಲ್ಲಿ ವಾಸವಿದ್ದವನು. ಇಲ್ಲಿನ ಜನರ ಕಷ್ಟದ ಅರಿವು ನನಗಿದೆ. ನೀರು, ಒಳಚರಂಡಿ ಸಮಸ್ಯೆಯಿದೆ, ಪಾರ್ಕ್ ಅಭಿವೃದ್ದಿ ಆಗಿಲ್ಲ. ಸರಕಾರೀ ಆಸ್ಪತ್ರೆ ಇಲ್ಲಿಗೆ ಬೇಕು, ಲೈಬ್ರೆರಿ ಬೇಕು. ಇಂಜಿನಿಯರಿಂಗ್ ಕಾಲೇಜ್ ಇಲ್ಲ. ಅದನ್ನೆಲ್ಲಾ ಸರಕಾರೀ ಜಾಗ ಸಿಕ್ಕಿದರೆ ಮಾಡೇ ಮಾಡ್ತೀನಿ..











Click it and Unblock the Notifications