24ನೇ ಮುಖ್ಯಮಂತ್ರಿ ಯಡಿಯೂರಪ್ಪ ಮುಂದಿರುವ ಸವಾಲುಗಳು
Recommended Video

ಬೆಂಗಳೂರು, ಮೇ 17 : 75 ವರ್ಷ ವಯಸ್ಸಿನ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ (ಬಿ.ಎಸ್.ಯಡಿಯೂರಪ್ಪ) ಅವರು ಕರ್ನಾಟಕದ 24ನೇ ಮುಖ್ಯಮಂತ್ರಿಯಾಗಿ ಗುರುವಾರ ರೈತರು ಮತ್ತು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಯಡಿಯೂರಪ್ಪ ಅವರಿಗೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಪ್ರಮಾಣ ವಚನ ಬೋಧಿಸಿದರು. ಈ ಮೂಲಕ ದಕ್ಷಿಣ ಭಾರತದಲ್ಲಿ ಮತ್ತೆ ಕಮಲ ಅರಳಿದೆ, ಬಿಜೆಪಿ ಅಧಿಕಾರಕ್ಕೆ ಬಂದಿದೆ.
ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಿ.ಎಸ್.ಯಡಿಯೂರಪ್ಪ ಅವರ ಮುಂದೆ ಹಲವಾರು ಸವಾಲುಗಳಿವೆ. ಪ್ರಮುಖವಾಗಿ ವಿಧಾನಸಭೆಯಲ್ಲಿ ಅವರು ಬಹುಮತ ಸಾಬೀತು ಮಾಡಬೇಕಿದೆ. ರಾಜ್ಯದ ಬೊಕ್ಕಸ ತುಂಬಿಸಬೇಕಾಗಿದೆ.
2018ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನಗಳನ್ನು ಮಾತ್ರ ಪಡೆದಿದೆ. ವಿಧಾನಸಭೆಯಲ್ಲಿ ಅವರು ಸರ್ಕಾರಕ್ಕೆ 112 ಶಾಸಕರ ಬೆಂಬಲವಿದೆ ಎಂದು ವಿಶ್ವಾಸಮತವನ್ನು ಸಾಬೀತು ಮಾಡಬೇಕು. ಯಡಿಯೂರಪ್ಪ ಅವರ ಮುಂದಿರುವ ಸವಾಲುಗಳೇನು?...ಇಲ್ಲಿದೆ ಮಾಹಿತಿ

ಸವಾಲು - 1
ಬಿ.ಎಸ್.ಯಡಿಯೂರಪ್ಪ ಅವರ ಮುಂದಿರುವ ಮೊದಲನೇ ಸವಾಲು ಸರ್ಕಾರವನ್ನು ಭದ್ರಪಡಿಸಿಕೊಳ್ಳುವುದು. ಸರ್ಕಾರ ರಚನೆಗೆ ಅವಕಾಶ ನೀಡಿದಾಗ ರಾಜ್ಯಪಾಲರು 15 ದಿನದಲ್ಲಿ ಬಹುಮತ ಸಾಬೀತು ಮಾಡುವಂತೆ ಸೂಚನೆ ನೀಡಿದ್ದಾರೆ. ಅದರಂತೆ ವಿಧಾನಸಭೆಯಲ್ಲಿ ಯಡಿಯೂರಪ್ಪ ಅವರು ವಿಶ್ವಾಸ ಮತವನ್ನು ಸಾಬೀತು ಮಾಡಬೇಕು.
2018ರ ಚುನಾವಣೆಯಲ್ಲಿ ಬಿಜೆಪಿ 104, ಕಾಂಗ್ರಸ್ 78, ಜೆಡಿಎಸ್ 38 ಸ್ಥಾನಗಳಲ್ಲಿ ಜಯಗಳಿಸಿದೆ. ಕಾಂಗ್ರೆಸ್ ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ. ಆದ್ದರಿಂದ ಕಾಂಗ್ರೆಸ್-ಜೆಡಿಎಸ್ ಸೇರಿ 116 ಸ್ಥಾನಗಳು ಆಗಲಿವೆ. ರಾಣೆಬೆನ್ನೂರು ಕ್ಷೇತ್ರದ ಕೆಪಿಜೆಪಿ ಅಭ್ಯರ್ಥಿ ಆರ್.ಶಂಕರ್ ಕಾಂಗ್ರೆಸ್ ಬೆಂಬಲಿಸಿದ್ದಾರೆ. ಒಟ್ಟು 117 ಸ್ಥಾನಗಳು ಅವರ ಬಳಿ ಇವೆ. ವಿಶ್ವಾಸ ಮತ ಸಾಬೀತು ಮಾಡಲು 112 ಸ್ಥಾನಗಳು ಬೇಕಾಗಿವೆ.

ಸಚಿವ ಸಂಪುಟ ವಿಸ್ತರಣೆ
ದಕ್ಷಿಣ ಭಾರತದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಸಹಜವಾಗಿ ಎಲ್ಲಾ ಶಾಸಕರು ಸಚಿವ ಸ್ಥಾನದ ಆಕಾಂಕ್ಷಿಗಳು ಆಗಿರುತ್ತಾರೆ. ಸಂಪುಟ ವಿಸ್ತರಣೆ ಯಡಿಯೂರಪ್ಪ ಅವರ ಮುಂದಿರುವ ಮತ್ತೊಂದು ಸವಾಲು.
ಹಿರಿಯ ನಾಯಕರು, ಯಡಿಯೂರಪ್ಪ ಅವರ ಜೊತೆ ಕೆಜೆಪಿಗೆ ಹೋದವರು, ಜಾತಿ, ಪ್ರತಿ ಜಿಲ್ಲೆ ಹೀಗೆ ಪ್ರತಿಯೊಂದು ಅಂಶಗಳನ್ನು ಪರಿಗಣಿಸಿ ಯಡಿಯೂರಪ್ಪ ಅವರು ಸಚಿವ ಸ್ಥಾನವನ್ನು ನೀಡಬೇಕಾಗುತ್ತದೆ. ಇದು ಯಡಿಯೂರಪ್ಪ ಮುಂದಿರುವ ಪ್ರಮುಖ ಸವಾಲು.

ರಾಜ್ಯದ ಬೊಕ್ಕಸ ತುಂಬಿಸುವುದು
ಕರ್ನಾಟಕದ ಮುಖ್ಯಮಂತ್ರಿಯಾದ ಬಿ.ಎಸ್.ಯಡಿಯೂರಪ್ಪ ಅವರು ಹಣಕಾಸು ಖಾತೆಯನ್ನು ತಮ್ಮ ಬಳಿಯೇ ಇಟ್ಟುಕೊಳ್ಳುವ ಸಾಧ್ಯತೆ ಇದೆ. ರಾಜ್ಯದ ಬೊಕ್ಕಸ ತುಂಬಿಸುವ ಸವಾಲು ಅವರ ಮುಂದಿದೆ.
ರಾಜ್ಯದ ಬಿಜೆಪಿ ನಾಯಕರೇ ಪದೇ-ಪದೇ ಹೇಳಿದಂತೆ ಸಾಲ ಮಾಡಿದ್ದು ಮಾತ್ರ ಹಿಂದಿನ ಕಾಂಗ್ರೆಸ್ ಸರ್ಕಾರದ ಸಾಧನೆ. ಸುಮಾರು 2.5 ಲಕ್ಷ ಕೋಟಿ ಸಾಲ ರಾಜ್ಯದ ಮೇಲಿದೆ. ಇದನ್ನು ತೀರಿಸುವ ಪ್ರಮುಖವಾದ ಸವಾಲು ಅವರ ಮುಂದಿದೆ.

ಪ್ರಣಾಳಿಕೆಯಲ್ಲಿನ ಭರವಸೆ ಈಡೇರಿಸುವುದು
ಕರ್ನಾಟಕ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ 1.5 ಲಕ್ಷದ ತನಕದ ರೈತರ ರಾಷ್ಟ್ರೀಕೃತ ಬ್ಯಾಂಕಿನ ಸಾಲ ಮನ್ನಾ ಸೇರಿದಂತೆ ಹಲವಾರು ಭರವಸೆಗಳನ್ನು ನೀಡಿದೆ. ಬಿ.ಎಸ್.ಯಡಿಯೂರಪ್ಪ ಅವರ ಮುಂದೆ ರಾಜ್ಯದ ಬೊಕ್ಕಸ ತುಂಬಿಸುವ ಜೊತೆಗೆ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುವ ಸವಾಲುಗಳು ಸಹ ಇವೆ.

ಯೋಜನೆ ಮುಂದುವರೆಸುವುದು
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅನ್ನಭಾಗ್ಯ ಸೇರಿದಂತೆ ಹಲವಾರು ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದಿತ್ತು. ಬೆಂಗಳೂರು ಮತ್ತು ರಾಜ್ಯದ ಹಲವು ಕಡೆ ಇಂದಿರಾ ಕ್ಯಾಂಟೀನ್ ಆರಂಭಿಸಿದೆ.
ಈ ಎಲ್ಲಾ ಯೋಜನೆಗಳಿಗೆ ವರ್ಷಕ್ಕೆ ಸಾವಿರಾರು ಕೋಟಿ ರೂ.ಗಳ ವೆಚ್ಚವಾಗಲಿದೆ. ಯಡಿಯೂರಪ್ಪ ಅವರ ಮುಂದೆ ಬಿಜೆಪಿ ಭರವಸೆ ಈಡೇರಿಸುವ ಜೊತೆಗೆ ಈ ಯೋಜನೆಗಳನ್ನು ಮುಂದುವರೆಸುವ ಸವಾಲು ಸಹ ಇದೆ.











Click it and Unblock the Notifications