ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿ.ಪಿ.ರಾಜರತ್ನಂ ಅವರ ನಾಯಿಮರಿ ಮಕ್ಕಳ ಕವಿತೆಯನ್ನು ಸಂಸ್ಕೃತ-ಇಂಗ್ಲಿಷ್‌ಗೆ ಅನುವಾದಿಸಿದರೆ ಹೇಗಿರುತ್ತೆ ? ಅನುಭೂತಿ ಮತ್ತು ಅನುವಾದಗಳ ತಡವಿ ಸಾಗುವ ಈ ಲೇಖನ ವಿಚಿತ್ರಾನ್ನದ ಮೂರನೇ ತುತ್ತು !

By Staff
|
Google Oneindia Kannada News


*ಶ್ರೀವತ್ಸ ಜೋಶಿ

Vichitraanna !!ಅನುಭೂತಿ: ‘ಶಂಕರಾಭರಣಂ’ ತೆಲುಗು ಸಿನೆಮಾ ನಿಮ್ಮಲ್ಲಿ ಹೆಚ್ಚಿನವರು ನೋಡಿರಬಹುದು. ಅದರಲ್ಲಿ , ಅಪಸ್ವರದಿಂದ ಸಂಗೀತದ ಕುಲಗೆಡಿಸುವ ‘ದಾಸು’ನನ್ನು ಬೈಯುತ್ತ ಶಂಕರಶಾಸ್ತ್ರಿಗಳು ಹೇಳುತ್ತಾರೆ - ‘ಒಕ್ಕೊಕ್ಕ ಅನುಭೂತಿಕೀ ನಿರ್ದಿಷ್ಟಮೈನ ಒಕ್ಕ ನಾದಮುಂದಿ, ಶ್ರುತುಂದಿ, ಸ್ವರಮುಂದಿ. ಆ ಕೀರ್ತನಂಲೋನಿ ಪ್ರತಿ ಅಕ್ಷರಂ ವೆನುಕ ಆರ್ದೃತ ನಿಂಡಿ ಉಂದಿ ದಾಸು....’ ಎಂದು. (ಮನುಷ್ಯನ ಪ್ರತಿಯಾಂದು ಭಾವನೆ ಅನುಭೂತಿಗಳಿಗೂ ನಿರ್ದಿಷ್ಟವಾದ ಒಂದು ನಾದ, ಶ್ರುತಿ, ಸ್ವರ ಇರುತ್ತದೆ...).

ಹೇಗೆ? ಪ್ರಾಥಮಿಕ ಶಾಲೆಯ ಎರಡನೆ ತರಗತಿಯ ಕನ್ನಡ ಪಾಠವನ್ನು ಓದುವುದಕ್ಕೂ, ಆಕಾಶವಾಣಿ/ದೂರದರ್ಶನಗಳಲ್ಲಿ ವಾರ್ತೆಯನ್ನು ಓದುವುದಕ್ಕೂ ವ್ಯತ್ಯಾಸವಿಲ್ಲವೇ? ಅದನ್ನು ಉಲ್ಟಾಪಲ್ಟಾ ಮಾಡಿದರೆ ಆಭಾಸವಾಗಲಿಕ್ಕಿಲ್ಲವೇ? ನೋಡಿ ಒಂದು ಸ್ಯಾಂಪಲ್‌:

ಪ್ರಾಥಮಿಕ ಶಾಲೆಯ ಎರಡನೇ ತರಗತಿಯಲ್ಲಿ ನಮಗೆ ‘ರವಿ ಹೋದನು’ ಎಂಬ ಒಂದು ಪಾಠ ಇತ್ತು. ಆ ಪಾಠದ ಶೀರ್ಷಿಕೆಯೇ ಒಂದು ಮಜಾ. ‘ರವಿ ಹೋದನು’ ಎಂದರೆ ಕರ್ನಾಟಕದ ಕೆಲವು ಭಾಗಗಳ ಕನ್ನಡ ಬಳಕೆಯಂತೆ ರವಿ ‘ಗೊಟಕ್‌ ಎಂದನು’ ( Ravi hit the bucket ಎಂದು ಇಂಗ್ಲೀಷ್‌ನಲ್ಲಿದ್ದಂತೆ) ಎಂಬರ್ಥ ಆಗುತ್ತದೆ. ಇಷ್ಟಕ್ಕೂ ಆ ಪಾಠದಲ್ಲಿ, ರವಿ ‘ಹೋದದ್ದು’ ಅಜ್ಜನ ಮನೆಗೆ. ಕನ್ನಡ ವಾರ್ತೆ ಓದಿದಂತೆ ಆ ಪಾಠವನ್ನೋದಿದರೆ ?

‘ಆಕಾಶವಾಣಿ. ವಾರ್ತೆಗಳು. ಓದುತ್ತಿರುವವರು ರಂಗರಾವ್‌. ರವಿಯು ಇಂದು ಬೆಳಿಗ್ಗೆ ಮೋಟಾರುಬಂಡಿಯಲ್ಲಿ ಅಜ್ಜನ ಮನೆಗೆ ಹೋದನು. ರವಿಯ ಸಂಗಡ ಅವನ ತಾಯಿಯೂ ಹೋಗಿರುವರು. ಶಾಲೆಗೆ ಸೇರಿದ ನಂತರ ರವಿ ಅಜ್ಜನ ಮನೆಗೆ ಇದು ಮೊದಲ ಬಾರಿ ಭೇಟಿ ನೀಡುತ್ತಿರುವುದು. ಅಜ್ಜನ ಮನೆಯಲ್ಲಿ ಅಜ್ಜಿಯಾಂದಿಗೆ ಮೊದಲ ಸುತ್ತಿನ ಮಾತುಕತೆಯ ನಂತರ ರವಿಯು ಆಟ ಆಡಲು ಓಡಿದನು....ಈ ವಾರ್ತೆಗಳನ್ನು ಆಕಾಶವಾಣಿಯಿಂದ ಕೇಳುತ್ತಿದ್ದೀರಿ...’

ಅದರಂತೆಯೇ, ಪ್ರಧಾನಿ ವಾಜಪೇಯಿಯವರ ಜಪಾನ್‌ ಭೇಟಿಯ ವಾರ್ತೆಯನ್ನು ಕನ್ನಡಪಾಠ ಓದಿದಂತೆ ಓದಿದರೆ?

‘ನಮ್ಮ ಪ್ರಧಾನಿ ವಾಜಪೇಯಿಯವರು ಇಂದು ಜಪಾನಿಗೆ ತೆರಳಿದರು. ಜಪಾನಿನ ಪ್ರಧಾನಿ ಜುನಿಚಿರೋ ಕೊಯ್ಜುಮಿ. ವಾಜಪೇಯಿಯವರು ಜಪಾನ್‌ನಲ್ಲಿ ಹೂತೋಟವನ್ನು ನೋಡಿದರು. ಕೊಯ್ಜುಮಿ ಮತ್ತು ವಾಜಪೇಯಿ ಗೆಳೆಯರು. ವಾಜಪೇಯಿಯವರು ಭಾರತ-ಜಪಾನ್‌ ಸಂಬಂಧಗಳನ್ನು ಬಲಪಡಿಸಲು ಹೋಗಿದ್ದಾರೆ.... ಕಲಿತ ಪದಗಳು: ಭಾರತ, ಹೂತೋಟ, ಜಪಾನ್‌ ಸಂಬಂಧ, ಪ್ರ, ವಾ, ಜು, ಗೆ’...

ಇವೆರಡನ್ನೂ ಗಟ್ಟಿಯಾಗಿ ಹೇಳಿ. ಕಂಪ್ಯೂಟರ್‌ ಮುಂದೆ ಕುಳಿತು ನಿಮ್ಮ ಈ ಪಠಣವನ್ನು ಕೇಳಿ ನಗು ಬರಬಹುದು - ಬೇರೆಯವರಿಗೆ ಮಾತ್ರವಲ್ಲ , ನಿಮಗೂ! ಆಗ ಗೊತ್ತಾಗುತ್ತದೆ ನಿಮಗೆ ಅನುಭೂತಿ ಅಂದರೆ ಏನೆಂಬುದು!

* *

G P Rajarathnamಅನುವಾದ :
ಕನ್ನಡ ಭಾಷೆ, ಕನ್ನಡ ಜನ, ಕನ್ನಡ ಸಂಸ್ಕೃತಿಯ ಬಗ್ಗೆ ಬೇರೆಯವರೂ ತಿಳಿಯಬೇಕಿದ್ದರೆ ಕನ್ನಡದ ಮೇರುಕೃತಿಗಳೆಲ್ಲ ಬೇರೆ ಭಾಷೆಗಳಿಗೆ ಭಾಷಾಂತರವಾಗಬೇಕು. ಆಗಿವೆ. ಬಹಳಷ್ಟು ಆಗಿವೆ. ಇಲ್ಲಾಂದರೂ ಏಳು ಜ್ಞಾನಪೀಠ ಪ್ರಶಸ್ತಿಗಳನ್ನು ಬಗಲಿಗೆ ಹಾಕಿಕೊಂಡಿರುವ ಕನ್ನಡ ಸಾಹಿತ್ಯ ಶ್ರೀಮಂತವಾದದ್ದು ಎಂದು ಇತರರಿಗೂ ಗೊತ್ತಾಗಿದೆ. ಸಂತೋಷದ ವಿಷಯ. ಕನ್ನಡ ಕೃತಿಗಳ ಅನುವಾದದ ಹೊಸ ಶಕೆಯನ್ನು ಆರಂಭಿಸೋಣವೇ? ಮೊದಲು ಜಿ.ಪಿ.ರಾಜರತ್ನಂ ಅವರ ನಾಯಿಮರಿ ನಾಯಿಮರಿ ಪದ್ಯ. ಮೂಲ ಕನ್ನಡದಲ್ಲಿ ಅದು -

ನಾಯಿಮರಿ ನಾಯಿಮರಿ ತಿಂಡಿ ಬೇಕೆ? ತಿಂಡಿ ಬೇಕು ತೀರ್ಥ ಬೇಕು ಎಲ್ಲ ಬೇಕು
ನಾಯಿಮರಿ ನಿನಗೆ ತಿಂಡಿ ಏಕೆ ಬೇಕು? ತಿಂದು ಗಟ್ಟಿಯಾಗಿ ಮನೆಯ ಕಾಯಬೇಕು
ನಾಯಿಮರಿ ಕಳ್ಳ ಬಂದರೇನು ಮಾಡುವೆ? ಲೊಳ್‌ ಲೊಳ್‌ ಭೌ ಎಂದು ಕೂಗಿಯಾಡುವೆ
ಜಾಣಮರಿ ನಾನು ಹೋಗಿ ತಿಂಡಿ ತರುವೆನು! ತಾ ನಿನ್ನ ಮನೆಯ ನಾನು ಕಾಯುತಿರುವೆನು !

ಈಗ ಇದನ್ನು ಸಂಸ್ಕೃತ ಭಾಷೆಗೆ ಅನುವಾದಿಸೋಣ.
ಬಾಲಶುನಕ ಬಾಲಶುನಕ ಖಾದ್ಯಮಾವಶ್ಯಮ್‌ ? ಖಾದ್ಯಮ್‌ ಪೇಯಮ್‌ ಸರ್ವಮಾವಶ್ಯಮ್‌ ।
ಬಾಲಶುನಕ ಕಿಮರ್ಥಮ್‌ ಖಾದ್ಯಮಾವಶ್ಯಮ್‌ ? ಗೇಹಪಾಲನಾಯ ಮೇ ಖಾದ್ಯಮಾವಶ್ಯಮ್‌ ।
ಬಾಲಶುನಕ ಕಿಮ್‌ ಕರೋಷಿ ಚೋರ ಆಗತೆ ? ಲೊಳ್‌ ಲೊಳ್‌ ಭೌ ಇತಿ ಮಯಾ ಭಷ್ಯತೆ ।
ಬಾಲಶುನಕ ಖಾದ್ಯಮತ್ರ ಆನಯಾಮಿ ! ಭೋ ನಾಥ ಸ್ವಗೃಹಮ್‌ ಪಾಲಯಾಮಿ ।।

ಇಂಗ್ಲೀಷ್‌ಗೆ ಅನುವಾದ:
Cute pup cute pup do you want food?
Yes Mam Yes Mam I want food!
Cute pup cute pup why you want food?
Shouldnt I get strong and gaurd our home?
Cute pup whatll you do if a thief comes ?
lol lol bhau bhau let me bark now !
Cute pup let me go and get some food for you !
Yes Mam please do that I love You !

* * * *
ಅನುಭೂತಿ, ಅನುವಾದಗಳನ್ನು ನಿಮಗೆ ಪರಿಚಯಿಸಿದ ಈ ಸಲದ ವಿಚಿತ್ರಾನ್ನ ಹೇಗಿತ್ತು ತಿಳಿಸಿ. ಏನಿಲ್ಲೆಂದರೂ, ಕನ್ನಡ ಸಂಘದ ಕಾರ್ಯಕ್ರಮದಲ್ಲಿ ಸ್ಟೇಜ್‌ ಮೇಲೆ ಗ್ಯಾಪ್‌ ಫಿಲ್ಲಿಂಗ್‌ ಐಟಂಗೆ ನಿಮಗೊಂದು ಐಡಿಯಾ ಕೊಟ್ಟಂತಾಗಲಿಲ್ಲವೆ? ನಿಮ್ಮ ಅಭಿಪ್ರಾಯಕ್ಕೆ ಸ್ವಾಗತ - [email protected]

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X