ವಿಚಿತ್ರಾನ್ನದ ರುಚಿ ನೋಡಿ ಮೆಚ್ಚಿದ ಹೊಸ ಸ್ನೇಹಿತರು
ಜೋಶಿಯವರಿಗೆ, ನಮಸ್ಕಾರ. ನಿಮ್ಮ ವಿಚಿತ್ರಾನ್ನ ರುಚಿಯಾಗಿತ್ತು. ಹೀಗೇ ಬಡಿಸ್ತಾ ಹೋದ ‘ರೆ’ ನಮ್ಮ ಹೊಟ್ಟೆ ಗತಿಯೇನು ಮಾರಾಯ್ರೆ? ವಿಚಿತ್ರಾನ್ನ ತಿಂದು, ಅದಕ್ಕೆ ನನ್ನದೂ ಒಂದು ವಗ್ಗರಣೆ ಇರಲಿ ಎಂದು ಈ ಕವನ ಬರ್ದಿದ್ದೇನೆ.
ಮಾನವನಾಗಿದ್ದರೇ?
ಹೂವಾದರೆ ಅರಳಿ ನಗುತ್ತಿದ್ದೆ
ದುಂಬಿಯಾದರೆ ಹೀರಿ ಹಿಗ್ಗುತ್ತಿದ್ದೆ
ಮಾನವನಾದರೆ ಏನು ಮಾಡುತ್ತಿದ್ದೆ?
ಹಕ್ಕಿಯಾದರೆ ಹಾರುತ್ತಿದ್ದೆ
ದೋಣಿಯಾದರೆ ತೇಲುತ್ತಿದ್ದೆ
ಮಾನವನಾದರೆ ಏನಾಗುತ್ತಿದ್ದೆ??
ಹಾವಾದರೆ ಹೆದರಿ ಹೆಡೆ ಎತ್ತುತ್ತಿದ್ದೆ
ಧರಣಿಯಾದರೆ ಹೇಸದೆ ಹೊರೆ ಹೊರುತ್ತಿದ್ದೆ
ಮಾನವನಾಗಿದ್ದರೆ ಹೇಗಿರುತ್ತಿದ್ದೆ?
ಹಗಲಾದರೆ ಇರುಳಿಗೆ ಕಾಯುತ್ತಿದ್ದೆ
ದಾರಿಯಾದರೆ ಕಾಲ್ತುಳಿತಕ್ಕೆ ಸವೆಯುತ್ತಿದ್ದೆ
ಮಾನವನಾಗಿದ್ದರೆ ಏನು ಸಾಧಿಸುತ್ತಿದ್ದೆ?
ಧನ್ಯವಾದಗಳೊಂದಿಗೆ,
- ಶ್ರೀಪಾದ. ವಿ. ಹೆಗಡೆ; ಕ್ಯಾಲಿಫೋರ್ನಿಯಾ
*
ಶ್ರೀವತ್ಸ ಜೋಶಿಯವರಿಗೆ,
ದಟ್ಸ್ಕನ್ನಡ.ಕಾಂನಲ್ಲಿ ನಿಮ್ಮ ಲೇಖನಗಳನ್ನು ಓದುತ್ತಿರುತ್ತೇನೆ. ಅವೆಲ್ಲ ಚೆನ್ನಾಗಿವೆ. ಬರವಣಿಗೆಯನ್ನು ಇದೇ ತರಹ ಮುಂದುವರೆಸಿ.
ಇವತ್ತು ನಾನು ಅಮೆರಿಕ ಪ್ರವಾಸ ಮುಗಿಸಿ ಭಾರತಕ್ಕೆ ಹಿಂದಿರುಗುತ್ತಿದ್ದೇನೆ. ‘ಮುಂಬಯಿ ಮೇರಿ ಜಾನ್...’ ಹಾಡನ್ನು ಗುನುಗುನಿಸುತ್ತ ಪ್ಯಾಕಿಂಗ್ ಮಾಡುತ್ತಿದ್ದೇನೆ. ಹಾಗಾಗಿ ಈಗ ಇಷ್ಟೇ ಬರೆಯುತ್ತಿದ್ದೇನೆ.
- ಡಾ. ಜೀ.ವಿ.ಕುಲಕರ್ಣಿ
*
ಜೋಶಿಯವರೆ,
ಹೈದರಾಬಾದ್ ಬ್ಲೂಸ್ ವಿಚಿತ್ರಾನ್ನ ಸೊಗಸಾಗಿತ್ತು. ಈ ಸಲ ಭಾರತಕ್ಕೆ ಹೋಗಿದ್ದಾಗ ಹೈದರಾಬಾದ್ಗೂ ಹೋಗುತ್ತೇನೆಂದಿದ್ದೀರಿ. ಎಚ್ಚರದಿಂದಿರಿ. ಅಲ್ಲಿಯ ಮೇಯರ್ ‘ಮೋಸ್ಟ್ ವಾಂಟೆಡ್ ಲಿಸ್ಟ್’ನಲ್ಲಿ ನಿಮ್ಮನ್ನೂ ಸೇರಿಸಿರಬಹುದು - ‘ದಿ ಹಿಂದೂ’ ಪತ್ರಿಕೆಯಲ್ಲಿ ನಗರದ ಶುಚಿತ್ವದ ಬಗ್ಗೆ ಅಪಹಾಸ್ಯ ಮಾಡಿದ್ದಕ್ಕಾಗಿ!
- ಪ್ರಕಾಶ್ ಪಿ.ಎನ್; ಪೋರ್ಟ್ಲ್ಯಾಂಡ್
*
ಜೋಶಿ,
ಹೇಗಿದ್ದೀರಾ? ನಾನು ಶ್ರೀಕಾಂತ್ ಗುಜ್ಜಾರ್. ಇತ್ತೀಚೆಗಷ್ಟೇ ದಟ್ಸ್ಕನ್ನಡದಲ್ಲಿ ನಿಮ್ಮ ವಿಚಿತ್ರಾನ್ನ ಲೇಖನಗಳನ್ನು ಓದತೊಡಗಿದೆ. ಇಷ್ಟೊಂದು ಒಳ್ಳೆಯದಾಗಿ ಬರೆಯುವುದಕ್ಕಾಗಿ ಕಂಗ್ರಾಚ್ಯುಲೇಷನ್ಸ್ ಹೇಳೋಣಾಂತ ಈ-ಮೈಲ್ ಮಾಡಿದೆ. ಬಿ.ಡಿ.ಟಿ ಇಂಜನಿಯರಿಂಗ್ ಕಾಲೇಜಲ್ಲಿ ನಾನು ನಿಮ್ಮ ಬ್ಯಾಚ್ಮೇಟ್ ಆಗಿದ್ದೆ. ಅನಾರೋಗ್ಯದಿಂದಾಗಿ ಆ ವರ್ಷ ಬಿ.ಇ ಮುಗಿಸುವುದು ನನಗೆ ಸಾಧ್ಯವಾಗಲಿಲ್ಲ. ನಿಮಗೂ ನೆನಪಿರಬಹುದು. ಈಗ ನಾನು ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿದ್ದೇನೆ. ನಮ್ಮ ಬ್ಯಾಚ್ನ ಇತರರು ಎಲ್ಲಿದ್ದಾರೆ ಗೊತ್ತಿದೆಯೇ?
- ಶ್ರೀಕಾಂತ್ ಗುಜ್ಜಾರ್; ಕ್ಯಾಲಿಫೋರ್ನಿಯಾ
*
ನಿಮ್ಮ ವಿಚಿತ್ರಾನ್ನ ಇನ್ನೂ ವಿಚಿತ್ರವಾಗಿದ್ದಿದ್ದ‘ರೆ’ ನನಗೆ ಇನ್ನು ತುಂಬ ಇಷ್ಟವಾಗುತ್ತಿತ್ತು:-) ನಾನು ಬೆಂಗಳೂರಲ್ಲೇ ಜಯನಗರದಲ್ಲಿ ಸಾಫ್ಟ್ವೇರ್ ಕಂಪೆನಿಯಾಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ದಟ್ಸ್ಕನ್ನಡ ವೆಬ್ಸೈಟಿಗೆ ದಿನಾಲೂ ಭೇಟಿನೀಡುತ್ತೇನೆ. ಓದಲು ಚೆನ್ನಾಗಿರುತ್ತದೆ. ವಿಚಿತ್ರಾನ್ನದಂಥ ‘ನೈಸ್ ಮೆಟೀರಿಯಲ್’ ನಮಗೆಲ್ಲ ಓದಲು ಒದಗಿಸುತ್ತಿರುವುದಕ್ಕಾಗಿ ಇನ್ನೊಮ್ಮೆ ಧನ್ಯವಾದಗಳು. ಹೀಗೇ ಮುಂದುವರೆಸಿ.
- ಲೀನಾ; ಬೆಂಗಳೂರು
*
ನಮಸ್ಕಾರ.
ನಿಮ್ಮ ವಿಚಿತ್ರಾನ್ನದ ಸವಿಯನ್ನು ಸವಿದು ಈ ಇ-ಪತ್ರ.10-12 ವರ್ಷಗಳ ಹಿಂದೆ ಮೂಡಬಿದ್ರೆಯ ಈ ಜೈನ ಬಸದಿಯನ್ನು ನಾ ನೋಡಿದ್ದೆ. ಆದರೆ ಇದ್ರಿಂದ ಸಂಗೀತ ಬರುತ್ತದೆಂದು ತಿಳಿದಿದ್ದು ನಿಮ್ಮ ಚಿತ್ರಾನ್ನದಿಂದ... :-)
ಸಿದ್ದಯ್ಯ ಪುರಾಣಿಕರ ‘ಅಜ್ಜನ ಕೋಲಿದು ನನ್ನಯ ಕುದುರೆ’ ಯನ್ನ ಬೆಸುಗೆ ಹಾಡಿನ ಧಾಟಿಯಲ್ಲಿ ಹಾಡಲು ಸ್ವಲ್ಪ ಟ್ರೈ ಮಾಡ್ದೆ. ಒಂದ್ ಥರ ಖುಶಿ ಸಿಗ್ತು. ಆ ಕನ್ನಡ ಕವಿತೆಗಳನ್ನು ಹಾಡಿ, ಓದಿ ತುಂಬ ದಿನ ಆಗಿತ್ತು. (ಸ್ಕೂಲ್ ಬಿಟ್ಟ ಮೇಲೆ ಅದೆಲ್ಲ ಮರೆತೇ ಹೋಗಿತ್ತು). ನಿಮ್ಮ ಲೇಖನಗಳಿಂದ ಮತ್ತೊಮ್ಮೆ ಕನ್ನಡ ಕವಿತೆಗಳನ್ನು ಓದುವ ಗೀಳು ಮತ್ತೆ ಶುರು ಆಗಿದೆ.
ಇನ್ನೊಂದ್ ವಿಷ್ಯ. ಈಗ ನಾನು ಯಾವ ಇರುವೆಯನ್ನು ನೋಡಿದ್ರೂ ‘ಎಲ್ಲಿರುವೆ ಮನವ ಕಾಡುವ ರೂಪಸಿಯೆ..’ ಹಾಡು ನೆನಪಾಗಿ ನನ್ಗೆ ನಾನೇ ನಕ್ಕೊಳ್ತೀನಿ :-)
ನೀವು ಸದ್ಯ ಬೆಂಗಳೂರಲ್ಲೇ ಇರೋದ್ರಿಂದ ಮುಂದಿನ ವಿಚಿತ್ರಾನ್ನಕ್ಕೆ ಬೆಂಗಳೂರೇ ವಿಷಯವಾಗುವುದೇನೊ ಎಂಬುದು ನನ್ನ ಗುಮಾನಿ, ಏನಂತೀರಾ? ಹೀಗೇ, ಒಂದೇ ರುಚಿಯ ವಿಚಿತ್ರಾನ್ನ ಬಡಿಸದೆ ಬೇರೆ ಬೇರೆ ರುಚಿಯದನ್ನು ನಮಗೆ ಕೊಡ್ತೀರಾ ಅನ್ನೋ ಆಶಯ ನನ್ನದು. ಖಂಡಿತವಾಗಿಯೂ ಮುಂದೆಯೂ ನಿಮ್ಮ ವಿಚಿತ್ರಾನ್ನಕ್ಕೆ ನನ್ನ ಕಾಮೆಂಟ್ಸ್ ಬಂದೇ ಬರುತ್ತವೆ. :-)
ನಿಮ್ಮ ಅಭಿಮಾನಿ,
- ಸಂಧ್ಯಾರಾಣಿ; ಬೆಂಗಳೂರು.
*
ಹಲೋ ಸಾರ್,
ನಿಮ್ಮ ‘ಸೆನ್ಸ್ ಆಫ್ ಹ್ಯೂಮರ್’ ಬಹಳ ಚೆನ್ನಾಗಿದೆ, ಹಾಗೆಯೇ ಅದನ್ನು ಬರವಣಿಗೆಗೆ ಇಳಿಸುವುದರಲ್ಲೂ ನೀವು ನಿಷ್ಣಾತರು. ನಿಮ್ಮ ಲೇಖನಕ್ರಿಯೆ ಚೆನ್ನಾಗಿ ಮುಂದುವರೆಯಲಿ.
- ಬಾಚಿ (ಭಾಸ್ಕರ್); ಮಿನಿಯಾಪೊಲಿಸ್
*
ಹಲೋ ಜೋಶಿಯವರೇ,
ದಟ್ಸ್ಕನ್ನಡ.ಕಾಂದಲ್ಲಿ ನಿಮ್ಮ ವಿಚಿತ್ರಾನ್ನ ಓದುತ್ತಿರುತ್ತೇನೆ. ನಾನು ಮೂಲತಃ ಮೈಸೂರಿನವಳು, ಈಗ ಬೆಂಗಳೂರಲ್ಲಿ ಸೆಟ್ಲ್ ಆದ ಕುಟುಂಬ. ಸದ್ಯಕ್ಕೆ ನಾವು ಕ್ಯಾಲಿಫೋರ್ನಿಯಾದ ಸ್ಯಾನ್ ಹೋಸೆಯಲ್ಲಿದ್ದೇವೆ. ನಮ್ಮ ತಂದೆಯವರು ಸರ್ಕಾರಿ ಉದ್ಯೋಗದಲ್ಲಿದ್ದುದರಿಂದ ಬಾಲ್ಯದಲ್ಲಿ ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ವಾಸಿಸಿದವಳು ನಾನು. ವಿಚಿತ್ರಾನ್ನದಲ್ಲಿ ನಿಮ್ಮ ಲೇಖನಗಳನ್ನು ಓದುವಾಗ ಮತ್ತೊಮ್ಮೆ ಆ ದಿನಗಳಲ್ಲಿ ಬೇರೆಬೇರೆ ಕಡೆಗಳಲ್ಲಿ ಸುತ್ತಾಡಿದಂತೆ, ಭಾರತಕ್ಕೇ ಹಿಂದಿರುಗಿ ಸಂತೋಷದಿಂದ ಜೀವನ ಕಳೆಯೋಣ ಎಂದು ಅನಿಸುವುದುಂಟು! ಇವತ್ತಿನ ‘ಎಲ್ಲೆಲ್ಲು ಸಂಗೀತವೇ...’ ಓದಿದಾಗಂತೂ ನನ್ನ ಸ್ಕೂಲ್ ಟೀಚರ್ಸ್ ಎಲ್ಲ, ಅದರಲ್ಲೂ ಕನ್ನಡ ಟೀಚರ್ ನೆನಪಾದರು. ಆಕೆ ಎಕ್ಸಲೆಂಟ್. ಬೇರೆಬೇರೆ ಕನ್ನಡ ಪದ್ಯಗಳನ್ನು ಹಳಗನ್ನಡದ ಪಂಪ, ಕುಮಾರವ್ಯಾಸ ಕವಿತೆಗಳನ್ನು ಅವರು ಹಾಡುವಾಗ ತರಗತಿಯಲ್ಲಿ ‘ಪಿನ್ ಡ್ರಾಪ್ ಸೈಲೆನ್ಸ್’ ಇರುತ್ತಿತ್ತು. ನಮಗೆ ಈರೀತಿ ನೆನಪುಗಳು ಮರುಕಳಿಸುವಂತೆ ಬಹಳ ಸೊಗಸಾಗಿ ನೀವು ಬರೆಯುವುದಕ್ಕಾಗಿ ನಿಮಗೆ ಇನ್ನೊಮ್ಮೆ ಕಂಗ್ರಾಚ್ಯುಲೇಷನ್ಸ್. ಇನ್ನೂ ಇಂತಹ ಲೇಖನಗಳನ್ನೇ ನಿರೀಕ್ಷಿಸುತ್ತೇನೆ.
ಮುಂದಿನ ಏಪ್ರಿಲ್ನಲ್ಲಿ ನಾನು ಅಮೆರಿಕ ಬಿಟ್ಟು ಭಾರತಕ್ಕೆ ಮರಳುವವಳಿದ್ದೇನೆ. ಬೆಂಗಳೂರಿಗೆ ವಾಪಸಾಗುವುದನ್ನೇ ಎದುರುನೋಡುತ್ತಿದ್ದೇನೆ. ನಾನು ಬರವಣಿಗೆಯಲ್ಲಿ ಚಾಲಾಕಿನವಳಲ್ಲ. ಹಾಗಾಗಿ ಸರಿಯಾಗಿ ಹೇಳಬೇಕಾದ್ದನ್ನು ಬರೆದಿದ್ದೇನೋ ಇಲ್ಲವೋ, ಆದರೆ ನಿಮ್ಮ ಬರವಣಿಗೆಯಂತೂ ಗ್ರೇಟ್.
- ಜ್ಯೋತಿ ರಾಮನ್; ಸಾನ್ ಹೋಸೆ












Click it and Unblock the Notifications