ಗಣೇಶನೊಂದಿಗೆ ನಾಲ್ಕಾಣೆ ಲೆಕ್ಕಾಚಾರ
*ಶ್ರೀವತ್ಸ ಜೋಶಿ
ವಿಚಿತ್ರಾನ್ನದ ಶುಭಾರಂಭದ ವೇಳೆ ಗಣೇಶನೊಂದಿಗೆ ಮಾಡಿದ್ದ ಒಡಂಬಡಿಕೆಯ ಪ್ರಕಾರ (ವಿವರಗಳಿಗೆ ನೋಡಿ: ಗಜಮುಖನೆ ಗಣಪತಿಯೆ ನಿನಗೆ ಒಂದಾಣೆ...) ಈ ಅಂಕಣವು ಇಲ್ಲಿಯವರೆಗೆ ಏಳು ವಾರಗಳ ಕಾಲ ಯಶಸ್ವಿಯಾಗಿ(?) ನಡೆದು ಬಂದಿರುವುದರಿಂದ ಗಣೇಶನಿಗೆ ನಾಲ್ಕಾಣೆಯ ಕಂತುಪಾವತಿಯ ಬಗ್ಗೆ ಅವನ ಬಳಿ ಹೋದಾಗ ಅವನೆಂದ - 'ನನಗೆ ಕಂತು ಪಾವತಿಸಬೇಕಿಲ್ಲ. ನಿನ್ನ ಓದುಗರು ತಿಳಿದುಕೊಂಡಿದ್ದಾರೋ ಇಲ್ಲವೋ, ಅವರ ಕೈಯೇ ನಾನಿದ್ದಂತೆ. ಹೇಗೆ ಗೊತ್ತೇ? ವಿಚಿತ್ರಾನ್ನವನ್ನೋದುವಾಗ ಮೂಷಿಕ(ಮೌಸ್)ನ ಸವಾರಿ ಮಾಡುವ ಅವರ ಬಲಗೈಗೂ ನನಗೂ ವ್ಯತ್ಯಾಸವಿಲ್ಲ ! ಹಾಗಾಗಿ ಓದುಗರನ್ನು ಸಂತುಷ್ಟವಾಗಿಟ್ಟರೆ ನನ್ನ ಕಾಣಿಕೆ ಬಂದಂತೆಯೇ!" ಎಂದು ಆರಾಮಾಗಿ ಕೈತೊಳೆದುಕೊಂಡ ಲಂಬೋದರ.
ವ್ಹಾ ! ಇದಕ್ಕೇ ಅನ್ನುವುದು ಗಣೇಶನಂತಹ ಉದಾರಿ ದೇವರು ಯಾರೂ ಇಲ್ಲ. ಈ ಕಾರಣಕ್ಕೇ ಆತ ನನ್ನ ಫೇವರೀಟ್. ಓದುಗರ ಬಲಗೈಯೇ ಗಣೇಶನಿದ್ದಂತೆ ಅಂತ ಅವನಂದುದೇನೋ ಸರಿ, ಆದರೆ ಹಾಗೆಂದು ಹೇಳಿ ನಾನು ಓದುಗರ ಬಲಗೈಗೆ ನಾಲ್ಕಾಣೆ ಹಾಕಿದರೆ ಎಂಥ ವಿರೋಧಾಭಾಸವಾದೀತು ಎಂಬ ಯೋಚನೆಯೇ ನನಗೆ ಮುಜುಗರ ಹುಟ್ಟಿಸಿತು. ಅದೂ ಅಲ್ಲದೆ ಅಂತ್ಯಾಕ್ಷರಿ, ಅದು-ಇದು ಅಂತ ಹಾಡು ಬೇರೆ ಹಾಡಿಸಿದ್ದೇನೆ. ಈಗ ನಾಲ್ಕಾಣೆ ಕೊಟ್ಟರೆ ಅಷ್ಟೇ, ನನ್ನ ಕಥೆ ಕೈಲಾಸ ಆಗುತ್ತದೆ. ಹಾಗಾಗಿ ಬೇಡಪ್ಪಾ ಬೇಡ, ಆ ನಾಲ್ಕಾಣೆಯ ಸುದ್ದಿಯೂ ಬೇಡ. ಕಂತು ಪಾವತಿಯ ಚಿಂತೆಯೂ ಬೇಡ. ಗಣೇಶನ ಅನುಗ್ರಹ ನಮ್ಮ-ನಿಮ್ಮೆಲ್ಲರ ಮೇಲೆ ಅನವರತವೂ ಇದೆಯೆಂಬ ಸಮಾಧಾನವೊಂದೇ ಸಾಕು.
ಗಣೇಶನಿಗೆ ಓದುಗರ ಬಗ್ಗೆ ಕಾಳಜಿ ನಿಜವಾಗಿಯೂ ಇದೆ ಅಂತ ನನಗೆ ಖಾತ್ರಿಯಾದದ್ದು 'ವಿಚಿತ್ರಾನ್ನದಲ್ಲಿ ಬರುವ ಸ್ಪರ್ಧೆಗಳ ಬಹುಮಾನ"ಗಳ ಬಗ್ಗೆ ಅವನು ನನ್ನಿಂದ ಶ್ವೇತಪತ್ರ ಮಂಡಿಸುವಂತೆ ಕೋರಿದಾಗ. ಓದುಗರು ಇಷ್ಟೆಲ್ಲ ಉತ್ಸಾಹದಿಂದ ಭಾಗವಹಿಸುತ್ತಿರುವಾಗ 'ಬಹುಮಾನ ಬಹುಮಾನ!" ಎಂದು ಅವರ ಮೊಣಕೈಗೆ ಜೇನು ಸವರುವುದು ವಿನಾಯಕನಿಗೆ ಇಷ್ಟವಿಲ್ಲ. ಅದು ಏನು ಬಹುಮಾನ, ಯಾರು ವಿಜೇತರು, ಆಯ್ಕೆ ಹೇಗೆ ಎಲ್ಲವೂ 'ಇದಮಿತ್ಥಂ" ಆಗಬೇಕು ಎಂದವನ ಅಂಬೋಣ. ಬಹುಮಾನ ಕೊಡಬೇಕೆಂದು ನನಗೂ ಇಚ್ಛೆಯಿದೆ. ಎಲ್ಲ ಈ ಮೈಲ್ಸ್ ಕೂಡ ಡಿಲೀಟ್ ಮಾಡದೇ ಜೋಪಾನವಾಗಿಟ್ಟಿದ್ದೇನೆ. ಸಾಧ್ಯವಾದಷ್ಟು ಹೆಚ್ಚುಹೆಚ್ಚು ಮಂದಿಗೆ, ಅದರಲ್ಲೂ ಕನ್ಸಿಸ್ಟೆಂಟಾಗಿ ಭಾಗವಹಿಸುವವರಿಗೆ ಬಹುಮಾನ ತಲುಪಬೇಕು ಎಂಬ ಮಹತ್ವಾಕಾಂಕ್ಷೆಯೂ ಇದೆ. ಅದನ್ನು ಹೇಗೆ ಇಂಪ್ಲಿಮೆಂಟ್ ಮಾಡಬಹುದು ಎಂದು ಖಂಡಿತವಾಗಿಯೂ ಯೋಚಿಸಿ ಯೋಜಿಸುತ್ತೇನೆ ಎಂಬ ಭರವಸೆಯಿತ್ತೆ.
ಗಣೇಶನ ನೆಕ್ಸ್ಟ್ ಪ್ರಶ್ನೆ, ವಿಚಿತ್ರಾನ್ನ ಅಡಿಗೆಯ ಬಗ್ಗೆ ದಟ್ಸ್ಕನ್ನಡದ ಸಂಪಾದಕರು ಏನನ್ನುತ್ತಾರೆ, ಅವರಿಗೆ ಸಮಾಧಾನವಾಗಿದೆಯೇ ಎಂಬುದು. ಅದಕ್ಕುತ್ತರವಾಗಿ ನಾನು, ವಿಚಿತ್ರಾನ್ನ ಆರಂಭವಾಗುವ ಮೊದಲು ಅಕ್ಟೋಬರ್ 10ರಂದು (ವಿಜಯದಶಮಿಗೆ ಇನ್ನೂ ಐದು ದಿನ ಇದ್ದಾಗ) ಸಂಪಾದಕರು ನನಗೆ ಕಳಿಸಿದ್ದ ಈ ಮೈಲ್ನ ಪ್ರಿಂಟ್ಔಟ್ನ್ನು ಗಣೇಶನಿಗೆ ತೋರಿಸಿದೆ.
- - - - -Original- - - - - Message
From: S.K.Shama Sundara
To: Srivathsa Joshi
Sent: Thursday, October 10, 2002 2:55 PM
Subject: New Column by Vathsa
Dear Joshi,
We want to make our web site more lively and interactive! Right now not much to smile :) I am inviting you to maintain a WEEKLY COLUMN on our web portal. Nothing serious! A kannada writing filled with pun, bun, wit, humor, jokes, riddles, fun and frolic. This section should work as entertaining, proactive content. I am sure many readers are waiting to read stuff like this. Are you OK with our idea ? Please accept our invitation and confirm. Also suggest a NAME for the Column. If every thing goes well, let us start this section straight away around Vijaya Dashami time! Looking forward to your kind acceptance and reply.
Regards,
Sham
PS: I will not be too surprised if your first article drops into my inbox no sooner you have completed reading my sincere request invitation!
ಸಂಪಾದಕರ ಅಪೇಕ್ಷೆಯಂತೆ ವಿಜಯದಶಮಿಯಂದೇ ನಾನು ವಿಚಿತ್ರಾನ್ನ ಅಡಿಗೆಯನ್ನು ಆರಂಭಿಸಿದ್ದನ್ನೂ, ಅಂಕಣಕ್ಕೆ ನಾನೇ ಹೆಸರು ಸೂಚಿಸಿದ್ದನ್ನೂ, ವಿಚಿತ್ರಾನ್ನದ ಗ್ರಾಫಿಕ್ ಡಿಸೈನ್ ಮಾಡಿದ್ದನ್ನೂ, ಸಾಧ್ಯವಾದಷ್ಟು ಮಟ್ಟಿಗೆ ಸಂಪಾದಕರು ಕೇಳಿದ್ದ ಅಂಶಗಳನ್ನೆಲ್ಲ ವಿಚಿತ್ರಾನ್ನದ ವಿನ್ಯಾಸದಲ್ಲಿ ಅಳವಡಿಸಿರುವುದನ್ನೂ ಗಣೇಶನಿಗೆ ವಿವರಿಸಿದೆ. ಹಾಗೆಯೇ ಓದುಗ ಮಿತ್ರರೆಲ್ಲರೂ ಪ್ರೀತಿ ವಿಶ್ವಾಸಗಳಿಂದ ಕಳಿಸಿದ್ದ ಈ ಮೈಲ್ಗಳನ್ನು ತೋರಿಸಿದೆ. ತೃಪ್ತಿಯಾಗಿರಬೇಕು, ಸುಬ್ರಹ್ಮಣ್ಯ, ಧರ್ಮಸ್ಥಳ ದೇವಸ್ಥಾನಗಳ ಆನೆ ಸೊಂಡಿಲನ್ನು ನಮ್ಮ ತಲೆಯ ಮೇಲಿಟ್ಟು ಅನುಗ್ರಹಿಸುವಂತೆ ಗಣೇಶ ತನ್ನ ಸೊಂಡಿಲಿಂದಲೇ ನನ್ನನ್ನು ಹರಸಿದ.
ಬೀಳ್ಕೊಡುವ ಮೊದಲು ಗಣೇಶನೇ ಒಂದು ಜೋಕ್ ಹೇಳಿ ಅದನ್ನು ವಿಚಿತ್ರಾನ್ನದಲ್ಲಿ ಪ್ರಕಟಿಸುವಂತೆ ಆಣತಿಯಿತ್ತ.
ಗಣೇಶ ಉವಾಚ :
ಒಮ್ಮೆ ಒಬ್ಬ ಹಿಂದು, ಒಬ್ಬ ಮುಸ್ಲಿಂ ಮತ್ತು ಒಬ್ಬ ಕ್ರಿಶ್ಚಿಯನ್ - ಮೂವರು ಒಂದು ದೋಣಿಯಲ್ಲಿ ಹೋಗುತ್ತಿದ್ದರು. ಹವಾಮಾನ ವೈಪರೀತ್ಯದಿಂದ ಬಲವಾಗಿ ಗಾಳಿ ಬೀಸಿ ದೋಣಿ ಮಗುಚಿ ಬೀಳುವುದರಲ್ಲಿತ್ತು. ಕ್ರಿಶ್ಚಿಯನ್, ತನ್ನನ್ನು ಕಾಪಾಡುವಂತೆ ಪ್ರಭು ಏಸುವನ್ನು ಪ್ರಾರ್ಥಿಸಿದ - 'ಓ ಜೀಸಸ್, ಬ್ಲೆಸ್ ಮಿ. ಸೇವ್ ಮಿ. ಯು ಆರ್ ಮೈ ಲಾರ್ಡ್. ಅಮೆನ್". ಏಸು ಬಂದು ತನ್ನ ಭಕ್ತನನ್ನು ಕಾಪಾಡಿದ. ಮುಸ್ಲಿಂ ಕೂಡ ಮೆಕ್ಕಾದ ದಿಕ್ಕಿಗೆ ಮುಖಮಾಡಿ ಮಂಡಿಯೂರಿ ಕುಳಿತು, 'ಲಾ ಇಲಾಹಿ ಇಲ್ಲಲ್ಲಾ ಸಮಿ ಅಲ್ಲಾಹು ಲಿಮನ್ ಹಮಿದಾ", ಎಂದು ಪ್ರಾರ್ಥಿಸಲು ಅಲ್ಲಾಹ್ ಪ್ರತ್ಯಕ್ಷನಾಗಿ ಅವನನ್ನುದ್ಧರಿಸಿದ. ಕೊನೆಯಲ್ಲುಳಿದವ ಹಿಂದು. ನೀರು ತುಂಬಿ ಅರೆಕ್ಷಣದಲ್ಲಿ ದೋಣಿ ಮುಳುಗಿಹೋಗುವುದರಲ್ಲಿದೆ. ಈಜು ಬಾರದು. ಏನು ಮಾಡಲಿ. ಹಿಂದುಗಳಿಗೆ ಮೂವತ್ತು ಮೂರು ಕೋಟಿ ದೇವದೇವತೆಗಳಿದ್ದಾರೆ, ಯಾರನ್ನು ಕರೆಯಲಿ ಎಂದು ಚಿಂತೆಗೊಳಗಾಗಿ ಕೊನೆಗೂ ನನ್ನನ್ನು (ಗಣೇಶನನ್ನು) ಕರೆಯಲು ನಿರ್ಧರಿಸಿದ. ನಾನಾದರೋ ಅವನ ಕರೆಗೆ ಓಗೊಟ್ಟೆ - ಆದರೆ, ತುತ್ತುತ್ತೂ ತುತ್ತುತ್ತಾರಾ... ಫಸ್ ಗಯಾ ಯೇ ಬೆಚಾರಾ... ಎಂದು ಮನಬಂದಂತೆ ಹಾಡುತ್ತ ಕುಣಿಯುತ್ತ ಅವನೆದುರಿಗೆ ಬಂದೆ. ಮುಳುಗುತ್ತಿದ್ದವನು ನನ್ನ ಕಡೆ ಪ್ರಶ್ನಾರ್ಥಕ ಚಿಹ್ನೆ ಬೀರಿದ. ಏನು ಸ್ವಾಮಿ ನಾನಿಲ್ಲಿ ಮುಳುಗುತ್ತಿದ್ದರೆ ನೀನು ಹಿಂದೀ ಹಾಡು ಹಾಡುತ್ತ ಕುಣಿಯುತ್ತಿದ್ದಿಯಲ್ಲಾ... ಎಂದು ಗೋಗರೆದ. ಅವನ ಗೋಗರೆತಕ್ಕೆ ನಾನು, 'ಮಗನೇ, ನನ್ನನ್ನು ಮುಳುಗಿಸುವಾಗ ನೀವು ಏನೆಲ್ಲ ಅಸಂಬಧ್ಧ ಹಾಡುಗಳನ್ನು ಹಾಡಿ ಕುಣಿಯುವುದಿಲ್ಲ ? ಈಗ ನೀನು ಮುಳುಗುವಾಗ ನಾನೇಕೆ ಹಾಡಿ ಕುಣಿಯಬಾರದು?" ಎಂದು ನನ್ನ ಹಾಡನ್ನು ಮುಂದುವರಿಸಿದೆ !
ವಿಚಿತ್ರಾನ್ನದಲ್ಲಿ ಈ ಜೋಕ್ ಬರೆಯುವುದರಿಂದ ನನಗೆ ಮತ್ತು ಓದುವುದರಿಂದ ನಿಮಗೆ ಗಣೇಶ ಈ ರೀತಿಯ ಲೈಫ್ ತ್ರೆಟನಿಂಗ್ ಜೋಕ್ ಮಾಡುವುದಿಲ್ಲ ಎಂದು ಅನುಗ್ರಹಿಸಿದ್ದಾನೆ ಎಂಬ ಸುದ್ದಿ ಈಗ ತಾನೆ ಈ ಮೈಲ್ನಲ್ಲಿ ಬಂದಿದೆ. ನಿಮಗೆ ಫಾರ್ವರ್ಡ್ ಮಾಡಬೇಕಿದ್ದರೆ - [email protected] ಗೆ ಬರೆಯಿರಿ.












Click it and Unblock the Notifications