Get Updates
Get notified of breaking news, exclusive insights, and must-see stories!

ದೊಡ್ಡ ಕನಸು ಕಾಣುವವರಿಗೆ ಅಲ್ಪತನ ಇರುವುದಿಲ್ಲ!

1976ರಲ್ಲಿ ಚೀನದ ಚೇರ್ಮನ್ ಮಾವೋ ನಿಧನದ ನಂತರ ಚೀನ ಕವಲುದಾರಿಯಲ್ಲಿತ್ತು. ಭವಿಷ್ಯದೆಡೆಗೆ ಮಹಾ ನೆಗೆತ ಮತ್ತು ಸಾಂಸ್ಕೃತಿಕ ಕ್ರಾಂತಿಗಳಂತಹ ಮಹಾ ವೈಫಲ್ಯಗಳ ನಂತರ ಚೀನದ ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿಗಳು ನಾಜೂಕಾಗಿದ್ದವು.

ಕಮ್ಯೂನಿಸ್ಟ್ ಸಿದ್ಧಾಂತಗಳ ಅಕ್ಷರಶಃ ಪಾಲನೆಯಿಂದ ದಿವಾಳಿತನದ ಅಂಚಿಗೆ ತಲುಪಿದ್ದ ಚೀನಕ್ಕೆ ತನ್ನ ಆರ್ಥಿಕ ಸ್ಥಿತಿಯನ್ನು ತ್ವರಿತವಾಗಿ ಸುಧಾರಿಸಲು ಒಂದು ಹೊಸ ದಿಕ್ಕನ್ನು ಹುಡುಕಬೇಕಾಗಿತ್ತು. 1978ರಲ್ಲಿ ಅಂದಿನ ಚೀನದ ಸರ್ವಾಧಿಕಾರಿಯಾದ ಡೆಂಗ್ ಸಿಯಾವೋಪಿಂಗ್ ಚೀನದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಶತಾಯ ಗತಾಯ ಪ್ರಯತ್ನ ನಡೆಸಿದ್ದರು. ಅದೇ ಸಮಯಕ್ಕೆ ಅವರು ಸಿಂಗಪುರಕ್ಕೆ ಮೂರು ದಿನಗಳ ಭೇಟಿ ನೀಡಿದರು. ಈ ಭೇಟಿ ಚೀನದಲ್ಲಿ ಹೊಸಯುಗಕ್ಕೆ ನಾಂದಿ ಹಾಡಿತು.

ಸಿಂಗಪುರ ಪ್ರಮುಖವಾಗಿ ಅನಿವಾಸಿ ಚೀನೀಯರಿಂದ ಕಟ್ಟಲ್ಪಟ್ಟ ನಾಡು. ಸಿಂಗಪುರದ ಶೇಕಡಾ ಎಪ್ಪತ್ತೈದು ಜನ ಮೂಲತಃ ಚೀನಿಯರು (ಮಲಯ ಮೂಲದವರು ಶೇಕಡಾ ಹದಿನೈದು ಮತ್ತು ಭಾರತೀಯ ಮೂಲದವರು ಶೇಕಡಾ ಎಂಟರಷ್ಟು). ಸಿಂಗಪುರದ ರಾಷ್ಟ್ರಪಿತ ಎನಿಸಿದ ಲೀ ಕುವಾನ್ ಯೂ ಅವರ ಪೂರ್ವಜರು ದಕ್ಷಿಣ ಚೀನದ ಗುಆಂಗ್‍ಡಾಂಗ್‍ನಿಂದ ಬಂದವರು. ಚೀನದ ಸಾಂಪ್ರದಾಯಿಕ ಕನಫ್ಯೂಶಿಯನ್ ಸಿದ್ಧಾಂತಗಳನ್ನು ತಮ್ಮ ಆಡಳಿತದಲ್ಲಿ ಅಳವಡಿಸಿದವರು. ಪಾಶ್ಚಾತ್ಯ ಪ್ರಜಾಪ್ರಭುತ್ವದ ಅಂಧ ಅನುಕರಣೆ ಮಾಡಿದವರಲ್ಲ. ಪ್ರಜಾಪ್ರಭುತ್ವ ಮತ್ತು ಬಂಡವಾಳ ಹೂಡಿಕೆಗಳನ್ನು ತಮ್ಮ ಆಳ್ವಿಕೆಯಲ್ಲಿ ಅಳವಡಿಸಿಕೊಂಡರೂ ತಮ್ಮ ಸಂಪ್ರದಾಯಗಳ ಉತ್ತಮ ಪದ್ಧತಿಗಳನ್ನು ಕೂಡ ಪಾಲಿಸಿದರು. ಸಿಂಗಪುರವನ್ನು ಉಚ್ಛ್ರಾಯ ಸ್ಥಿತಿಗೆ ಕರೆದೊಯ್ದರು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

One who thinks little, cannot relize big dreams

ಅಂದು ಆರ್ಥಿಕ ಮುಗ್ಗಟ್ಟಿನಿಂದ ತತ್ತರಿಸುತ್ತಿದ್ದ ಚೀನಕ್ಕೆ ಸಾಂಪ್ರದಾಯಿಕ ಚೀನೀ ಮೌಲ್ಯಗಳನ್ನು ಅನುಸರಿಸಿ ಪ್ರಜಾಪ್ರಭುತ್ವವನ್ನು ಅಳವಡಿಸಿಕೊಂಡು ಉಚ್ಛ್ರಾಯ ಸ್ಥಿತಿಗೆ ತಲುಪಿದ ಸಿಂಗಪುರ ಒಂದು ಅನುಕರಣನೀಯ ಉದಾಹರಣೆಯಾಗಿ ಕಂಡಿತು.

ಡೆಂಗ್ ಸಿಯಾವೋಪಿಂಗ್ ಸಿಂಗಪುರ ಭೇಟಿಯಿಂದ ಹಿಂದಿರುಗಿದ ಮೇಲೆ ಚೀನದ ಆಡಳಿತವರ್ಗಕ್ಕೆ ಮತ್ತು ಸಾಧಾರಣ ಚೀನೀಯರಿಗೆ ಸಿಂಗಪುರದಿಂದ ಕಲಿಯಲು ಒತ್ತಾಯಿಸಿದರು. ಅಂದಿನಿಂದ ಚೀನದ ಆಡಳಿತ ತಮ್ಮ ಸರ್ಕಾರಿ ಅಧಿಕಾರಿಗಳನ್ನು ಸಿಂಗಪುರಕ್ಕೆ ಅಧ್ಯಯನ ಪ್ರವಾಸಕ್ಕೆ ತಂಡೋಪತಂಡವಾಗಿ ಕಳುಹಿಸತೊಡಗಿತು. 1990ರಿಂದ 2011ರವರೆಗೆ ಚೀನದ 22000 ಸರ್ಕಾರಿ ಅಧಿಕಾರಿಗಳು ಅಧ್ಯಯನಕ್ಕಾಗಿ ಸಿಂಗಪುರಕ್ಕೆ ಬಂದು ಸಿಂಗಪುರದ ವಿಶ್ವವಿದ್ಯಾಲಯಗಳಲ್ಲಿ Public Administration ವಿಷಯದಲ್ಲಿ ವಿಶೇಷ ಅಧ್ಯಯನ ಮಾಡಿದರು ಎಂದು ತಿಳಿದು ಬಂದಿದೆ.

ಇಲ್ಲಿ ಮುಖ್ಯವಾಗಿ ತಿಳಿದುಕೊಳ್ಳಬಹುದಾದ ಅಂಶವೆಂದರೆ, ಚೀನ ತನ್ನ ಬೃಹದಾಕಾರ ಮತ್ತು ಅಪಾರ ಜನಸಂಖ್ಯೆಯ ದೃಷ್ಟಿಯಿಂದ ಸಿಂಗಪುರಕ್ಕಿಂತ ಅದೆಷ್ಟೋ ದೊಡ್ಡದಿದ್ದರೂ, ಸಿಂಗಪುರದಿಂದ ಕಲಿಯಲು ಹಿಂದೆ ಮುಂದೆ ನೋಡಲಿಲ್ಲ. ಬೃಹತ್ ಚೀನದ ಶಕ್ತಿಶಾಲಿ ಸರ್ವಾಧಿಕಾರಿ ಡೆಂಗ್, ಸಿಂಗಪುರದಂತಹ ಪುಟಾಣಿ ದೇಶದಿಂದ ಏನು ಕಲಿಯುವುದು ಎಂಬ ಅಸಡ್ಡೆ ತೋರಿಸಲಿಲ್ಲ.

One who thinks little, cannot relize big dreams

ಸಿಂಗಪುರದ ಅನುಭವದಿಂದ ಕಲಿತ ಪಾಠಗಳನ್ನು ಚೀನ ತನ್ನ ದಕ್ಷಿಣ ತೀರದ ನಗರಗಳಲ್ಲಿ ಪ್ರಯೋಗ ಮಾಡತೊಡಗಿತು. ಮೊಟ್ಟಮೊದಲು ಹಾಂಗ್‍ಕಾಂಗ್ ಪಕ್ಕದಲ್ಲೇ ಇರುವ ಶೆನ್‍ಜೆನ್ ನಗರದಲ್ಲಿ ತನ್ನ ಪ್ರಯೋಗವನ್ನು ಆರಂಭಿಸಿತು. ಸಿಂಗಪುರದ ಸಹಯೋಗದೊಡನೆ ಇಲ್ಲಿ "Special Economic Zone" ಸ್ಥಾಪಿತವಾಯಿತು.

ನೋಡನೋಡುತ್ತಿದ್ದಂತೆ ಮೂವತ್ತು ಸಾವಿರ ಜನಸಂಖ್ಯೆಯ ಈ ಪುಟ್ಟ ನಗರ ಆಧುನಿಕ ಕೈಗಾರಿಕಾ ಕೇಂದ್ರವಾಗಿ ಬೆಳೆದು, ಇಂದು ಇಪ್ಪತ್ತು ಲಕ್ಷ ಜನರ ಮನೆಯಾಗಿದೆ. ಚೀನ ಸಾವಕಾಶವಾಗಿ ಈ ಪ್ರಯೋಗವನ್ನು ತನ್ನ ಇತರ ನಗರಗಳಿಗೆ ವಿಸ್ತರಿಸತೊಡಗಿತು. ಚೀನದ ಈ ಪ್ರಯೋಗದ ಫಲಿತಾಂಶವನ್ನು ಇಂದು ನಾವು ಸ್ಪಷ್ಟವಾಗಿ ನೋಡುತ್ತಿದ್ದೇವೆ. ಕೇವಲ ಮೂವತ್ತು ವರ್ಷಗಳಲ್ಲಿ ಚೀನ ವಿಶ್ವದ ಎರಡನೆಯ ಅತಿ ದೊಡ್ಡ ಅರ್ಥವ್ಯವಸ್ಥೆಯಾಗಿ ಹೊರಹೊಮ್ಮಿ ಇಂದು ಅಮೇರಿಕದೊಡನೆ ಪೈಪೋಟಿ ನಡೆಸುತ್ತಿದೆ.

One who thinks little, cannot relize big dreams

ಚೀನದ ಈ ಅನುಭವದಿಂದ ನಾವು ಕೆಲವು ತೀರ್ಮಾನಗಳನ್ನು ಮಾಡಬಹುದು.

ಅ) ಕಲಿಯುವ ಮನಸ್ಸಿದ್ದರೆ ನಾವು ತೀರ ನಿಕೃಷ್ಟ ಎಂದುಕೊಂಡವರಿಂದ ಕೂಡ ಕಲಿಯಬಹುದು. ಯಾರೂ ಅಲ್ಪರಲ್ಲ ಎಲ್ಲರಿಂದ ಕಲಿತು ಅದರಿಂದ ಪ್ರಯೋಜನ ಪಡೆಯಬಹುದು.

ಬ) ನಿಜವಾಗಲೂ ಕಲಿಯಲು ನಮಗೆ ಕಲಿಯಲೇ ಬೇಕು ಎನ್ನುವ ದೃಢ ಸಂಕಲ್ಪವಿರಬೇಕು.

ನಾನಿದನ್ನು ಇಲ್ಲಿ ಏಕೆ ಹೇಳುತ್ತಿದ್ದೇನೆಂದರೆ, ನಾನು ಯಾವಾಗ ಸಿಂಗಪುರ ಮತ್ತು ನಮ್ಮ ದೇಶದ ಬಗ್ಗೆ ತುಲನಾತ್ಮಕ ವಿಮರ್ಶೆ ಮಾಡುತ್ತೇನೋ ಆವಾಗ ಅನೇಕ ಮಿತ್ರರಿಂದ "ಎಲ್ಲಿಯ ಭಾರತ ಮತ್ತು ಎಲ್ಲಿಯ ಸಿಂಗಪುರ? ಎಂತಹ ಹೋಲಿಕೆ? ಭಾರತದಂತಹ ಕ್ಲಿಷ್ಟ ಮತ್ತು ಬೃಹತ್ ದೇಶಗಳ ತುಲನೆಯನ್ನು ಕೇವಲ ಒಂದು ನಗರವಾದ ಸಿಂಗಪುರದೊಡನೆ ಮಾಡಬಾರದು" ಎನ್ನುವ ಅಭಿಪ್ರಾಯವೇ ಹೊರಬರುತ್ತದೆ.

ಅವರ ಈ ಅಭಿಪ್ರಾಯ ಗಾತ್ರ ಮತ್ತು ಸಂಕೀರ್ಣತೆಗಳ ದೃಷ್ಟಿಯಲ್ಲಿ ಸರಿಯಾದರೂ, ಸಿಂಗಪುರದಿಂದ ನಮಗೆ ಕಲಿಯುವುದೇನೂ ಇಲ್ಲ ಎಂದು ಸ್ಫುರಿಸುವ ಭಾವಕ್ಕೆ ನನ್ನ ವಿರೋಧವಿದೆ. ಚೀನದ ಡೆಂಗ್ ಈ ರೀತಿಯಾಗಿ ಯೋಚಿಸಿದ್ದರೆ ಚೀನ ಇಂದು ಈ ಮಟ್ಟವನ್ನು ಮುಟ್ಟುವುದು ಸಾಧ್ಯವಿರಲಿಲ್ಲ.

ಮುಖ್ಯವಾಗಿ ಡೆಂಗ್ ಸಿಂಗಪುರಕ್ಕೆ ಬಂದು ಹೋದ ಮೇಲೆ ಅವರ ಮನಸ್ಸಿನಲ್ಲಿ ತಮ್ಮ ದೇಶದ ನಗರಗಳ ಬಗ್ಗೆ ಒಂದು Vision ಮಾತ್ರ ಅಸ್ಪಷ್ಟವಾಗಿ ಮೂಡಿರಬಹುದು. ಈ ಕೆಲಸವನ್ನು ಹೇಗೆ ಪೂರೈಸಬಹುದು ಎಂಬ Road Mapಅನ್ನು ತಯಾರಿಸಲು ಅವರಿಗೆ ಸಾಕಷ್ಟು ಸಮಯ ಮತ್ತು ಅವರ ನಿರಂತರ ದುಡಿತ ಬೇಕಾಗಿರಬಹುದು. ಆದರೆ ಯಾವುದೇ ಅಹಂಭಾವವಿಲ್ಲದೇ ತಮ್ಮ ದೇಶದ ಸರಕಾರಿ ಅಧಿಕಾರಿಗಳನ್ನು ಸಿಂಗಪುರಕ್ಕೆ ಅಟ್ಟಿ ಇಲ್ಲಿಂದ ಕಲಿತು ಬರಲು ಅವರು ನಿರ್ದೇಶಿಸಿದ್ದಂತೂ ಸತ್ಯ.

One who thinks little, cannot relize big dreams

"ಸಿಂಗಪುರದಿಂದ ನಾವು ಕಲಿತು, ಅವರಿಗಿಂತ ಚೆನ್ನಾಗಿ ನಾವು ನಮ್ಮಲ್ಲಿ ಕಾರ್ಯರತಗೊಳಿಸೋಣ" ಎಂದು ತಮ್ಮ ಪ್ರಜೆಗಳಿಗೆ ಕರೆ ನೀಡಿದ್ದರಂತೆ. ದೊಡ್ಡ ಕನಸು ಕಾಣುವವರಿಗೆ ಅಲ್ಪತನ ಇರುವುದಿಲ್ಲ. ಸಿಂಗಪುರದಿಂದ ಪ್ರಭಾವಿತರಾಗಿ ಬೆಂಗಳೂರನ್ನು ಕೂಡ ಸಿಂಗಪುರದಂತೆ ಮಾಡುವ ನಮ್ಮ ಹಿಂದಿನ ಮುಖ್ಯಮಂತ್ರಿಯಾದ ಎಸ್ಎಂ ಕೃಷ್ಣ ಅವರ ಕನಸನ್ನು ಇಲ್ಲಿ ನೆನೆಯಬಹುದು. ನಮ್ಮ ಪ್ರಧಾನಿ ನರೇಂದ್ರ ಮೋದಿ ಕೂಡ ಸಿಂಗಪುರ ಮತ್ತು ಲೀ ಕುವಾನ್ ಯೂ ಅವರಿಂದ ಬಹಳ ಪ್ರಭಾವಿತರಾಗಿದ್ದು ಎಲ್ಲರಿಗೂ ತಿಳಿದ ವಿಷಯವೇ.

ಸಿಂಗಪುರ ಚಿಕ್ಕ ದೇಶ. ಅಲ್ಲಿ ಹೇಗೆ ಬೇಕೋ ಹಾಗೆ ಅಭಿವೃದ್ದಿ ಸಾಧಿಸಬಹುದು ಎಂದು ಹೇಳುವ ಜನರ ಅಜ್ಞಾನದ ಬಗ್ಗೆ ನನಗೆ ಅನುಕಂಪ ಮತ್ತು ಕೆಲವು ಸಲ ತಾತ್ಸಾರ ಕೂಡಾ ಉಂಟಾಗುತ್ತದೆ. ಇಲ್ಲಿ ಜನರ ಹೊರತಾಗಿ ಬೇರೆ ಯಾವ ಸಂಪನ್ಮೂಲಗಳೂ ಇಲ್ಲ. ಕುಡಿಯುವ ನೀರಿನಿಂದ ಹಿಡಿದು, ತಿನ್ನುವ ಅಕ್ಕಿಯನ್ನು ಕೂಡ ಹೊರಗಿನಿಂದ ತರಿಸಿಕೊಳ್ಳಬೇಕಾಗುವ ಈ ದೇಶ ಸ್ವತಂತ್ರವಾದಾಗಿನಿಂದ ಹಿಡಿದು ಇಂದಿನವರೆಗೆ ತನ್ನ ಬೆಳವಣಿಗೆಯ ಕಥೆಯನ್ನು ಮುಂದುವರೆಸಲು ಸಾಕಷ್ಟು ಪರಿಶ್ರಮ ಪಟ್ಟಿದೆ ಮತ್ತು ಇನ್ನೂ ಪಡುತ್ತಲಿದೆ. ಕೇವಲ ಅಭಿವೃದ್ಧಿಯನ್ನು ನೋಡಿ ಅದರ ಹಿಂದಿನ ಕಠಿಣ ಪರಿಶ್ರಮ ಮತ್ತು ತ್ಯಾಗವನ್ನು ತಿಳಿಯದೇ ಏನೇನನ್ನೋ ಮಾತನಾಡಿಬಿಡುವುದು ಬಹಳ ಸುಲಭ. ಚಿಕ್ಕ ನಗರವನ್ನು ಆಳುವುದು ಸುಲಭ ಎಂದರೆ ನಮ್ಮ ಪೂರಾ ದೇಶ ಬೇಡ, ಯಾವುದಾದರೂ ಒಂದು ಚಿಕ್ಕ ನಗರವನ್ನು ಸಿಂಗಪುರದಂತೆ ಮಾಡಬಹುದಾಗಿತ್ತಲ್ಲವೇ? ಇಲ್ಲಿಯವರೆಗೆ ಅದನ್ನು ಸಾಧಿಸಲು ಕೂಡ ಆಗಲಿಲ್ಲವಲ್ಲ?

ಡೆಂಗ್ ಹೇಳಿದಂತೆ ನಾವು (ಭಾರತೀಯರು) ಕೂಡ ಸಿಂಗಪುರದಿಂದ ಕಲಿಯುವುದು ಸಾಕಷ್ಟಿದೆ. ಸಿಂಗಪುರದ ಕಾರ್ಯದಕ್ಷತೆ, ಸ್ವಚ್ಛತೆ, ಭ್ರಷ್ಟಾಚಾರ ರಹಿತ ಸಮಾಜ, ಶಿಸ್ತು, ಯಾವುದೇ ಸಂಪನ್ಮೂಲಗಳಿರದಿದ್ದರೂ ತಮ್ಮ ದೇಶಕ್ಕೆ ಬಂಡವಾಳವನ್ನು ಆಕರ್ಷಿಸಿದ್ದು, ಜಗತ್ಪ್ರಸಿದ್ಧ ವಿಶ್ವವಿದ್ಯಾಲಯಗಳನ್ನು ಕಟ್ಟಿದ್ದು ಇತ್ಯಾದಿ ಇತ್ಯಾದಿ.

One who thinks little, cannot relize big dreams

ಜೀವನದ ನಡೆಯಲ್ಲಿ ಎಲ್ಲರೊಡನೆ ಹೆಜ್ಜೆಯಿಡುವ ದಾರಿಹೋಕರಾದ ನಮ್ಮಂತವರು ಹೀಗೆ ಮಾಡಬಹುದು ಎಂದು ಈಗಾಗಲೇ ಯಶಸ್ವಿಯಾದ Vision ಒಂದರ ಕಡೆಗೆ ಬೆರಳು ಮಾಡಿ ತೋರಿಸಬಹುದು. ಆದರೆ ಅದನ್ನು ಹೀಗೆಯೇ ಮಾಡಿ ಕಾರ್ಯರತಗೊಳಿಸಿರಿ ಎಂದು ಮತ್ತೊಬ್ಬರಿಗೆ ಉಪದೇಶ ಮಾಡುವುದು ವ್ಯಕ್ತಿಯೊಬ್ಬನಿಂದ ಮಾತ್ರ ಸಾಧ್ಯವಿಲ್ಲ. ನಮ್ಮ ನಮ್ಮ ಮಿತಿಯ ಅರಿವು ನಮಗಿರಬೇಕು. ಅಂತಹ Vision ಒಂದರ ಬೆನ್ನು ಹತ್ತಿ, ಕಾರ್ಯಕ್ರಮ (Road map) ಹಾಕಿ ಕಾರ್ಯಗತಗೊಳಿಸಲು ಜನಪರ ಆಡಳಿತಗಾರರ ದೂರದೃಷ್ಟಿ, ಪ್ರೋತ್ಸಾಹ ಮತ್ತು ಅನೇಕ ಜಾಣ, ದಕ್ಷ ಮತ್ತು ನಿಷ್ಠ ಅಧಿಕಾರಿಗಳ ಮತ್ತು ಕೆಲಸಗಾರರ ದುಡಿಮೆ ಬೇಕಾಗುತ್ತದೆ.

ನಮ್ಮ ಆಡಳಿತಗಾರರಿಗೆ ಈ ಬಗ್ಗೆ ಕೆಲಸ ಮಾಡುವ ರಾಜಕೀಯ ನಿಷ್ಠೆ ಇದೆಯೇ? ಯಶಸ್ವಿಯಾಗಲು ಬೇಕಾಗುವ ದೀರ್ಘಕಾಲದ ದುಡಿತ ಮತ್ತು ತ್ಯಾಗಗಳಿಗೆ ನಮ್ಮ ಜನ ಸಿದ್ಧರಿದ್ದಾರೆಯೇ? ಇಂದು ಕಾರ್ಯಗತಗೊಳಿಸಿದ ಕಾರ್ಯಕ್ರಮಗಳಿಂದ ನಾಳೆಯೇ ಫಲ ಇಚ್ಛಿಸುವ ಜನರಿರುವಾಗ ಚೀನದ ಆರ್ಥಿಕ ಚಮತ್ಕಾರವನ್ನು ನಮ್ಮಲ್ಲಿ ಅಪೇಕ್ಷಿಸುವುದು ತಪ್ಪು. ಆದರೆ ಪ್ರಯತ್ನವನ್ನೇ ಮಾಡದಿರುವುದು ಇನ್ನೂ ಹೆಚ್ಚಿನ ತಪ್ಪು.

ನಿಜ ಹೇಳಬೇಕೆಂದರೆ, ನಾವು ಡೆಂಗ್ ಅವರವರೆಗೆ ಹೋಗುವುದು ಕೂಡ ಬೇಕಿಲ್ಲ. ಪಕ್ಕದ ಆಂಧ್ರದತ್ತ ನೋಡಿದರೆ ಸಾಕು. ಹೊಸ ರಾಜ್ಯದ ಹೊಸ ರಾಜಧಾನಿಯೊಂದನ್ನು ವಿಶ್ವ ಮಟ್ಟದಲ್ಲಿ ಕಟ್ಟುವ ಪ್ರಯತ್ನ ಅಲ್ಲಿ ನಡೆದಿದೆ. ಅದಕ್ಕೆ ಸಿಂಗಪುರವೇ ಮಾದರಿ ಎಂದು ಹೇಳಿ ಸಿಂಗಪುರದ ಆರ್ಥಿಕ ಮತ್ತು ಪರಿಣಿತಿಯ ಸಹಾಯವನ್ನು ಅಲ್ಲಿ ಪಡೆಯಲಾಗಿದೆ. ಈ ಪ್ರಯತ್ನ ಯಶಸ್ವಿಯಾದರೆ ನಮ್ಮ ದೇಶದಲ್ಲಿಯೇ ಇಂತಹ ಒಂದು ಉದಾಹರಣೆ ನಮಗ ಕಾಣಸಿಗಬಹುದು. ಹಾಗಾಗಲಿ ಎಂದು ನನ್ನ ಆಶಯ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+