Get Updates
Get notified of breaking news, exclusive insights, and must-see stories!

ಸಿಂಗಪುರದಲ್ಲಿ ಜಿಎಸ್ಟಿ ಹೇಗಿದೆ, ಯಾರಿಗೆ ಲಾಭವಾಗುತ್ತಿದೆ?

ಭಾರತದಲ್ಲಿ ಈಗ ಎಲ್ಲೆಲ್ಲೂ ಜಿ ಎಸ್ ಟಿ (ಸರಕು ಮತ್ತು ಸೇವಾ ತೆರಿಗೆ) ಜ್ವರ. ಭಾರತದ ಯಾವುದೇ ಚ್ಯಾನೆಲ್ ಆಗಲಿ, ವರ್ತಮಾನ ಪತ್ರಿಕೆಯಾಗಲಿ ಎಲ್ಲಿ ನೋಡಿದರೂ ಈಗ ಜಿ ಎಸ್ ಟಿ ಕುರಿತಾದ ಚರ್ಚೆಯೇ.

ಏಕಾಗಬಾರದು? ಭಾರತದ ಇತಿಹಾಸದಲ್ಲಿಯೇ ಇಂಥದೊಂದು ದೊಡ್ಡ ಸುಧಾರಣೆ ಆಗುತ್ತಿರುವಾಗ ಆ ಕುರಿತು ದೊಡ್ದ ದೊಡ್ಡ ಚರ್ಚೆಗಳು ನಡೆಯುತ್ತಿರುವುದು ಸ್ವಾಭಾವಿಕ. ಎಲ್ಲರ ಮನದಲ್ಲಿ ಸ್ವಲ್ಪ ಉತ್ಸಾಹ, ಆತಂಕ ಮತ್ತು ಏನೋ ಒಂದು ಶಂಕೆ ಕೂಡ. ಅದೂ ಕೂಡ ಸ್ವಾಭಾವಿಕ.

ಈ ಹೊಸ ಜಿ ಎಸ್ ಟಿ ಈಗಲೇ ಗಗನಕ್ಕೇರಿದ ಬೆಲೆಗಳನ್ನು ಇನ್ನೂ ಹೆಚ್ಚಿಸುವುದೋ ಅಥವಾ ಸ್ವಲ್ಪವಾದರೂ ಕಡಿಮೆ ಮಾಡಿ ಸಾಮಾನ್ಯರ ಬದುಕಿಗೆ ಸ್ವಲ್ಪ ನೆಮ್ಮದಿ ತರುತ್ತದೋ ಎಂಬ ಸಂದೇಹ ಅನೇಕರಲ್ಲಿ. ಕೆಲವರಿಗೆ ಜಿ ಎಸ್ ಟಿ ಕುರಿತು ಅತೀವ ಉತ್ಸಾಹವಾದರೆ ಮತ್ತೆ ಕೆಲವರಿಗೆ ಅಸಮಾಧಾನ, ಅತೃಪ್ತಿ.

ಅದೇನೇ ಇರಲಿ ಜಿ ಎಸ್ ಟಿ ನಮ್ಮ ದೇಶಕ್ಕೆ ಹೊಸದಾದರೂ ಅದು ಈ ಜಗತ್ತಿನ ಕೆಲವು ದೇಶಗಳಲ್ಲಿ ಕೆಲವು ದಶಕಗಳಿಂದ ಜಾರಿಯಲ್ಲಿದೆ. ಭಾರತ ಜಿ ಎಸ್ ಟಿ ಯನ್ನು ಜಾರಿಗೊಳಿಸುತ್ತಿರುವ ನೂರ ಅರವತ್ತೊಂದನೇ ದೇಶ.

1954ರಲ್ಲಿ ಜಿ ಎಸ್ ಟಿ ಯನ್ನು ಮೊತ್ತ ಮೊದಲಿಗೆ ಜಾರಿಗೆ ತಂದ ದೇಶ ಫ್ರಾನ್ಸ್. ಕ್ರಮೇಣ ಅನೇಕ ದೇಶಗಳು ಜಿ ಎಸ್ ಟಿಯನ್ನು ಜಾರಿಗೊಳಿಸಿದವು. ಭಾರತದಲ್ಲಿ ಜಿಎಸ್ ಟಿಯನ್ನು ಜಾರಿಗೊಳಿಸಲು ಮೊದಲಿಗೆ ಆಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರಕಾರ 2000ರಲ್ಲಿ ಅಸೀಮ್ ದಾಸಗುಪ್ತಾರ ನೇತೃತ್ವದಲ್ಲಿ ಒಂದು ಕಮೀಟಿಯನ್ನು ರಚಿಸಿತು. ನಂತರ ಯುಪಿಎ ಸರಕಾರ ಜಿ ಎಸ್ ಟಿಯನ್ನು ಜಾರಿಗೊಳಿಸಲು ಪ್ರಯತ್ನಿಸಿತು.

ಆದರೆ ಕೇಂದ್ರ ಮತ್ತು ರಾಜ್ಯಗಳಲ್ಲಿ ಏಕಮತ ಬರಲು ಅಸಾಧ್ಯವಾದುದರಿಂದ ಜಿ ಎಸ್ ಟಿಯನ್ನು ಜಾರಿಗೊಳಿಸಲಾಗಲಿಲ್ಲ. ಈಗ ಎಲ್ಲರಿಗೂ ಗೊತ್ತಿರುವಂತೆ ಮೋದಿ ನೇತೃತ್ವದ ಎನ್ ಡಿ ಎ ಸರಕಾರ ಅಧಿಕಾರಕ್ಕೆ ಬರುತ್ತಲೇ ಜಿ ಎಸ್ ಟಿಯನ್ನು ಜಾರಿಗೊಳಿಸಲು ಅನೇಕ ಪ್ರಯತ್ನಗಳನ್ನು ಮಾಡಿ ಕೊನೆಗೆ ಜುಲೈ 1, 2017ರಂದು ಕೊನೆಗೂ ಜಾರಿಗೊಳಿಸುವಲ್ಲಿ ಯಶಸ್ವಿಯಾಯಿತು.

ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ

ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ

ಭಾರತದ ಜಿ ಎಸ್ ಟಿಯಲ್ಲಿ ಎರಡು ಶ್ರೇಣಿಗಳಿವೆ. ಒಂದು ಕೇಂದ್ರದ ತೆರಿಗೆಗಳ ಒಟ್ಟಾರೆ ಅಂಶವಾದರೆ ಇನ್ನೊಂದು ರಾಜ್ಯದ ತೆರಿಗೆಗಳ ಒಟ್ಟಾರೆ ಅಂಶ. ಈ ರೀತಿಯಾಗಿ ಅನೇಕ ತೆರಿಗೆಗಳನ್ನು ಒಟ್ಟುಗೂಡಿಸಿ ಈ ಜಿ ಎಸ್ ಟಿ ಭಾರತದ ಒಟ್ಟಾರೆ ತೆರಿಗೆ ವ್ಯವಸ್ಥೆಯನ್ನು ಬಹಳ ಸರಳಗೊಳಿಸುತ್ತದೆ. ಅಲ್ಲದೇ ಎಲ್ಲ ರಾಜ್ಯಗಳ ಒಟ್ಟಾರೆ ತೆರಿಗೆಯನ್ನು ಒಂದೇ ಮಟ್ಟಕ್ಕೆ ತಂದು ಪರೋಕ್ಷ ತೆರಿಗೆಯನ್ನು ನಿರ್ನಾಮ ಮಾಡುತ್ತದೆ. ಹೀಗಾಗಿ ಭಾರತ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಒಂದೇ ಆರ್ಥಿಕ ಮಾರುಕಟ್ಟೆಯಾಗಿ ಮಾರ್ಪಾಟು ಹೊಂದುತ್ತದೆ.

ಸಿಂಗಪುರದಲ್ಲಿ 1994ರಲ್ಲಿ ತೆರಿಗೆ ಜಾರಿ

ಸಿಂಗಪುರದಲ್ಲಿ 1994ರಲ್ಲಿ ತೆರಿಗೆ ಜಾರಿ

ನಾನಿರುವ ಸಿಂಗಪುರದಲ್ಲಿ ಜಿ ಎಸ್ ಟಿ 1994ರಲ್ಲಿಯೇ ಜಾರಿಯಾಯಿತು. ಸಿಂಗಪುರ ಸರಕಾರ 1994ರಲ್ಲಿಯೇ ತಮ್ಮ ತೆರಿಗೆಯನ್ನು, ಆದಾಯದ ಆಧಾರವಲ್ಲದೇ ಬಳಕೆಯ ಆಧಾರದ ಮೇಲೆ ವಿಧಿಸಿ, ತಮ್ಮ ತೆರಿಗೆ ವ್ಯವಸ್ಥೆಯನ್ನು ಸರಳಗೊಳಿಸಲು ಯೋಚಿಸಿ ಜಿ ಎಸ್ ಟಿಯನ್ನು ಜಾರಿಗೊಳಿಸಿತು. ಜಿ ಎಸ್ ಟಿಯಿಂದ ಉಂಟಾದ ಲಾಭ ಸರಕಾರಕ್ಕೆ ವ್ಯಕ್ತಿಗಳ ಮತ್ತು ಸಂಸ್ಥೆಗಳ ಆದಾಯ ತೆರಿಗೆಯನ್ನು ಕಡಿಮೆ ಮಾಡಲು ಸಹಾಯ ಮಾಡಿತು. ಅಲ್ಲದೇ ಆಸ್ತಿ ಸಂಪತ್ತಿನ ಮೇಲಿನ ತೆರಿಗೆ ಕೂಡಾ ಕಡಿಮೆ ಮಾಡಲು ಸಹಾಯವಾಯಿತು. ತೆರಿಗೆ ವ್ಯವಸ್ಥೆ ಸರಳವಾಗಿ ಸರಕಾರದ ಆರ್ಥಿಕ ಆಡಳಿತ ಕೂಡ ಸರಳವಾಯಿತು. 1994ರಲ್ಲಿ ಶೇಕಡಾ 3ರಿಂದ ಆರಂಭವಾದ ಸಿಂಗಪುರದ ಜಿ ಎಸ್ ಟಿ, ಈಗ ಸುಮಾರು 7ಶೇಕಡಾ ಆಗಿದೆ. ಆದರೆ ಈ ತೆರಿಗೆ ಎಲ್ಲರಿಗೂ ತಿಳಿಯುವಂತಹ ಯಾವುದೇ ಪರೋಕ್ಷ ತೆರಿಗೆ ಇಲ್ಲದ ಮುಕ್ತ ತೆರಿಗೆ.

ಎಲ್ಲಕ್ಕೂ ಶೇ.7ರಷ್ಟು ಒಂದೇ ತೆರಿಗೆ

ಎಲ್ಲಕ್ಕೂ ಶೇ.7ರಷ್ಟು ಒಂದೇ ತೆರಿಗೆ

ಈ ತೆರಿಗೆ ಪ್ರತಿಯೊಂದು ವಿಂಗಡನೆಯ ಹಂತಗಳಲ್ಲಿ ವಿಧಿಸಲ್ಪಡುತ್ತದೆ. ಹೀಗಾಗಿ ಗ್ರಾಹಕರು ತಮ್ಮ ಪ್ರತಿಯೊಂದು ವ್ಯವಹಾರದಲ್ಲಿ ಜಿ ಎಸ್ ಟಿ ವಿಧಿಸಿರುವುದನ್ನು ಕಾಣುತ್ತಾರೆ. ನಾವು ನಮ್ಮ ದಿನನಿತ್ಯದ ಬಳಕೆಯ ವಸ್ತುಗಳನ್ನು ಇಲ್ಲಿನ ಅಂಗಡಿಗಳಲ್ಲಿ ಕೊಂಡಾಗ ನಮ್ಮ ರಸೀತಿಗಳಲ್ಲಿ ಈ 7% ಜಿ ಎಸ್ ಟಿಯನ್ನು ನೋಡುತ್ತೇವೆ. ಅದೇ ರೀತಿ ನಾವು ಸಿನೆಮಾ ಟಿಕೆಟ್ ಕೊಂಡಾಗ, ರೆಸ್ಟುರಂಟ್‍ಗಳಲ್ಲಿ ಊಟ ಮಾಡಿದಾಗ, ಭಾರತಕ್ಕೆ ಬರಲು ವಿಮಾನದ ಟಿಕೆಟ್ ಕೊಂಡಾಗ ಸಹಿತ ಕೊಡುವದು ಈ ಶೇ.7 ಟ್ಯಾಕ್ಸ್ ಮಾತ್ರ. ಹೀಗಾಗಿ ಈ ವ್ಯವಸ್ಥೆ ಎಲ್ಲ ವ್ಯವಹಾರಗಳಲ್ಲಿ ಮುಕ್ತ ವಾತಾವರಣವನ್ನು ನಿರ್ಮಿಸಿದೆ.

ಸಿಂಗಪುರದಲ್ಲಿ ವಿವಿಧ ಕರಗಳು ಇಲ್ಲವೇ ಇಲ್ಲ

ಸಿಂಗಪುರದಲ್ಲಿ ವಿವಿಧ ಕರಗಳು ಇಲ್ಲವೇ ಇಲ್ಲ

ಇಲ್ಲಿನ ಜನರಿಗೆ ಜಿ ಎಸ್ ಟಿ ಎಂದರೆ ಜೀವನದ ಒಂದು ಭಾಗವಾಗಿ ಹೋಗಿದೆ. ಭಾರತದಲ್ಲಿ ಈಗ ಜಿ ಎಸ್ ಟಿಯನ್ನು ಜಾರಿಗೆ ತರುತ್ತಿದ್ದಾರೆಂದರೆ ಇಲ್ಲಿನ ಜನರಿಗೆ ಆಶ್ಚರ್ಯ. ಜಿ ಎಸ್ ಟಿ ಇಲ್ಲದಿದ್ದಾಗ ತೆರಿಗೆಯನ್ನು ಹೇಗೆ ವಿಧಿಸುತ್ತಿದ್ದರು ಎಂಬುದರ ಬಗ್ಗೆ ಅವರಿಗೆ ಕುತೂಹಲ. ಇಲ್ಲಿನ ಜನರಿಗೆ ಜಿ ಎಸ್ ಟಿ, ಆದಾಯ ತೆರಿಗೆ ಮತ್ತು ಆಸ್ತಿ ತೆರಿಗೆ ಬಿಟ್ಟರೆ ಬೇರೆ ಯಾವ ತೆರಿಗೆಯೂ ಗೊತ್ತಿಲ್ಲ. ನಮ್ಮಲ್ಲಿಯಂತೆ ಮಾರಾಟ ಕರ, ಆಕ್ಟ್ರಾಯ್ ತೆರಿಗೆ, ಕಸ್ಟಮ್ಸ್ ತೆರಿಗೆ, ಎಕ್ಸೈಸ್ ತೆರಿಗೆ, ವ್ಯಾಟ್ ಇತ್ಯಾದಿಗಳು ಸಿಂಗಪುರದಲ್ಲಿನ ಯಾವ್ ಜನರಿಗೂ ಗೊತ್ತಿಲ್ಲ.

ತೆರಿಗೆ ವ್ಯವಸ್ಥೆ ಸರಳ, ಬಂಡವಾಳ ಹೆಚ್ಚಳ

ತೆರಿಗೆ ವ್ಯವಸ್ಥೆ ಸರಳ, ಬಂಡವಾಳ ಹೆಚ್ಚಳ

ಸಿಂಗಪುರ ಮತ್ತು ಅನೇಕ ದೇಶಗಳು ಈ ಸರಳ ತೆರಿಗೆ ವ್ಯವಸ್ಥೆಯ ಪ್ರಯೋಜನಗಳನ್ನು ದಶಕಗಳ ಹಿಂದೆಯೇ ಕಂಡುಕೊಂಡು ಅದನ್ನು ಜಾರಿಗೊಳಿಸಿ ಯಶಸ್ಸು ಗಳಿಸಿದ್ದನ್ನು ನಾವು ಕಣ್ಣಾರೆ ನೋಡುತ್ತಿದ್ದೇವೆ. ಅದೇ ರೀತಿ ಜಿ ಎಸ್ ಟಿ ನಮ್ಮ ದೇಶದಲ್ಲಿ ಕೂಡ ಒಟ್ಟಾರೆ ತೆರಿಗೆ ವ್ಯವಸ್ಥೆಯನ್ನು ಸರಳೀಕರಿಸಿ ಹೆಚ್ಚು ಹೆಚ್ಚು ಬಂಡವಾಳವನ್ನು ಆಕರ್ಷಿಸಲು ಸಹಾಯ ಮಾಡುವುದಲ್ಲದೇ ಹಣದುಬ್ಬರವನ್ನು ಕೆಳದೂಡಿ ಜೀವನೋಪಾಯ ವಸ್ತುಗಳ ದರ ಕಡಿಮೆ ಮಾಡುತ್ತದೆ ಎಂದು ನನಗನಿಸುತ್ತದೆ.

ಲಂಚಬಾಕತನಕ್ಕೆ ಜಿಎಸ್ಟಿಯಿಂದ ಕಡಿವಾಣ

ಲಂಚಬಾಕತನಕ್ಕೆ ಜಿಎಸ್ಟಿಯಿಂದ ಕಡಿವಾಣ

ಯಾವುದೇ ಪರೋಕ್ಷ ತೆರಿಗೆಗಳು ಇಲ್ಲದಿದ್ದುದರಿಂದ ಮತ್ತು ತೆರಿಗೆ ಕೇವಲ ಮಾರಾಟದ ಘಟ್ಟದಲ್ಲಿ ಮಾತ್ರ ವಿಧಿಸಲ್ಪಡುವುದರಿಂದ ಭ್ರಷ್ಟಾಚಾರಕ್ಕೆ ಇಲ್ಲಿ ಅಷ್ಟೇನೂ ಆಸ್ಪದವಿಲ್ಲ. ಹೀಗಾಗಿ ಲಂಚಗುಳಿತನ ಕೂಡ ಕಡಿಮೆಯಾಗುತ್ತದೆ. ಅಲ್ಲದೇ ಜಿ ಎಸ್ ಟಿಯಿಂದ ಪರೋಕ್ಷ ತೆರಿಗೆಗಳ ಹಾವಳಿ ಕಡಿಮೆಯಾಗಿ ಮಾರಾಟಗಾರರಿಗೂ ಹೆಚ್ಚು ಲಾಭವಾಗುವುದರಿಂದ ಒಟ್ಟಿನಲ್ಲಿ ಹೆಚ್ಚು ಹೆಚ್ಚು ತೆರಿಗೆ ಸಂಗ್ರಹವಾಗಿ ಸರಕಾರಕ್ಕೆ ಕೂಡ ಹೆಚ್ಚು ಹಣ ಹರಿದು ಬರುವುದರಿಂದ ಸರಕಾರ ಹೆಚ್ಚು ಲೋಕೋಪಯೋಗಿ ಯೋಜನೆಗಳನ್ನು ಹಾಕಿಕೊಳ್ಳಬಹುದು. ಆದುದರಿಂದ ಸಿಂಗಪುರದ ಹಾಗೆ ಭಾರತ ಕೂಡ ಆರ್ಥಿಕವಾಗಿ ಹೆಚ್ಚು ಆಕರ್ಷಕ ತಾಣವಾಗಿ ಮಾರ್ಪಡುತ್ತದೆ ಮತ್ತು ಮುಂದಿನ ವರ್ಷಗಳಲ್ಲಿ ಹೆಚ್ಚಿನ ಅಭಿವೃದ್ದಿಯನ್ನು ಕಾಣುತ್ತದೆ ಎಂದು ಆಶಿಸುತ್ತೇನೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+