ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಣ್ಣು ತರಕಾರಿ ಆನ್ ಲೈನು

By * ಶಾಮ್
|
Google Oneindia Kannada News

Akrosh Sharma
ಹಣ್ಣು ತರಕಾರಿ ವ್ಯಾಪಾರ ಮಾಡುವುದು ಬಡವರು, ರೈತರು, ಅಶಿಕ್ಷಿತರ ಸೊತ್ತಲ್ಲ. ವಿದ್ಯಾವಂತರು ವಿಶೇಷವಾಗಿ ಗ್ರಾಜ್ಯುಯೇಟು ಅಥವಾ ಡಬ್ಬಲ್ ಗ್ರಾಜ್ಯುಯೇಟುಗಳೂ ಕೂಡ ಹೀರೇಕಾಯಿ, ತೊಂಡೇಕಾಯಿ, ಟೊಮೆಟೋ, ನಿಂಬೆಹಣ್ಣು, ಕೊತ್ತಬಂರಿ ಸೊಪ್ಪು ಮಾರಿಕೊಂಡು ಜೀವನ ಸಾಗಿಸಬಹುದು. ತರಕಾರಿ ವ್ಯಾಪಾರಿಯಾಗಿ ಒಬ್ಬ ಯುವಕ ಯುವತಿ ಘನತೆಯಿಂದ ಉದ್ಯೋಗಶೀಲರಾಗಬಹುದು. ತಾಜಾ ತರಕಾರಿ ಸಂಗ್ರಹಣೆ, ಗ್ರಾಹಕರಿಗೆ ಸರಿಯಾದ ಸಯಮದಲ್ಲಿ ಮಾಲು ಪೂರೈಕೆ ಹಾಗೂ ಸೇವೆಗಳಲ್ಲಿ ಅಚ್ಚುಕಟ್ಟುತನ ಸಾಧಿಸಿದರೆ ಯಾರು ಬೇಕಾದರೂ ಸಕ್ಸ್ ಫುಲ್ ಬಿಸಿನೆಸ್ ಮನ್ ಅಥವಾ ವುಮನ್ ಆಗಬಹುದು.

ನಮ್ಮ ಕನ್ನಡನಾಡಿನಲ್ಲಿ ಚೂರು ಓದಿಕೊಂಡವರಿಗೆ ಕೊಬ್ಬು ಜಾಸ್ತಿ. ಬಿಎ ಬಿಎಸ್ಸಿ ಬಿಕಾಂ ಮಾಡಿದರೆ ಅಲ್ಲಿಗೆ ಖತಂ. ಬಿಳಿಕಾಲರ್ ಉದ್ಯೋಗವೇ ಆಗಬೇಕು. ಐಎಎಸ್ ಆಗದಿದ್ದರೆ ಪರವಾಗಿಲ್ಲ, ಕಡೆಯಪಕ್ಷ ವಿಧಾನಸೌಧದಲ್ಲಿ ಸೆಕೆಂಡ್ ಡಿವಿಷನ್ ಕ್ಲರ್ಕ್ ಜಾಬ್ ಆದರೂ ಗಿಟ್ಟಬೇಕು. ಸಿಗದಿದ್ದರೆ ನಷ್ಟವಿಲ್ಲ, ಸಂತೋಷವಾಗಿ ನಿರುದ್ಯೋಗಿ ಆಗಿ ಉಳಿಯುವುದಕ್ಕೂ ಅವರಿಗೆ ಹಿಂಜರಿಕೆಯಿಲ್ಲ!

ಪದವೀಧರ ಆದಮಾತ್ರಕ್ಕೆ ಏನಂತೀಗ? ಕೆಲಸ, ಕಾರ್ಯಗೌರವ,ದುಡಿಮೆ, ಸ್ವಾವಲಂಬನೆ ಮುಖ್ಯ ಎಂದು ತಿಳಿಯದ ಹೊರತು ಇಲ್ಲಿ ಏಳಿಗೆ ಇಲ್ಲ. ಸರಕಾರಿ ಕೆಲಸೇ ಆಗಬೇಕು ಎಂದು ಪಟ್ಟು ಹಿಡಿಯುವ ಅಸಂಖ್ಯಾತ ಪದವೀಧರರು ಕರ್ನಾಟಕದಲ್ಲಿ ಇರುವುದೇ ಒಂದು ದುರಂತ. ಅಷ್ಟೇ ಅಲ್ಲ. ನಮ್ಮ ಅಳಿಯನಿಗೆ ಸಂಬಳ ಕಡಿಮೆ ಬಂದರೂ ಪರವಾಗಿಲ್ಲ , ಸರಕಾರಿ ನೌಕರಿಯಲ್ಲಿರಬೇಕು ಎಂದು ಹಠಹಿಡಿಯುವ ಹೆಣ್ಣು ಹೆತ್ತವರೂ ಬೇಕಾದಷ್ಟು ಮಂದಿ ಇರುವುದೂ ಇನ್ನೂ ಒಂದು ಟ್ರಾಜಿಡಿ. ಈ ಕಾಯಿಲೆಗಳು ಅಷ್ಟು ಸುಲಭವಾಗಿ ವಾಸಿ ಆಗುವುದಿಲ್ಲ.

ಸೂರತ್ ನಗರದಲ್ಲಿ ಒಬ್ಬಾತ ಇದ್ದಾನೆ. ಅವನ ಹೆಸರು ಆಕ್ರೋಶ್ ಶರ್ಮಾ. 2004 ರಲ್ಲಿ ಅವನು ಅಹಮದಾಬಾದಿನ ಐಐಎಂ ಪದವಿ ಗಳಿಸಿದ್ದ. ಆದರೆ, ಯಾರದ್ದೋ ಕಚೇರಿಯಲ್ಲಿ ನಾನೇಕೆ ಕೂಲಿ ಮಾಡಬೇಕು ಎಂದು ಭಾವಿಸಿ ತನ್ನದೇ ಉದ್ಯೋಗ ಮಾಡಲು ಯೋಚಿಸಿದ. ಆಗ ಅವನಿಗೆ ಹೊಳೆದದ್ದು ತರಕಾರಿ ಮಂಡಿಯ ಕಲ್ಪನೆ. ಐಐಎಂ ಮಾಡಿವರೆಲ್ಲ ಸಿಟಿ ಬ್ಯಾಂಕೋ ಅಥವಾ ಐಸಿಐಸಿಬ್ಯಾಂಕೋ ಅಥವಾ ಇನ್ನಾವುದೋ ವಿಪ್ರೋ, ಇನ್ಫಿ ಮುಂತಾದ ಐಟಿ ಕಂಪನಿಯಲ್ಲಿ ಸಿಒಒ ಅಥವಾ ಸಿಇಒ ಆಗಲೇಬೇಕು ಎಂಬ ನಿಯಮವಿಲ್ಲವಲ್ಲ. ಮಾಲು ಯಾವುದಾದರೆ ಏನಂತೆ ? ಸ್ವಂತ ಬಿಸಿನೆಸ್ ಆರಂಭಿಸುವುದರ ಮೂಲಕ ಆಧುನಿಕ ಗ್ರಾಹಕನ ಬೇಡಿಕೆಗೆ ಸಮರ್ಥವಾಗಿ ಸ್ಪಂದಿಸಿದರೆ ಸಕ್ಸೆಸ್ ಗ್ಯಾರಂಟಿ. ಬಿಸಿನೆಸ್ಸು ಪ್ಲಾನ್ ಹುಂಡೈ ಕಾರು ಷೋರೂಂ ಆಗಿರಬೇಕೆಂದೇನಿಲ್ಲ, ಹುರುಳಿಕಾಯಿ ಅಂಗಡಿಯೂ ಆಗಿರಬಹುದಲ್ಲ!ಹಾಗೆಂದು ಆಕ್ರೋಶ್ ನಂಬಿದ. ತರಕಾರಿ ಮಂಡಿ ತೆಗೆದ.

ಸದ್ಯಕ್ಕೆ ಸೂರತ್ ನಗರಕ್ಕೆ ಮಾತ್ರ ಸೀಮಿತವಾಗಿರುವ ಅವನ ತರಕಾರಿ ಹಣ್ಣು ಮಂಡಿಗೆ ನಗದ ವಿವಿಧ ಭಾಗಗಳಲ್ಲಿ ನಾಲಕ್ಕು ಮಳಿಗೆಗಳಿವೆ. ನಗದು ಕೊಟ್ಟು ಅಥವಾ ಅವನ ಕಂಪನಿ ನೀಡುವ ವೋಚರುಗಳನ್ನು ಬಳಸಿ ಗ್ರಾಹಕರು ಎಲ್ಲಿ ಬೇಕಾದರೂ ತಾಜಾ ಹಣ್ಣು ತರಕಾರಿ ಕೊಳ್ಳಬಹುದು. ಎಷ್ಟೋ ಜನಕ್ಕೆ ಚೀಲ ಹಿಡಿದುಕೊಂಡು ಅಂಗಡಿತನಕ ಬರುವುದಕ್ಕೆ ಸಮಯ ಇರುವುದಿಲ್ಲ. ಅಷ್ಟೇ ಅಲ್ಲ, ಮಂಡಿಗೆ ಹೋದಾಗ ತಮಗೆ ಬೇಕಾದ ಪದಾರ್ಧ ಸಿಗದೇ ಇರಬಹುದು.ಇಂಥ ಗ್ರಾಹಕ ವರ್ಗವನ್ನು ಕಂಡ ಶರ್ಮಾ ತನ್ನ ಮಂಡಿ ವ್ಯಾಪಾರವನ್ನು ಮೊನ್ನೆ ಅಂತರ್ ಜಾಲದಲ್ಲಿ ಆರಂಭಿಸಿದ.

2007 ರಲ್ಲಿ ಅವನ ತರಕಾರಿ ಅಂಗಡಿ ಆರಂಭವಾಯಿತು. ಆದರೆ ಸೂರತ್ ನಗರದ ಜೀವನ ಶೈಲಿ ಬದಲಾಗುತ್ತಿರುವುದನ್ನು ಮನಗಂಡು 2009ರ ನವೆಂಬರ್ ನಲ್ಲಿ ಶರ್ಮಾ ಮಂಡಿ ಆನ್ ವೀಲ್ಸ್ ವೆಬ್ ಸೈಟು ತೆರೆದ. ನಿಮ್ಮ ಮನೆಯಲ್ಲಿ ಒಂದು ಕೆಜಿ ಬೆಂಡೇಕಾಯಿ ಹುಳಿ ಮಾಡುವುದಕ್ಕಾಗಲೀ ಅಥವಾ ವಾಸುದೇವ ಅಡಿಗರ ಹೋಟೆಲಿಗೆ ದಿನವೊಂದಕ್ಕೆ ಬೇಕಾಗುವ 100 ಕೆಜಿ ಹಸಿಮೆಣಸಿನಕಾಯಿಯೇ ಆಗಲಿ, ವೆಬ್ ಸೈಟ್ ಮೂಲಕ ಖರೀದಿ, ಮಾರಾಟ, ಡೆಲಿವರಿ, ಪೇಮೆಂಟ್ ಸಾಧ್ಯವಾಗಿದೆ, ಸೂರತ್ ನಲ್ಲಿ.

ಎರಡು ವರ್ಷದ ಹಿಂದೆ ಮಂಡಿ ಹತ್ತಡಿ ಹತ್ತಡಿ ಜಾಗದಲ್ಲಿ ಆರಂಭವಾಯಿತು. ಈಗ ಸೂರತ್ ನಲ್ಲಿ ಆಕ್ರೋಶ್ ಮಂಡಿ ಆನ್ ಲೈನ್ ಮನೆಮಾತು. ವರ್ಷವೊಂದಕ್ಕೆ ಟರ್ನ್ ಓವರ್ ಒಂದು ಕೋಟಿರೂಪಾಯಿಯಂತೆ. ನಿಮಗೆ ಕಾಲು ಕೆಜಿ ಕ್ಯಾರೆಟ್ ಬೇಕಿದ್ದರೆ ವೆಬ್ ಸೈಟಿಗೆ ಹೋಗಿ ರಿಜಿಸ್ಟರ್ ಮಾಡಿಕೊಂಡು, ಲಾಗಿನ್ ಪಾಸ್ ವರ್ಡ್ ಪಡೆದು ಆರ್ಡ್ ರ್ ಮಾಡಬಹುದು. ಯಾರಿಗುಂಟು ಯಾರಿಗಿಲ್ಲ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X