ಮುಖಪುಟ
![]() | |
| ಅಕ್ಕ ಅಧ್ಯಕ್ಷರ ವಿರುದ್ಧ ತಿರುಗಿಬಿದ್ದ ತ್ರಿಮೂರ್ತಿಗಳು ! ಕುಮಾರ ಸ್ವಾಮಿ ಮತ್ತು ಹನಸೋಗೆ ಅಶ್ವಥನಾರಾಯಣ ಮತ್ತು ಡಾ. ರಾಜಶೇಖರಮೂರ್ತಿ ಅವರ ಬೆಂಗಳೂರು ಪತ್ರಿಕಾಗೋಷ್ಠಿ ದಿನಾಂಕ 16 ಡಿಸೆಂಬರ್, 2002 | |
ಮೈಸೂರಿನ ಟಿ.ಟಿ.ಎಲ್. ಬಿಸಿನೆಸ್ ಮ್ಯಾನೇಜ್ಮೆಂಟ್ ಕಾಲೇಜು ಕುರಿತ ತಗಾದೆಗಳು...
- ಮೈಸೂರು ವಿಶ್ವವಿದ್ಯಾಲಯದ ಉಪ ಕುಲಪತಿ ಡಾ.ಹೆಗಡೆ, ಪ್ರೊ.ಅನಂತನ್, ಡಾ.ಶಿವರಾಜ್ ಮತ್ತು ಡಾ.ಚಿಕ್ಕೆರೂರ್- ಇವರೆಲ್ಲರ ಮೇಲೆ ಟಿ.ಟಿ.ಎಲ್. ಬಿಸಿನೆಸ್ ಮ್ಯಾನೇಜ್ಮೆಂಟ್ ಕಾಲೇಜಿನ ವ್ಯವಸ್ಥಾಪಕರು ಭ್ರಷ್ಟಾಚಾರದ ಆರೋಪ ಮಾಡಿದ್ದು, ಈ ಕುರಿತು ಲೋಕಾಯುಕ್ತರಿಂದ ವಿಚಾರಣೆಯಾಗಬೇಕು.
- ಸಚಿವ ವಿಶ್ವನಾಥ್ ಕಾಲೇಜಿನ ವ್ಯವಸ್ಥಾಪಕ ಡಾ.ರಾಮದಾಸ್ ಅವರಿಗೆ ಫೋನಾಯಿಸಿ, ಧಮಕಿ ಹಾಕಿ ತೊಂದರೆ ಕೊಟ್ಟ ಪರಿಣಾಮ ರಾಮದಾಸ್ ಒತ್ತಡಕ್ಕೆ ಸಿಕ್ಕಿದರು. ಮನೋವೇದನೆಯಿಂದ ಅವರ ಜೀವವೇ ಹೋಗಿದೆ.
- ಡೆಟ್ರಾಯಿಟ್ನಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದ ಕಿರ್ದಿ ಲೆಕ್ಕವನ್ನು ‘ಅಕ್ಕ’ ಕಾರ್ಯಕಾರಿ ಸದಸ್ಯರು, ಅಧ್ಯಕ್ಷ ಅಮರ್ನಾಥ್ ಗೌಡ, ಕಾರ್ಯದರ್ಶಿ ಹಳೆಕೋಟೆ ವಿಸ್ವಾಮಿತ್ರ ಮತ್ತು ಖಜಾಂಚಿ ಎಂ.ಕೃಷ್ಣಮೂರ್ತಿ- ಇವರ್ಯಾರೂ ಇವತ್ತಿನವರೆಗೆ ಕೊಟ್ಟಿಲ್ಲ. ಒಂದು ಲಾಭ ಮಾಡದ ಸಂಸ್ಥೆ ‘ಅಕ್ಕ’ ಆಡಳಿತದ ತಣ್ಣನೆಯ ನಡೆಗೆ ಇದರಿಂದ ಧಕ್ಕೆಯಾಗುತ್ತಿದೆ.
- ಅಮರನಾಥ್ ಗೌಡರೊಬ್ಬರದೇ ತೀರ್ಮಾನಗಳಿಂದ ಅಕ್ಕ ನಿರ್ದೇಶಕರು ಮತ್ತು ದತ್ತಿದಾರರಲ್ಲಿ ಭಿನ್ನಾಭಿಪ್ರಾಯಗಳು ಕಾಣಿಸಿಕೊಂಡಿವೆ.
- ಹಣಕಾಸಿನ ವಿಷಯದಲ್ಲಿ ಅವರು ಹೊರಡಿಸುತ್ತಿರುವ ಪ್ರಕಟಣೆಗಳಲ್ಲಿ ಹುರುಳಿಲ್ಲ, ಅವೆಲ್ಲಾ ಸತ್ಯಕ್ಕೆ ದೂರವಾದವು.
- ಸಮ್ಮೇಳನಕ್ಕೆ ಹಾಜರಾದ ಕನ್ನಡಿಗರು ಕೊಟ್ಟಿರುವ ನೋಂದಣಿ ಹಣದ ಲೆಕ್ಕ ಈವರೆಗೆ ಸಿಕ್ಕಿಲ್ಲ.
- ಅಮೆರಿಕಾ ಕಾನೂನುಗಳು ಅಥವಾ ರಾಬರ್ಟ್ನ ಕಾನೂನು ನಿಯಮದ ಚೌಕಟ್ಟಿಗೆ ತಕ್ಕಂತೆ ಅಮರನಾಥ್ ಗೌಡರು ‘ಅಕ್ಕ’ ವ್ಯವಹಾರವನ್ನು ನಡೆಸುತ್ತಿಲ್ಲ. ಅವರು ಸಂವಿಧಾನ ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದಾರೆ.
- 1998- 2000 ಅವಧಿಯಲ್ಲಿ ‘ಅಕ್ಕ’ ಅಧ್ಯಕ್ಷರಾಗಿದ್ದ ಎಚ್.ಎಸ್.ಜಯಸ್ವಾಮಿ, ಕಾರ್ಯದರ್ಶಿ ರೇಣುಕ ರಾಮಪ್ಪ ಮತ್ತು ಖಜಾಂಚಿ ಸುಪ್ರಿಯಾ ದೇಸಾಯಿ ಕೂಡ ಇದೇ ರೀತಿ ವರ್ತಿಸಿದ್ದರು.
- ‘ಅಕ್ಕ’ ಅಧ್ಯಕ್ಷರಾಗಿ ಕನ್ನಡ ಸಮ್ಮೇಳನ ನಡೆಸುವುದೊಂದೇ ತಮ್ಮ ಕೆಲಸ ಎಂದು ಅಮರನಾಥ್ ಗೌಡರು ತಿಳಿದಿರುವಂತಿದೆ. ಬಹು ಮುಖ್ಯವಾದ ‘ಅಕ್ಕ’ ಸಾಂಸ್ಥಿಕ ವಿಷಯಗಳಲ್ಲಿ ಅಮರನಾಥ್ ಗೌಡರು ಕಿಂಚಿತ್ತೂ ಆಸ್ಥೆ ವಹಿಸಿಲ್ಲ.
- ಸಾಗರದಾಚೆಗಿನ ಕನ್ನಡಿಗರು ಮತ್ತು ಅಕ್ಕ ತೆಕ್ಕೆಯಲ್ಲಿರುವ ಕನ್ನಡ ಕೂಟಗಳ ಅಧ್ಯಕ್ಷರು ಅಕ್ಟೋಬರ್ 27ನೇ ತಾರೀಕು ಒಂದು ಸಭೆ ನಡೆಸಿದರು. ಸಮ್ಮೇಳನದ ಕಿರ್ದಿ ಪುಸ್ತಕವನ್ನು ಪೂರ್ತಿಯಾಗಿ ಸಿದ್ಧ ಪಡಿಸುವವರೆಗೆ ಬೇರಾವುದೇ ಚಟುವಟಿಕೆಗಳನ್ನು ಅಮರನಾಥ್ ಗೌಡರು ನಡೆಸಕೂಡದೆಂಬ ತೀರ್ಮಾನಕ್ಕೆ ಸಭೆ ಬಂದಿತು. ಹೀಗಿದ್ದೂ, ಸಮ್ಮೇಳನಕ್ಕೆ ಬಂದಿದ್ದ ಕಲಾವಿದರನ್ನು ಡಿಸೆಂಬರ್ 27 ಹಾಗೂ 28ರಂದು ಸನ್ಮಾನಿಸುವ ಕಾರ್ಯಕ್ರಮವನ್ನು ಅಮರನಾಥ್ ಗೌಡರು ಆಯೋಜಿಸಿದ್ದಾರೆ. ‘ಅಕ್ಕ’ದ ಸೋಕಾಲ್ಡ್ ಮಂಡಳಿ ಸದಸ್ಯರು ನವೆಂಬರ್ 12ನೇ ತಾರೀಕು ನಡೆಸಿದ ಸಭೆಯಲ್ಲಿ ಈ ಕಾರ್ಯಕ್ರಮಕ್ಕೆ ಒಪ್ಪಿಗೆಯನ್ನೇ ಪಡೆದಿಲ್ಲ.
- ಖರ್ಚಾಗಿರುವ ರುಪಾಯಿಯ ಲೆಕ್ಕ ಕೊಡುವುದನ್ನು ಬಿಟ್ಟು, ಇಲ್ಲಿ ಇನ್ನಷ್ಟು ಹಣ ಖರ್ಚು ಮಾಡುತ್ತಿದ್ದಾರೆ. ಈ ಹಣದ ಮೂಲ ಯಾವುದು ಅಂತ ನಮಗೆ ಗೊತ್ತಾಗಬೇಕು.
- ಈ ಕಾನೂನು ಬಾಹಿರ ಹಾಗೂ ಅಕ್ರಮ ಸಮಾರಂಭಕ್ಕೆ ಹಾಜರಾಗಬೇಡಿ ಎಂಬುದು ಮುಖ್ಯಮಂತ್ರಿ ಎಸ್.ಎಂ.ಕೃಷ್ಣ , ಕನ್ನಡ ಮತ್ತು ಸಂಸ್ಕೃತಿ ಸಚಿವೆ ರಾಣಿ ಸತೀಶ್ ಮತ್ತು ಇಲಾಖೆಯ ನಿರ್ದೇಶಕ ಸೋಮಶೇಖರ್ ಅವರಿಗೆ ನಮ್ಮ ಮನವಿ.
- ಉತ್ತರ ಅಮೆರಿಕದಲ್ಲಿರುವ ಅರ್ಹ ಕನ್ನಡಿಗರಿಗೆ ಡೆಟ್ರಾಯಿಟ್ ಸಮ್ಮೇಳನದಲ್ಲಿ ಸನ್ಮಾನ ಮಾಡಬೇಕೆಂದು ಶಿಫಾರಸ್ಸು ಸಲ್ಲಿಸಲಾಗಿತ್ತು. ಸನ್ಮಾನಕ್ಕೆ ಯೋಗ್ಯರಾದವರ ಹೆಸರುಗಳ ಪೈಕಿ ಬಿ.ಟಿ.ಎಲ್. ಫೌಂಡೇಶನ್ನ ಬಿ.ಟಿ.ಲಕ್ಷ್ಮಣ್ ಅವರದ್ದೂ ಒಂದಾಗಿತ್ತು. ಸನ್ಮಾನ ಮಾಡಲಾಗುವುದಿಲ್ಲ ಎಂದು ಅಮರನಾಥ್ ಗೌಡರು ತಾವೊಬ್ಬರೇ ತೀರ್ಮಾನ ತೆಗೆದುಕೊಂಡುಬಿಟ್ಟರು. ಈಗ ಕಲಾವಿದರಿಗೆ ಸನ್ಮಾನ ಮಾಡೋಕೆ ಬೆಂಗಳೂರಿಗೆ ಬಂದಿದ್ದಾರೆ. ಡೆಟ್ರಾಯಿಟ್ಗೆ ಕರೆದಾಗ, ಯಾವ ಕಲಾವಿದರನ್ನು ಅವಮಾನಿಸಲಾಯಿತೋ, ಅದೇ ಕಲಾವಿದರಿಗೆ ಇಲ್ಲಿ ಸನ್ಮಾನ. ಇದೆಂಥಾ ನಗೆಪಾಟಿಲಿನ ವಿಷಯ!
- ಸಮ್ಮೇಳನ ಮುಗಿದ ತಕ್ಷಣ ರತ್ನಮಾಲ ಪ್ರಕಾಶ್ ಹಾಗೂ ಮಾಲತಿ ಶರ್ಮ ಅವರಿಗೆ ಪ್ರಯಾಣಕ್ಕೆ ದಾರಿಯೇ ಕಾಣಲಿಲ್ಲ. ಪುಣ್ಯಕ್ಕೆ ನ್ಯೂಯಾರ್ಕ್ಗೆ ವಾಪಸ್ಸಾಗುತ್ತಿದ್ದ ಬಸ್ಸಿನಲ್ಲಿ ಎರಡು ಸೀಟುಗಳು ಕಾಲಿ ಇದ್ದವು. ಕಲಾವಿದರ ಬಗ್ಗೆ ಪ್ರೀತಿ ಇಟ್ಟುಕೊಂಡಿದ್ದ ನ್ಯೂಯಾರ್ಕ್ ಕನ್ನಡ ಕೂಟದ ಜನ ಇವರನ್ನು ಬಸ್ಸಿನಲ್ಲಿ ನ್ಯೂಯಾರ್ಕ್ಗೆ ಕಾಸು ಇಸಿದುಕೊಳ್ಳದೆ ಕರೆದುಕೊಂಡು ಹೋದರು. ಅಲ್ಲಿ ಕಲಾವಿದರನ್ನು ಬೀದಿಗೆ ಬಿಸುಟು, ಇಲ್ಲಿ ಅವರಿಗೆ ಅಮರನಾಥ್ ಗೌಡರು ಸನ್ಮಾನ ಮಾಡಹೊರಟಿದ್ದಾರೆ.
- ಅಮರನಾಥ್ ಗೌಡರು ಪರಿಚಯಿಸಿರುವ ಜಾತಿ ರಾಜಕೀಯ ‘ಅಕ್ಕ’ ಬಿರುಕು ಬಿಡಲು ವೇದಿಕೆಯಾಗಿದೆ. ಈಗಾಗಲೇ ಒಡೆದಿರುವ ಇತರೆ ಕೆಲವು ರಾಷ್ಟ್ರೀಯ ಒಕ್ಕೂಟಗಳ ಸ್ಥಿತಿಯೇ (ಉದಾಹರಣೆಗೆ, ತೆಲುಗು ಒಕ್ಕೂಟ) ‘ಅಕ್ಕ’ಗೂ ಬರುತ್ತದೆನ್ನುವುದು ಅಮೆರಿಕನ್ನಡಿಗರ ಆತಂಕ.
- ಎರಡನೇ ಅಕ್ಕ ಸಮ್ಮೇಳನದ ನಡೆಸಲು ಯಾರೊಬ್ಬರೂ ಮುಂದೆ ಬರಲಿಲ್ಲ ಅನ್ನುವುದು ಅಮರನಾಥ್ ಗೌಡರ ದೂರು. ಆದರೆ, ಉತ್ತರ ಕ್ಯಾಲಿಫೋರ್ನಿಯಾ ಮತ್ತು ನ್ಯೂಜೆರ್ಸಿ (ತ್ರಿವೇಣಿ) ಸಮ್ಮೇಳನ ಆಯೋಜಿಸಲು ಉತ್ಸಾಹ ತೋರಿದ್ದವು. ಈ ಕುರಿತಂತೆ ನಡೆದಿರುವ ಕಾಗದ ಪತ್ರಗಳ ವ್ಯವಹಾರ ಈಗಲೂ ಲಭ್ಯ.
- ನಾವು ಜನಪ್ರಿಯತೆಗಾಗಿ ಈ ರೀತಿ ಆರೋಪಗಳನ್ನು ಮಾಡುತ್ತಿದ್ದೇವೆ ಅನ್ನುವುದು ಅಮರನಾಥ್ ಗೌಡರ ಅಭಿಪ್ರಾಯ. ಆದರೆ, ನಾವು ಈ ವಿಷಯಗಳನ್ನು ಬಯಲು ಮಾಡಲು ಹೊರಟಿರುವುದು ಅಮೆರಿಕಾ ಕನ್ನಡಿಗರ ಒಗ್ಗಟ್ಟಿನಲ್ಲಿ ಒಡಕು ಮೂಡದಿರಲಿ ಎಂಬ ಕಾರಣಕ್ಕೆ.
- ಪಂಪ ಕನ್ನಡ ಕೂಟವು ಸಮ್ಮೇಳನದ ಖರ್ಚನ್ನು ಲೆಕ್ಕ ಹಾಕುತ್ತಿದೆ ಅಂತ ಕೆಲವು ವರದಿಗಾರರಿಗೆ ಅಮರನಾಥ್ ಗೌಡರು ಹೇಳಿದ್ದಾರೆ. 50 ಸಾವಿರ ಡಾಲರ್ ಕೊಟ್ಟವರೇ ತಗಾದೆ ಎತ್ತದೆ ಲೆಕ್ಕ ಹಾಕುವ ಕೆಲಸಕ್ಕೆ ಕೈಜೋಡಿಸಿದ್ದಾರೆ ಅನ್ನೋದು ಗೌಡರ ವಾದ. ಆದರೆ, ಪಂಪ ಕನ್ನಡ ಕೂಟದ ಅಧ್ಯಕ್ಷರಾದ ರಾಜಿ ಮೂರ್ತಿ ಲೆಕ್ಕಾಚಾರದ ಕೆಲಸದಲ್ಲೇ ತೊಡಗಿಲ್ಲ. ಅಕ್ಟೋಬರ್ 27ರಂದು ನಡೆದ ಸಭೆಯಲ್ಲಿ ಈ ವಿಷಯ ಸ್ಪಷ್ಟವಾಗಿದ್ದು, ಅದರ ಸಾಕ್ಷಿಗೆ ನಮ್ಮ ಬಳಿ ಟೇಪ್ ಕೂಡ ಇದೆ.
|













Click it and Unblock the Notifications