Get Updates
Get notified of breaking news, exclusive insights, and must-see stories!

ಸ. ರಘುನಾಥ ಅಂಕಣ: ಉರಿಯ ಆರಿಸುವ ತಣ್ಣೀರೆ ಕಣ್ಣೀರು

ಒಳ್ಳೆಯ ಸಾಹಿತ್ಯ, ಅದಕ್ಕೆ ಅನುರೂಪವಾದ ಸಂಗೀತ ಕೂಡಿ ಬಂದಾಗ ಹಾಡಿಗೆ ಬಹಳ ಕಾಲ ನೆನಪಿನಲ್ಲುಳಿಯುವ ಶಕ್ತಿ ಒದಗಿಬಿಡುತ್ತದೆ. ಇದು ಇಂಪಾಗಿದ್ದರಂತೂ ಅದರ ಜೀವಿತ ಕಾಲ ದೀರ್ಘವಾದುದು. ಆದುದರಿಂದಲೇ ಅಂತಹ ಭಾವಗೀತೆ, ಭಕ್ತಿಗೀತೆ, ಚಿತ್ರಗೀತೆ, ರಂಗಗೀತೆ ಇವುಗಳಲ್ಲಿ ಅನೇಕ ಗೀತೆಗಳು ಶತಮಾನದುದ್ದಕ್ಕೂ ಉಳಿದುಕೊಂಡಿವೆ. ಜನಪ್ರಿಯತೆಯೂ ಉಳಿದಿದೆ.

ಗೀತೆ ಅಥವಾ ಹಾಡುಗಳ ಆಯುಷ್ಯವನ್ನು ಸಂಗೀತ ಹೆಚ್ಚಿಸುತ್ತದೆ. ಇಂಥ ಹಾಡುಗಳು ಜಗತ್ತಿನ ಎಲ್ಲ ನುಡಿಗಳಲ್ಲಿಯೂ ಇರುವುವೇ ಆಗಿವೆ. ಅಂತಹ ಹಾಡುಗಳಲ್ಲಿ ಸಂಗೀತ ಸಾಹಿತ್ಯ ಸಮಲಂಕೃತವಾದ, ಸುಮಧುರ ಹಾಡುಗಳಿರುವ 'ಮೂಗಮನಸುಲು' ತೆಲುಗು ಸಿನೆಮಾ ಒಂದು. ಇದರಲ್ಲಿನ 'ಪಾಡುತಾ ತೀಯಗ' ಹಾಡು ತನ್ನೆಲ್ಲಾ ಗುಣಗಳಿಂದ ಮನಸ್ಸನ್ನು ಹಿಡಿಯುತ್ತದೆ.

'ಮನಸುಕವಿ'ಯೆಂದು ತೆಲುಗು ರಾಜ್ಯಗಳಲ್ಲಿ ಹೆಸರಾದ ಆಚಾರ್ಯ ಆತ್ರೇಯರ ರಚನೆಗೆ ಶ್ರೇಷ್ಠರ ಸಾಲಿನಲ್ಲಿರುವ ಸಂಗೀತ ನಿರ್ದೇಶಕ ಕೆ.ವಿ. ಮಹದೇವನ್ ರಾಗ ಸಂಯೋಜಿದ್ದಾರೆ. ವಿಶೇಷಣಗಳ ಹಂಗೇ ಬೇಡದ ಘಂಟಸಾಲ ಹಾಡಿದ್ದಾರೆ. ಇದರ ಜನಪ್ರಿಯತೆಗೆ ಐವತ್ತೈದು ವರುಷಗಳು!

Sa Raghunath Column: The Song Has the Power To Be Remembered For So Long

ಚಿತ್ರದ ಸನ್ನಿವೇಶಕ್ಕೆ ತಕ್ಕಹಾಗೆ ಸಿನೆಮಾ ಗೀತೆಗಳು ರಚನೆಯಾಗುತ್ತವೆ. ಆದರೂ ಹಲವು ಗೀತೆಗಳು ತನ್ನ ಪ್ರಭಾವವನ್ನು ವಿಸ್ತರಿಸಿಕೊಂಡು ಜನರು ಅವುಗಳೊಂದಿಗೆ ತಮ್ಮ ನೋವು- ನಲಿವುಗಳಿಗೆ ಸಹಸ್ಪಂದನೆಯನ್ನು ಕಂಡುಕೊಂಡು ತಮಗೆ ಅನ್ವಯಿಸಿಕೊಳ್ಳುತ್ತಾರೆ. ಈ ಮಿಡಿತವೇ ಸಾಹಿತ್ಯ-ಸಂಗೀತದೊಂದಿಗೆ ಏರ್ಪಡುವ ಅನುಬಂಧ.

ಇದು ಸಾಂತ್ವನ ಗೀತೆ. ವಿಧವೆಯಾಗಿ ಬಂದ ನಾಯಕಿಗೆ(ಮಹಾನಟಿ ಸಾವಿತ್ರಿ) ನಾಯಕನ (ಎ. ನಾಗೇಶ್ವರರಾವ್) ಸಮಾಧಾನಗೊಳಿಸುವ ಸಂದರ್ಭದಲ್ಲಿ ಚಿತ್ರೀಕರಿಸಲಾದ ಗೀತೆ. ನುಡಿನುಡಿಯೂ ನೋವೂ ವಿಷಾದದಲ್ಲಿ ಅದ್ದಿ ತೆಗೆದಂತಿದೆ. ಧೈರ್ಯ ತುಂಬುವಂತಿದೆ. ಸ್ನೇಹದ ಗಟ್ಟಿತನವನ್ನು ತೋರುತ್ತದೆ. ಬಾಳಿನ ಆಸೆಗೆ ಆಸರೆ ನೀಡುತ್ತದೆ. ಹಾಗಾಗಿಯೇ ಇದು ಚಿತ್ರದ ಸನ್ನಿವೇಶದಿಂದ ಹೊರಬಂದು ಬಾಳಿಲ್ಲಿ ದುಃಖಿತರಾದವರಿಗೆ ಆರ್ದ್ರತೆಯಿಂದ ಸಮಾಧಾನ ಹೇಳುತ್ತದೆ.

ಗೀತೆಯಲ್ಲಿನ ಪ್ರತಿ ನುಡಿಯೂ ಕಷ್ಟದಲ್ಲಿರುವವರಿಗೆ ಆತ್ಮೀಯರು ಹೇಳುವ ಮಾತುಗಳಿಂದ ಕೂಡಿದೆ. ಅಲ್ಲದೆ ಅಷ್ಟೇ ಸರಳವಾಗಿದೆ. ದುಃಖದ ಮನಸ್ಸನ್ನು ಅರಿತವರು ಹೀಗಲ್ಲದೆ ಮತ್ತೆ ಹೇಗೆ ಸಮಾಧಾನ ಪಡಿಸಲು ಸಾಧ್ಯ? ತೀವ್ರ ದುಃಖದ ಖಿನ್ನತೆಯಲ್ಲಿರುವವರನ್ನು ನಿದ್ದೆ ಮಾಡುವಂತೆ ಒತ್ತಾಯಿಸುವುದು ಸಾಮಾನ್ಯ. ಮನೋವೈದ್ಯರೂ ಇದನ್ನೇ ಹೇಳುವುದು. ಮನಸ್ಸಿನ ಉದ್ರಿಕ್ತತೆ ಶಮನಗೊಳ್ಳಲು ಕೊಡುವ ಔಷಧಗಳೂ ನಿದ್ದೆ ಬರಿಸುತ್ತವೆ. ಇಲ್ಲಿ ಆರುದ್ರರು ನುಡಿಗಳ ಮೂಲಕ ಮಾಡಿರುವುದೂ ಅದನ್ನೇ. ವೈದ್ಯರ ಸಲಹೆಗಳ ಮಿತಿಗಳನ್ನು ದಾಟಿ, ಸಾಮಾಜಿಕತೆ, ಸಂಬಂಧ, ಸ್ನೇಹದ ಶಾಶ್ವತತೆಯ ಎಳೆಗಳನ್ನು ನೇದು ಗೀತೆಯಾಗಿಸಿದ್ದಾರೆ. ಇದು ಕವಿಯಿಂದಲೇ ಸಾಧ್ಯವಾಗುವುದು ತಾನೆ. ಮೇಲಾಗಿ ಆರುದ್ರ ಮನಸುಕವಿಯಲ್ಲವೆ.

ಅಳುವೂ ಒಂದು ಚಿಕಿತ್ಸೆಯೇ. ಅದು ಎದೆಯ ಬೆಂಕಿಯನ್ನು ಆರಿಸುವ ಮಾನಸಿಕ ಸಾಧನ. 'ಎದೆಯ ಉರಿಯ ಆರಿಸುವ ತಣ್ಣೀರೆ ಕಣ್ಣೀರು' ಕವಿ ಕಟ್ಟಲು ಸಾಧ್ಯವಾಗುವ ರೂಪಕವಿದು. 'ಕನಸೆ ನಮಗೆ ಉಳಿದುಬಿಡುವ ಸಿರಿಯು ಅಂತ್ಯಕೆ/ ಆ ಕನಸು ಕೂಡ ದೋಚಿಕೊಳುವ ದೊರೆಗಳೇತಕೆ' ಅಲ್ಲವೆ? ಇಲ್ಲಿಯ 'ದೊರೆ' ಮನುಷ್ಯರೂ ಹೌದು, ವಿಧಿ, ದೈವವೂ ಹೌದು. ಇಂತಹ ಗೀತೆಯ ಪ್ರಯೋಜನವೇನೆಂದರೆ ದುಃಖಿತರಿಗೆ 'ಸಾಂತ್ವನ.' ಇದರ ಮೌಲ್ಯವೂ ಇದೆ ಆಗಿದೆ.

ಹಾಡುವೆ ಸವಿಯಲಿ ತಂಪಲಿ
ಹಸುಗೂಸಿನೊಲು ನಿದುರಿಸು ಅಮ್ಮನೆ ಚೆಂದದಮ್ಮನೆ

ನಿದುರೆ ಮಾಡೆ ಮನಸು ಕೊಂಚ ಹಗುರಗೊಳುವುದು
ಹಗುರಗೊಂಡ ಮನಸು ಮಧುರ ಕನಸು ಕಾಂಬುದು
ಕನಸೆ ನಮಗೆ ಉಳಿದುಬಿಡುವ ಸಿರಿಯು ಅಂತ್ಯಕೆ
ಆ ಕನಸು ಕೂಡ ದೋಚಿಕೊಳುವ ದೊರೆಗಳೇತಕೆ

ಎದೆಯ ಉರಿಯ ಆರಿಸುವ ತಣ್ಣೀರೆ ಕಣ್ಣೀರು
ಇರು ಎಂದರು ಇರದುದಮ್ಮ ಬಹಳ ದಿನಗಳು
ಹೋದವರು ಎಲ್ಲರು ಒಳ್ಳೆ ಜನಗಳು
ಇದ್ದವರು ಹೋದವರ ಮಧುರ ಸ್ಮøತಿಗಳು

ಮನುಷ ಹೋದ ಮಾತ್ರಕೇನು ಮನಸು ಇರುವುದು
ಮನಸಿನೊಡನೆ ಮನಸೆಂದಿಗು ಬೆರೆತು ಇರುವುದು
ಸಾವು ಹುಟ್ಟು ಇರದುದಮ್ಮ ಸ್ನೇಹವೆಂಬುದು
ಜನುಮ ಜನುಮಕದು ಮತ್ತೆ ಗಟ್ಟಿಗೊಳುವುದು

Recommended Video

      'ಅಪ್ಪು ' ಸಾಧನೆ ಅಮರ | Oneindia Kannada

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+